Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಎಲ್ಲರೂ ಸಂತರು, ಬೋಳೇಶಂಕರರು ಆಗಬೇಕೆಂದಲ್ಲ, ಆದರೆ?

ಎಲ್ಲರೂ ಸಂತರು, ಬೋಳೇಶಂಕರರು ಆಗಬೇಕೆಂದಲ್ಲ, ಆದರೆ?

ಹೆಸರು: ಡಾ. ಕೇತನ್ ದೇಸಾಯಿ
ಪದವಿ: MBBS, MS. Mch, F.R.C.S.
ಹುದ್ದೆ: ಅಧ್ಯಕ್ಷ, ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ (ಎಂಸಿಐ).
ಸಂಪತ್ತು: 2200 ಕೋಟಿ ರೂಪಾಯಿ, 1 ಟನ್‌ಗೂ ಅಧಿಕ ಚಿನ್ನ ಹಾಗೂ ವಜ್ರ!!

ಹಾಗೂ

ಹೆಸರು: ಲಲಿತ್ ಕುಮಾರ್ ಮೋದಿ
ಪದವಿ: ಎಂಬಿಎ
ಹುದ್ದೆ: ಐಪಿಎಲ್ ಕಮಿಷನರ್
ಸಂಪತ್ತು: ಕಿಂಗ್ಸ್ ಇಲೆವೆನ್, ರಾಜಸ್ಥಾನ್ ರಾಯಲ್ಸ್ ಹಾಗೂ ಕೋಲ್ಕೊತಾ ನೈಟ್ ರೈಡರ್‍ಸ್ ತಂಡಗಳಲ್ಲಿ ಷೇರು. ಸ್ವಂತ ಜೆಟ್, ಒಂದು ಯಾಚ್ (ಸುಸಜ್ಜಿತ ಖಾಸಗಿ ದೋಣಿ). ಸೆಟ್ ಮ್ಯಾಕ್ಸ್‌ಗೆ ಪ್ರಸಾರ ಹಕ್ಕು ನೀಡಿದ್ದಕ್ಕಾಗಿ ಪಡೆದುಕೊಂಡ ಕಮಿಷನ್ 80 ದಶಲಕ್ಷ ಡಾಲರ್‍ಸ್! ಐದಕ್ಕೂ ಹೆಚ್ಚು ಖಾಸಗಿ ಕಂಪನಿಗಳ ಒಡೆತನ!!

ಮುಂಬೈ-ಚೆನ್ನೈ ಪಂದ್ಯ
ಎರಡನೇ ಇನ್ನಿಂಗ್ಸ್‌ನ ಹತ್ತನೇ ಓವರ್ ನಂತರ ಚೆನ್ನೈ ಪರ ಬೆಟ್ಟಿಂಗ್ ಸ್ವೀಕರಿಸುವುದನ್ನು ನಿಲ್ಲಿಸುವ ಮೂಲಕ ದಾವೂದ್ ಇಬ್ರಾಹಿಂ ಪಡೆ ಮುಂಬೈವೊಂದರಲ್ಲೇ ಗಳಿಸಿದ ಬೆಟ್ಟಿಂಗ್ ಹಣ ೬ ಸಾವಿರ ಕೋಟಿ ರೂಪಾಯಿ!!

ಕಳೆದ ಹದಿನೈದು ದಿನಗಳಲ್ಲಿ ಮೂರು ಬಾರಿ ದೇಶಕ್ಕೆ ದೇಶವೇ ಹೌಹಾರಿದೆ. ಹಣ, ಹಣ, ಹಣ, ಹಣ… ಯಾರೇ ಬಾಯ್ತೆರೆದರೂ ಹೊರಡುವುದು ಹಣದ ಮಾತೇ. ಡಾ. ಕೇತನ್ ದೇಸಾಯಿ ಎಂಬ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷ, ಕೇವಲ ಲಂಚದ ಮೂಲಕ ಇಷ್ಟೆಲ್ಲಾ ಕೂಡಿಹಾಕಬಹುದೆ ಎಂದು ಎಲ್ಲರೂ ದಿಗ್ಭ್ರಮೆಗೊಳಗಾಗಿದ್ದಾರೆ. ಗಾಳಕ್ಕೆ ಸಿಕ್ಕಿದ್ದೇ ತಡ ಲಲಿತ್ ಮೋದಿಯ ಹುಟ್ಟಿನಿಂದ ವಿವಾಹ, ವ್ಯವಹಾರ ಎಲ್ಲವನ್ನೂ ಎಳೆದುತಂದು ಮಾಧ್ಯಮಗಳು ಜನ್ಮ ಜಾಲಾಡಲಾರಂಭಿಸಿವೆ. ಆತನ ಲೈಫ್‌ಸ್ಟೈಲ್, ಅಡ್ಡಮಾರ್ಗದಿಂದ ಗಳಿಸಿದ ಹಣವನ್ನು ಕಂಡು ಜನಕ್ಕೂ ಐಪಿಎಲ್ ಬಗ್ಗೆ ಅನುಮಾನ ಕಾಡಲಾರಂಭಿಸಿದೆ. ಒಂದೊಂದು ಪಂದ್ಯದ ಬೆಟ್ಟಿಂಗ್ ಹಣವೇ ಐದಾರು ಸಾವಿರ ಕೋಟಿಗಳಿರುವಾಗ ಮೋಸ ನಡೆಯದೇ ಇದ್ದೀತೆ, ಐಪಿಎಲ್ ಅಂದರೆ ದುಡ್ಡಿನಾಟ, ಬರೀ ಮೋಸ ಎಂದು ಎಲ್ಲರೂ ಶಪಿಸುತ್ತಿದ್ದಾರೆ. ಒಟ್ಟಾರೆಯಾಗಿ ಎಲ್ಲರನ್ನೂ ಚಿಂತೆಗೀಡುಮಾಡಿರುವ, ಅನುಮಾನಕ್ಕೆ ಎಡೆಮಾಡಿ ಕೊಟ್ಟಿರುವ, ಆಕ್ರೋಶಕ್ಕೆ ಕಾರಣವಾಗಿರುವ ಅಂಶ “ದುಡ್ಡು” ಹಾಗೂ ಅದರ “ಪ್ರಮಾಣ”. ಹಣ ಎಂದರೆ ಹೆಣವೂ ಬಾಯ್ಬಿಡುತ್ತದೆ ಎಂಬ ಮಾತೇ ಇದೆ ಬಿಡಿ. ಈ ಹಣದ ವ್ಯಾಮೋಹ ಆರಂಭವಾಗಿದ್ದಾದರೂ ಎಲ್ಲಿಂದ, ಏಕಾಗಿ? ಹಣ ಎನ್ನುವುದು ಏಕೆ ಮನುಷ್ಯನನ್ನು ಈ ಮಟ್ಟಕ್ಕಿಳಿಸುತ್ತದೆ? ಎರಡು ಸಾವಿರ ಕೋಟಿಗೂ ಹೆಚ್ಚು ಹಣ ಸಂಗ್ರಹಿಸಿದ ನಂತರವೂ, ಪಂಜಾಬ್‌ನ ಪಟಿಯಾಲಾದ ಗ್ಯಾನ್ ಸಾಗರ್ ಎಂಬ ಖಾಸಗಿ ಮೆಡಿಕಲ್ ಕಾಲೇಜಿಗೆ ನೂತನ ವಿಷಯ ಆರಂಭಿಸಲು ಅನುಮತಿ ಕೊಡುವುದಕ್ಕೆ ಡಾ. ಕೇತನ್ ದೇಸಾಯಿ 2 ಕೋಟಿ ಲಂಚ ಕೇಳಿದ್ದೇಕೆ? ಒಬ್ಬ ಮನುಷ್ಯನ ಜೀವನಕ್ಕೆ ಎಷ್ಟು ಹಣ ಬೇಕು? ಹತ್ತು ತಲೆಮಾರು ಕುಳಿತು ತಿಂದರೂ ಮುಗಿಯದಷ್ಟು ಬಾಚಿಕೊಂಡ ಮೇಲೂ ದೇಸಾಯಿ 2 ಕೋಟಿಗೆ ಬಾಯ್ಬಿಟ್ಟಿದ್ದೇಕೆ? ಅಥವಾ ದುಡ್ಡು ಮಾಡುವುದೂ ಕೂಡ ಡ್ರಗ್ಸ್, ಸ್ಮೋಕಿಂಗ್, ಮದ್ಯ ಸೇವನೆಯಂತೆ ಮನುಷ್ಯನಿಗೆ ಒಂದು ಚಟವಾಗಿ ಬಿಟ್ಟಿದೆಯೇ? ಏಕಾಗಿ ಮನುಷ್ಯ ಈ ಮಟ್ಟಕ್ಕಿಳಿಯುತ್ತಾನೆ?

Who is to be blamed?

ಇಲ್ಲಿ ಯಾರನ್ನು ದೂರಬೇಕು? ಅದು ಡಾ. ಕೇತನ್ ದೇಸಾಯಿ ಇರಬಹುದು, ಲಲಿತ್ ಮೋದಿ ಆಗಿರಬಹುದು, ದಾವೂದ್ ಗಳಿಸಿದ ಬೆಟ್ಟಿಂಗ್ ಹಣವಿದ್ದಿರಬಹುದು, ಈ ಭ್ರಷ್ಟಾಚಾರ, ಅಡ್ಡಮಾರ್ಗದ ಬಗ್ಗೆ ನಾವು ವ್ಯಕ್ತಪಡಿಸುತ್ತಿರುವುದು ನಿಜಕ್ಕೂ ಸಾತ್ವಿಕ ಆಕ್ರೋಶವೇ? ಅಥವಾ ನಮಗೆ ಅಂತಹ ಅವಕಾಶವಿಲ್ಲವಲ್ಲಾ ಎಂಬ ಅಸಹಾಯಕತೆಯೇ?! ಅಷ್ಟಕ್ಕೂ ಯಾರಿಗಿಲ್ಲ ಹೇಳಿ, ದುಡ್ಡಿನ ಮೋಹ? ಆಡಂಬರ, ಶ್ರೀಮಂತಿಕೆಯ ಬಗ್ಗೆ ಎಷ್ಟೇ ಫಿಲಾಸಫಿಕಲ್ ಆಗಿ ಮಾತನಾಡಿದರೂ ನಾವು ಕೂಡ ವ್ಯಕ್ತಿಗಳನ್ನು ಹಣದಿಂದಲೇ ಅಳೆಯುತ್ತೇವೆಯಲ್ಲವೆ?

ಅವನು ದೊಡ್ಡ ಪೊಲಿಟೀಶಿಯನ್, ದೊಡ್ಡ ಲಾಯರ್, ದೊಡ್ಡ ಇಂಡಸ್ಟ್ರಿಯಲಿಸ್ಟ್, ದೊಡ್ಡ ರೈಟರ್ ಎನ್ನುತ್ತೇವೆ. ಇಲ್ಲಿ ಕೂಡ “ದೊಡ್ಡ” ಎನ್ನುವುದೇ ಪ್ರಾಮುಖ್ಯತೆ ಪಡೆಯುತ್ತದೆ. ಈ “ದೊಡ್ಡ” ಎಂಬ ಪದ ಪ್ರಯೋಗಕ್ಕೆ ಕಾರಣವೇನಿರುತ್ತದೆ ಹೇಳಿ? ಆತ ಗಳಿಸಿರುವ, ಕೂಡಿ ಹಾಕಿರುವ ಹಣದ ಪ್ರಮಾಣವೇ ‘ದೊಡ್ಡ’ ಎಂಬ ಪದದ ನಿರ್ಧಾರಕ ಅಂಶವಲ್ಲವೆ? ಬಹಳ ಪ್ರಸಿದ್ಧ ಅಥವಾ ಫೇಮಸ್ ಎನ್ನಬಹುದಿತ್ತಲ್ಲವೆ? ಅಕಸ್ಮಾತ್ ಈ ರೀತಿಯ ಪದಗಳನ್ನು ಬಳಸಿದರೂ, “ಆತ ಬಹಳ ಒಳ್ಳೆಯ, ಪ್ರಸಿದ್ಧ ವ್ಯಕ್ತಿ, ಆದರೆ ಮನೆಯಲ್ಲಿ ಏನೂ ಇಲ್ಲ, ಏನೂ ಮಾಡಿಕೊಂಡಿಲ್ಲ, ಪಾಪ!” ಎಂಬ ಅನುಕಂಪ ಆ ಮಾತಿನಲ್ಲಿರುತ್ತದೆ! ಅದರಲ್ಲೂ ಬೆಂಗಳೂರಿಗೆ ಬನ್ನಿ, ಏನ್ ಸಾರ್ ಅಪಾರ್ಟ್‌ಮೆಂಟ್‌ನಲ್ಲಿದ್ದೀರಾ? ಅಥವಾ ಸ್ವಂತ ಮನೆ ಮಾಡಿಕೊಂಡಿದ್ದೀರಾ? ಎಂಬ ಪ್ರಶ್ನೆ, ಆದರಲ್ಲೇ ‘ಸ್ಟೇಟಸ್’ ಲೆಕ್ಕಹಾಕುವ ತಂತ್ರವಿರುತ್ತದೆ. ಇಲ್ಲಾ, ಬಾಡಿಗೆ ಮನೆಯಲ್ಲಿದ್ದೀನಿ ಎಂದರೆ ಸೈಟ್ ಇದೆಯಾ? ಎಂಬ ಮರುಪ್ರಶ್ನೆ. ಅದಕ್ಕೂ ಇಲ್ಲ ಎಂದರೆ, ಬೆಂಗಳೂರಲ್ಲಿ ಹತ್ತು ವರ್ಷ ದಿಂದ ಇದ್ದೀನಿ ಅನ್ನುತ್ತೀರಿ ಒಂದ್ ಸೈಟನ್ನೂ ಮಾಡಿಲ್ಲವಾ? ಆ ಪ್ರಶ್ನೆಯಲ್ಲೇ ನೀವೊಬ್ಬ ನಿರರ್ಥಕ, ಕೆಲಸಕ್ಕೆ ಬಾರದ ವ್ಯಕ್ತಿ ಎಂಬ ಅರ್ಥ ಅಡಗಿರುತ್ತದೆ. ಹೀಗೆ ನಮ್ಮ ನೋಟ, ಮಾತು, ಪ್ರಶ್ನೆ ಎಲ್ಲದರಲ್ಲೂ ದುಡ್ಡಿನಿಂದ ಸಿಗುವ, ದುಡ್ಡಿನ ಮೂಲಕ ಪಡೆದುಕೊಳ್ಳಬಹುದಾದ ‘ಸ್ಟೇಟಸ್’ನ ಹುಡುಕಾಟವೇ ಇರುತ್ತದೆ. ಆ ಕೇತನ್ ದೇಸಾಯಿ, ಲಲಿತ್ ಮೋದಿಯನ್ನು ದೂರುವುದೇಕೆ, ನಿಮ್ಮ ಮನೆಗೆ ಆಗಮಿಸುವ ವ್ಯಕ್ತಿ ಬಸ್ಸಿನಿಂದ ಕೆಳಗಿಳಿದನೋ, ಕಾರಿನಿಂದ ಕಾಲು ಹೊರಚಾಚಿದನೋ ಎಂಬುದರಲ್ಲೇ “ದೊಡ್ಡ” ತನ ಪ್ರಭಾವ ಬೀರುತ್ತದೆ! ನೀವೇ ಯೋಚನೆ ಮಾಡಿ, ನಟರಾಜ ಎಕ್ಸ್‌ಪ್ರೆಸ್‌ನಲ್ಲಿ (ನಡಿಗೆ) ಬರುವವನಿಗೆ ಸಿಗುವ ಉಪಚಾರಕ್ಕೂ, ಕಾರಿನಿಂದ ಬಂದಿಳಿಯುವವರಿಗೆ ಸಿಗುವ ಮರ್ಯಾದೆಗೂ ವ್ಯತ್ಯಾಸವಿರುವುದಿಲ್ಲವೆ? ಮಕ್ಕಳು ಏನು ಮಾಡುತ್ತಿದ್ದಾರೆ, ಯಾವ ಕೆಲಸದಲ್ಲಿದ್ದಾರೆ ಎಂಬುದರಲ್ಲೂ ಹಣದ ಲೆಕ್ಕವಿರುತ್ತದೆ. ನನ್ನ ಮಗ, ಮಗಳು ಸಾಫ್ಟ್‌ವೇರೋ, ಒಳ್ಳೆಯ ಖಾಸಗಿ ಕಂಪನಿಯಲ್ಲೋ, ಒಳ್ಳೆಯ ಸರಕಾರಿ ಹುದ್ದೇಯಲ್ಲೋ ಇದ್ದಾನೆಂದರೆ ನಿಮ್ಮನ್ನು ನೋಡುವ ದೃಷ್ಟಿ ಕ್ಷಣಮಾತ್ರದಲ್ಲಿ ಬದಲಾಗಿ ಬಿಡುತ್ತದೆ. ಪರ್ವಾಗಿಲ್ಲ ಮಕ್ಕಳು ಒಳ್ಳೆಯ ಕೆಲಸದಲ್ಲಿದ್ದಾರೆ, ಒಳ್ಳೆಯ ಗಿಂಬಳ ಸಿಗುತ್ತದೆ ಎಂಬ ಮೆಚ್ಚುಗೆ ವ್ಯಕ್ತವಾಗುತ್ತದೆ. ಈ ‘ಒಳ್ಳೆಯ’ ಕೆಲಸ ಎಂಬ ಟೈಟಲ್ ಕೂಡ ‘ಹಣ’ದ ಪ್ರಮಾಣದ ಮೇಲೆ ನಿರ್ಧಾರ ವಾಗುತ್ತದೆ. ಒಬ್ಬ ವ್ಯಕ್ತಿಯೊಳಗಿನ ಪ್ರತಿಭೆಯನ್ನು ಸಂಪೂರ್ಣವಾಗಿ ಬದಿಗಿಟ್ಟು ಆತ ಯಾವ ವಾಹನದಲ್ಲಿ ಬಂದ, ಎಷ್ಟು ಕಮಾಯಿ ಮಾಡುತ್ತಿದ್ದಾನೆ, ಯಾವ ಹುದ್ದೆಯಲ್ಲಿದ್ದಾನೆ ಎಂಬುದರ ಮೇಲೆ ಅಳೆಯುವ ಜಾಯಮಾನ ನಮ್ಮೆಲ್ಲರಲ್ಲೂ ಇದೆಯಲ್ಲವೆ?

ಒಂದು ಬಹಳ ಪ್ರಸಿದ್ಧವಾದ ಮಾತಿದೆ.

ಎಲ್ಲರೂ ಶಿವಾಜಿ ಮಹಾರಾಜನನ್ನು ಇಷ್ಟಪಡುತ್ತಾರೆ. ಆದರೆ ಆತ ನಮ್ಮ ಪಕ್ಕದ ಮನೆಯಲ್ಲಿ ಹುಟ್ಟಬೇಕು ಎನ್ನುತ್ತಾರೆ ಎಂಬ ಮಾತಿತ್ತು. ಇವತ್ತು ಶಿವಾಜಿ ಮಹಾರಾಜ ಪಕ್ಕದ ಮನೆಯಲ್ಲಿ ಹುಟ್ಟಿದರೂ ಗೇಲಿ ಮಾಡುತ್ತಾರೆ. ದುಡಿಯೋದು ಬಿಟ್ಟು ದೇಶ-ದೇಶ ಅಂತ ಸುಮ್ಮನೆ ಕಾಲಹರಣ ಮಾಡುತ್ತಿದ್ದಾನೆ ಎಂದು ಕಿಚಾಯಿಸಿದರೂ, ಕುಟುಕಿದರೂ ಆಶ್ಚರ್ಯವಿಲ್ಲ! ದುಡಿಯಬೇಕು ಎಂಬ ಮಾತಿನ ಹಿಂದೆ ಇರುವುದೂ ಕಮಾಯಿಯ ಲೆಕ್ಕವೇ ಅಲ್ಲವೆ? ಇಂತಹ ಮನಸ್ಥಿತಿಯನ್ನಿಟ್ಟುಕೊಂಡು ಭ್ರಷ್ಟಾಚಾರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರೆ ಅದರಲ್ಲಿ ಸಾತ್ವಿಕತೆಯನ್ನು ಕಾಣಲು ಸಾಧ್ಯವೆ? ಅಷ್ಟಕ್ಕೂ ಯಾವುದೋ ಒಂದು ಕಚೇರಿಯಲ್ಲಿ ಲಂಚ ಪಡೆದುಕೊಳ್ಳುವವರು, ಲೂಟಿ ಮಾಡುವವರು ಮಾತ್ರ ಭ್ರಷ್ಟರಲ್ಲ. ಭ್ರಷ್ಟರನ್ನು ಸಾರ್ವಜನಿಕವಾಗಿ ಖಂಡಿಸದ, ಬಹಿಷ್ಕಾರ ಹಾಕದ ನಾವೂ ಕೂಡ ಭ್ರಷ್ಟಾಚಾರದಲ್ಲಿ ಭಾಗಿಯಾದಂತೆಯೇ ಅಲ್ಲವೆ? ಭ್ರಷ್ಟರ ಬಗ್ಗೆ ಖಾಸಗಿಯಾಗಿ ನಾವೆಷ್ಟೇ ಆಕ್ರೋಶ, ಅಸಹನೆ ವ್ಯಕ್ತಪಡಿಸಿದರೂ ಅದೇ ವ್ಯಕ್ತಿ ಎದುರಿಗೆ ಸಿಕ್ಕಿದರೆ ನಮ್ಮ ಪ್ರತಿಕ್ರಿಯೆ ಹೇಗಿರುತ್ತದೆ ಯೋಚಿಸಿ…
ಒಂದು ವೇಳೆ ಡಿ.ಕೆ. ಶಿವಕುಮಾರ್ ಅವರೋ, ಜನಾರ್ದನ ರೆಡ್ಡಿಯೋ, ರೇಣುಕಾಚಾರ್ಯರೋ ಮುಖಾಮುಖಿಯಾದರೆ ನಾವು ಹೇಗೆ ನಡೆದುಕೊಳ್ಳುತ್ತೇವೆ? ಒಳಗಿಂದೊಳಗೆ ಎಷ್ಟೇ ಬೈದುಕೊಂಡರೂ ಮಿನಿಷ್ಟ್ರು ಬಂದ್ರು ಅಂತ ನಮಸ್ಕಾರ ಹಾಕಿ, ಚೇರ್ ಕೊಟ್ಟು, ಕಾಫಿ-ಟೀ ಕೊಡುತ್ತೇವೆ. ಬಹಳ ವಿಧೇಯತೆ ಯಿಂದ ಕೈಕಟ್ಟಿ ನಿಂತುಕೊಳ್ಳುತ್ತೇವೆ. ಏಕೆ? ಭ್ರಷ್ಟರು, ಅನೈತಿಕ ವ್ಯಕ್ತಿಗಳನ್ನು ಎದುರಿಂದೆದುರೇ ಏಕೆ ಕಳ್ಳರಂತೆ ಟ್ರೀಟ್ ಮಾಡುವು ದಿಲ್ಲ?  ಹಾಗೆ ಮಾಡದ ಹೊರತು ಯಾರಾದರೂ ತಮ್ಮ ತಪ್ಪನ್ನು ತಿದ್ದಿಕೊಳ್ಳುತ್ತಾರೆಯೇ, ತಪ್ಪು ಮಾಡಲು ಹೆದರುತ್ತಾರೆಯೇ? ಅವರಿಗೆ ಸಮಾಜದ ಬಗ್ಗೆ ಭಯ ಹುಟ್ಟಲು ಸಾಧ್ಯವೆ? ಇಂದಿಗೂ ಜಾತಿಯನ್ನಿಟ್ಟುಕೊಂಡು ಬಹಿಷ್ಕಾರ ಹಾಕುವುದನ್ನು ದೇಶದ ಕೆಲವು ಭಾಗಗಳಲ್ಲಿ ನೋಡಬಹುದು. ಭ್ರಷ್ಟಾಚಾರಕ್ಕಿಂತ ಕೀಳು ಕಾರ್ಯ, ಭ್ರಷ್ಟರಿಗಿಂತ ಕೀಳುಜಾತಿ ಯಾವುದಾದರೂ ಇದೆಯೇ? ಭ್ರಷ್ಟರ ವಿಷಯದಲ್ಲಿ ಸಮಾಜವೇಕೆ ಮೈಲಿಗೆಯಾದಂತೆ ವರ್ತಿಸುವುದಿಲ್ಲ? ಮೊದಲೆಲ್ಲ ಊರಲ್ಲಿ ಯಾರಾದರೂ ಕಳ್ಳತನ ಮಾಡಿದರೆ ಅವರನ್ನು ಇಡೀ ಊರೇ ಕಟಕಟೆಗೆ ತಂದು ನಿಲ್ಲಿಸಿ ಛೀಮಾರಿ ಹಾಕುತ್ತಿತ್ತು. ವೇಶ್ಯಾವಾಟಿಕೆ ನಡೆಸಿದರೆ ಆಕೆಯನ್ನು ಊರಿನಿಂದಲೇ ಹೊರಗಟ್ಟುತ್ತಿದ್ದರು. ಕೆಟ್ಟ ಕೆಲಸ ಮಾಡಿದರೆ ಗ್ರಾಮದ ಬಹಿಷ್ಕಾರ ಎದುರಿಸಬೇಕಾಗುತ್ತಿತ್ತು. ಭ್ರಷ್ಟರ, ಅಯೋಗ್ಯರ, ಅನೈತಿಕ ಕಾರ್ಯದಲ್ಲಿ ತೊಡಗಿರುವವರ ವಿಷಯದಲ್ಲಿ ಈಗಲೂ ಅದೇ ರೀತಿ ನಡೆದುಕೊಳ್ಳಬಹುದಲ್ಲವೆ? ಸಾಮಾಜಿಕ ಬಹಿಷ್ಕಾರ ಹಾಕಬಹುದಲ್ಲವೆ? ಒಬ್ಬ ಭ್ರಷ್ಟ ವ್ಯಕ್ತಿ ಮಂತ್ರಿಯಾಗಿದ್ದರೇನಂತೆ ಕಳ್ಳ ಕಳ್ಳನೇ. ಆತನನ್ನು ಸಮಾಜ ಕಳ್ಳನಂತೆಯೇ ಕಾಣಬಹುದು, ಬಹಿಷ್ಕಾರ ಹಾಕಬಹುದಲ್ಲವೆ? ಹೀಗೆ ಸಮಾಜವೇ ದೂರವಿಡಲು ಆರಂಭಿಸಿದಾಗ ಮಾತ್ರ ಪರಿಸ್ಥಿತಿ ಬದಲಾದೀತು.

ಇವತ್ತು ಯಾರೋ ರಾಜಕಾರಣಿಗಳು, ದಂಧೆ ಮಾಡುವವರನ್ನು ದೂರುವುದಕ್ಕಿಂತ ಸಮಾಜವೇ ಭ್ರಷ್ಟಗೊಂಡಿದೆಯೇನೋ ಎನಿಸುತ್ತಿದೆ.

2009, ಜೂನ್ 12ರಂದು ಜನಾರ್ದನ ರೆಡ್ಡಿ ಸಹೋದರರು ತಿರುಪತಿ ತಿಮ್ಮಪ್ಪನಿಗೆ 42 ಕೋಟಿ ರೂಪಾಯಿ ಬೆಲೆಬಾಳುವ ವಜ್ರಖಚಿತ ಕಿರೀಟವನ್ನು ಅರ್ಪಿಸಿದರು. 400 ವರ್ಷ ಇತಿಹಾಸವಿರುವ ತಿರುಪತಿ ಬಾಲಾಜಿಗೆ ರೆಡ್ಡಿಗಳಿಂದ ಇದುವರೆಗೂ ನೀಡಲಾದ ಅತಿ ದೊಡ್ಡ ಕೊಡುಗೆ ಎಂದು ಮಾಧ್ಯಮಗಳು ವರದಿ ಮಾಡಿದವು! ಖಂಡಿತ ತಿಮ್ಮಪ್ಪನಿಗೆ ಕಿರೀಟ ಸಿಕ್ಕಿತು, ಆದರೆ ದುಡ್ಡು ಯಾರಪ್ಪನದು? ಕಳ್ಳಕಾಕರು, ದಗಾಕೋರರಿಂದಲೂ ಕಿರೀಟ, ರಥ ಪಡೆದುಕೊಳ್ಳುವಷ್ಟು ನೈತಿಕ ಅಧಃಪತನಕ್ಕಿಳಿದು ಬಿಟ್ಟರೇ ನಮ್ಮ ಅರ್ಚಕರು? ಇಂತಹ ಘಟನೆಗಳು ಜರುಗಿದಾಗ ಜನರಿಗೆ ಪಾಪ-ಪುಣ್ಯದ ಪ್ರe ಕಾಡುವುದಿಲ್ಲವೆ? ಇದು ಬರೀ ಭಾರತದಲ್ಲಿ ಮಾತ್ರ ಕಂಡುಬರುವ ವಿಚಿತ್ರ ಘಟನೆಗಳಲ್ಲ. ಇರಾನ್ ಅಧ್ಯಕ್ಷ ಅಹ್ಮನೆಜಾದ್ ಅವರನ್ನೇ ತೆಗೆದುಕೊಳ್ಳಿ. ಕಳೆದ ಚುನಾವಣೆ ವೇಳೆ ಭಾರೀ ಭ್ರಷ್ಟಾಚಾರದ ಆರೋಪಕ್ಕೊಳಗಾದ ಆತ ಹಣ ಪಡೆದುಕೊಳ್ಳುವುದು ಆಫ್ಫನ್, ಆಫ್ರಿಕನ್, ಇರಾಕಿ, ಇರಾನಿ ಮಾಫಿಯಾಗಳಿಂದ. ಆದರೆ ಅಮೆರಿಕದ ವಿರುದ್ಧ ಮಾತನಾಡು ತ್ತಾನೆ ಎಂಬ ಕಾರಣಕ್ಕೆ ಒಂದು ವರ್ಗ ಆತ ಪಡೆಯುವ ಪಾಪದ ಹಣವನ್ನು ಮರೆತು ಹೊಗಳಿಕೆಯಲ್ಲಿ ತೊಡಗುತ್ತದೆ. ಇಲ್ಲಿ ಯಾರನ್ನು ದೂರಬೇಕು?

Hefner saves Hollywood!

ಇದು ನಿನ್ನೆಯಷ್ಟೇ ಪ್ರಕಟವಾದ ಸುದ್ದಿಯ ಶೀರ್ಷಿಕೆ. ನೀವು ಇಂಗ್ಲಿಷ್ ಚಿತ್ರಗಳ ಪ್ರೇಮಿಯಾಗಿದ್ದರೆ ಬೆಟ್ಟವೊಂದರ ಮೇಲೆ ಬಿಳಿ ಅಕ್ಷರಗಳಲ್ಲಿ ಬರೆದಿರುವ “ಹಾಲಿವುಡ್” ಎಂಬ ಬೋರ್ಡನ್ನು ಖಂಡಿತ ನೋಡಿರುತ್ತೀರಿ. ಆ ಬೆಟ್ಟವನ್ನು ಷಿಕಾಗೋ ಮೂಲದ ಕಂಪನಿಯೊಂದು ಖರೀದಿ ಮಾಡಿತ್ತು. ಅದು, ಲ್ಯಾಂಡ್ ಡೆವೆಲ ಪಿಂಗ್ ಉದ್ದೇಶಕ್ಕಾಗಿ ‘ಹಾಲಿವುಡ್’ ಬೋರ್ಡನ್ನು ಕಿತ್ತುಹಾಕಲು ಮುಂದಾಯಿತು. ಹಲವು ದಶಕಗಳಿಂದ ಇರುವ ಬೋರ್ಡನ್ನು ಕಿತ್ತುಹಾಕಲು ಹೊರಟಿದ್ದು ಸಾರ್ವಜನಿಕರ ಆಕ್ರೋಶಕ್ಕೆ ತುತ್ತಾಯಿತು. ಆದರೆ ಕಾಸು ಕೊಟ್ಟು ಬೆಟ್ಟ  ಖರೀದಿ ಮಾಡಿದವರಿಗೆ ವಿರೋಧಕ್ಕೆ ಅಂಜಬೇಕಾದ ಅಗತ್ಯವಿರಲಿಲ್ಲ, ತಮ್ಮ ಉದ್ದೇಶದಂತೆ ನಡೆದುಕೊಳ್ಳಲು ಹೊರಟರು. ಇಂತಹ ಸಂದಿಗ್ಧ ಸಂದರ್ಭದಲ್ಲಿ ಸಹಾಯಕ್ಕೆ ಧಾವಿಸಿದ ಹ್ಯೂ ಹೆಫ್ನರ್, 9 ಲಕ್ಷ ಡಾಲರ್ ಹಣ ತೆತ್ತು ಬೋರ್ಡ್ ಸುತ್ತಮುತ್ತ ಇರುವ 138 ಎಕರೆ ಭೂಮಿ ಖರೀದಿ ಮಾಡಿ ‘ಹಾಲಿವುಡ್’ ಅನ್ನು ಉಳಿಸಿದ್ದಾರೆ. ಅದೊಂದು ಸಾಂಸ್ಕೃತಿಕ ಸಂಕೇತ ಎಂದು ಆತ ಹೇಳಿಕೊಂಡಿದ್ದಾನೆ. ಇದರಿಂದ ಕ್ಯಾಲಿಫೋರ್ನಿಯಾದ ಗವರ್ನರ್ ಆರ್ನಾಲ್ಡ್ ಸ್ವಾಝನೆಗರ್ ಕೂಡ ಖುಷಿಯಾಗಿ, ಹೆಫ್ನರ್‌ರನ್ನು ಅಭಿನಂದಿಸಿದ್ದಾರೆ. ಈ ಹೆಫ್ನರ್ ಯಾರು ಗೊತ್ತಲ್ಲ? ‘ಪ್ಲೇಬಾಯ್’ ಮ್ಯಾಗಝಿನ್ ಆರಂಭಿಸುವ ಮೂಲಕ ಸೆಕ್ಸ್ ಅನ್ನೂ ಒಂದು ಮಾರಾಟ ದಂಧೆಯಾಗಿ ಪರಿವರ್ತಿಸಿದ, ಕಾಮತೃಷೆಯನ್ನು ವಿಕೃತವಾಗಿ ತೀರಿಸಿಕೊಳ್ಳುವ ಮಾರ್ಗ ಕಲ್ಪಿಸಿಕೊಟ್ಟ ಮಹಾನುಭಾವ. ಹಾಗೆ ಮಾಡಿದ ದುಡ್ಡಿನಿಂದಲೇ ಆತ ‘ಹಾಲಿವುಡ್’ ಬೋರ್ಡನ್ನು ರಕ್ಷಿಸಿರುವುದು. ಜನ ಆತ ಮಾಡಿದ ದಂಧೆ ಮರೆತು, ಘನ ಕಾರ್ಯವನ್ನು ಹಾಡಿಹೊಗಳುತ್ತಿದ್ದಾರೆ.

ಒಂಥರಾ ನಮ್ಮ ಮನಸ್ಥಿತಿಯೇ ಆಂತರಿಕವಾಗಿ ಭ್ರಷ್ಟಗೊಂಡಿದೆ ಎಂದೆನಿಸುತ್ತಿದೆ.

ಯಾವ ರೀತಿ ದುಡ್ಡು ಮಾಡಿದರು, ಸಮಾಜದ ಸ್ವಾಸ್ಥ್ಯ ಹಾಳುಗೆಡವಿದರು, ಜನರ ತಲೆ ಒಡೆದರು ಎಂಬುದನ್ನು ಮರೆತು ದೇಣಿಗೆಯ ಪ್ರಮಾಣ ನೋಡಿ ಹಾಡಿ ಹೊಗಳಿ ಬಿಡುತ್ತೇವೆ. ಹಾಗಂತ ಎಲ್ಲರೂ ಸಂತರು, ಬೋಳೇಶಂಕರರು ಆಗಬೇಕೆಂದಲ್ಲ. ದುಡ್ಡಿನ ಮೇಲಿನ ಅತಿಯಾದ ವ್ಯಾಮೋಹ, ದುಡ್ಡಿನ ಆಧಾರದ ಮೇಲೆ ಮನುಷ್ಯರನ್ನು ಅಳೆಯುವ ಮನಸ್ಥಿತಿಯನ್ನು ಮೊದಲು ಸಮಾಜವೇ ಬಿಡಬೇಕು. ನಮ್ಮಲ್ಲಿ ಭಿಕ್ಷುಗಳಿಗೆ ಬಹಳ ಮರ್ಯಾದೆ ಇತ್ತು. ಬುದ್ಧ, ಮಹಾವೀರ ಮುಂತಾದವರು ಊರೂರು ಅಲೆದು ಜನ ಕೊಟ್ಟದ್ದನ್ನು ತಿಂದು ಸಾಮಾಜಿಕ ಬದಲಾವಣೆಯನ್ನು ತರಲು ಪ್ರಯತ್ನಿಸಿದರು. ನಮ್ಮ ಜನ ಅರೆಬೆತ್ತಲೆ ಫಕೀರ ಗಾಂಧೀಜಿಯನ್ನು ಆರಾಧಿಸಿದರೇ ಹೊರತು ಸಾಹುಕಾರರುಗಳನ್ನಲ್ಲ. ಅಂತಹ ನಮ್ಮ ಸಮಾಜ ಇಂದು ಗುಣವನ್ನು ಬಿಟ್ಟು ಶ್ರೀಮಂತಿಕೆಯನ್ನು ಆರಾಧನೆ ಮಾಡಲು ಹೊರಟಿರುವಾಗ ಕೇತನ್ ದೇಸಾಯಿ, ಕರೀಂ ಲಾಲಾ ತೆಲಗಿ, ಲಲಿತ್ ಮೋದಿಗಳು ತಲೆಯೆತ್ತದೆ ವಿವೇಕಾನಂದ ಹುಟ್ಟುತ್ತಾರೇನು?

15 Responses to “ಎಲ್ಲರೂ ಸಂತರು, ಬೋಳೇಶಂಕರರು ಆಗಬೇಕೆಂದಲ್ಲ, ಆದರೆ?”

  1. Arpana Hegde says:

    Hi,
    What do your friends tell is true! You are an absolute fire brand writer. I could feel you as well as the fire in this week article. Actually I got Goosebumps first time when I read the article. This is the kind of article which make, we readers to fall in love with you again and again.

    Yes. It is true many people like money. However we can’t generalize whole world is like that, even though its look like. The way you told was just right way to make people to think about themselves and introspect.

    Who tell, one person can’t make difference!!! I think this is the time put one foot forward and should start writing in some national level news paper. Not for money or to become famous. But many people need you or you should reach many.

    With loads of love,

    Arpana

  2. prashanth g b says:

    it is nice . . . .. . . . . . . i have all b j books except 5th 7th . all are good , especial 2nd one . i read both mining mofia and modi books . if possible write about pruthvi movie . really it is similar to mining mofia book . it is realy nice yaar .

  3. Karthik says:

    Absolutely true, i bet nothing will happen to any of these buggers. Mysore Minerals is doing illegal mining in Byndoor. What else you expect from govt. companies.

  4. harsha says:

    nice article, but you should have ended it with some positive note which will make people think and act. The way you have ended it is with ‘hataashe’.

  5. paramesh s k says:

    Nanna maganige/magalige kelasa sikkide 10-12,000/- salary, kelsa eenu illavante sumne hogi kuliti barobante! ee taraha estu jana maneli heltharalva?

  6. paramesh s k says:

    Dear Pratap,

    Lots of truth in your article,but one more thing happens in our daily life”nanna maganige/magalige kelsa sikkide 10-12,000/- salary,9 hogodu 5 kkella manege barodu eenu kelasa ilvante” alva?

  7. Mahabaleshwar Hegde says:

    By looking at comments from the girls….I am thinking..why the hell I am wasting my time in reserch..? I should also start writing..Column articles….

    Ok any how this was seriuosly good article….

  8. vinci says:

    ಜನರಲ್ಲಿರುವ “ಹಣ” ದ ದೊಡ್ಡಸ್ತಿಗೆಯ ಬಗ್ಗೆ ತುಂಬಾ ಚೆನ್ನಾಗಿ ಬರೆದಿದ್ದೀರಿ, ಅದರೆ ಈ ಬ್ರಷ್ಟಾಚಾರದ ಬಗ್ಗೆ ನಮ್ಮ ಜನತೆ ಎಚ್ಚೆತ್ತು ಕೊಳ್ಳುವುದು ಯಾವಾಗ??

  9. Raghu says:

    ಇಲ್ಲಿ ಯಾರನ್ನ ದೂರಬೇಕು? ಇಲ್ಲಿ ಇದೇ ಸಮಾಜದಲ್ಲಿರೋ ಬುದ್ದಿವಂತರು ಸಮಾಜವನ್ನು ಸರಿಯಾಗಿ ಅರ್ತ ಮಾಡಿಕೋಂಡಿದೇ…. ಇಲ್ಲಿ ವಿವೇಕಾನಂದ ಹುಟಲ್ಲ ಅಂತ …!! So ಸಮಾಜ , Hollywood board ಉಳಿಸೋಕೆ ಕಾಮತ್ರಶೇಯನ್ನ ವಿಕ್ರತವಾಗಿ ತೀರಿಸಿಕೋಳ್ಳುವ ಮಾರ್ಗ ತೋರಿಸಿ ಗಳಿಸಿದ ಹಣ ಉಪಯೋಗಿಸಿದರು ಹಾಡಿ ಹೋಗಳ್ತಾರೇ………. ಸಮಾಜ ದೇಶ ಅಂತ ಮಾತಾಡೋ ಹೆಸರಾಂತ ವ್ಯಕ್ತಿಗಳು ವಯಕ್ತಿಕವಾಗಿ ನೈತಿಕತೆ ಇಲ್ಲವಾದರು ಕೊಂಡಾಡ್ತಾರೇ…………..ಇದೇ ಅಲ್ಲ್ವಾ ನಮ್ಮ ಸಮಾಜ……….. Yes ಇದು ಬರಿ ಕತ್ತಲೇ ಜಗತ್ತು…. !!!!

  10. geetanjali says:

    since long time i have been reading ur articles everytime u write with new concept,which is vey innnovative…………..yaq i aree with u that we do measure people by their job or status.That vision have to change everybody

  11. santhosh says:

    good one sir!

  12. sangamesh says:

    really its nice yar

  13. veenus says:

    great article sir
    the fact is people see only glory behind this ipl., but not the real face of this. u truuuuuuulllyy great sir.
    ur way of hitting readers mind is mindblowing.
    thnks for this and every article
    wish u all the luck

  14. rashmi says:

    mindblowing articale sirrrrrrrrrr,i am VK’s regular reader. i like your articales in VK. my hubby is nonkannadiga so ,I use to translate articales he also likes it Thanks you so much makeing aware about so much things . I like your breavenes,knowlage,qustions,headings,……..every thing is just super
    thaks
    All the best

  15. Guru says:

    ಒಂದು ವೇಳೆ ಡಿ.ಕೆ. ಶಿವಕುಮಾರ್ ಅವರೋ, ಜನಾರ್ದನ ರೆಡ್ಡಿಯೋ, ರೇಣುಕಾಚಾರ್ಯರೋ ಮುಖಾಮುಖಿಯಾದರೆ ನಾವು ಹೇಗೆ ನಡೆದುಕೊಳ್ಳುತ್ತೇವೆ? ಒಳಗಿಂದೊಳಗೆ ಎಷ್ಟೇ ಬೈದುಕೊಂಡರೂ ಮಿನಿಷ್ಟ್ರು ಬಂದ್ರು ಅಂತ ನಮಸ್ಕಾರ ಹಾಕಿ, ಚೇರ್ ಕೊಟ್ಟು, ಕಾಫಿ-ಟೀ ಕೊಡುತ್ತೇವೆ. ಬಹಳ ವಿಧೇಯತೆ ಯಿಂದ ಕೈಕಟ್ಟಿ ನಿಂತುಕೊಳ್ಳುತ್ತೇವೆ. ಏಕೆ?

    truly valid and thought provoking words. Common man is not helpless, only he is responsible for current apathy .
    If all of us introspect ourselves on this point it may help us to give something back to the society , country and humanity.