Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಅದೇನು ಕೆಟ್ಟ ಕೆಲಸವನ್ನು ಸಮರ್ಥಿಸಿಕೊಳ್ಳಲು ಇರುವ ‘ಪರ್ಮಿಟ್ಟಾ’?

ಅದೇನು ಕೆಟ್ಟ ಕೆಲಸವನ್ನು ಸಮರ್ಥಿಸಿಕೊಳ್ಳಲು ಇರುವ ‘ಪರ್ಮಿಟ್ಟಾ’?

Dinakaran
1.ಆದಾಯವನ್ನು ಮೀರಿ ಸಂಪತ್ತು ಸಂಗ್ರಹ
2. ಪತ್ನಿ ಹಾಗೂ ಇಬ್ಬರು ಹೆಣ್ಣುಮಕ್ಕಳ ಹೆಸರಿನಲ್ಲಿ ಕಾನೂನು ಬಾಹಿರವಾಗಿ ಗೃಹ ನಿರ್ಮಾಣ ಮಂಡಳಿಯ ೫ ನಿವೇಶನಗಳ ಖರೀದಿ
3. 1988ರ ಬೇನಾಮಿ ಹಣ ವರ್ಗಾವಣೆ ತಡೆ ಕಾಯಿದೆಯಡಿ ಯಾವುದನ್ನು ನಿಷೇಧಿಸಲಾಗಿದೆಯೋ ಹಾಗೂ ಶಿಕ್ಷಾರ್ಹ ಅಪರಾಧವೆಂದು ಘೋಷಿಸಲಾಗಿದೆಯೋ ಅಂತಹ ಬೇನಾಮಿ ಹಣಕಾಸು ವಹಿವಾಟು
4. 1961ರ ತಮಿಳುನಾಡು ಆಸ್ತಿ ಮಿತಿ ಕಾಯಿದೆ ಉಲ್ಲಂಘಿಸಿ ಕೃಷಿ ಭೂಮಿ ಸ್ವಾಧೀನ
5. ಸರಕಾರಿ ಹಾಗೂ ಸಾರ್ವಜನಿಕ ಆಸ್ತಿಯ ಒತ್ತುವರಿ
6. ಆ ಮೂಲಕ ದಲಿತರ ಹಾಗೂ ಬಡವರ ಮಾನವಹಕ್ಕು ಉಲ್ಲಂಘನೆ
7. ಅಧಿಕೃತ ತನಿಖೆ ಸಂದರ್ಭದಲ್ಲಿ ಸಾಕ್ಷ್ಯಗಳ ನಾಶ
8. ಸರಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ
9. ಸ್ಟ್ಯಾಂಪ್ ತೆರಿಗೆಯನ್ನು ತಪ್ಪಿಸುವ ಸಲುವಾಗಿ ಆಸ್ತಿ ಖರೀದಿ ಹಾಗೂ ಮಾರಾಟದ ವೇಳೆ ಉದ್ದೇಶಪೂರ್ವಕವಾಗಿ ತೀವ್ರ ಪ್ರಮಾಣದಲ್ಲಿ ಮೌಲ್ಯ ಕಡಿತ
10. ನಗರ ಯೋಜನೆ ಕಾನೂನು ಹಾಗೂ ಅನುಮತಿಯನ್ನು ಉಲ್ಲಂಘಿಸಿ ಕಟ್ಟಡ ನಿರ್ಮಾಣ
11. ಆಸ್ತಿ ಸ್ವಾಧೀನಕ್ಕಾಗಿ ಸ್ಥಾನಮಾನದ ದುರುಪಯೋಗ
12. ಅಪ್ರಾಮಾಣಿಕ ನ್ಯಾಯತೀರ್ಪು ನೀಡಿಕೆ ಹಾಗೂ ಆ ಮೂಲಕ ಹುದ್ದೆಯ ದುರುಪಯೋಗ

ಇವೇನು ಸಾಮಾನ್ಯ ದೋಷಾರೋಪಗಳೇ? ಇಂತಹ ದೋಷಾ ರೋಪಕ್ಕೊಳಗಾಗಿರುವ ವ್ಯಕ್ತಿಯೇನು ಸಾಮಾನ್ಯರೆ? ಅಥವಾ ಆತನೇನು ಅಧಿಕಾರ ದುರುಪಯೋಗ ಮಾಡಿಕೊಂಡು ಹಣ, ಆಸ್ತಿ ಕೂಡಿ ಹಾಕುವ ಭ್ರಷ್ಟ ರಾಜಕಾರಣಿಯೇ?

ಉಹೂಂ….

ಅವರು ಮತ್ತಾರೂ ಅಲ್ಲ ಕರ್ನಾಟಕ ಹೈಕೋರ್ಟ್‌ನ ಹಾಲಿ ಮುಖ್ಯನ್ಯಾಯಮೂರ್ತಿ ಪಿ.ಡಿ. ದಿನಕರನ್! “All are equal before law” ಎನ್ನುತ್ತದೆ ನಮ್ಮ ಸಂವಿಧಾನ. ಯಾರಾದರೂ ತಪ್ಪೆಸಗಿದರೆ, ಅನ್ಯಾಯ ಮಾಡಿದರೆ ಅವರು ಎಷ್ಟೇ ಪ್ರಭಾವಿ ವ್ಯಕ್ತಿಗಳಾಗಿದ್ದರೂ, ಎಂತಹ ಉನ್ನತ ಜಾತಿಗೆ ಸೇರಿದ್ದರೂ ಕಾನೂನಿನ ಮುಂದೆ ಎಲ್ಲರೂ ಸಮಾನ ಎನ್ನುವುದೇನೋ ಸರಿ. ಆದರೆ ತಪ್ಪಿತಸ್ಥರನ್ನು ವಿಚಾರಣೆಗೆ ಗುರಿಪಡಿಸಿ, ಸಾಕ್ಷ್ಯಗಳನ್ನು ಪರಿಶೀಲಿಸಿ ಕಾನೂನಿಗೆ ಅನುಗುಣವಾಗಿ ಶಿಕ್ಷೆ ವಿಧಿಸುವ ಘನವೆತ್ತ ನ್ಯಾಯಾಧೀಶರುಗಳೇ ತಪ್ಪೆಸಗಿದರೆ? ಅಥವಾ ದೋಷಾರೋಪಕ್ಕೊಳಗಾದರೆ ಏನು ಮಾಡಬೇಕು? ಅದಿರಲಿ, ದಿನಕರನ್ ಮೇಲಿನ ಆರೋಪ ಗಳಲ್ಲಿ ಯಾವುದೇ ಹುರುಳಿಲ್ಲವೇನು?

ಈ ದಿನಕರನ್ ಯಾರು, ಅವರು ಹೇಗಿದ್ದರು?

ಅವರ ತಂದೆ ಪಾಲ್ ಪೊನ್ನುಸ್ವಾಮಿ ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಅರಕೋಣಮ್‌ನಲ್ಲಿ ಶಾಲಾ ಶಿಕ್ಷಕರಾಗಿದ್ದರು. ಅವರದ್ದು ಶ್ರೀಮಂತ ಕುಟುಂಬವಾಗಿತ್ತು ಎನ್ನುವುದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ. ಆಸ್ತಿ-ಪಾಸ್ತಿ, ಆದಾಯ ಮೂಲಗಳಿದ್ದವು ಎಂಬುದಕ್ಕೂ ಆಧಾರವಿಲ್ಲ. ದಿನಕರನ್ ಅವರ ಅತ್ತೆ-ಮಾವನ ಕಥೆಯೂ ಭಿನ್ನವಾಗಿಲ್ಲ. ಅವರ ಮಾವ ಎಸ್ಟೇಟೊಂದರಲ್ಲಿ ಉದ್ಯೋಗಿಯಾಗಿದ್ದರು ಹಾಗೂ ಅತ್ತೆ ಶಾಲೆಯೊಂದರ ಮುಖ್ಯೋಪಾಧ್ಯಾಯಿನಿ. ಮದ್ರಾಸ್ ಹೈಕೋರ್ಟ್‌ನಲ್ಲಿ ವಕೀಲಿ ವೃತ್ತಿ ಮಾಡುತ್ತಿದ್ದಾಗ ದಿನಕರನ್ ಬಾಡಿಗೆ ಫ್ಲಾಟ್‌ನಲ್ಲಿದ್ದರು. ನ್ಯಾಯಾಧೀಶರಾಗಿ ನಿಯುಕ್ತಿಯಾಗುವವರೆಗೂ ಅವರ ಸ್ಟೇಟಸ್ ಹಾಗೆಯೇ ಇತ್ತು. ಅಂತಹ ವ್ಯಕ್ತಿ ನ್ಯಾಯಾಧೀಶರಾದ ನಂತರ ಹೇಗೆ ಏಕಾಏಕಿ 500 ಎಕರೆಗೂ ಹೆಚ್ಚು ಕೃಷಿ ಭೂಮಿ, ವಸತಿ ನಿವೇಶನಗಳು, ಭಾರಿ ಹಣಕಾಸು ವಹಿವಾಟಿನ ಒಡೆಯನಾಗಿ ಬಿಟ್ಟರು? ಒಬ್ಬ ನ್ಯಾಯಾಧೀಶರೇ ಇಂತಹ ಆರೋಪಕ್ಕೊಳಗಾದರೆ ಗತಿಯೇನು? ಅಂತಹ ವ್ಯಕ್ತಿಯನ್ನು ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿ ನೇಮಕ ಮಾಡಿದರೆ ನ್ಯಾಯಾಂಗ ವ್ಯವಸ್ಥೆಯ ಗತಿಯೇನಾದೀತು?

ಎಡಪಕ್ಷಗಳು, ಬಿಜೆಪಿ, ಸಮಾಜವಾದಿ ಪಕ್ಷ, ಸಂಯುಕ್ತ ಜನತಾದಳ, ಅಕಾಲಿ ದಳ ಹಾಗೂ ಎಐಎಡಿಎಂಕೆಗೆ ಸೇರಿದ ೭೫ ಸಂಸದರು ರಾಜ್ಯಸಭೆಯಲ್ಲಿ ದಿನಕರನ್ ವಿರುದ್ಧ ಮಹಾಭಿಯೋಗ (ಇಂಪೀಚ್‌ಮೆಂಟ್) ಮಂಡಿಸಲು ಮುಂದಾಗಿರುವುದು ಹಾಗೂ ಉಪರಾಷ್ಟ್ರಪತಿ ಮತ್ತು ರಾಜ್ಯಸಭೆಯ ಸಭಾಪತಿ ಹಮೀದ್ ಅನ್ಸಾರಿಯವರು ಅದಕ್ಕೆ ಅವಕಾಶ ಮಾಡಿಕೊಟ್ಟಿರುವುದು ಇದೇ ಕಾರಣಕ್ಕಾಗಿ. ಇಲ್ಲಿರುವುದು ನ್ಯಾಯ-ಅನ್ಯಾಯ, ಸಾರ್ವಜನಿಕ ಜೀವನದಲ್ಲಿನ ಮೌಲ್ಯ-ವಂಚನೆ ಹಾಗೂ ಅಧಿಕಾರ ದುರುಪಯೋಗದ ವಿಚಾರ. ಹೀಗಿರುವಾಗ ಈ ‘ದಲಿತ’ ಎಂಬ ಪ್ರಶ್ನೆ ಅದೆಲ್ಲಿಂದ ಬಂತು? “ಸುಪ್ರೀಂಕೋರ್ಟ್ ಮೇಲ್ಜಾತಿಯವರ ಬೀಡಾಗಿದೆ. ಹಿಂದುಳಿದ ವರ್ಗಕ್ಕೆ ಸೇರಿದ ವ್ಯಕ್ತಿಯೊಬ್ಬ ಸುಪ್ರೀಂಕೋರ್ಟ್ ನ್ಯಾಯಾಧೀಶನಾಗುವುದನ್ನು ತಡೆಯುವುದೇ ಆರೋಪಗಳ ಹಿಂದಿರುವ ನಿಜವಾದ ಉದ್ದೇಶ” ಎಂದು ಡಿ.ಎಂ.ಕೆ.ಯ ಜನರಲ್ ಸೆಕ್ರೆಟರಿ ಕೆ. ವೀರಮಣಿ ಹೇಳಿದ್ದಾರೆ! “ಸರಕಾರಿ ಭೂಮಿ ಸ್ವಾಧೀನಕ್ಕೆ ಸಂಬಂಧಿಸಿದ ತಾನ್ಸಿ ಭೂಹಗರಣದಲ್ಲಿ ಭಾಗಿಯಾಗಿದ್ದ ಜಯಲಲಿತಾ ಅವರನ್ನು ಸುಪ್ರೀಂಕೋರ್ಟ್ ದೋಷಮುಕ್ತಗೊಳಿ ಸಿತು. ಅಂದರೆ ದಲಿತನಿಗೊಂದು ಬ್ರಾಹ್ಮಣನಿಗೊಂದು ಮಾನ ದಂಡವೇ?” ಎಂದು ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ತಗಾದೆ ತೆಗೆದಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಕುಮಾರಿ ಮಾಯಾವತಿಯವರೂ “ದಲಿತ” ಪ್ರಶ್ನೆ ಎತ್ತಿದ್ದಾರೆ?!

ಅಲ್ಲಾ ಈ “ದಲಿತ” ಎಂಬುದೇನು ಗುರಾಣಿಯೇ? ತಪ್ಪಿತಸ್ಥರನ್ನು ರಕ್ಷಿಸಲು, ತಪ್ಪುಗಳನ್ನು ಮುಚ್ಚಿಕೊಳ್ಳಲು ಇರುವ ಅಸ್ತ್ರವೇ? ಅಥವಾ ಕೆಟ್ಟ ಕೆಲಸ ಮಾಡಲು ಕೊಟ್ಟ ಪರ್ಮಿಟ್ಟೆ? ಏನದು? ಮಹಾಭ್ರಷ್ಟೆ ಎಂಬ ಹೆಸರು ಪಡೆದುಕೊಂಡಿರುವ, ತನ್ನ ಹುಟ್ಟುಹಬ್ಬ ಆಚರಿಸಿಕೊಳ್ಳಲು ಬಡವರಿಂದ ಚಂದಾ ಎತ್ತುವ, ಅಧಿಕಾರಿಗಳಿಂದ ಭಕ್ಷೀಸ್ ಪಡೆಯುವಾತೆ ತನ್ನಂತೆಯೇ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಮತ್ತೊಬ್ಬ ವ್ಯಕ್ತಿಯ ರಕ್ಷಣೆಗೆ ಧಾವಿಸುತ್ತಾರೆಂದರೆ ಈ ದೇಶಕ್ಕೆ ಎಂತಹ ಭವಿಷ್ಯ ಕಾದಿದೆಯೆಂಬುದನ್ನು ಯೋಚಿಸಿ? “ಕಾನೂನಿನ ಮುಂದೆ ಎಲ್ಲ ಸಮಾನರು” ಅಂದರೆ ಕಾನೂನಿಗೆ ಬಡವ-ಬಲ್ಲಿದ, ಮೇಲ್ಜಾತಿ-ಕೆಳಜಾತಿ ಎಂಬ ತಾರತಮ್ಯವಿಲ್ಲ, ಎಲ್ಲರೂ ಒಂದೇ ಎಂದರ್ಥ. ಅದನ್ನು ಇನ್ನೊಂದು ರೀತಿಯಲ್ಲೂ ಅನ್ವಯಿಸಬಹುದು. ಜಾತಿ-ಧರ್ಮದ ಹೆಸರಿನಲ್ಲಿ ಕಾನೂನಿನ ಜಾರಿಗೆ ಅಡ್ಡಿಪಡಿಸುವುದೂ ತಪ್ಪೇ ಅಲ್ಲವೆ? ಹಾಗಾದ ಮೇಲೆ ಈ ದಲಿತ ಎಂಬ ಪ್ರಶ್ನೆ ಬಂದಿದ್ದು ಎಲ್ಲಿಂದ? ಒಂದು ವೇಳೆ, ಮೇಲ್ಜಾತಿಯವರೆಲ್ಲ ಜಾತಿ ವಾದ ಮಾಡುತ್ತಾರೆಂದಾಗಿದ್ದರೆ, ಎಲ್ಲದರಲ್ಲೂ ಜಾತಿ ನೋಡುತ್ತಾರೆ, ಜಾತಿಯೇ ಎಲ್ಲದಕ್ಕೂ ಅಳತೆಗೋಲು ಎಂದಾಗಿದ್ದರೆ ದಲಿತರೇ ಆಗಿರುವ ಕೆ.ಜಿ. ಬಾಲಕೃಷ್ಣನ್ ಸುಪ್ರೀಂಕೋರ್ಟ್‌ನ ಮುಖ್ಯನ್ಯಾಯಾಧೀಶರಾಗಲು ಸಾಧ್ಯವಾಗುತ್ತಿತ್ತೆ? ದಿವಂಗತ ಕೆ.ಆರ್. ನಾರಾಯಣನ್ ರಾಷ್ಟ್ರಪತಿಯಾಗಲು ಆಗುತ್ತಿತ್ತೆ? ದಲಿತ ಪ್ರಶ್ನೆಯೆತ್ತುವ, ಬ್ರಾಹ್ಮಣರನ್ನು ಟೀಕಿಸುವ ಮಾಯಾವತಿಯವರು ಅಧಿಕಾರಕ್ಕೇರಲು ಸತೀಶ್ ಮಿಶ್ರಾನೆಂಬ ಬ್ರಾಹ್ಮಣನ ಸಹಾಯ ಪಡೆದಿದ್ದೇಕೆ? ಆತನನ್ನು ಛೂ ಬಿಟ್ಟು ಪ್ರತಿ ಜಿಲ್ಲೆಗಳಲ್ಲೂ ಬ್ರಾಹ್ಮಣ ಮಹಾಸಭಾಗಳನ್ನು ಆಯೋಜನೆ ಮಾಡಿ, ಮೇಲ್ಜಾತಿಯವರನ್ನು ಬಿಎಸ್‌ಪಿ ತೆಕ್ಕೆಗೆ ಸೆಳೆದುಕೊಂಡಿದ್ದು, ಬಹುಜನ ಸಮಾಜ ಪಕ್ಷ ಸರ್ವ ಸಮಾಜಕ್ಕೆ ಸೇರಿದೆ ಎಂದು ಹೇಳಿದ್ದೇಕೆ? ಅಧಿಕಾರಕ್ಕೇರಲು ಮೇಲ್ಜಾತಿಯವರ ವೋಟು ಬೇಕು, ಕೆಟ್ಟ ಕೆಲಸ ಮಾಡಿದಾಗ ಹುಳುಕು ಮುಚ್ಚಿಕೊಳ್ಳಲು, ವಿಷಯಾಂತರ ಮಾಡಲು, ಚರ್ಚೆಯನ್ನು ದಿಕ್ಕು ತಪ್ಪಿಸಲೂ ಅವರು ಬೇಕು! ಒಂದು ವೇಳೆ ಮಾಯಾವತಿಯವರಿಗೆ ದಲಿತರ ಶ್ರೇಯೋಭಿವೃದ್ಧಿ ಬಗ್ಗೆ ಅಷ್ಟೊಂದು ಕಾಳಜಿಯಿದೆ ಎಂದಾದರೆ ಆಕೆ ಮುಖ್ಯಮಂತ್ರಿಯಾಗಿ ಮೂರು ವರ್ಷಗಳಾಗುತ್ತಾ ಬಂದಿದ್ದರೂ ಉತ್ತರ ಪ್ರದೇಶದಲ್ಲಿ ದಲಿತರ ಸ್ಥಿತಿ-ಗತಿಯಲ್ಲಿ ಏಕೆ ಯಾವ ಬದಲಾವಣೆಯೂ ಆಗಿಲ್ಲ? ಅತ್ಯಾಚಾರಕ್ಕೊಳಗಾದ ದಲಿತ ಮಹಿಳೆಯರಿಗೆ ಪರಿಹಾರದ ಚೆಕ್ ನೀಡುವ ಕೆಲಸವನ್ನು ಇನ್ನೂ ಮುಂದುವರಿಸಿಕೊಂಡು ಬಂದಿರುವ ಪರಿಸ್ಥಿತಿ ಏಕೆ ಉಳಿದುಕೊಂಡಿದೆ? ಹಾದಿ ಬೀದಿಗೊಂದು ಪ್ರತಿಮೆ ನಿಲ್ಲಿಸಲು ಹಣ ವ್ಯಯ ಮಾಡುವ ಬದಲು ದಲಿತ ಕೇರಿಗಳ ಅಭಿವೃದ್ಧಿಗೇಕೆ ವಿನಿಯೋಗಿಸಲಿಲ್ಲ? ದಲಿತ ನಾಯಕರಿಗೂ ದಲಿತರ ಉದ್ಧಾರ ಬೇಕಿಲ್ಲ. ಅವರು ಹಿಂದುಳಿದವರು, ದಲಿತರಾಗಿಯೇ ಉಳಿಯಬೇಕು. ಏಕೆಂದರೆ Dalit card ಅನ್ನು ಸದಾ ಬಳಸಿಕೊಳ್ಳಬಹುದು. ತೀರಾ ಹಾಸ್ಯಾಸ್ಪದ ವಿಚಾರ ವೆಂದರೆ ಈ ಮಾಯಾವತಿಯವರೇಕೆ ಭ್ರಷ್ಟರ ಬಗ್ಗೆಯೇ ಕಾಳಜಿ ಹೊಂದಿದ್ದಾರೆ? ದಿನಕರನ್ ಒಬ್ಬ ವಕೀಲರಾಗಿದ್ದವರು, ಈಗ ನ್ಯಾಯಾಧೀಶರಾಗಿರುವವರು. ಅವರಿಗೆ ತಮ್ಮನ್ನು ಸಮರ್ಥಿಸಿ ಕೊಳ್ಳುವ ವಿಧಾನ ಗೊತ್ತಿದೆ. ಮಾಯಾವತಿಯವರೇಕೆ ಅವರ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ?

ಅಲ್ಲಾ ಮಹಿಳೆ, ಮೈನಾರಿಟಿ, ದಲಿತ ಎಂಬ ಟೈಟಲ್‌ಗಳನ್ನು ಕೆಟ್ಟವರ ರಕ್ಷಣೆ, ಸಮರ್ಥನೆಗಷ್ಟೇ ಬಳಸಿಕೊಳ್ಳುತ್ತಿರುವುದೇಕೆ? ಈ ಹಿಂದೆ ಅಜರುದ್ದೀನ್ ಮ್ಯಾಚ್ ಫಿಕ್ಸಿಂಗ್‌ನಲ್ಲಿ ಸಿಕ್ಕಿಹಾಕಿಕೊಂಡಾಗ ನಾನು ಅಲ್ಪಸಂಖ್ಯಾತನೆಂಬ ಕಾರಣಕ್ಕೆ ಈ ರೀತಿ ಆರೋಪ ಮಾಡಲಾಗುತ್ತಿದೆ ಎಂದು ಮೈನಾರಿಟಿ ಕಾರ್ಡ್ ಪ್ರಯೋಗಿಸಿದ್ದರು! ಗುಲ್ಷನ್ ಕುಮಾರ್ ಹತ್ಯೆ ಆರೋಪಕ್ಕೊಳಗಾಗಿ ಬ್ರಿಟನ್‌ನಲ್ಲಿ ಅಡಗಿ ಕುಳಿತ ಸಂಗೀತ ನಿರ್ದೇಶಕ ನದೀಂ ಕೈಫಿ ಕೊಟ್ಟಿದ್ದೂ ಇಂತಹ ಸಮಜಾಯಿಷಿಯನ್ನೇ. ಇನ್ನು ತಾನು ದಲಿತ ಎಂಬ ಅಂಶವನ್ನೇ ಬಂಡವಾಳಗಿಸಿಕೊಂಡು ಬೇಳೆ ಬೇಯಿಸಿ ಕೊಳ್ಳುವವರು, ಅನ್ಯ ಜಾತಿಯವರನ್ನು ‘ಅಟ್ರಾಸಿಟಿ ಕೇಸ್’ ಹಾಕುತ್ತೇನೆಂದು ಬೆದರಿಸುವವರು ಇದ್ದಾರೆ. ಈ ರೀತಿ ‘ದಲಿತ’ ಎಂಬುದನ್ನು ದುರುಪಯೋಗ ಮಾಡಿಕೊಳ್ಳುತ್ತಿರುವುದು ಹೆಚ್ಚಾಗಿ ಶಿಕ್ಷಿತರು, ಸೋಮಾರಿ ಸರಕಾರಿ ಉದ್ಯೋಗಿಗಳು, ಕಾಲೇಜು ಉಪನ್ಯಾಸಕರೇ ಆಗಿದ್ದಾರೆ. ದಲಿತ ಅನ್ನೋದು ದಗಲ್ಬಾಜಿತನಕ್ಕೆ ಲೈಸೆನ್ಸಾ? ಇವತ್ತು ಸಾಮಾಜಿಕ ನ್ಯಾಯ, ಸಮಾನತೆಯ ಪ್ರಶ್ನೆಗಳೆದ್ದಿರುವ ಕಾರಣ, ಹಿಂದುಳಿದ ಜಾತಿ/ವರ್ಗ ಶ್ರೇಯೋಭಿವೃದ್ಧಿ ಮಾಡಲೇಬೇಕು ಎಂದು ಎಲ್ಲ ಪಕ್ಷಗಳೂ ಪ್ರತಿಪಾದಿಸುವ ಕಾರಣ ‘ದಲಿತ’ ಎಂಬುದೇ ಒಂದು ಅರ್ಹತೆಯಾಗಿದೆ. ಅದರ ಬಗ್ಗೆ ಯಾವ ಬೇಸರವೂ ಇಲ್ಲ ಬಿಡಿ. ಶತಶತಮಾನಗಳ ದೌರ್ಜನ್ಯಕ್ಕೆ ಪ್ರತಿಯಾಗಿ ಅಂಥದ್ದೊಂದು ಅವಕಾಶವನ್ನು ಕಲ್ಪಿಸಬೇಕಿತ್ತು. ಆದರೆ ದಲಿತ ಎಂಬುದನ್ನು ಕೆಟ್ಟ ಕೆಲಸಗಳನ್ನು ಸಮರ್ಥಿಸಿಕೊಳ್ಳುವುದಕ್ಕೆ ಬಳಸಿಕೊಳ್ಳುವುದನ್ನು ಒಪ್ಪಲಾದೀತೆ? ದಲಿತನೆಂದರೆ ಕಾನೂನಿಗಿಂತ ಮೇಲು ಎಂದರ್ಥವೆ? ಮೊನ್ನೆ ಭಾಲ್ಕಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಇದೇ ವಿಚಾರವನ್ನೆತ್ತಿದ ಗದಗಿನ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿ ‘ದಲಿತ್ ಕಾರ್ಡ್’ ಪ್ರಯೋಗಿಸುತ್ತಿರುವ ಮಾಯಾವತಿಯವರನ್ನು ಚೆನ್ನಾಗಿ ತರಾಟೆಗೆ ತೆಗೆದುಕೊಳ್ಳುತ್ತಾ, ‘ಸಮಾಜದ ಎಲ್ಲ ವ್ಯವಸ್ಥೆಗಳಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ ಎಂಬುದು ದಿನಕರನ್ ಪ್ರಕರಣ ತೋರಿಸಿದೆ. ನ್ಯಾಯಾಂಗದ ವಿಷಯದಲ್ಲೂ ಜಾತಿ ಹೆಸರಿನಲ್ಲಿ ಈ ರೀತಿಯ ಹೇಳಿಕೆ ಬರುತ್ತಿರುವುದು ಸಲ್ಲದು. ನ್ಯಾಯಕ್ಕೆ ಬಲ ಬರಬೇಕು, ಬಲಕ್ಕೆ ನ್ಯಾಯ ಬರುವುದಲ್ಲ’ ಎಂದರು. ಎಂತಹ ಅರ್ಥಪೂರ್ಣ ಮಾತದು. ಒಂದು ವೇಳೆ ಅವರೇ ಹೇಳಿಕೊಳ್ಳುತ್ತಿರುವಂತೆ ದಿನಕರನ್ ಮೊದಲೇ ಸಿರಿವಂತರಾಗಿದ್ದರೆ, ಭ್ರಷ್ಟ ಮಾರ್ಗವನ್ನು ಹಿಡಿಯುವ ಅಗತ್ಯವಿಲ್ಲ ಎನ್ನುವುದಾದರೆ ತಮ್ಮ ಆದಾಯದ ‘ಮೂಲ’ ಯಾವುದು ಎಂಬುದನ್ನು ಬಹಿರಂಗಪಡಿಸಿ ತಾವು ಶುದ್ಧಹಸ್ತರೆಂಬುದನ್ನು ಸಾಬೀತುಪಡಿಸಲಿ. ಆದರೆ ದಲಿತ ಎಂಬ ಕಾರಣಕ್ಕೆ ಈ ರೀತಿ ಮಾಡಲಾಗುತ್ತಿದೆ ಎಂಬ ಬೇಜವಾಬ್ದಾರಿ ಮಾತು ಬೇಡ.

ಅಷ್ಟಕ್ಕೂ ದಲಿತ ಎಂದರೆ ಯಾರು?

ದಲಿತ ಎಂಬುದು ಸಂಸ್ಕೃತದಿಂದ ಬಂದಿದ್ದು ಹಾಗೂ ಆ ಪದವನ್ನು ಮೊದಲು ಬಳಸಿದ್ದು ಡಾ. ಬಿ.ಆರ್. ಅಂಬೇಡ್ಕರ್. ದಲಿತರು ಎಂದರೆ ಹಿಂದೂ ಧರ್ಮದಲ್ಲಿನ ಜಾತಿ ಪದ್ಧತಿಯಿಂದಾಗಿ ದೌರ್ಜನ್ಯ ಹಾಗೂ ತುಳಿತಕ್ಕೊಳಗಾದವರು. ಈ ದಲಿತರಿಗೂ ಪಿ.ಡಿ. ದಿನಕರನ್ ಅಂದರೆ ಪಾಲ್ ದಿವಾಕರ್ ದಿನಕರನ್ ಎಂಬ ಕ್ರೈಸ್ತ ವ್ಯಕ್ತಿಗೂ ಏನು ಸಂಬಂಧ?! ಸಾಮಾಜಿಕ ಸಮಾನತೆ, ಆತ್ಮಗೌರವವನ್ನರಸಿಕೊಂಡು ಕ್ರಿಶ್ಚಿಯಾನಿಟಿಗೆ ಮತಾಂತರಗೊಂಡ ಮೇಲೂ ದಲಿತ ಎಂಬ ಪ್ರಶ್ನೆ ಎಲ್ಲಿಂದ ಬರುತ್ತದೆ? ಕ್ರೈಸ್ತರಲ್ಲಿ ಜಾತಿ ಪದ್ಧತಿಯೇ ಇಲ್ಲ ಎಂದ ಮೇಲೆ ದಲಿತ ಎಂಬುದಾಗಲಿ, ದಲಿತ ಕ್ರೈಸ್ತ ಎಂಬ ವಾದವಾಗಲಿ ಹೇಗೆ ಬರಲು ಸಾಧ್ಯ? Politics is the last refuge of a scoundrelಎಂದು ಆಸ್ಕರ್ ವೈಲ್ಡ್ ಹೇಳಿದ್ದರು. Religion and Caste are the last refuge of scoundrels ಎಂಬ ಹೊಸ ನುಡಿಗಟ್ಟನ್ನು ರೂಪಿಸಬೇಕಾದ ಕಾಲ ಸದ್ಯದಲ್ಲೇ ಬರಬಹುದು.

Stop fooling!

8 Responses to “ಅದೇನು ಕೆಟ್ಟ ಕೆಲಸವನ್ನು ಸಮರ್ಥಿಸಿಕೊಳ್ಳಲು ಇರುವ ‘ಪರ್ಮಿಟ್ಟಾ’?”

  1. Vinutha Iyengar says:

    “ನ್ಯಾಯಕ್ಕೆ ಬಲ ಬರಬೇಕು, ಬಲಕ್ಕೆ ನ್ಯಾಯ ಬರುವುದಲ್ಲ”, what lines!!! Will we ever see this happen in India?

    I thought education will eradicate corruption, but ….???

  2. Kishna says:

    ಭೇಷ್ ಪ್ರತಾಪ್.ಬಹಳ ಸೂಕ್ತವಾದ ಲೇಖನ.ನಮ್ಮಲ್ಲಿರುವ ಪ್ರಶ್ನೆಗಳಿಗೆ ಅಕ್ಷರ ರೂಪ ಸಿಕ್ಕ ಹಾಗಿದೆ.ಈ ದಲಿತರಿಗೆ ಸರ್ಕಾರ ಹಣ ಸಹಾಯ ನೀಡಲಿ ಓದಲು ಒಳ್ಳೆಯ ಅವಕಾಶ ನೀಡಲಿ ಆದರೆ ಮೀಸಲಾತಿ ಬೇಡ.ತಾವು ಮೇಲೆ ಬರಲು ಯೋಚಿಸದೆ ಸುಮ್ಮನೆ ದಲಿತ ಎನ್ನುವ ಬಲದಿಂದ ಎಲ್ಲರನ್ನು ಹತ್ತಿಕ್ಕುವ ಪ್ರಯತ್ನ ನಿಲ್ಲಲಿ. ನಿಜವಾಗಿ ಯಾರು ದಲಿತ? ಕಷ್ಟದಲ್ಲಿರುವ ಎಲ್ಲ ಜಾತಿಯವರು ದಲಿತರೇ..ಈ ಸರ್ಕಾರ ದ ವೋಟು ಬ್ಯಾಂಕ್ ರಾಜಕೀಯ ದಿಂದ ಭಾರತ ಸರ್ವನಶವಾಗುವುದು ಖಂಡಿತ.ಯಾರಿಗೂ ದೇಶದ ಏಳ್ಗೆ ಬೇಕಾಗಿಲ್ಲ.All dalit leaders are junk fellows.

  3. SGB says:

    ಭೇಷ್ ಪ್ರತಾಪ್.ಬಹಳ ಸೂಕ್ತವಾದ ಲೇಖನ.ನಮ್ಮಲ್ಲಿರುವ ಪ್ರಶ್ನೆಗಳಿಗೆ ಅಕ್ಷರ ರೂಪ ಸಿಕ್ಕ ಹಾಗಿದೆ.ಈ ದಲಿತರಿಗೆ ಸರ್ಕಾರ ಹಣ ಸಹಾಯ ನೀಡಲಿ ಓದಲು ಒಳ್ಳೆಯ ಅವಕಾಶ ನೀಡಲಿ ಆದರೆ ಮೀಸಲಾತಿ ಬೇಡ.ತಾವು ಮೇಲೆ ಬರಲು ಯೋಚಿಸದೆ ಸುಮ್ಮನೆ ದಲಿತ ಎನ್ನುವ ಬಲದಿಂದ ಎಲ್ಲರನ್ನು ಹತ್ತಿಕ್ಕುವ ಪ್ರಯತ್ನ ನಿಲ್ಲಲಿ. ನಿಜವಾಗಿ ಯಾರು ದಲಿತ? ಕಷ್ಟದಲ್ಲಿರುವ ಎಲ್ಲ ಜಾತಿಯವರು ದಲಿತರೇ..ಈ ಸರ್ಕಾರ ದ ವೋಟು ಬ್ಯಾಂಕ್ ರಾಜಕೀಯ ದಿಂದ ಭಾರತ ಸರ್ವನಶವಾಗುವುದು ಖಂಡಿತ.ಯಾರಿಗೂ ದೇಶದ ಏಳ್ಗೆ ಬೇಕಾಗಿಲ್ಲ.All dalit leaders are junk fellows.

  4. ajit says:

    i think this has become a common statement for every persone who cheat now days………. it has become a free pass for them on the name of minority to cheat….
    now it ha become true that or we can say that “religious and caste has become last refuge to scoundrels”….

  5. anand says:

    its true that some scoundrals are using caste and religion for their last refuge

  6. ಉತ್ತಮವಾದ ಲೇಖನ. ದಲಿತ ಕಾರ್ಡು ಇವಾಗ ಪ್ರಚಲಿತವಿರುವ ಹಾಗೂ ಹೆಚ್ಚು ಬಳಕೆಯಲ್ಲಿರುವ ಕಾರ್ಡು.. (ಬಿ.ಪಿ.ಎಲ್. ಕಾರ್ಡಿಗಿಂತ)

    ಇದರ ದುರುಪಯೋಗ ನಿಲ್ಲಬೇಕು. ಜನರು ಬುದ್ಧಿವಂತರಾಗುತ್ತಿದ್ದಾರೆ. ಶೋಷಣೆ ಇನ್ನಿಲ್ಲವಾಗುತ್ತಿದೆ. ಆದರೆ, ತಮ್ಮನ್ನು ತಾವೇ ದಲಿತರೆಂದು ಶೋಷಿಸಿಕೊಳ್ಳುವವರು ಹೆಚ್ಚಾಗುತ್ತಿದ್ದಾರೆ..

    -ಯಳವತ್ತಿ

  7. shruthi says:

    nice article

  8. Renukha says:

    Informative…..
    thanks prathap