Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಇತಿಹಾಸದಿಂದ ಪಾಠ ಕಲಿಯದವರು ಇತಿಹಾಸ ಸೃಷ್ಟಿಸಲಾರರು ಸರಿ, ಆದರೆ ನಮ್ಮ ಮಕ್ಕಳು ಓದುತ್ತಿರುವ ಇತಿಹಾಸ ಯಾವುದು?

ಇತಿಹಾಸದಿಂದ ಪಾಠ ಕಲಿಯದವರು ಇತಿಹಾಸ ಸೃಷ್ಟಿಸಲಾರರು ಸರಿ, ಆದರೆ ನಮ್ಮ ಮಕ್ಕಳು ಓದುತ್ತಿರುವ ಇತಿಹಾಸ ಯಾವುದು?

ಭಾರತೀಯ ಐತಿಹಾಸಿಕ ಸಂಶೋಧನಾ ಮಂಡಳಿ (ICHR).

ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (‌NCERT).

ಇವೆರಡೂ ತುಂಬಾ ಗುರುತರವಾದ, ಮುಂದಿನ ಪೀಳಿಗೆಯ ಬೌದ್ಧಿಕ ವಿಕಾಸದ ಮೇಲೆ ಪರಿಣಾಮ ಬೀರಬಲ್ಲಂಥ ಅಪರಿಮಿತ ಶಕ್ತಿಯನ್ನು ಹೊಂದಿರುವ ಸಂಸ್ಥೆಗಳು. ICHR​ ನಮ್ಮ ಇತಿಹಾಸದ ಬಗ್ಗೆ ಒಂದು ಸಮಗ್ರ ಸಂಶೋಧನೆ ನಡೆಸಿ ಅವುಗಳನ್ನು ಪ್ರಕಟಿಸುವ ಜವಾಬ್ದಾರಿ ಹೊಂದಿದ್ದರೆ, ಆ ಸಂಶೋಧನಾ ಗ್ರಂಥಗಳನ್ನು ಆಧಾರವಾಗಿಟ್ಟುಕೊಂಡು NCERT ಪಠ್ಯಪುಸ್ತಕ ರಚನೆ ಮಾಡುತ್ತದೆ. ಅದನ್ನು ನಮ್ಮ ಮಕ್ಕಳು ಪ್ರಾಥಮಿಕ ಹಂತದಿಂದ ಪದವಿವರೆಗೂ ಓದುತ್ತಾರೆ. ಆ ಓದು ಅವರ ಚಿಂತನೆ, ದೇಶದ ಇತಿಹಾಸದ ಬಗೆಗಿನ ಕಲ್ಪನೆಯನ್ನು ನಿರ್ಧರಿಸುತ್ತದೆ. ಇತಿಹಾಸದಿಂದ ಪಾಠ ಕಲಿಯದವರು ಇತಿಹಾಸ ನಿರ್ಮಿಸಲಾರರು ಎಂಬ ಮಾತಿದೆ. ಆದರೆ ಇತಿಹಾಸದ ಬಗ್ಗೆ ಆಮೂಲಾಗ್ರ ಸಂಶೋಧನೆ ನಡೆಸಿ ಐತಿಹಾಸಿಕ ಘಟನೆಗಳನ್ನು ಬರೆಯುವಂಥ ಗುರುತರ ಜವಾಬ್ದಾರಿಯನ್ನು ಸ್ವಾತಂತ್ರ್ಯಾ ನಂತರ ಯಾರಿಗೆ ಕೊಡಲಾಯಿತು ಗೊತ್ತೆ?

ಮೊಹಮದ್ ಹಬೀಬ್

ಇರ್ಫಾನ್ ಹಬೀಬ್

ರೋಮಿಲಾ ಥಾಪರ್

ತಸ್ನೀಮ್ ಅಹ್ಮದ್

ಆರ್.ಎಸ್.ಶರ್ಮಾ

ಬಿಪನ್ ಚಂದ್ರ

ಸತೀಶ್ ಚಂದ್ರ

ಹಾಗೂ ಇನ್ನು ಮುಂತಾದವರು. ಇವರಲ್ಲಿ ಈ ಇರ್ಫಾನ್ ಹಬೀಬ್ ಯಾರು ಗೊತ್ತೆ? ಭಾರತ ವಿಭಜನೆಯ ಬೀಜ ಬಿತ್ತಿದ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಮಹಾನ್ ಇತಿಹಾಸಕಾರ ಮತ್ತು ಮೇಷ್ಟ್ರು. ಈ ಮಹಾನುಭಾವ ಎರಡು ಬಾರಿ ICHR‌ನ ನಿರ್ದೇಶಕರಾಗಿದ್ದರು. ಮೊಹಮದ್ ಹಬೀಬ್ ಇವರ ತಂದೆಯಾದರೆ ತಸ್ನೀಮ್ ಅಹ್ಮದ್ ಶಿಷ್ಯೋತ್ತಮ ಹಾಗೂ ICHRನ ಉಪನಿರ್ದೇಶಕರಾಗಿದ್ದವರು. ಇನ್ನುಳಿದವರಂತೂ ಹುಟ್ಟಾ ಕಮ್ಯುನಿಸ್ಟರು. ಒಂದು ವೇಳೆ ಮಧ್ಯಯುಗದ ವಾಸ್ತವ ಇತಿಹಾಸವನ್ನು ನಮ್ಮ ಮಕ್ಕಳಿಗೆ ಹೇಳಿದರೆ ಮುಸ್ಲಿಂ ಆಕ್ರಮಣಕಾರರ ನಿಜವಾದ ಮುಖ, ಇಸ್ಲಾಂನ ಹೆಸರಿನಲ್ಲಿ ನಡೆಸಿದ ದೌರ್ಜನ್ಯ ಎಲ್ಲಿ ಗೊತ್ತಾಗಿ ಬಿಡುತ್ತದೋ ಎಂಬ ಯೋಚನೆಯಿಂದ ಇವರೆಲ್ಲರೂ ಸೇರಿ ಮಧ್ಯ ಯುಗದ ಇತಿಹಾಸಕ್ಕೆ ಬಿಳಿ ಬಣ್ಣಹೊಡೆಯಲು ಮುಂದಾದರು. ಇವರ ಲಜ್ಜೆಗೇಡಿತನ ಯಾವ ಮಟ್ಟಕ್ಕೆ ಹೋಯಿತೆಂದರೆ ಔರಂಗಜೇಬನಂಥ ದುರುಳನನ್ನೂ ಹೊಗಳಲು, ಅವನಿಗೆ ಸವಾಲೆಸೆದ ಶಿವಾಜಿ ಮಹಾರಾಜನನ್ನೇ ತೆಗಳಲು ಹೇಸಲಿಲ್ಲ. ಜತೆಗೆ ಇವರದ್ದೊಂದು ‘ಮೋಡಸ್ ಆಪರೆಂಡಿ’ ಅಂದರೆ ಕಾರ್ಯವಿಧಾನವಿದೆ. ತಸ್ನೀಮ್ ಅಹ್ಮದ್ ಒಂದು ಪುಸ್ತಕ ಬರೆದರೆ, ಇರ್ಫಾನ್ ಹಬೀಬ್ ಅದಕ್ಕೆ ಮುನ್ನುಡಿ ಬರೆದು ಹೊಗಳುತ್ತಾರೆ. ರೋಮಿಲಾ ಥಾಪರ್ ಭಾಷಣದಲ್ಲಿ ಆ ಪುಸ್ತಕವನ್ನು ಉಲ್ಲೇಖಿಸಿ, ಆಧಾರವಾಗಿಟ್ಟುಕೊಂಡು ಮಾತನಾಡುತ್ತಾರೆ. ಆ ಮೂಲಕ ಪರಸ್ಪರರು ಬರೆದಿದ್ದಕ್ಕೆ ಮನ್ನಣೆ, ವಿಶ್ವಾಸಾರ್ಹತೆ ಪಡೆದುಕೊಳ್ಳುವ ಜಾಣತನ ಮೆರೆಯುತ್ತಾರೆ. ಪ್ರಶಸ್ತಿ, ಪುರಸ್ಕಾರಗಳಲ್ಲದೆ ಸರ್ಕಾರದ ಸಹಾಯಧನವನ್ನೂ ಇಡಿಯಾಗಿ ನುಂಗುತ್ತಾರೆ. ಇಂಥವರನ್ನು, ಅವರ ಸುಳ್ಳುಗಳನ್ನು, ಲೂಟಿಕೋರತನವನ್ನು ಆಧಾರ ಸಮೇತವಾಗಿ ಬಯಲಿಗೆಳೆದ ವ್ಯಕ್ತಿ ಮತ್ತಾರೂ ಅಲ್ಲ, ಸ್ವತಂತ್ರ ಭಾರತದ ಪತ್ರಿಕೋದ್ಯಮದ ಇತಿಹಾಸದಲ್ಲೇ ಅತ್ಯಂತ ಪರಿಣಾಮಕಾರಿ, ವಿಶ್ವಾಸಾರ್ಹ, ಪ್ರೇರಕ ಪತ್ರಕರ್ತ ಅರುಣ್ ಶೌರಿ.

ಅವರ ಪ್ರಯತ್ನದ ಫಲವೇ  “Em‌inent H‌ist‌o‌r‌i​an​s”!​​

ಆದರೆ ಅಯೋಗ್ಯರನ್ನೇಕೆ ಶೌರಿ “Em‌inent’ ಅಥವಾ “ಮೇಧಾವಿ”/ “ಮಹಾನ್‌” ಎಂದು ಸಂಬೋಧಿಸಿದರು ಎಂದು ಆಶ್ಚರ್ಯಪಡಬೇಡಿ, ಅದೊಂದು ವ್ಯಂಗ್ಯವಷ್ಟೆ! ಈ “ಮೇಧಾವಿ”ಗಳು ಹೇಗೆ ಮಾತನಾಡುತ್ತಾರೆ ಎಂಬುದನ್ನು ಸಂಶೋಧಕ ಹಾಗೂ ಖ್ಯಾತ ಲೇಖಕ ಎನ್.ಎಸ್. ರಾಜಾರಾಮ್ ಹೇಗೆ ವಿವರಿಸುತ್ತಾರೆ ಗೊತ್ತಾ?

—–

“ಇವರು ಆಧಾರವೇ ಇಲ್ಲದ ಹಿಂದು-ಮುಸ್ಲಿಂ ಸಮಯನ್ವಯದ, ಸಮ್ಮಿಶ್ರ ಸಂಸ್ಕೃತಿಯ, ಏಕತೆಯ ಬಗ್ಗೆ ಆಗಾಗ್ಗೆ ಮಾತನಾಡುತ್ತಾರೆ. ಆದರೆ ಅಂತಹ ವಿಚಾರ-ಪ್ರಚಾರಗಳ ಮುಖ್ಯ ಗುರಿಯೆಂದರೆ, ಹಿಂದುತ್ವದ ಮೇಲೆ ಇಸ್ಲಾಂಪೂರ್ವ ಇತಿಹಾಸದ ಮೇಲೆ ದಾಳಿ ಮಾಡುವುದು ಮಾತ್ರವೇ. ಇದು ಇತಿಹಾಸವನ್ನು ಇಸ್ಲಾಮೀ ದೃಷ್ಟಿಕೋನದಿಂದ ನೋಡುವುದೇ ಆಗಿದೆ. ಅದೆಂದರೆ, ಇಸ್ಲಾಂಪೂರ್ವ ಅವಧಿಯ ಎಲ್ಲವನ್ನೂ ಅಂಧಕಾರದ ಅವಧಿ ಎಂದೇ ಪರಿಗಣಿಸುವುದಾಗಿದೆ. ಈ ‘ಮಹಾನ್‌’ ಇತಿಹಾಸಕಾರರನ್ನು ಬರೀ ಮಾರ್ಕ್ಸ್‌ವಾದಿಗಳೆಂದರೆ ಅದು ಪೂರ್ಣವಾಗುವುದಿಲ್ಲ. ಅವರು ತಮ್ಮ ದುಷ್ಕಾರ್ಯ ವಿಧಾನಕ್ಕಾಗಿ ಮಾರ್ಕ್ಸ್‌ವಾದಿ ಪರಿಭಾಷೆಯನ್ನು ಬಳಸುತ್ತಿರಬಹುದು. ಆದರೆ, ಅದು ಇಸ್ಲಾಮೀ ದೃಷ್ಟಿಯಿಂದ ಇತಿಹಾಸವನ್ನು ನೋಡುವುದರ ಜೊತೆ ಜೊತೆಗೇ ಗೊಬೆಲ್ಸ್‌ನ ಪ್ರಚಾರತಂತ್ರವನ್ನೂ ಅಳವಡಿಸಿಕೊಂಡ ವಿಧಾನವಾಗಿದೆ. ಬೇರೆಲ್ಲರ ಧ್ವನಿಗಳನ್ನು -ವಿಚಾರಗಳನ್ನು ಅದುಮಿ, ತಮ್ಮ ಪ್ರತಿಪಾದನೆಗಳನ್ನು ತಾರಕಸ್ವರದಲ್ಲಿ ಅರಚಿ ಅರಚಿ ಹೇಳುವುದೇ, ಅವರ ವಿಧಾನ. ಈ ‘ಮಹಾನ್‌’ ಇತಿಹಾಸಕಾರರ ಬರವಣಿಗೆಗಳನ್ನು ಓದಿದರೆ, ಇವರು ಏನನ್ನಾದರೂ ಓದಿಕೊಂಡಿದ್ದಾರೆಯೇ ಎಂಬ ಅನುಮಾನವೂ ಮೂಡುತ್ತದೆ. ಇವರಲ್ಲಿ ಒಬ್ಬರಾದರೂ ಮಾರ್ಕ್ಸ್‌ನನ್ನು ಸಹ ಅಧ್ಯಯನ ಮಾಡಿದಂತೆ ಕಾಣಿಸುವುದಿಲ್ಲ. ಬಾಲಿಶವಾದ ಇವರ ಕೃತಿಗಳನ್ನು ಓದುವುದೆಂದರೆ ಅದು ಚಿತ್ರಹಿಂಸೆಯೇ! ಇವರ ಪ್ರಧಾನ ಉದ್ದೇಶ-ಗುರಿಗಳನ್ನು ಸಾರಾಂಶರೂಪವಾಗಿ ಹೇಳುವುದಾದರೆ, ಹಿಂದು ಎನ್ನಬಹುದಾದ ಮತ್ತು ಭಾರತೀಯ ಮೂಲದ ಎಲ್ಲವನ್ನೂ ಅತ್ಯಂತ ಕೆಟ್ಟವು ಎಂದು ಹೀಗಳೆಯುವುದೇ ಆಗಿದೆ. ಭಾರತೀಯ ಪರಂಪರೆಯಲ್ಲಿ ಆನುಷಂಗಿಕವಾಗಿ ಕಾಣುವ, ವೇದಗಳಾಗಲೀ- ಸಂಸ್ಕೃತ ಭಾಷೆಯಾಗಲೀ, ವಿದೇಶೀ ಮೂಲದವು ಎಂದು ಸಾಧಿಸುವುದು ಸಹ ಅವರಿಗೆ ಅವಶ್ಯಕವೇ ಆಗಿದೆ. ಭಾರತದ ಮೇಲೆ ಆರ್ಯರು ದಾಳಿ ಮಾಡಿದರೆನ್ನುವ ಸಿದ್ಧಾಂತವು, ಸುಳ್ಳು ವಾದವೆಂದು ಎಂದೋ ಸಾಧಿತವಾಗಿ ಹೋಗಿದ್ದರೂ, ಸತ್ಯ ಏನೆಂದು ಗೊತ್ತಿದ್ದರೂ ಸಹ, ಅದೇ ಸುಳ್ಳು ವಾದಕ್ಕೆ ಇವರು ಅಂಟಿಕೊಂಡಿರುವುದು ದುರುದ್ದೇಶದಿಂದಲೇ. ವೇದಗಳು, ಸಂಸ್ಕೃತ ಭಾಷೆ ಭಾರತೀಯವೆನ್ನುವ ಎಲ್ಲ ಸಾಕ್ಷ್ಯಾಧಾರಗಳನ್ನು ಇವರು ಅಲ್ಲಗಳೆಯುತ್ತಾರೆ ಮತ್ತು ಹರಪ್ಪಾ ನಾಗರಿಕತೆಯು ವೇದಕಾಲಕ್ಕೆ ಸೇರಿದ್ದು ಎನ್ನುವುದನ್ನು ವೀರಾವೇಶದಿಂದ ನಿರಾಕರಿಸುತ್ತಾರೆ. ವೇದಕಾಲದ ನಾಗರಿಕತೆ ಮತ್ತು ಹರಪ್ಪ ನಾಗರಿಕತೆಗಳು ಒಂದೇ ಎಂಬುದಕ್ಕೆ ರಾಶಿರಾಶಿ ಸಾಕ್ಷ್ಯಾಧಾರಗಳು ದೊರೆತಿರುವಾಗ, ದೊರೆಯುತ್ತಿರುವಾಗ, ಇದೇ ‘ಮಹಾನ್‌’ ಇತಿಹಾಸಕಾರರ ಗುಂಪಿಗೆ ಸೇರಿದ ರೋಮಿಲ್ಲಾ ಥಾಪರ್ ಅವರು ರಾಷ್ಟ್ರೀಯ ಪತ್ರಿಕೆಯೊಂದಕ್ಕೆ ನೀಡಿದ ಒಂದು ಸಂದರ್ಶನದಲ್ಲಿ, “ಅದೇನೇ ಆಗಲಿ, ಇದನ್ನು ಶತಾಯಗತಾಯ ವಿರೋಧಿಸಬೇಕು” ಎಂದಿದ್ದರು. ಈ ಉದ್ದೇಶದಿಂದಲೇ ಆರ್.ಎಸ್.ಶರ್ಮರಂತಹವರು “ಹರಪ್ಪ ನಾಗರಿಕತೆಯಲ್ಲಿ ಕುದುರೆ ಇರಲಿಲ್ಲ” ಎಂಬ ಸುಳ್ಳುಗಳನ್ನು ಹಬ್ಬಿಸಲಾರಂಭಿಸಿದರು.

ಹಿಂದು ಎನ್ನುವ ಎಲ್ಲದಕ್ಕೂ ಅಪಾರ್ಥ ಕಲ್ಪಿಸಲು ಹಟತೊಟ್ಟು ನಿಂತ ಈ ಜನರು ಸಹಜವಾಗಿಯೇ ಹಿಂದು ವಿರೋಧಿ- ಭಾರತವಿರೋಧಿ ಆದ ಎಲ್ಲವನ್ನೂ ವೈಭವೀಕರಿಸುತ್ತಾರೆ. ಎಲ್ಲಿಯವರೆಗೆ ಎಂದರೆ ಭಾರತದ ಮೇಲೆ ಆದ ಇಸ್ಲಾಮೀ ಆಕ್ರಮಣವನ್ನು ಪ್ರಗತಿಶೀಲ ಆಂದೋಲನವೆಂದು ಹೇಳುತ್ತಾರೆ. ಸತ್ಯ ಏನೆಂಬುದು ಜಗತ್ತಿಗೇ ಗೊತ್ತು. ವಿಲ್‌ಡ್ಯೂರಾಂಟ್‌ರಂತಹ ಮಹತ್ವದ ಲೇಖಕರು, ಈ ಇಸ್ಲಾಮೀ ಆಕ್ರಮಣಗಳ ಬಗೆಗೆ, “ಇಡೀ ಜಗತ್ತಿನ ಇತಿಹಾಸದಲ್ಲಿಯೇ, ಅತಿ ಹೆಚ್ಚು ರಕ್ತಪಾತ-ಹತ್ಯಾಕಾಂಡಗಳ ಅವಧಿಯೆಂದರೆ, ಇಸ್ಲಾಮೀ ಆಕ್ರಮಣದ ಅವಧಿಯೇ” ಎಂದಿದ್ದಾರೆ. ಸ್ವಹಿತಾಸಕ್ತಿ-ಅಪಪ್ರಚಾರಗಳೇ ಮುಖ್ಯವಾಗಿರುವ ಈ ನಮ್ಮ ‘ಮಹಾನ್‌’ ಇತಿಹಾಸಕಾರರಿಗೆ, ಸತ್ಯ ಎಂಬುದೇ ಅಪಥ್ಯ. ಇವರ ಕೃತಿ ವಿಕೃತಿಗಳು ಎರಡು ಬಗೆಯಲ್ಲಿ ಹಾನಿಯುಂಟು ಮಾಡಿವೆ. ಒಂದು ಸಿದ್ಧಾಂತ- ವಿಚಾರಗಳಿಗೆ ಸಂಬಂಧಿಸಿದ್ದು. ಎರಡನೆಯದು ಇತಿಹಾಸಕ್ಕೆ ಸಂಬಂಧಿಸಿದ್ದು. ಜಿಹಾದ್ ಬಿಟ್ಟೇ ನೋಡಿದರೂ, ಖುರಾನ್-ಹದೀಸ್‌ಗಳಲ್ಲಿರುವ ಇಸ್ಲಾಮೀ ಸಿದ್ಧಾಂತವೇ ಸಾಕು, ಕಾಫಿರರನ್ನೂ ಮುಸ್ಲಿಮೇತರರನ್ನೂ ಯಾವ ರೀತಿ ಮುಸ್ಲಿಮರು ನಡೆಸಿಕೊಳ್ಳಬೇಕು, ಎನ್ನುವ ವಿವರಗಳು ದೊರೆಯುತ್ತವೆ. ಮುಸ್ಲಿಂ ಇತಿಹಾಸಕಾರರೇ ಸ್ವತಃ ದಾಖಲಿಸಿರುವ ವಿವರಗಳೇ ಸಾಕು; ಯಾವುದೇ ಅನುಮಾನಕ್ಕೆ ಎಡೆಕೊಡದಂತೆ, ಇತಿಹಾಸವನ್ನು ತೆರೆದಿಡುತ್ತವೆ. ಇನ್ನು ಪುರಾತತ್ವ ಶಾಸ್ತ್ರೀಯ ದಾಖಲೆಗಳೂ ಇದನ್ನೇ ಪುಷ್ಟೀಕರಿಸುತ್ತವೆ.

ದೆಹಲಿಯ ‘ವಾಯ್ಸ್ ಆಫ್ ಇಂಡಿಯಾ’ ಸಂಸ್ಥೆಯು ಪ್ರಕಾಶಿಸಿರುವ, ಸೀತಾರಾಮ ಗೋಯಲ್ ಅವರು ರಚಿಸಿರುವ ಎರಡು ಸಂಪುಟಗಳ ಕೃತಿಶ್ರೇಣಿ, ‘ಹಿಂದು ಟೆಂಪಲ್ಸ್, ವಾಟ್ ಹ್ಯಾಪನ್ಡ್ ಟು ದೆಮ್‌’, ಪುರಾತತ್ವ ಶಾಸ್ತ್ರದ ಮತ್ತು ಇತಿಹಾಸದ ದಾಖಲೆಗಳ ಪುರಾವೆಗಳನ್ನು ಯಥೇಚ್ಛವಾಗಿ ಒದಗಿಸುತ್ತದೆ. ಆದರೆ ಅದಕ್ಕೆ ವ್ಯತಿರಿಕ್ತವಾಗಿ, ಈ ‘ಮಹಾನ್‌’ ಇತಿಹಾಸಕಾರರು, ಈ ಎರಡೂ ಬಗೆಯ ಸತ್ಯಗಳನ್ನು ತಿರುಚಲು -ವಿಕೃತಿಗೊಳಿಸಲು ಪಡಬಾರದ ಪ್ರಯತ್ನ ಮಾಡುತ್ತಾರೆ. ಯುರೋಪಿನ ಬೆಲ್ಜಿಯಂ ದೇಶದ ಪ್ರಖ್ಯಾತ ವಿದ್ವಾಂಸರಾದ ಕೊನ್ರಾಡ್ ಎಲ್‌ಸ್ಟ್ ಹೇಳುವಂತೆ, ಇದು ‘ನಿರಾಕರಣವಾದ’ಕ್ಕೆ ‘ಜಿಹಾದ್ ನಿರಾಕರಣವಾದ’ಕ್ಕೆ ಎಡೆಮಾಡಿಕೊಡುತ್ತದೆ.

ಈ ಅಂಶಗಳು, ಈ ‘ಮಹಾನ್‌’ ಇತಿಹಾಸಕಾರರು ಮಾರ್ಕ್ಸ್‌ವಾದಿ ಬುದ್ಧಿಜೀವಿಗಳು ಎನ್ನುವುದಕ್ಕಿಂತ ಗೊಬೆಲ್ಸ್ ಮಾದರಿಯ ಪ್ರಚಾರವಾದಿಗಳು ಎನ್ನುವುದನ್ನು ಪುಷ್ಟೀಕರಿಸುತ್ತವೆ. ಡಿ.ಎನ್. ಝಾ ಅವರ ‘ಏನ್ಷಿಯಂಟ್ ಇಂಡಿಯಾ, ಆ್ಯನ್ ಇಂಟ್ರಡಕ್ಟರಿ ಔಟ್‌ಲೈನ್‌’ ಪುಸ್ತಕದಿಂದ ಅನೇಕ ಉದಾಹರಣೆಗಳನ್ನು ಇಟ್ಟುಕೊಂಡು, ಅರುಣ್ ಶೌರಿ ಅವರು ಅಧ್ಯಾಯ 15ರಲ್ಲಿ, ಸೋವಿಯೆತ್ ಒಕ್ಕೂಟದ ವಿದ್ವಾಂಸರಾದ ಕೆ. ಆ್ಯಂಟನೋವಾ, ಜಿ. ಬೊಂಗಾರ್ಡ್ ಲೆವಿನ್ ಮತ್ತು ಜಿ. ಕೋಟೋವ್‌ಸ್ಕಿ ಅವರು 1973ರಲ್ಲಿ ಪ್ರಕಟಿಸಿದ ‘ಎ ಹಿಸ್ಟರಿ ಆಫ್ ಇಂಡಿಯಾ’ ಕೃತಿಯನ್ನು ಶೌರಿಯವರು ಹೇರಳವಾಗಿ ಉದಾಹರಿಸುತ್ತಾರೆ. ಡಿ.ಎನ್. ಝಾ ಅಂತಹ ‘ಭಾರತೀಯ’ ಇತಿಹಾಸಕಾರರ ಕಟುದೂಷಣೆ-ತೀವ್ರ ಖಂಡನೆಗಳು, ಸೋವಿಯತ್ ಗ್ರಂಥಗಳಲ್ಲಿ ಸಹ ಕಂಡು ಬರುವುದಿಲ್ಲ, ಎನ್ನುವುದನ್ನು ತೋರಿಸಿದ್ದಾರೆ. ಸಾಲದೆಂಬಂತೆ, ಈ ‘ಮಹಾನ್‌’ ಇತಿಹಾಸಕಾರರಿಗಿಂತ, ಸೋವಿಯೆತ್ ಲೇಖಕರು ತಮ್ಮ ಗ್ರಂಥಗಳಲ್ಲಿ ಹೆಚ್ಚಿನ ವೃತ್ತಿಪರತೆಯನ್ನು ತೋರಿರುವುದೂ ವಿದಿತವಾಗುತ್ತದೆ. ಭಾರತದಲ್ಲಿ ದೊರೆಯುತ್ತಿರುವ ‘ಭಾರತೀಯ ಇತಿಹಾಸ’ ಕುರಿತ ಪುಸ್ತಕಗಳಿಗಿಂತ, ಸೋವಿಯೆತ್ ಲೇಖಕರ ಕೃತಿಗಳು ಎಷ್ಟೋ ಉತ್ತಮವಾಗಿವೆ. ಶೌರಿಯವರು ನೀಡಿರುವ ಹೋಲಿಕೆಗಳಿಂದ-ಉದಾಹರಣೆಗಳಿಂದ, ಝಾ ಅಂತಹವರ ಅಪ್ರಾಮಾಣಿಕತೆ, ಸಂಕುಚಿತ ಹುಸಿ-ಸೆಕ್ಯೂಲರ್ ವಾದಗಳು ಬಯಲಾಗುತ್ತವೆ. ಝಾ ಅವರ ಸರ್ವಾಧಿಕಾರಿ ಲಕ್ಷಣದ ವಾದಗಳು ಬಯಲಾಗುತ್ತವೆ. ಝಾ ಅವರ ಸರ್ವಾಧಿಕಾರಿ ಲಕ್ಷಣದ ಗ್ರಂಥರಚನೆಯ ‘ವೈಶಿಷ್ಟ್ಯ’ಗಳನ್ನೂ -ಸೋವಿಯೆತ್ ಲೇಖಕರ ವೃತ್ತಿಪರತೆಯ ಉದಾಹರಣೆಗಳನ್ನೂ, ಈ ‘ಎಮಿನೆಂಟ್ ಹಿಸ್ಟಾರಿಯನ್ಸ್‌’ ಗ್ರಂಥದಲ್ಲಿ ತಪ್ಪದೇ ಗಮನಿಸಬೇಕು.

ಈ ‘ಮಹಾನ್‌’ ಸಾಹಿತಿಗಳ ಕಾರ್ಯತಂತ್ರ- ದುಷ್ಕಾರ್ಯ ವಿಧಾನಗಳನ್ನು ಪರಿಶೀಲಿಸಿದಾಗ, ಭ್ರಷ್ಟಾಚಾರ- ಕೃತಿಚೌರ್ಯ ಇತ್ಯಾದಿಗಳನ್ನು ಗಮನಿಸಿದಾಗ, ಇದಕ್ಕಿಂತ ಹೇಯವಾಗಿ, ದೇಶದ ಅಸ್ಮಿತೆಯನ್ನೇ -ಸ್ವಾಭಿಮಾನವನ್ನೇ ಘಾಸಿ ಮಾಡಲು ಹೊರಟಿರುವುದು ತುಂಬ ವಿಷಾದವನ್ನುಂಟು ಮಾಡುತ್ತದೆ. ವೇದವ್ಯಾಸರು ಹೇಳುವಂತೆ, ಒಂದು ಸಂಸ್ಥೆಯನ್ನು ಅಪಸಿದ್ಧಾಂತ-ಅಪಮಾರ್ಗಗಳಿಂದ ಭ್ರಷ್ಟಗೊಳಿಸಿ, ಇಡೀ ಸಂಸ್ಥೆಯನ್ನೇ ಅಸತ್ಯ ಪ್ರಚಾರದ ಸಾಧನವಾಗಿ ಬಳಸಿರುವುದು ಘೋರಾತಿಘೋರವೆನಿಸುತ್ತದೆ. ಇದು ಸತ್ಯದ ಅಸ್ತಿತ್ವವನ್ನೇ ಒಪ್ಪದ- ನಿರಾಕರಿಸುವ ಅಪಸಿದ್ಧಾಂತ. ಇವರು ಸ್ವಾರ್ಥ-ಸ್ವಹಿತಾಸಕ್ತಿಗಳನ್ನೇ ಸತ್ಯವೆಂದು ಸಾಧಿಸಿರುವುದಲ್ಲದೇ, ದೇಶದ ಉದ್ಧಾರಕರು ತಾವೇ ಎನ್ನುವಂತೆ ಬೀಗುವುದು ಇನ್ನಷ್ಟು ಹೇಸಿಗೆ ತರುವ ವಿಷಯವಾಗಿದೆ.

ಐವತ್ತು ವರ್ಷಗಳಷ್ಟು ದೀರ್ಘಕಾಲ ಹೀಗೆ  ICHR ನಂತಹ ಸಂಸ್ಥೆಗಳನ್ನು ಸವಾರಿ ಮಾಡುತ್ತ ಕುಳಿತ ಈ ‘ವಿದ್ವಾಂಸ’ರು ಇತಿಹಾಸ ಸಂಶೋಧನೆಯ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯಾದರೂ ಎಂತಹುದು? ಖೇದಕರ, ವಿಷಾದನೀಯ, ಎಂದೇ ಹೇಳಬೇಕಾಗುತ್ತದೆ. ಭಾರತದ ಇತಿಹಾಸ ಸಂಶೋಧನಾ ಕ್ಷೇತ್ರದಲ್ಲಿ ಅನೇಕ ಮಹತ್ವದ ಬೆಳವಣಿಗೆಗಳಾಗಿವೆ; ಆದರೆ ಅವೆಲ್ಲವೂ, ಈ ‘ಮಹಾನ್‌’ ಇತಿಹಾಸಕಾರರು ಆವರಿಸಿಕೊಂಡಿರುವ ಸಂಸ್ಥೆಗಳ ಹೊರಗಡೆ ಆವಿಷ್ಕೃತವಾಗಿವೆ. ಈ ವಿಮರ್ಶಕನು – ಈ ಲೇಖಕನು, ವಿಶ್ವಾದ್ಯಂತವಿರುವ ಈ ಕ್ಷೇತ್ರದ ಸಂಶೋಧನೆ-ಪ್ರಕಟನೆಗಳ ಕೇಂದ್ರ ಬಿಂದುವಿನ ನಿಕಟ ಪರಿಚಯವಿಟ್ಟುಕೊಂಡಿರುವುದರಿಂದ ನಿಖರವಾಗಿ ಹೇಳುವುದಾದರೆ, ಈ ರೋಮಿಲ್ಲಾ ಥಾಪರ್‌ಗಳನ್ನು, ಆರ್.ಎಸ್. ಶರ್ಮಗಳನ್ನು ಅಥವಾ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ‘ವಿದ್ವಾಂಸ’ರ ಅಭಿಪ್ರಾಯಗಳನ್ನು -ಟಿಪ್ಪಣಿಗಳನ್ನು ಜಗತ್ತಿನ ಯಾರೂ ಕೇಳುವುದಿಲ್ಲ. ಇಡೀ ಜಗತ್ತು ಇಂದು ಆಸಕ್ತಿ ತೋರುತ್ತಿರುವುದು, ಶ್ರೀಕಾಂತ ತಲಗೇರಿ ಅಂತಹವರ ವೈದಿಕ- ಪೌರಾಣಿಕ ಸಮನ್ವಯ ಸಿದ್ಧಾಂತ ಕುರಿತಂತೆ. ನಟವರ ಝಾ ಅಂತಹವರ ಸಿಂಧೂ ಲಿಪಿಯ ರಹಸ್ಯಗ್ರಹಣ ಸಂಶೋಧನೆ ಕುರಿತಂತೆ ಮತ್ತು ಭಾರತ -ಭಾರತದ ನಾಗರಿಕತೆಗಳ ಮೇಲೆ ಬೆಳಕು ಚೆಲ್ಲುವ ಇತರ ಸಂಶೋಧನೆಗಳಿಗೆ ಸಂಬಂಧಿಸಿದಂತೆ. ಈ ಬಗೆಯ ವಿದ್ವಾಂಸರ ಅದ್ಭುತ ಸಂಶೋಧನೆ-ವಿಚಾರಗಳ ಮುಂದೆ, ಈ ಆರ್.ಎಸ್. ಶರ್ಮ-ಇರ್ಫಾನ್ ಹಬೀಬ್ ಅಂತಹವರು ಮುಂದಿಡುವುದು ಬರೀ ಕ್ರೈಸ್ತ ಮಿಷನರಿ- ಮಾರ್ಕ್ಸ್‌ವಾದಿ-ಮುಲ್ಲಾಗಳ, ಕಿತ್ತು ಹೋದ ತಿರುಚಿದ ತಿಪ್ಪೆ ಮಾತ್ರವೇ! ಈ ‘ಮಹಾನ್‌’ ಇತಿಹಾಸಕಾರರು ಬೀಗುತ್ತ ನೀಡುವ ಆಡಂಬರದ ಸೋಗುಗಳು ಅವರ ವಿದ್ವತ್ ಕೊರತೆಯ ದೌರ್ಬಲ್ಯಗಳನ್ನು ಮುಚ್ಚಿಕೊಳ್ಳುವ ಲಂಗೋಟಿಗಳಷ್ಟೆ. ಆ ಕಾರಣಕ್ಕಾಗಿಯೇ ಅರುಣ್ ಶೌರಿ ಇವರನ್ನು ‘ಮಹಾನ್‌’ ಇತಿಹಾಸಕಾರರು ಎಂದು ವ್ಯಂಗ್ಯ ಮಾಡಿದ್ದಾರೆ!

—–

ಅರುಣ್ ಶೌರಿಯವರ ಎಮಿನೆಂಟ್ ಹಿಸ್ಟಾರಿಯನ್ಸ್ ಹೆಸರಿನ ಪುಸ್ತಕ “ಮಹಾನ್ ಇತಿಹಾಸಕಾರರು” ಎಂಬ ಶೀರ್ಷಿಕೆಯಲ್ಲಿ ಕನ್ನಡಕ್ಕೆ ಬರುತ್ತಿದ್ದು ನಾಳೆ ಬೆಳಗ್ಗೆ 10.30ಕ್ಕೆ ಬೆಂಗಳೂರಿನ ಆರ್.ವಿ. ಟೀಚರ್ಸ್ ಕಾಲೇಜಿನ ಸಭಾಂಗಣದಲ್ಲಿ ಡಾ. ಎಸ್.ಎಲ್. ಭೈರಪ್ಪ ಲೋಕಾರ್ಪಣೆ ಮಾಡಲಿದ್ದಾರೆ. ಅರುಣ್ ಶೌರಿ ಬರಹಗಳನ್ನು ಓದುವುದು ತುಸು ತ್ರಾಸ, ಭಾಷಾಂತರ ಮಾಡುವುದಂತೂ ಇನ್ನೂ ಕಷ್ಟ. ಅಂಥ ಕಷ್ಟಕರ ಕೆಲಸವನ್ನು ಮಂಜುನಾಥ ಅಜ್ಜಂಪುರ ಮಾಡಿದ್ದಾರೆ. ಅರುಣ್ ಶೌರಿ ಅವರಷ್ಟು ಚಿಂತನೆಗೆ ಹಚ್ಚುವ ಪತ್ರಕರ್ತ ಮತ್ತೊಬ್ಬರಿಲ್ಲ. ತಪ್ಪದೇ ಪುಸ್ತಕ ಓದಿ. ಜತೆಗೆ ರಾಜಧರ್ಮವನ್ನೇ ಪಾಲಿಸದ ಟಿಪ್ಪು ಸುಲ್ತಾನನನ್ನು ಮಹಾಕ್ಷತ್ರಿಯ ಎಂದು ಬಣ್ಣಿಸುವ, ಅಟ್ಟಕ್ಕೇರಿಸಿ ನಾಟಕ ಬರೆಯುವ ವ್ಯಕ್ತಿಗಳಿಗೂ ಈ ಪುಸ್ತಕದ ಒಂದು ಪ್ರತಿ ಕೊಡುವುದೊಳಿತು. ಆನಂತರವಾದರೂ ಅಪದ್ಧ ನುಡಿಯುವುದನ್ನು ನಿಲ್ಲಿಸುತ್ತಾರೇನೋ, ನೋಡೋಣ!

9 Responses to “ಇತಿಹಾಸದಿಂದ ಪಾಠ ಕಲಿಯದವರು ಇತಿಹಾಸ ಸೃಷ್ಟಿಸಲಾರರು ಸರಿ, ಆದರೆ ನಮ್ಮ ಮಕ್ಕಳು ಓದುತ್ತಿರುವ ಇತಿಹಾಸ ಯಾವುದು?”

  1. keerthi says:

    super sir… inthavrindhane nam deshadha history halmadirodhu…

  2. Sunaath says:

    ಇವರು ಹೇಳಿ ಕೇಳಿ ಅಪದ್ಧ ನಾಟಕಕಾರರು. ಏನೇ ಸಾಕ್ಷಿಯನ್ನು ಇವರ ಮುಖಕ್ಕೆ ಹಿಡಿದರೂ, ಇವರು ಬದಲಾಯಿಸುವದಿಲ್ಲ. ನಾಯಿಯ ಬಾಲ ಡೊಂಕು ತಾನೆ?

  3. praveen says:

    tumba vishadisutteve …
    e holasu budduya jana yavaga nam deshadinda dura agtaro…?
    tuma thanks anna olle baraha..

  4. Shivaprasad N S says:

    Maanyare ,

    Bahala uttamavaada baraha. Dhanyavaadagalu. Naanoo “ಮಹಾನ್ ಇತಿಹಾಸಕಾರರು” kondu ooduthene.

    SHivaprasad N S

  5. Aravind K A says:

    E vyavasteya bagge nijavagiyu asahya huttisuthe. Pracharakkagi jathyateetate hesarinalli darmavannu halugedavuthiruva hagu vote gagi nammathanavannu halumaduthiruva ivarige Dikkara

  6. Pramod Kashyap D says:

    A very nice article as always. I’m always suggested that these Indian history is not real one which has many twists and turns, after reading this article a got a very good info about indian history. I’ll get that book “Mahan Etihasakara” or “Eminent historians” and definitely read it.

  7. Sachin says:

    Mass psychotherapy should be done for these secularists and Eminent Historians.
    Whatever they write they can’t twist the history and all the bloody atrocities of Muslim rulers will be historical for ever

  8. Dr.Madhusudhan says:

    Naama makala future annu naava rupeesonaa.oodi thiliyoona he nammahindustanada history anna.jai hind.

  9. manju gowda says:

    ಹಾಗದ್ರೆ ನಮ್ಮ ಸರ್ಕಾರ ಇದೆಲ್ಲವನ್ನು ಹೇಗೆ ಪಠ್ಯಕ್ರಮವಾಗಿ ಒಪ್ಪಿದೆಯೊ ?ತಪ್ಪು ಮಾಹಿತಿ ಪಡೆಯುವ ಮಕ್ಕಳ ಭವಿಷ್ಯ ಹೇಗೆ ಸಾರ್?…………