Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಕುಮಾರಿ ಸೌಜನ್ಯಾಳ ಅಮಾನುಷ ಕೊಲೆಗೆ ನ್ಯಾಯ ಸಿಗಲೇಬೇಕು, ಆದರೆ..?

ಕುಮಾರಿ ಸೌಜನ್ಯಾಳ ಅಮಾನುಷ ಕೊಲೆಗೆ ನ್ಯಾಯ ಸಿಗಲೇಬೇಕು, ಆದರೆ..?

Justice For Kumari Sowjanya!

ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯ ಎಸ್‌ಡಿಎಂ ಕಾಲೇಜಿನ ಕುಮಾರಿ ಸೌಜನ್ಯಾಳ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಇಂದಿಗೂ ಜೀವಂತವಿದ್ದರೆ, ಮತ್ತೆ ಸುದ್ದಿಗೆ ಗ್ರಾಸವಾಗಿ ಸಿಐಡಿ ತನಿಖೆ ಚುರುಕುಗೊಂಡಿದ್ದರೆ ಅದಕ್ಕೆ ಮೂಲ ಕಾರಣ ಈ ಮೇಲಿನ ಹೆಸರಿನಲ್ಲಿ ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌ನಲ್ಲಿ ಸತತವಾಗಿ ನಡೆದ ಹೋರಾಟ. ಇವತ್ತು ಒಂದಿಷ್ಟು ಜನರು ಮುಂದೆ ಬಂದು ಟಿವಿ ಮಾಧ್ಯಮದ ಎದುರು ಧ್ವನಿಯೆತ್ತಿರಬಹುದು, ಆದರೆ ಪ್ರಕರಣವನ್ನು ಜೀವಂತವಾಗಿಟ್ಟಿದ್ದು ಮಾತ್ರ ಫೇಸ್‌ಬುಕ್ ಆ್ಯಕ್ಟಿವಿಸ್ಟ್‌ಗಳು ಅಥವಾ ಚಳವಳಿಕಾರರು/ಹೋರಾಟಗಾರರು ಎಂದರೆ ತಪ್ಪಾಗಲಾರದು. ಕಳೆದ ವರ್ಷ ದಕ್ಷಿಣ ಕನ್ನಡ ಬಿಜೆಪಿಯ ಕೆಲವು ರೋಗಗ್ರಸ್ಥ ಮನಸ್ಸುಗಳು ಕುಂದಾಪುರದ ವಾಜಪೇಯಿ ಎಂದೇ ಹೆಸರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಮನನೋಯಿಸಿ ಪಕ್ಷ ತೊರೆಯುವಂತೆ ಮಾಡಿದಾಗಲೂ ಫೇಸ್‌ಬುಕ್‌ನಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಆ ಆಕ್ರೋಶ ಹೋರಾಟದ ರೂಪ ಪಡೆಯುವುದಕ್ಕೂ, 2013ರ ಚುನಾವಣೆಯಲ್ಲಿ ಶ್ರೀನಿವಾಸ ಶೆಟ್ಟಿ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಅಭೂತಪೂರ್ವ ಗೆಲುವು ಸಾಧಿಸುವುದಕ್ಕೂ ಪರೋಕ್ಷವಾಗಿ ಕಾರಣವಾಗಿತ್ತು. ಹಾಗೆಯೇ ಸೌಜನ್ಯಾ ಕೊಲೆಯಾದ ನಂತರ ಸತತ ಒಂದು ವರ್ಷದಿಂದ ಫೇಸ್‌ಬುಕ್ ಆ್ಯಕ್ಟಿವಿಸ್ಟ್‌ಗಳು ಹೋರಾಟ ನಡೆಸುತ್ತಾ ಬಂದಿದ್ದಾರೆ.

Hats off to you guys!

ಅದರ ಬಗ್ಗೆ ಅನುಮಾನವೇ ಬೇಡ, ಹೀಗೆಂದರೆ ಖಂಡಿತ ಅತಿಶಯೋಕ್ತಿಯೂ ಆಗುವುದಿಲ್ಲ. ಒಂದು ಸಮಾಜ ತನ್ನ ಭಾಗವಾದ ಒಂದು ಕುಟುಂಬದ ನೋವಿಗೆ ಈ ಪರಿ ಸ್ಪಂದಿಸುತ್ತದೆ ಎಂದರೆ, ಆ ಘಟನೆ ಯುವ ಜನತೆಯ ಆತ್ಮಸಾಕ್ಷಿಯನ್ನು ಈ ರೀತಿ ಬಡಿದೆಬ್ಬಿಸುತ್ತದೆ ಎಂದರೆ ಅದು ಖಂಡಿತ ಒಳ್ಳೆಯ ಸಂಕೇತವೇ. ಸಮಾಜವೇ ಈ ಮಟ್ಟಕ್ಕೆ ಸಿಡಿದೇಳುತ್ತದೆ ಎಂದರೆ ಇನ್ನು ಹೆತ್ತು, ಹೊತ್ತು 17 ವರ್ಷ ಸಾಕಿ ಸಲುಹಿದ ಆ ಬಡ ಅಪ್ಪ-ಅಮ್ಮನ ನೋವು, ವೇದನೆಯ ತೀವ್ರತೆ ಎಷ್ಟಿರಬಹುದು? ಟಿವಿಯಲ್ಲಿ ಅವರು ಹೇಳುತ್ತಿರುವುದನ್ನು, ನಮ್ಮ ಮಗುವಿಗೆ ನ್ಯಾಯ ಕೊಡಿಸಿ ಎಂದು ಅಂಗಲಾಚುತ್ತಿರುವುದನ್ನು ನೋಡಿದಾಗಲಂತೂ ಕರುಳು ಹಿಂಡಿದಂಥ ಅನುಭವ ವೀಕ್ಷಕರಿಗಾಗುತ್ತಿತ್ತು. ಇನ್ನು ಆ ಅಪ್ಪ-ಅಮ್ಮನಿಗೆ ತಮ್ಮ ಮಗುವನ್ನು ಕಳೆದುಕೊಂಡ ನೋವು ಒಂದು ಕಡೆಯಾದರೆ, ವರ್ಷ ತುಂಬಿದರೂ ನ್ಯಾಯ ಸಿಗಲಿಲ್ಲವಲ್ಲಾ ಎಂಬ ಹತಾಶೆ ಇನ್ನೊಂದು ಕಡೆ. ಅವುಗಳ ಜತೆಗೆ ಸ್ಥಳೀಯ ಪೊಲೀಸರ ನಿಷ್ಕ್ರಿಯತೆ ಕಳೆದ ಒಂದು ವರ್ಷದಲ್ಲಿ ಪ್ರಕರಣದ ಬಗ್ಗೆ ಏನೆಲ್ಲಾ ಅನುಮಾನಗಳನ್ನು ಸೃಷ್ಟಿಸಿತು. ಯಾರೋ ಪ್ರಭಾವಿ ವ್ಯಕ್ತಿಗಳು ಇದರಲ್ಲಿ ಭಾಗಿಯಾಗಿದ್ದಾರೆ ಎಂಬ ಅನುಮಾನ, ಆ ಕಾರಣದಿಂದಲೇ ನ್ಯಾಯಸಮ್ಮತ ತನಿಖೆಯಾಗಿಲ್ಲ, ಆರೋಪಿಗಳನ್ನು ಪತ್ತೆ ಹಚ್ಚಿಲ್ಲ ಎಂಬ ಗಾಳಿ ಸುದ್ದಿ, ಕಿವಿಮಾತುಗಳು ಜತೆಗೂಡಿ ಸೌಜನ್ಯಾಳ ಅಪ್ಪ-ಅಮ್ಮನ ಮಾನಸಿಕ ನೆಮ್ಮದಿಯನ್ನು ಶಾಶ್ವತವಾಗಿ ಹಾಳು ಮಾಡಿದ್ದು ಮಾತ್ರವಲ್ಲ, ಸಮಾಜ ಕೂಡ ವ್ಯವಸ್ಥೆಯ ಮೇಲೆ ಅಪನಂಬಿಕೆ ಬೆಳೆಸಿಕೊಳ್ಳುವಂತಾಯಿತು. ಇದರ ಪರಿಣಾಮವಾಗಿ ಈಗ ಎದ್ದಿರುವ ಹಾಲಿ ಆಕ್ರೋಶ ಖಂಡಿತ ಒಪ್ಪುವಂಥದ್ದೇ. ಇವತ್ತು ಸೌಜನ್ಯಾಳನ್ನು ಆಕೆಯ ಅಪ್ಪ-ಅಮ್ಮ ಕಳೆದುಕೊಂಡಿರಬಹುದು, ಆದರೆ ಇಂಥ ಘಟನೆಗಳು ಸಮಾಜದಲ್ಲಿ ಹೆಣ್ಣು ಹೆತ್ತವರನ್ನೆಲ್ಲ ಆತಂಕದ ಕೂಪಕ್ಕೆ ದೂಡಿ ಬಿಡುವ ಅಪಾಯವೂ ಇದೆ. ಹಾಗಾಗಿ ಸೌಜನ್ಯಾ ಕೊಲೆಯ ಆರೋಪಿಗಳನ್ನು ಪತ್ತೆ ಹಚ್ಚಿ ಶಿಕ್ಷಿಸಲೇಬೇಕು ಹಾಗೂ ಅಂಥ ಘಟನೆಗಳು ಮರುಕಳಿಸದಂತೆ ವ್ಯವಸ್ಥೆ ಮತ್ತು ಸಮಾಜ ಎರಡೂ ನಿಗಾವಹಿಸಬೇಕು. ಈ ಕಾರಣಕ್ಕಾಗಿ ಸೌಜನ್ಯಾ ಪ್ರಕರಣ ಮತ್ತೆ ಸುದ್ದಿಯಾಗಿದ್ದು ಒಳ್ಳೆಯದೇ.

ಆದರೆ…

ಸೌಜನ್ಯಾಳಿಗೆ ನ್ಯಾಯ ಕೊಡಿಸುವ ಹೋರಾಟ/ಚರ್ಚೆ ಧರ್ಮಸ್ಥಳವೆಂಬ ಶ್ರೀಕ್ಷೇತ್ರದ ಮೇಲಿನ ವಿಶ್ವಾಸವನ್ನೇ ಹೊಡೆದು ಹಾಕುವ, ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ವೈಯಕ್ತಿಕ ತೇಜೋವಧೆ ಮಾಡುವ ಪ್ರಯತ್ನದ ರೂಪ, ಸಾಕ್ಷ್ಯರಹಿತ ಆರೋಪದ ಅಂಗವಾಗಿದ್ದು ಮಾತ್ರ ಸೌಜನ್ಯಾಳ ಕೊಲೆಯಷ್ಟೇ ದುರದೃಷ್ಟಕರ. ಕೆಟ್ಟದ್ದನ್ನು ಮಾತ್ರ ಅನುಮಾನಿಸದೆ, ಪರಾಮರ್ಶಿಸದೆ, ಅಳುಕದೆ, ಎರಡನೇ ಬಾರಿ ಯೋಚನೆ ಮಾಡದೆ ಯಥಾವತ್ತಾಗಿ ತೆಗೆದುಕೊಳ್ಳುವ ಸಮಾಜದ ಮಧ್ಯೆ ಇವತ್ತು ನಾವಿದ್ದೇವೆ. ನೀವು ಯಾರ ಬಳಿಯಲ್ಲಾದರೂ “ಸಿದ್ರಾಮಣ್ಣ ತುಂಬಾ ಒಳ್ಳೆಯವರು” ಅಂಥ ಹೇಳಿ, “ಇಲ್ಲಾ ಮಾರಾಯ, ಅವನು ಸರಿ ಇಲ್ಲ, ಕಳ್ಳ ಅಂಥ ಯಂಕಣ್ಣ ಹೇಳ್ತಿದ್ದ” ಎಂಬ ಮಾರುತ್ತರ ಬರುತ್ತದೆ. ಅದೇ “ಸಿದ್ರಾಮಣ್ಣ ಸರಿ ಇಲ್ವಂತೆ, ದುಡ್ ತಿನ್ತಾರಂತೆ” ಅನ್ನಿ, “ಹೌದು, ಸೀನಣ್ಣ ಅವತ್ತೇ ಹೇಳಿದ್ದ” ಎಂಬ ಉತ್ತರ ಬರುತ್ತದೆ. ನಮ್ಮ ಜನರ ಮನಸ್ಥಿತಿಯೇ ಅಂಥದ್ದು. ಕೆಟ್ಟದ್ದಕ್ಕೆ ಬೇಗ ಸಹಮತ ವ್ಯಕ್ತಪಡಿಸಿ ಬಿಡುತ್ತಾರೆ. ಹಾಗಾಗಿ ಇವತ್ತು ಸಮಾಜದಲ್ಲಿ ದೊಡ್ಡ ಮಟ್ಟಕ್ಕೇರಿದ್ದವರ ಬಗ್ಗೆ, ಜನರ ಮೆಚ್ಚುಗೆಗೆ ಪಾತ್ರರಾಗಿದ್ದವರ ಬಗ್ಗೆ ಬಹಳ ಸಲೀಸಾಗಿ ಕೆಟ್ಟದ್ದನ್ನು ಹೇಳಿ, ಅಹುದಹುದೆಂದು ತಲೆಯಾಡಿಸುವಂತೆ ಮಾಡಿಬಿಡಬಹುದು. ಬಹಳ ಬೇಸರದ ಸಂಗತಿಯೆಂದರೆ ನಮ್ಮ ಸಮಾಜದ, ಜನರ ಇಂಥ ದೌರ್ಬಲ್ಯವನ್ನು ಕೆಲವರು ಧರ್ಮಸ್ಥಳ ಹಾಗೂ ಅದರ ಧರ್ಮಾಧಿಕಾರಿಯಾದ ವೀರೇಂದ್ರ ಹೆಗ್ಗಡೆಯವರ ಬದ್ನಾಮಿ ಮಾಡಲು ಬಳಸಿಕೊಂಡರು ಎಂದನಿಸುವುದಿಲ್ಲವೇ? ಇಷ್ಟಕ್ಕೂ  ವೀರೇಂದ್ರ ಹೆಗ್ಗಡೆಯವರು ಪತ್ರಿಕಾಗೋಷ್ಠಿ ನಡೆಸಿ ಸೌಜನ್ಯಾ ಪ್ರಕರಣ ನಡೆದಾಗ ತಮ್ಮ ಸಹೋದರನ ಪುತ್ರ ದೇಶದಲ್ಲೇ ಇರಲಿಲ್ಲ ಎಂಬುದನ್ನು ಸೂಕ್ತ ದಾಖಲೆಗಳೊಂದಿಗೆ ನಿರೂಪಿಸುವವರೆಗೂ ನಿಶ್ಚಲ್ ಹಾಗೂ ಕುಟುಂಬ ವರ್ಗವನ್ನು ಕಟಕಟೆ ಹಾಗೂ ಆರೋಪಿ ಸ್ಥಾನದಲ್ಲಿ ನಿಲ್ಲಿಸಿರಲಿಲ್ಲವೇ? ನಮ್ಮ ಸಮಾಜ ಹೇಗಿದೆಯೆಂದರೆ ಆರೋಪ ಮಾಡುವವರಿಗೆ ಸಾಕ್ಷ್ಯ ನೀಡುವ ಜವಾಬ್ದಾರಿಯೂ ಇರುವುದಿಲ್ಲ, ಕೇಳಿಸಿಕೊಳ್ಳುವವರು ಆಧಾರವನ್ನೂ ಕೇಳುವುದಿಲ್ಲ. ಸತ್ಯದ ಸರಳ ಸಾದರಕ್ಕಿಂತ Conspiracy Theoryಗಳು ಯಾವತ್ತೂ ರೋಚಕವಾಗಿರುತ್ತವೆ, ಖುಷಿ ಕೊಡುತ್ತವೆ. ಪತ್ರಿಕಾಗೋಷ್ಠಿಯ ನಂತರ ಮತ್ತೆ ನಡೆದ ಟಿವಿ ಚರ್ಚೆಯಲ್ಲಿ ಕಾಂಗ್ರೆಸ್ ನೇತಾರ ಹಾಗೂ ಮಾಜಿ ಸಚಿವರಾದ ಬಿ.ಎಲ್. ಶಂಕರ್ ಬಹಳ ಸ್ಫುಟವಾಗಿ ಇದನ್ನು ಎತ್ತಿ ತೋರಿಸಿದರು, ಅರ್ಥಗರ್ಭಿತವಾಗಿ ಮಾತನಾಡಿದರು. ಆ ಚರ್ಚೆಯಲ್ಲಿ ಭಾಗವಹಿಸಿದ್ದ ಸೌಜನ್ಯಾಳ ತಂದೆ-ತಾಯಿ-ಮಾವನನ್ನು ಪಾಟೀ ಸವಾಲಿಗೆ ಒಳಪಡಿಸಿದಾಗ ‘ನಮಗೆ ಶ್ರೀಕ್ಷೇತ್ರದ ಮೇಲಾಗಲಿ, ವೀರೇಂದ್ರ ಹೆಗ್ಗಡೆಯವರ ಮೇಲಾಗಲಿ ಯಾವುದೇ ಅನ್ಯಥಾ ಭಾವನೆಯಿಲ್ಲ. ಹೆಗ್ಗಡೆಯವರು ಹೇಳಿದ ಮೇಲೆಯೇ ಪೊಲೀಸರು ಪ್ರಕರಣ ದಾಖಲಿಸಿದ್ದು, ಖುದ್ದು ಹೆಗ್ಗಡೆಯವರೇ ನಮ್ಮೆದುರಲ್ಲೇ ಗೃಹ ಸಚಿವರಿಗೆ ಕರೆ ಮಾಡಿ ತನಿಖೆಗೆ ಆಗ್ರಹಿಸಿದರು’ ಎಂದರು. ಇನ್ನೂ ಗಮನಾರ್ಹ ಅಂಶವೆಂದರೆ ‘ಧರ್ಮಸ್ಥಳಕ್ಕೆ ಸೇರಿದವರೇ ಇದನ್ನು ಮಾಡಿಸಿದ್ದಾರೆ ಎಂದು ಕೆಲವರು ನಮಗೆ ಹೇಳಿಕೊಟ್ಟರು’ ಎಂಬ ಮಾತು ಸೌಜನ್ಯಾಳ ತಾಯಿಯ ಬಾಯಿಂದಲೇ ಹೊರಬಂತು!!

ಇದು ಏನನ್ನು ಸೂಚಿಸುತ್ತದೆ ಹೇಳಿ?

ಒಬ್ಬ ಸಾಮಾನ್ಯ ವ್ಯಕ್ತಿಗೇ ಮಿತ್ರ ಹಾಗೂ ಶತ್ರುಗಳಿರುತ್ತಾರೆ. ಹಾಗಿರುವಾಗ ಧರ್ಮಸ್ಥಳದಂಥ ಬೃಹತ್ ಕ್ಷೇತ್ರವನ್ನು ನಿಭಾಯಿಸುತ್ತಿರುವವರ ಬಗ್ಗೆಯೂ ಅಸಮಾಧಾನ ಹೊಂದಿರುವವರು ಖಂಡಿತ ಇರುತ್ತಾರೆ. ಅಂಥವರು ಸೌಜನ್ಯಾ ಪ್ರಕರಣವನ್ನು ತಮ್ಮ ವೈಯಕ್ತಿಕ ದ್ವೇಷಕ್ಕೆ ಪ್ರತೀಕಾರ ತೆಗೆದುಕೊಳ್ಳಲು, ಕೋಪ-ತಾಪಗಳನ್ನು ಹೊರಹಾಕಲು, ವೀರೇಂದ್ರ ಹೆಗ್ಗಡೆಯವರ ಹಾಗೂ ಶ್ರೀಕ್ಷೇತ್ರದ ಚಾರಿತ್ರ್ಯವಧೆ ಮಾಡಲು ಬಳಸಿಕೊಂಡರು ಎಂಬುದು ಸೌಜನ್ಯಾಳ ತಾಯಿಯ ಮಾತಿನಿಂದ ಪರೋಕ್ಷವಾಗಿ ಸ್ಪಷ್ಟವಾಗಲಿಲ್ಲವೇ? “ಧರ್ಮಸ್ಥಳದ ಬಗ್ಗೆ ನಮಗೆ ಯಾವ ಅನುಮಾನಗಳೂ ಇಲ್ಲ, ಶ್ರೀಕ್ಷೇತ್ರದ ಬಗ್ಗೆ ಕೆಟ್ಟದಾಗಿ ಮಾತನಾಡುವುದನ್ನು ನಾವು ಸಹಿಸುವುದಿಲ್ಲ” ಎಂದು ಚರ್ಚೆಯಲ್ಲಿ ಪಾಲ್ಗೊಂಡಿದ್ದ ಸೌಜನ್ಯಾಳ ಮಾವ ವಿಠ್ಠಲ ಗೌಡ ಕೂಡ ಹೇಳಿದರು. ಆದರೆ, ಪ್ರಾರಂಭದ ಚರ್ಚೆಯಲ್ಲಿ ಪಾಲ್ಗೊಂಡಿದ್ದವರು ಮಾಡಿದ್ದು ಧರ್ಮಸ್ಥಳದ ತೇಜೋವಧೆಯನ್ನೇ ಅಲ್ಲವೇ? ಇನ್ನು ನಿಶ್ಚಲ್ ಹಾಗೂ ಕುಟುಂಬ ವರ್ಗದ ಮೇಲೆ ಅನುಮಾನ ಬರುವಂತೆ ಆರಂಭದಲ್ಲಿ ಹೇಳಿದವರು ಹೆಗ್ಗಡೆಯವರು ಬಿಡುಗಡೆ ಮಾಡಿದ ದಾಖಲೆ ಹೇಳುತ್ತಿರುವ ಸತ್ಯಕ್ಕೆ ಯಾವ ಉತ್ತರ ಕೊಡಬಲ್ಲರು? ಅದಿರಲಿ, ಧರ್ಮಸ್ಥಳದವರು ರಕ್ಷಿಸುತ್ತಿದ್ದಾರೆ ಎಂದು ಟೀಕಾಕಾರರು ಬೊಟ್ಟುಮಾಡುತ್ತಿರುವ ಧೀರಜ್ ಕೆಲ್ಲಾ, ಉದಯ್ ಜೈನ್ ಮತ್ತು ಮಲ್ಲಿಕ್ ಜೈನ್ ಯಾರೆಂದುಕೊಂಡಿರಿ? ಧೀರಜ್ ಧರ್ಮಸ್ಥಳದ ಉದ್ಯೋಗಿಯೊಬ್ಬರ ಮಗನಾಗಿದ್ದರೆ, ಉದಯ್ ಜೈನ್ ಆಟೋ ಚಾಲಕ. ಮಲ್ಲಿಕ್ ಜೈನ್ ಧರ್ಮಸ್ಥಳದ ಒಬ್ಬ ಸಣ್ಣ ಉದ್ಯೋಗಿಯಷ್ಟೆ. ಧರ್ಮಸ್ಥಳದ ಪ್ರತಿಷ್ಠೆಯನ್ನು ಅಪಾಯಕ್ಕೆ ತಳ್ಳಿ ಇವರನ್ನು ರಕ್ಷಿಸುವ ಮೂರ್ಖ ಕೆಲಸವನ್ನು ಯಾರೂ ಮಾಡಲು ಸಾಧ್ಯವಿಲ್ಲ. ಖಂಡಿತ ಈ ಮೂವರ ಬಗ್ಗೆ ಸ್ಥಳೀಯರಲ್ಲಿ ಫಟಿಂಗರೆಂಬ ಭಾವನೆ ಇದೆ.  ಹಾಗಾಗಿ ಅನುಮಾನಗಳಿಗೆ ಮತ್ತಷ್ಟು ಪುಷ್ಟಿ ಸಿಕ್ಕಿದಂತಾಯಿತು. ಹಾಗಂತ ಅವರ ಮೇಲಿನ ಅನುಮಾನಕ್ಕೆ ಹೆಗ್ಗಡೆಯವರನ್ನು ಕಟಕಟೆಗೆ ತಂದು ನಿಲ್ಲಿಸುವುದು ಎಷ್ಟು ಸರಿ? ತಪ್ಪಿತಸ್ಥರು ಯಾರೇ ಇದ್ದರೂ ಪತ್ತೆಹಚ್ಚಿ ಶಿಕ್ಷಿಸಬೇಕೆಂದು ತಮ್ಮ ಎದುರೇ ಗೃಹ ಸಚಿವರಿಗೆ ಹೆಗ್ಗಡೆಯವರು ಕರೆ ಮಾಡಿ ಒತ್ತಾಯಿಸಿದ್ದಾರೆಂದು ಸೌಜನ್ಯಾಳ ಪೋಷಕರೇ ಒಪ್ಪಿಕೊಂಡಿದ್ದರೂ ಚಾರಿತ್ರ್ಯ ವಧೆ ಮಾಡುವ ಪ್ರಯತ್ನವೇಕೆ? ಇನ್ನು ಮಾನಸಿಕ ಅಸ್ವಸ್ಥನಂತೆ ಕಾಣುವ ಆರೋಪಿ ಸಂತೋಷ್ ರಾವ್‌ನನ್ನು ಅಮಾಯಕನೆಂದು ಟೀಕಾಕಾರರು ಯಾವ ಆಧಾರದ ಮೇಲೆ ಸರ್ಟಿಫಿಕೆಟ್ ಕೊಡುತ್ತಿದ್ದಾರೆ? ಆತ ಉಮೇಶ್ ರೆಡ್ಡಿ, ಜೈ ಶಂಕರ್‌ನಂಥ ಮಾನಸಿಕ ರೋಗಿಯೂ ಆಗಿರಬಹುದಲ್ಲವೇ?

ಹಾಗಂತ…

ಶ್ರೀಕ್ಷೇತ್ರದಲ್ಲಿ ನಡೆಯುವುದೆಲ್ಲ ಧರ್ಮಕಾರ್ಯವೇ, ಅಲ್ಲಿ ಯಾವ ಲೋಪಗಳೂ ಇಲ್ಲ ಎಂದು ಖಂಡಿತ ಹೇಳುತ್ತಿಲ್ಲ. ದೇಶದ ಎಲ್ಲಡೆ ಇರುವಂತೆ ಬೆಳ್ತಂಗಡಿ ತಾಲೂಕಿನಲ್ಲೂ ರಿಯಲ್ ಎಸ್ಟೇಟ್ ಮಾಫಿಯಾ ಇದೆ. ಧರ್ಮಸ್ಥಳಕ್ಕೆ ಸೇರಿದ ಕೆಲವರು ಈ ವಿಷಯದಲ್ಲಿ ಅತಿರೇಕ ಎಸಗಿರುವುದು ಖಂಡಿತ ಸುಳ್ಳಲ್ಲ. ಧರ್ಮಸ್ಥಳ ಮಾಡುವ ಒಳ್ಳೆಯ ಕಾರ್ಯಗಳ ಕೀರ್ತಿಯೆಲ್ಲ ಹೆಗ್ಗಡೆಯವರಿಗೆ ಇಡಿಯಾಗಿ ಸಲ್ಲುವಂತೆ, ಕ್ಷೇತ್ರಕ್ಕೆ ಸೇರಿದವರ ಅತಿರೇಕಗಳಿಂದ ಬರುವ ಅಪಕೀರ್ತಿಯನ್ನೂ ಸ್ವೀಕರಿಸಬೇಕಾಗುತ್ತದೆ. ಮನೆ ಗೆದ್ದು ಮಾರು ಗೆಲ್ಲು ಎನ್ನುವಂತೆ ಬೆಳ್ತಂಗಡಿ ತಾಲೂಕಿನ ಸ್ಥಳೀಯರ ಸೂಕ್ಷ್ಮಭಾವನೆಗಳ ಬಗ್ಗೆಯೂ ಎಚ್ಚರಿಕೆಯಿಂದಿರಬೇಕಾಗುತ್ತದೆ. ಇನ್ನು ಗ್ರಾಮೀಣಾಭಿವೃದ್ಧಿ ಯೋಜನೆಯಲ್ಲಿ ಲೋಪವಿದೆ ಎಂಬ ಆರೋಪ ತೆಗೆದುಕೊಳ್ಳಿ. ಇವತ್ತು ಯಾವ ಯೋಜನೆ, ವ್ಯವಸ್ಥೆಯಲ್ಲಿ ಲೋಪವಿಲ್ಲ ಹೇಳಿ? ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೆಜಿಗೆ ಒಂದು ರುಪಾಯಿಯಂತೆ ಕೊಟ್ಟ 30 ಕೆ.ಜಿ. ಅಕ್ಕಿ ಕಾಳಸಂತೆಗೆ ಬರುತ್ತಿಲ್ಲವೆ? ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಉದ್ಯೋಗ ಖಾತ್ರಿ ಯೋಜನೆಯಲ್ಲೇ ಎಲ್ಲಿಲ್ಲದ ಭ್ರಷ್ಟಾಚಾರ ನಡೆದಿದೆ. 200 ಚಿಲ್ಲರೆ ವರ್ಷಗಳ ಇತಿಹಾಸ ಹೊಂದಿರುವ ಅಮೆರಿಕದ ಪ್ರಜಾಪ್ರಭುತ್ವ, ಐದಾರು ಶತಮಾನಗಳ ಇತಿಹಾಸ ಹೊಂದಿರುವ ಬ್ರಿಟನ್ ಹಾಗೂ 66 ವರ್ಷಗಳಿಂದಿರುವ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೂ ಲೋಪಗಳಿರುವಂತೆ ಧರ್ಮಸ್ಥಳವೂ ಕೆಲವು ಲೋಪಗಳಿಂದ ಹೊರತಾಗಿಲ್ಲ. ಒಂದು ವ್ಯವಸ್ಥೆಯೆಂದರೆ, ಅದರಲ್ಲಿ ಎಲ್ಲ ಥರದ ಜನರೂ ಇರುತ್ತಾರೆ, ಎಲ್ಲ ರೀತಿಯ ದೌರ್ಜನ್ಯಗಳೂ ನಡೆಯುತ್ತವೆ. ಹಾಗಂತ ಹೆಗ್ಗಡೆಯವರು ಪ್ರತಿಯೊಂದು ವಿಚಾರಗಳ ಮೇಲೂ ಖುದ್ದು ನಿಗಾ ಇಡಲು ಸಾಧ್ಯವೆ? ಪ್ರತಿಯೊಂದು ಲೋಪಗಳಿಗೂ ಹೆಗ್ಗಡೆಯವರನ್ನೇ ದೂಷಿಸುವುದು ಅಥವಾ ಕೆಲವೊಂದಿಷ್ಟು ಲೋಪಗಳಿಗಾಗಿ ಇಡೀ ವ್ಯವಸ್ಥೆಯನ್ನೇ ಸಾರಾಸಗಟಾಗಿ ದೂರುವುದು ಸರಿಯೇ? ಎಷ್ಟೋ ಜನ ಮಾಡಬಾರದ ಕೆಲಸ ಮಾಡಿ ಕೊನೆಗೆ ಹೆಗ್ಗಡೆಯವರ ಪಾದಕ್ಕೆ ಬಿದ್ದು ತಪ್ಪಾಯಿತು ಎಂದು ಕೇಳಿಕೊಂಡಿದ್ದಿದೆ. ಇನ್ನು ಮುಂದೆ ಹಾಗೆ ಮಾಡಬೇಡ ಎಂದು ಹೆಗ್ಗಡೆಯವರು ಹಸುವಿನಂತೆ ಕ್ಷಮಿಸಿದ್ದು, ಅದರಿಂದಾಗಿ ಹೆಗ್ಗಡೆಯವರ ಬಗ್ಗೆ ಕೆಲವರು ಅನ್ಯಥಾ ಭಾವಿಸುವಂತಾಗಿದ್ದೂ ಇದೆ.

ಇನ್ನೊಂದು ಸಂಗತಿ ಇದೆ, ಶ್ರೀಕ್ಷೇತ್ರದಂಥ ಬೃಹತ್ ವ್ಯವಸ್ಥೆಯೊಳಗೆ ನಡೆಯುವ ಎಷ್ಟೋ ವಿಚಾರಗಳು ಹೆಗ್ಗಡೆಯವರನ್ನು ತಲುಪುವುದಿಲ್ಲ ಹಾಗೂ ತಲುಪುವಾಗ ಅದು ಬೇರೆಯದೇ ರೂಪ ಪಡೆದಿರುತ್ತವೆ. ತಮಗೆ ತಲುಪಿದ್ದು ವಾಸ್ತವ ಸಂಗತಿಯೇ ಅಲ್ಲವೇ ಎಂದು ಖಚಿತಪಡಿಸಿಕೊಳ್ಳಲು ಹೆಗ್ಗಡೆಯವರ ಸ್ಥಾನದಲ್ಲಿ ಕುಳಿತಿರುವ ಯಾವ ವ್ಯಕ್ತಿಗೂ ಸಾಧ್ಯವಿಲ್ಲ. ಆದರೆ ಅನ್ಯಾಯಕ್ಕೊಳಗಾದವರು ಗಮನಕ್ಕೆ ತಂದಾಗ ಅದಕ್ಕೆ ಹೆಗ್ಗಡೆಯವರು ಸ್ಪಂದಿಸಿ, ತಪ್ಪಿಸಿದ ಅಗಣಿತ ಉದಾಹರಣೆಗಳು ಧರ್ಮಸ್ಥಳದಲ್ಲಿವೆ. ಹೆಗ್ಗಡೆಯವರು ಸಮಾಜ, ಜನರ ಬಗ್ಗೆ ತುಂಬಾ Compassion, ಅನುಕಂಪ, ಕಳಕಳಿ ಇಟ್ಟುಕೊಂಡಿರುವ ವ್ಯಕ್ತಿ. ಗ್ರಾಮಾಭಿವೃದ್ಧಿ ಯೋಜನೆಯಡಿ ಕೊಡುತ್ತಿರುವ ಸಾಲಕ್ಕೆ ವಿಪರೀತ ಬಡ್ಡಿ ಹಾಕಲಾಗುತ್ತಿದೆ ಎಂಬ ಅಂಶವನ್ನು ಟೀಕೆಯ ಅಸ್ತ್ರವಾಗಿಸಿಕೊಳ್ಳುವ ಬದಲು ಹೆಗ್ಗಡೆಯವರ ಗಮನಕ್ಕೆ ತಂದಿದ್ದರೆ ಈ ವೇಳೆಗಾಗಲೇ ಲೋಪವಿದ್ದರೆ ಸರಿಯಾಗಿರುತ್ತಿತ್ತು. ಇವತ್ತು ಧರ್ಮಸ್ಥಳಕ್ಕೆ ಯಾರೇ ಬರಲಿ, ಮಂಜುನಾಥನ ದರ್ಶನದ ಜತೆಗೆ ಹೆಗ್ಗಡೆಯವರನ್ನು ಭೇಟಿಯಾಗುವುದಕ್ಕೂ ಬಯಸುತ್ತಾರೆ. ನಮ್ಮ ಮುಖ್ಯಮಂತ್ರಿಗಳು ಜನತಾದರ್ಶನ ಮಾಡದೇ ಇರಬಹುದು, ಹೆಗ್ಗಡೆಯವರು ಜನತಾದರ್ಶನವನ್ನು ಶಿಸ್ತು, ಶ್ರದ್ಧೆಯಿಂದ ಮಾಡುತ್ತಾರೆ. ಅಪ್ಪ-ಮಕ್ಕಳ ನಡುವೆ ನಡೆಯುವ ವಿವಾದಗಳನ್ನು ಅವರ ಮುಂದೆ ಹೇಳಿಕೊಳ್ಳುತ್ತಾರೆ ಹಾಗೂ ಹೆಗ್ಗಡೆಯವರು ಸ್ಪಂದಿಸುತ್ತಾರೆ. ಹಾಗಿರುವಾಗ ಶ್ರೀಕ್ಷೇತ್ರದ ಯಾವುದೋ ವ್ಯಕ್ತಿಗಳಿಂದ ತಮಗೆ ತೊಂದರೆಯಾಗುತ್ತಿದೆ ಎಂದು ಸ್ಥಳೀಯರೇಕೆ ಹೆಗ್ಗಡೆಯವರ ಬಳಿ ಹೇಳಿಕೊಳ್ಳಬಾರದು? ಹಾಗೆ ಹೇಳಿಕೊಂಡರೂ ತೊಂದರೆ ತಪ್ಪಲಿಲ್ಲ ಎನ್ನುವ ಏಕೈಕ ಉದಾಹರಣೆಯನ್ನು ಟೀಕಾಕಾರರು ಕೊಡಬಲ್ಲರೇ? ಒಂದು ಲೋಪವನ್ನು ಎತ್ತಿತೋರುವ ಮೊದಲು ಆ ವ್ಯಕ್ತಿಯಿಂದ ಸಮಾಜಕ್ಕೆ ಆಗುತ್ತಿರುವ ಲಾಭವನ್ನು ಅಳೆದು ತೂಗಬೇಕು.

ವೀರೇಂದ್ರ ಹೆಗ್ಗಡೆಯವರು ಜನಿಸಿದ್ದು 1948, ನವೆಂಬರ್ 25ರಂದು. ಧರ್ಮಸ್ಥಳದ ಚುಕ್ಕಾಣಿ ಹಿಡಿದಿದ್ದು 1968ರಲ್ಲಿ. ತಂದೆ ರತ್ನವರ್ಮ ಹೆಗ್ಗಡೆಯವರ ಅಕಾಲಿಕ ನಿಧನ ಅತ್ಯಂತ ಚಿಕ್ಕವಯಸ್ಸಿನಲ್ಲಿಯೇ ಅತಿ ಭಾರವಾದ ಜವಾಬ್ದಾರಿಯನ್ನು ಹೆಗಲಿಗೆ ಹಾಕಿತು. ಒಬ್ಬ ವ್ಯಕ್ತಿಯ ನಿಜವಾದ ಗುಣವನ್ನು ಅರಿಯಬೇಕಾದರೆ ಆತನಿಗೆ ಅಧಿಕಾರ ಕೊಟ್ಟು ನೋಡಬೇಕು ಎಂಬ ಮಾತಿದೆ. ಚುನಾವಣೆಗೆ ಮೊದಲು ನಮ್ಮ ಕೈ, ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೇರಿದ ಮೇಲೆ ನಮ್ಮ ವಿಶ್ವಾಸವನ್ನು ಶೇಕ್ ಮಾಡುವ ರಾಜಕಾರಣಿಗಳನ್ನು ನೋಡಿರುವ ನಮಗೆ ಅಧಿಕಾರದಿಂದ ಬರುವ ಮದದ ಪರಿಚಯ ಚೆನ್ನಾಗಿಯೇ ಆಗಿದೆ. ಹಾಗಿರುವಾಗ ಇಪ್ಪತ್ತರ ಕಿರಿ ವಯಸ್ಸಿನಲ್ಲಿ ಪಟ್ಟಕ್ಕೇರಿದ ಹೆಗ್ಗಡೆಯವರೂ ತಪ್ಪೆಸಗಬಹುದಾದ, ದರ್ಪದಲ್ಲಿ ಅಚಾತುರ್ಯಗಳಿಗೆ ಅವಕಾಶವೀಯಬಹುದಾದ ಎಲ್ಲ ಸಾಧ್ಯತೆಗಳೂ ಇದ್ದವು. ಆದರೆ ಹಾಗಾಗಲಿಲ್ಲ.

ಅದಕ್ಕೆ ಬಹುಶಃ ರತ್ನವರ್ಮ ಹೆಗ್ಗಡೆಯವರೇ ಕಾರಣವಿದ್ದಿರಬಹುದು.

ಯಾವುದಾದರೂ ಹುಡುಗನಿಗೆ ಅಪ್ಪ-ಅಮ್ಮ ಯಾರೂ ಇಲ್ಲ, ಇದ್ದರೂ ತಿನ್ನುವುದಕ್ಕೇ ಗತಿಯಿಲ್ಲ ಎಂದಾಗಿದ್ದರೆ ಆತನನ್ನು ಸಿದ್ಧಗಂಗಾ ಮಠಕ್ಕೆ ಬಿಟ್ಟು ಬನ್ನಿ, ಶ್ರೀ ಶಿವಕುಮಾರ ಸ್ವಾಮೀಜಿಗಳ ಸುಪರ್ದಿಗೆ ವಹಿಸಿ ಬಿಡಿ ಉದ್ಧಾರವಾಗುತ್ತಾನೆ ಎನ್ನುವುದನ್ನು ಉತ್ತರ ಹಾಗೂ ದಕ್ಷಿಣ ಕರ್ನಾಟಕದಲ್ಲಿ ಕಾಣಬಹುದು. ಹಾಗೆಯೇ ದಕ್ಷಿಣ ಕನ್ನಡದಲ್ಲಿ ಉಚಿತ ಅನ್ನ ಹಾಗೂ ಅಕ್ಷರ ದಾಸೋಹವೆಂದ ಕೂಡಲೇ ನೆನಪಿಗೆ ಬರುತ್ತಿದ್ದುದು ಉಜಿರೆಯ ರತ್ನಮಾನಸ ಹಾಗೂ ಸಿದ್ಧವನ ಗುರುಕುಲ. ಎಷ್ಟೋ ಬಡಮಕ್ಕಳು ಬರಿಗೈಲಿ ಬಂದು ಪದವಿ ಸರ್ಟಿಫಿಕೆಟ್‌ನೊಂದಿಗೆ ಇಲ್ಲಿಂದ ಹೊರ ಹೋಗಿದ್ದಾರೆ. ಇವು ರತ್ನವರ್ಮ ಹೆಗ್ಗಡೆಯವರು ಬಡಮಕ್ಕಳಿಗಾಗಿಯೇ ಕಟ್ಟಿಸಿದ ಗಂಜಿಕೇಂದ್ರವೆಂದರೂ ತಪ್ಪಾಗದು. ಬಹಳ ಇತ್ತೀಚಿನವರೆಗೂ ಒಂದೇ ಪ್ಯಾಂಟು ವಾರದ 6 ದಿನವೂ ಕಾಲೇಜಿನ ಬೇರೆ ಬೇರೆ ಕ್ಲಾಸ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದೆಯೆಂದರೆ ಅದು ಸಿದ್ಧವನದ ಯಾವುದೋ ಒಬ್ಬ ವಿದ್ಯಾರ್ಥಿಯದ್ದು, ಉಳಿದವರು ಸರದಿಯ ಮೇಲೆ ಹಾಕಿಕೊಳ್ಳುತ್ತಿದ್ದಾರೆ ಎಂದು ಆಡಿಕೊಳ್ಳುವ ಸನ್ನಿವೇಶವಿತ್ತು. ಅಂಥ ಬಡ ಹಿನ್ನೆಲೆಯಿಂದ ಬಂದವರೇ ಸಿದ್ಧವನದಲ್ಲಿರುತ್ತಿದ್ದರು. ತನ್ನ ಮಗನಿಗೂ ಪರಿಸ್ಥಿತಿಯ ಪರಿಚಯವಾಗಬೇಕು, ಬಡವರ ನೋವು ಅರ್ಥವಾಗಬೇಕು, ಕಷ್ಟದಲ್ಲಿ ಜೀವನ ನಡೆಸುವುದು, ಕಷ್ಟಗಳ ನಡುವೆಯೂ ಕಲಿತು ಮೇಲೆ ಬರುವುದನ್ನು ಕಲಿಸಬೇಕು ಎಂಬ ಆಶಯದಿಂದ ರತ್ನವರ್ಮ ಹೆಗ್ಗಡೆಯವರು ವೀರೇಂದ್ರ ಹೆಗ್ಗಡೆಯವರನ್ನೂ ಸಿದ್ಧವನಕ್ಕೆ ಸೇರಿಸಿದ್ದರು. ಹಾಗೆ ಸೇರಿಸಿದ ಕಾರಣದಿಂದಲೋ ಏನೋ ಹೆಗ್ಗಡೆಯವರು ಒಬ್ಬ ಟಿಪಿಕಲ್ ಸ್ವಾಮಿ ಅಥವಾ ಧರ್ಮಾಧಿಕಾರಿಯಾಗುವ ಬದಲು ಪಟ್ಟಕ್ಕೇರಿದ ಮೇಲೆ ಅವರಲ್ಲಿ ಸಮಾಜ ಸುಧಾರಣೆಯ ತುಡಿತ ಕಾಣತೊಡಗಿತು. ಹಾಗಾಗಿಯೇ 1995ರಲ್ಲಿ ಬೆಳ್ತಂಗಡಿ ತಾಲೂಕಿನಿಂದ ಮದ್ಯಪಾನ ಸಮಸ್ಯೆಯನ್ನು ನಿರ್ಮೂಲನೆ ಮಾಡಲು ಹೆಗ್ಗಡೆಯವರು ಮುಂದಾದರು. ‘ಕಳಿ, ಗಂಗಸರ ಬುಡ್ಕ, ತೆಳಿಗಂಜಿ ಪರ್ಕ’ (ಹೆಂಡ, ಸಾರಾಯಿ ಬಿಡೋಣ: ತಿಳಿ ಗಂಜಿ ಕುಡಿಯೋಣ) ಎಂಬ ಅವರ ಸ್ಲೋಗನ್‌ಗಳು ಭಿತ್ತಿಪತ್ರಗಳಿಗೆ ಸೀಮಿತವಾಗಲಿಲ್ಲ. ಮನೆ ಮನೆಗಳಿಗೆ ಹೋಗಿ ಮದ್ಯವ್ಯಸನಿ ಕುಟುಂಬಗಳ ಸಮಸ್ಯೆಗಳನ್ನು ತಿಳಿದುಕೊಳ್ಳುವ ಕೆಲಸ ಆರಂಭಿಸಿದರು. ಮೊದಲು ಸಮಸ್ಯೆಗಳಿಗೆ ಪರಿಹಾರ ಸೂಚಿಸಿ, ನಂತರ ಮದ್ಯಪಾನ ನಿಲ್ಲಿಸಿ ಎಂದು ತಿಳಿಹೇಳುವ ಕೆಲಸ ಮಾಡಿದರು. ಸಾಮಾನ್ಯವಾಗಿ ಮದ್ಯಪಾನ ವ್ಯಸನಗಳು ಕಾಡುವುದು ಸಣ್ಣ ಹಾಗೂ ಅರೆ ಕೃಷಿಕರು, ಭೂರಹಿತ ಕಾರ್ಮಿಕರನ್ನೇ. ಹಾಗಾಗಿ ಇಂಥ ದುರ್ಬಲ ವರ್ಗಗಳ ಶ್ರೇಯೋಭಿವೃದ್ಧಿಗಾಗಿ 1996ರಲ್ಲಿ ‘ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ’ (SKDRDP)ಯನ್ನು ಆರಂಭಿಸಿದರು. ‘ಪ್ರಗತಿ ನಿಧಿ’ ಎಂಬ ಕಾರ್ಯಕ್ರಮದಡಿ ಕೃಷಿಕರು ಹಾಗೂ ಅಗತ್ಯವಿರುವವರಿಗೆ ಯಾವುದೇ ತಲೆನೋವು ಕೊಡದೆ ಸಾಲ ನೀಡಲು ಆರಂಭಿಸಿದರು. ‘ಸ್ವ-ಸಹಾಯ’ ಗುಂಪುಗಳನ್ನು ಆರಂಭಿಸಿ ಅಂಥ ಗುಂಪುಗಳೂ ಸಾಲ ಪಡೆದುಕೊಳ್ಳಬಹುದಾದ ಅವಕಾಶ ಕಲ್ಪಿಸಿದರು. ಈ ಯೋಜನೆ ಹಾಗೂ ಸ್ವ-ಸಹಾಯ ಪದ್ಧತಿಯಿಂದಾಗಿ ಎಷ್ಟೋ ಬಡವರು ಸ್ವಂತ ಗೂಡು ಕಟ್ಟಿಕೊಂಡಿದ್ದಾರೆ, ಅವರ ಮಕ್ಕಳು ಶಾಲೆಯ ಮುಖ ನೋಡುತ್ತಿದ್ದಾರೆ, ಕುಡಿತ ಬಿಟ್ಟಿದ್ದಾರೆ. ಗ್ರಾಮೀಣಾಭಿವೃದ್ಧಿ ಯೋಜನೆಯನ್ನು ಟೀಕಿಸುವವರು ಈ ಅಂಶಗಳನ್ನೂ ಪರಿಗಣಿಸಬೇಕಾಗುತ್ತದೆ.

ಈ ಹಿನ್ನೆಲೆಯಲ್ಲಿ ಸೌಜನ್ಯಾಳಿಗೆ ನ್ಯಾಯ ಕೊಡಿಸುವ ಆವೇಶದಲ್ಲಿ ಆ ಪ್ರಕರಣವನ್ನು ಶ್ರೀಕ್ಷೇತ್ರ ಹಾಗೂ ಅದರ ಧರ್ಮಾಧಿಕಾರಿಯವರ ತೇಜೋವಧೆ ಮಾಡುವ ಅಸ್ತ್ರವನ್ನಾಗಿ ಮಾಡಿಕೊಳ್ಳುವುದು ಬೇಡ. ಅಸಾರಾಮ್ ಬಾಪು, ನಿತ್ಯಾನಂದನಂಥವರು ಜನರ ವಿಶ್ವಾಸ, ನಂಬಿಕೆಗೆ ಖಂಡಿತ ಕೊಡಲಿ ಏಟು ಹಾಕಿದ್ದಾರೆ. ಹಾಗಂತ ಎಲ್ಲರನ್ನೂ ಅಪನಂಬಿಕೆಯಿಂದ ನೋಡುವುದು, ಆ ಮೂಲಕ ಜನರ ನಂಬಿಕೆ, ವಿಶ್ವಾಸವನ್ನೇ ಹಾಳುಗೆಡವುದು ಇಂಥ ಪ್ರಯತ್ನಗಳಿಂದಾಗಿ ಹಿನ್ನಡೆಯಾಗುವುದು ಹಿಂದು ಧರ್ಮಕ್ಕೇ ಎಂಬುದನ್ನು ಭಗವಾಧ್ವಜ ಹಿಡಿದು ಬೀದಿಗಿಳಿದಿದ್ದವರು ಅರ್ಥಮಾಡಿಕೊಳ್ಳಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ, ಅಲ್ಪಸಂಖ್ಯಾತ ಕೋಮಿಗೆ ಸೇರಿದ ಕೆ.ಜೆ. ಜಾರ್ಜ್ ಗೃಹ ಸಚಿವರಾಗಿದ್ದಾರೆ. ಖಂಡಿತ ಅವರ ಬಳಿ ನಿಷ್ಪಕ್ಷಪಾತ ತನಿಖೆ, ನ್ಯಾಯ ಕೇಳೋಣ. ಹಾಲಿ ಸಿಐಡಿ ತನಿಖೆಯ ಪ್ರಾರಂಭಿಕ ಸಂಕೇತಗಳು ಸಂತೋಷ್ ರಾವ್‌ನತ್ತಲೇ ಬೆರಳು ತೋರುತ್ತಿವೆ. ವರದಿ ಹೊರಬಿದ್ದ ನಂತರವೂ ಅನುಮಾನವಿದ್ದರೆ ಸಿಬಿಐ ತನಿಖೆಗೆ ಒತ್ತಾಯಿಸೋಣ. ಎಷ್ಟೋ ಸಲ ಮಕ್ಕಳು ಮಾಡಿದ ತಪ್ಪಿಗೆ ಅಪ್ಪ-ಅಮ್ಮ ತಲೆ ಕೊಡಬೇಕಾಗುತ್ತದೆ. ಒಂದು ವೇಳೆ ನಿಶ್ಚಲ್ ತಪ್ಪಿತಸ್ಥನೆಂದು ಸಾಬೀತಾದರೆ ಧರ್ಮಸ್ಥಳದಿಂದ ಹೊಣೆಗಾರಿಕೆ ಕೇಳೋಣ. ಆದರೆ ಈಗ್ಗೆ ಹದಿನೈದು ದಿನಗಳ ಹಿಂದಷ್ಟೇ ಬೀದರ್‌ನ ಬಿಜೆಪಿ ಕಾರ್ಯದರ್ಶಿ ಬಾಬುವಾಲಿಯನ್ನು ಬೆಳಗ್ಗಿನಿಂದ ಸಂಜೆಯವರೆಗೂ ಬದ್ನಾಮಿ ಮಾಡಿದ ಮಾಧ್ಯಮಗಳು ಮರುದಿನ ಸಣ್ಣ ಕ್ಷಮೆ ಕೇಳಿದ ಘಟನೆಯನ್ನು ಮರೆಯಬೇಡಿ. ಹಾಗಾಗಿ ಆಧಾರ ರಹಿತ ಆರೋಪಗಳ ಮೂಲಕ ಶ್ರೀಕ್ಷೇತ್ರದ ಮೇಲಿನ ನಂಬಿಕೆ, ವಿಶ್ವಾಸ ಒಡೆಯುವುದು ಬೇಡ.

ಅಂಥ ದೇದೀಪ್ಯಮಾನನಾದ ಸೂರ್ಯನಿಗೇ ಗ್ರಹಣ ಹಿಡಿಯುತ್ತದೆ. ಇನ್ನು ಸಾಮಾನ್ಯ ಮನುಷ್ಯರು ಯಾವ ಲೆಕ್ಕ? ಹಾಗಾಗಿ ಶ್ರೀ ವೀರೇಂದ್ರ ಹೆಗ್ಗಡೆಯವರು ಈ ಘಟನೆಯಿಂದ ಅಧೀರರಾಗದೆ, ಆದರೆ ಮುಂದೆ ಎಚ್ಚರಿಕೆಯಿಂದ ತಮ್ಮ ಸಮಾಜಸೇವೆಯನ್ನು ಎಂದಿನಂತೆ ಮುಂದುವರಿಸಿ ಕೊಂಡು ಹೋಗುವಂತಾಗಲಿ.

62 Responses to “ಕುಮಾರಿ ಸೌಜನ್ಯಾಳ ಅಮಾನುಷ ಕೊಲೆಗೆ ನ್ಯಾಯ ಸಿಗಲೇಬೇಕು, ಆದರೆ..?”

  1. Manjunath says:

    Pratap,

    Your a big shame to journalism, after one year you have written an article about your college girl/your native girl.what were u doing all these days, you have said in FB that ppl have asked to write an article so u wrote. Don’t u think its shame. Every discussion you say I did journalism, try to provide proper justice for the definition of journalism.Instead of writing about Modi,BJP and Congress write an article which will clean our surrounding,how people should over come problems, jobs, how to take there life as an challenge. If at all Modi becomes PM neither ur native poor problems will be solved or our bangalore ppl problem will not be solved . Only business people, ppl like u , Vbhat are benefited from Modi. First we should honest to want we are doing.

    – Manjunath

  2. ತಪ್ಪು ಮಾಡಿದವರು ಯಾರೇ ಆದರೂ ಶಿಕ್ಸ್ಶೆಯಾಗಲೇಬೇಕು

  3. suguna shetty says:

    GRAHANA BITTA MELE SURYANU MATHUUUU THEJASWIYAGI HOLEYUTHANE

  4. Guest 1 says:

    Hi,
    Ayyo istondu kala vyartha yake madthira, Aropi Santhos Rao jailinali iddane, avanige addasttubega gallu shikshe agali.
    Navu addakkagi sarakaravanna ottayisona… Neevu yenanthiri?

  5. M.Adiraj says:

    Hi Prathap,

    We have complete sympathy with Soujanya’s parents and their demand for justice to be supported by every individual in our society. But, this genuine demand should not be allowed to hijack by our half baked politicians to meet their selfish ends. Now it is a troubled water and are taking advantage with all types of accusations and concocting stories.Your article will show some light to these selfish trouble mongers. I hope and believe end of the day “Truth and Dharma” will prevail in such a noble place like Dharmastala and every one will get justice.

  6. vidyanand shetty says:

    without fire, there will be no smoke.. same goes with this case.. if Veerendra Heggade wants he can make sure that the real culprits behind this killing bought to justice.. he has so powerful.. if he has done something wrong he should apologise to people, i’m sure people will forgive him.. if he has not done anything wrong or his people not done anything wrong, then people can feel that.. doing a crime is also crime and knowing that the crime is done and shielding them is also a crime.. so let the truth come out as soon as possible before prestige of Dharmasthala gets further lower.. Jai Manjunatha..

  7. Santhosh Kumar says:

    ಪ್ರಿಯ ಪ್ರತಾಸಿಂಹರವರೆ,
    ನಾನು ಹೈಸ್ಕೂಲಿನಲ್ಲಿರುವಾಗಿಂದಲೇ ನಿಮ್ಮ ಬರಹಗಳಿಂದ ಪ್ರಭಾವಿತನಾಗಿದ್ದೇನೆ. ಆದರೆ ಈ ಲೇಖನ ಯಾಕೋ ತಪ್ಪಾಗಿ ಬಂದಿದೆ ಎಂದೆನಿಸುತ್ತದೆ. ಯಾಕೆಂದರೆ ನೀವು ಹತ್ತಾರು ಬಾರಿ ಧರ್ಮಸ್ಥಳಕ್ಕೆ ಬಂದಿರುವಿರಿ ಅಥವಾ ಮಾಧ್ಯಮಗಳ ಮೂಲಕ ಇಲ್ಲಿಯ ಬಗ್ಗೆ ಕೇಳಿರುವಿರಿ ಆದರೆ ಇಲ್ಲೇ ಎಷ್ಟೋ ವರುಷಗಳಿಂದ ಬದುಕಿರುವ ಪೂಜ್ಯ ಖಾವಂದರನ್ನು ಮಾತನಾಡುವ ಮಂಜುನಾಥನೇ ಎಂದು ನಂಬಿಕೊಂಡು ಬಂದಿರುವ ಜನರು ಒಮ್ಮೆಲೇ ಯಾಕೆ ಇಷ್ಟು ದೊಡ್ಡ ಮಟ್ಟದಲ್ಲಿ ತಿರುಗಿ ಬಿದ್ದರು. ಯೋಚಿಸಿ ಸಿಂಹರವರೇ ಇದು ಸೌಜನ್ಯ ಕೊಲೆ ಅತ್ಯಾಚಾರ ಮಾತ್ರವಲ್ಲ ಹಿಂದಿನಿಂದಲೂ ಸಹಿಸಿಕೊಂಡು ಬಂದಿರುವ ನೋವು, ಪಟ್ಟ ಕಷ್ಟ, ಹರಿಸಿದ ಕಣ್ಣೀರು, ಮಾಡಿಸಿಕೊಂಡ ಅವಮಾನ ಕ್ಕೆ ಈಗ ಜನರು ಉತ್ತರಿಸುತ್ತಿದ್ದಾರೆ ಹೊರತು ಯಾರೋ ತೋರಿಸಿದ ಆಸೆ ಆಮಿಷಕ್ಕಲ್ಲ. ನೀವು ಇಲ್ಲಿಗೆ ಬನ್ನಿ ಅವರಿಂದಾಗಿ ಪಡಬಾರದ ಕಷ್ಟ ಪಟ್ಟ ಅದೆಷ್ಟೋ ಜನರನ್ನು ನೋಡಬಹುದು. ನಿಮ್ಮ ಮೇಲಿನ ಅಭಿಮಾನದಿಂದಾಗಿ ಕೇಳಿಕೊಳ್ಳುತ್ತಿದ್ದೇನೆ ದಯವಿಟ್ಟು ಅಲ್ಲಿಯ ಬಗ್ಗೆ ಸರಿಯಾಗಿ ತಿಳಿದುಕೊಂಡು ಜನರು ಯಾಕಾಗಿ ಹೋರಾಡುತ್ತಿದ್ದಾರೆ ಕಾರಣ ಏನು ಎಂಬುದನ್ನು ತಿಳಿದು ಇನ್ನೊಂದು ಲೇಖನವನ್ನು ಬರೆಯಿರಿ. ನನ್ನ ಪ್ರಕಾರ ಈ ಲೇಖನ ಮಧ್ಯಭಾಗದ ನಂತರ ಸತ್ಯಕ್ಕೆ ದೂರವಾದುದು.
    ನೀವು ಬರೆದಿದ್ದೀರಿ
    ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯ ಎಸ್‌ಡಿಎಂ ಕಾಲೇಜಿನ ಕುಮಾರಿ ಸೌಜನ್ಯಾಳ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಇಂದಿಗೂ ಜೀವಂತವಿದ್ದರೆ ಅದಕ್ಕೆ ಮೂಲ ಕಾರಣ ಈ ಮೇಲಿನ ಹೆಸರಿನಲ್ಲಿ ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌ನಲ್ಲಿ ಸತತವಾಗಿ ನಡೆದ ಹೋರಾಟ ಎಂದು ಈವತ್ತು ಅದೇ ಫೇಸ್ ಬುಕ್ ನ ಭುವಿತ್ ಶೆಟ್ಟಿ ಎಂಬುವವನ ಮೇಲೂ ಕೇಸು ದಾಖಲಿಸಿದ್ದಾರೆ.
    ಕೆಳಗೆ ಲಿಂಕ್ ಇದೆ ಪರೀಕ್ಷಿಸಿಕೊಳ್ಳಿ.
    ಧನ್ಯವಾದಗಳು.

    https://www.facebook.com/JusticeForSowjanya

  8. Yashavanth Shetty says:

    Dear Prathap ,

    Good Article ,But we have to notice one some points here ,nobody blamed about dharmastala and Dharmadhikari and may sombody using this chances to blame against dharmastala ,this protest was clearly publishing people want justice about Sowjanya case ,if nobody behind this case how the all supporting evidence can destroy ?.and people who are started protest all they are from localy onlly,More then 30thousand people joined in protest on 11/11/2013 at belthangady is it possible without any reason .there is no personnal issue of anybody in this protest .Dharmastala sarounding people are living with belss of Manjunatha only then we have to think about why these people making protest .

  9. Yatheesh says:

    Good Article But supporting slightly one side ,

    Recently Mr Rajesndra Das(Closest Person to V hegde ) filed a complaint against Admin of Justice for sowjanya FB account .
    I hope this person may know the people who is the culprit becuase otherthen this why he was interested to book a complaint after knowingly there is no personal intrest of people to fight .it shows clearly sombody doing some activities by planning and intentionaly .

    Any way real truth will comeout one day culprit who ever it may be .

  10. vithesh shetty says:

    ಪ್ರತಾಪ್ ಸಿಂಹ ಸರ್ ನನಗೂ ನಿಮ್ಮ ಲೇಖನ ಅಂದ್ರೆ ತುಂಬಾ ಅಭಿಮಾನ. ಪ್ರಸ್ತುತ ಧರ್ಮಸ್ಥಳದ ಪರಿಸ್ಥಿತಿ ನೋಡುವಾಗ ಸಮಾಜಕ್ಕೆ ಇವರಿಂದ ಎಷ್ಟು ಅನ್ಯಾಯವಾಗಿದೆ ಎನ್ನುವುದು ಗೊತ್ತಾಗುತ್ತದೆ ನಿವು ಇಲ್ಲಿಯ ಭಕ್ತನಾಗಿರ ಬಹುದು ಸರ್ ಆದರೆ ಇಲ್ಲಿಯೇ ಇರುವ ಜನರ ಪರಿಸ್ತಿತಿ ಹೇಗಿದೆಯೆಂದರೆ ಅನ್ಯಾಯ ನಡೆದರೂ ಹೋರಾಟ ಮಾಡಲು ದೈರ್ಯ ಇಲ್ಲದಂತಾಗಿದೆ ಈಗ ಒಂದು ಜನರಿಗೆ ಮುಖಂಡ ಸಿಕ್ಕಿದ್ದಾರೆ ಅವರ ನೇತೃತ್ವದಲ್ಲಿ ಹೊರಾಟ ನಡೆಯುತ್ತಿದೆ. ನೀವು ದಯವಿಟ್ಟು ಜನರ ಹೋರಾಟಕ್ಕೆ ಪ್ರೋತ್ಸಾಹದ ಲೇಖನ ಬರೆಯಿರಿ ಸರ್ ದಯವಿಟ್ಟು… ಸೌಜನ್ಯ ಒಬ್ಬಳೇ ಅಲ್ಲ ಅಂತಾ ನೂರಾರು ಹೆಣ್ಣು ಮಕ್ಕಳ ಸಾವಿಗೆ ನ್ಯಾಯ ಸಿಗಲೇ ಬೇಕು ..

  11. guru says:

    Prathap,
    Think again and write … It is not your pure artical….

  12. Rudresh says:

    ಯಾವುದಾದರೂ ಹುಡುಗನಿಗೆ ಅಪ್ಪ-ಅಮ್ಮ
    ಯಾರೂ ಇಲ್ಲ,
    ಇದ್ದರೂ ತಿನ್ನುವುದಕ್ಕೇ ಗತಿಯಿಲ್ಲ
    ಎಂದಾಗಿದ್ದರೆ ಆತನನ್ನು ಸಿದ್ಧಗಂಗಾ ಮಠಕ್ಕೆ
    ಬಿಟ್ಟು ಬನ್ನಿ, ಶ್ರೀ ಶಿವಕುಮಾರ!
    ಸ್ವಾಮೀಜಿಗಳ ಸುಪರ್ದಿಗೆ ವಹಿಸಿ ಬಿಡಿ
    ಉದ್ಧಾರವಾಗುತ್ತಾನೆ.
    its 200 percent true