Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಕೊಡವರ ಬಗ್ಗೆ ಕೋಡಂಗಿಗಳಿಗೇನು ಗೊತ್ತು, ಕೋ.’ಛೇ’!

ಕೊಡವರ ಬಗ್ಗೆ ಕೋಡಂಗಿಗಳಿಗೇನು ಗೊತ್ತು, ಕೋ.’ಛೇ’!

ಲೇಖಕ

ಚಿಂತಕ

ಸಾಮಾಜಿಕ ಕಾರ್ಯಕರ್ತ

ಗೂಗಲ್‌ಗೆ ಹೋಗಿ ‘ಕೋಣನ ಚೆನ್ನಬಸಪ್ಪ'(ಕೋ.ಚೆ) ಎಂದು ಟೈಪ್ ಮಾಡಿದರೆ ಈ ಮೇಲಿನ ವಿಶೇಷಣಗಳು, ಗೌರವಸೂಚಕಗಳು ಬರುತ್ತವೆ. ಆದರೆ ಈ ವ್ಯಕ್ತಿ ಹಿಂದೊಮ್ಮೆ ಬರೆದಿರುವ ‘ಹಿಂದು ರಕ್ಷಕ ಟೀಪೂ ಸುಲ್ತಾನ್‌’ ಹಾಗೂ ಇತ್ತೀಚೆಗಷ್ಟೇ ಹೊರತಂದಿರುವ “ಅಪ್ರತಿಮ ದೇಶಭಕ್ತ ಟೀಪೂ ಸುಲ್ತಾನ್‌” ಎಂಬ ಹೊತ್ತಗೆಗಳನ್ನು ಓದಿದರೆ ಏನೋ ಬರೆದಿದ್ದಾರೆ ಎಂಬ ಕಾರಣಕ್ಕೆ, ಅವು ಕಳಪೆಯಾಗಿದ್ದರೂ ಲೇಖಕ ಎಂಬುದನ್ನು ಒಪ್ಪಿಕೊಳ್ಳಬಹುದೇ ಹೊರತು, ಅವುಗಳಲ್ಲಿ ಪ್ರತಿಪಾದಿಸಿರುವ ವಿಚಾರಗಳನ್ನು ನೋಡಿದರೆ ಚಿಂತಕ ಎನ್ನುವ ಬದಲು ಅವರ ಮಾನಸಿಕ ಸ್ಥಿತಿ ತುಂಬಾ ಚಿಂತಾಜನಕವಾಗಿದೆ ಎಂದರೆ ಒಳಿತು ಎಂದನಿಸುತ್ತಿದೆ. ಟಿಪ್ಪುವನ್ನು ಅಪ್ರತಿಮ ದೇಶಭಕ್ತ ಎಂದು ತಮ್ಮ ಮೂಗಿನ ನೇರಕ್ಕೆ ನಿರೂಪಿಸಲು ಜನರಲ್ ತಿಮ್ಮಯ್ಯ, ಕಾರ್ಯಪ್ಪನವರಂಥ ಗಂಡುಗಲಿಗಳನ್ನು ಕೊಟ್ಟ, ಭಾರತೀಯ ಸೇನೆಗೆ ಇದುವರೆಗೂ 25 ಲೆಫ್ಟಿನೆಂಟ್ ಜನರಲ್‌ಗಳನ್ನು ಕೊಟ್ಟಿರುವ ನಿಜವಾದ ದೇಶಭಕ್ತ ಕೊಡವ ಸಮುದಾಯವನ್ನು “ಹೊರಗಿನವರು”, “ಬೆರಕೆ” ಅಂತೆಲ್ಲ ಜರಿಯುತ್ತಾರಲ್ಲಾ ಈ ಮನುಷ್ಯನ ಬಗ್ಗೆ ಅಸಹ್ಯ ಹುಟ್ಟುವುದಿಲ್ಲವೆ ಹೇಳಿ? ಇವರು ದೇಶಭಕ್ತ ಎಂದು ನಿರೂಪಿಸಲು ಹೊರಟಿರುವ ಟಿಪ್ಪುವಿನ ಭಕ್ತಿ ಯಾವ ದೇಶ ಹಾಗೂ ಧರ್ಮಕ್ಕೆ ಮೀಸಲಾಗಿತ್ತು ಎಂಬುದು ಈ ಮನುಷ್ಯನಿಗೆ ತಿಳಿದಿಲ್ಲವೆ? “ಬನ್ನಿ, ಭಾರತದ ಮೇಲೆ ದಾಳಿ ಮಾಡಿ, ಜಿಹಾದ್ ಸಾರೋಣ” ಎಂದು ಟರ್ಕಿಯ ಖಲೀಫನಿಗೆ ಪತ್ರ ಬರೆದ ಟಿಪ್ಪುವಿನ ದೇಶಭಕ್ತಿ ಯಾವ ದೇಶಕ್ಕಾಗಿತ್ತು? ನಿಮ್ಮ ಟಿಪ್ಪು ಭಕ್ತಿಯನ್ನು ತೋರಿಸುವ ಸಲುವಾಗಿ ಕೊಡವರು ಹಾಗೂ ನಾಡಿನ ಹಿರಿಯ ಚೇತನ ಚಿದಾನಂದಮೂರ್ತಿಗಳನ್ನು ಹಳಿಯುತ್ತೀರಲ್ಲಾ ನಿಮಗೆ ಆತ್ಮಸಾಕ್ಷಿಯೇ ಇಲ್ಲವೆ?

2013ರಲ್ಲಿ ಬಿಜಾಪುರದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಕೋ.ಚೆ, “ಕೊಡಗಿನಲ್ಲಿ ಟಿಪ್ಪು ಮತಾಂತರ ಮಾಡಿದ ಎಂಬುದು ನಿಜವಾಗಿದ್ದರೆ ಕೊಡಗಿನಲ್ಲೇಕೆ ಕೇವಲ 14,730 ಮುಸ್ಲಿಮರಿದ್ದಾರೆ?” ಎಂದು ಅಪ್ಪಟ ಸುಳ್ಳು ಹೇಳಿದರು. ಅದರ ಬೆನ್ನಲ್ಲೇ ನಾಡಿನ ಜನರಿಗೆ ಸತ್ಯಾಸತ್ಯತೆ ತಿಳಿಯಲಿ ಎಂದು ಚಿದಾನಂದಮೂರ್ತಿಗಳು ಸಾರ್ವಜನಿಕ ಚರ್ಚೆಗೆ ಆಹ್ವಾನಿಸಿದಾಗ ವಿಚಾರ ನಪುಂಸಕರಂತೆ ಪಲಾಯನ ಮಾಡಿದ್ದ ಕೋ.ಚೆ., ವರ್ಷ ಕಳೆಯುವ ಹೊತ್ತಿಗೆ “ಅಪ್ರತಿಮ ದೇಶಭಕ್ತ ಟೀಪೂ ಸುಲ್ತಾನ್‌” ಎಂಬ ಮತ್ತೊಂದು ಸುಳ್ಳಿನ ಕಂತೆಯನ್ನು ಹೊರತಂದಿದ್ದಾರೆ. ಕನ್ನಡ ಸಾಹಿತ್ಯ ಸಮ್ಮೇಳನದಂಥ ಮಹತ್ವದ ಸಂದರ್ಭದಲ್ಲಿ ಚಿದಾನಂದಮೂರ್ತಿಗಳನ್ನು ಚುಚ್ಚುವ ಹಾಗೂ ತಮ್ಮ ರಾಜಕೀಯ ನಿಷ್ಠೆಯನ್ನು ಜಗಜ್ಜಾಹೀರು ಮಾಡುವ ಸಲುವಾಗಿ ಒಬ್ಬ ಕನ್ನಡ ವಿರೋಧಿಯಾಗಿದ್ದ ಟಿಪ್ಪುವನ್ನು ಹೊಗಳಲು ಮುಂದಾಗುತ್ತಾರೆಂದರೆ ಈ ವ್ಯಕ್ತಿಯದ್ದು ಎಂತಹ ಕ್ಷುಲ್ಲಕ ಮನಸ್ಥಿತಿ ಎಂಬುದು ತಿಳಿಯುವುದಿಲ್ಲವೆ? ಇಂತಹ ವ್ಯಕ್ತಿಯಿಂದ ಏನನ್ನು ನಿರೀಕ್ಷಿಸಲು ಸಾಧ್ಯ? “ಅಪ್ರತಿಮ ದೇಶಭಕ್ತ ಟೀಪೂ ಸುಲ್ತಾನ್‌” ಪುಸ್ತಕದ 13ನೇ ಪುಟದಲ್ಲಿ ಬರುವ ಒಂದು ವಾಕ್ಯ ನೋಡಿ- “ಒಂದು ವೇಳೆ ಟಿಪ್ಪು ಹಿಂದುಗಳನ್ನು ಹಿಂಸೆಗೆ ಗುರಿಪಡಿಸಿದ್ದಿದ್ದರೆ, ಹಿಂದುಗಳೆಲ್ಲರೂ ಸೇರಿ ಆತನನ್ನು ಕೊಲ್ಲಬಹುದಿತ್ತು. ಹಿಂದುಗಳು ತಮ್ಮ ಕೈಲಾಗದೆ ವಿದೇಶಿಯರ ಸಹಾಯವನ್ನು ಪಡೆದಿದ್ದು ಯಾವ ಸಾಹಸ?”

ಸ್ವಾಮಿ ಕೋ.ಚೆ.ಯವರೇ, ನಿಮ್ಮ ತರ್ಕವನ್ನೇ ಮುಂದಿಟ್ಟುಕೊಂಡು ವಾದ ಮಾಡಬಹುದಾದರೆ, ಒಂದು ವೇಳೆ ನಿಮ್ಮ ಟಿಪ್ಪು ಸುಲ್ತಾನ್ ದೇಶಭಕ್ತನೇ ಆಗಿದ್ದರೆ, ಪರಾಕ್ರಮಿಯೂ ಆಗಿದ್ದರೆ ಬ್ರಿಟಿಷರನ್ನು ಮಟ್ಟಹಾಕಲು ಭಾರತದವರೇ ಆಗಿದ್ದ ಹೈದರಾಬಾದಿನ ನಿಜಾಮ, ಆರ್ಕಾಟಿನ ನವಾಬ, ಮಲಬಾರಿನ ನಾಯರ್‌ಗಳು, ಕೊಡವರು, ಮರಾಠರ ಸಹಾಯವನ್ನು ಪಡೆಯದೇ, ಬ್ರಿಟಿಷರ ಜತೆಗೆ ಭಾರತದ ರಾಜರನ್ನೇ ಹಣಿಯಲು ಫ್ರೆಂಚರ, ಖಲೀಫನ ಸಹಾಯವನ್ನೇಕೆ ಕೇಳಿದ? ಹಿಂದುಗಳು ತಮ್ಮ ಕೈಲಾಗದೆ ವಿದೇಶಿಯರ ಸಹಾಯವನ್ನು ಪಡೆದಿದ್ದು ಯಾವ ಸಾಹಸ ಎನ್ನುತ್ತೀರಲ್ಲಾ ರಣರಂಗದಲ್ಲಿ ಹೋರಾಡಲಾಗದೆ ಕೋಟೆಯೊಳಗೇ ಕುಳಿತು ಶರಣಾಗತಿ ಪತ್ರ ಕಳುಹಿಸಿದ ಹಾಗೂ ಬ್ರಿಟಿಷರನ್ನು ಮಣಿಸಲಾಗದೆ ಮಕ್ಕಳನ್ನೇ ಅಡವಿಟ್ಟ ನಿಮ್ಮ ಟಿಪ್ಪು ಯಾವ ಸೀಮೆ ಮೈಸೂರು ಹುಲಿ ಸ್ವಾಮಿ? ಇನ್ನು ನಿಮ್ಮ ಟಿಪ್ಪು ವೀರ ಕೊಡವರನ್ನು ಮಣಿಸಿದ್ದು ಹೇಗೆ ಗೊತ್ತಾ- ತನ್ನ ಫ್ರಂಚ್ ಸರದಾರ ಮಾನ್ಸಂಟ್ ಲಾಲಿ ಎಂಬವನ ಜತೆ ದೊಡ್ಡ ಸೈನ್ಯದೊಡನೆ ಕೊಡಗಿಗೆ ಬಂದ ಟಿಪ್ಪು ಸಮಸ್ತ ಕೊಡವರಿಗೆಲ್ಲಾ ಸಂದೇಶವೊಂದನ್ನು ರವಾನಿಸಿದ. “ಜಗಳ ಬೇಡ, ರಾಜಿ ಮಾಡಿಕೊಳ್ಳೋಣ” ಎಂದು ಕರೆದ. ಇವನ ಮಾತನ್ನು ನಂಬಿದ ಕೊಡವರು ಮಾತುಕತೆಗೆಂದು ಟಿಪ್ಪು ಸೂಚಿಸಿದ್ದ ಮಡಿಕೇರಿ-ಭಾಗಮಂಡಲ ಮಧ್ಯದ ಅಯ್ಯಂಗೇರಿ ಎಂಬ ಊರಿನ ದೇವಟ್ಟ್ ಪರಂಬು ಎಂಬ ಮೈದಾನದಲ್ಲಿ ಜಮಾವಣೆಯಾದರು. ಕುತಂತ್ರ ಹೂಡಿದ ಟಿಪ್ಪು ಮೈದಾನದ ಸುತ್ತಲಿನ ಕಾಡುಗಳಲ್ಲಿ ತನ್ನ ಸೈನಿಕರನ್ನು ಸಜ್ಜುಗೊಳಿಸಿಕೊಂಡು ಕುಳಿತಿದ್ದ. ಏಕಾಏಕಿ ಟಿಪ್ಪುವಿನ ಸೈನಿಕರು ಕೊಡವರ ಮೇಲೆ ದಾಳಿ ಮಾಡಿದರು. ಕೊಡವರು ಆಘಾತದಿಂದ ಚೇತರಿಸಿಕೊಳ್ಳುವ ಮೊದಲೇ ಜೀವಕಳೆದುಕೊಂಡಿದ್ದರು. ಹಲವರು ಸೆರೆಯಾದರು. ನೇರ ಯುದ್ಧದಲ್ಲಿ ಸಾಧಿಸಲಾಗದ ಗೆಲುವನ್ನು ಟಿಪ್ಪು ಕುಟಿಲತೆಯಿಂದ ಸಾಧಿಸಿದ್ದ. ಇದು “ಅಪ್ರತಿಮ ದೇಶಭಕ್ತನ” ಲಕ್ಷಣವೇ? ಕುತಂತ್ರದ ಯುದ್ದ ಹೂಡಿದ್ದು ಯಾವ ಸಾಹಸ? ಟಿಪ್ಪು ಆಡಳಿತಜ್ಞ, ಶೂರ, ವೀರನೇ ಆಗಿದ್ದಿದ್ದರೆ ಕೊಡಗಿನ ಉಸ್ತುವಾರಿಗೆ ಫ್ರೆಂಚ್ ಸರದಾರ ಮಾನ್ಸಂಟ್ ಲಾಲಿಯನ್ನು ಏಕೆ ನೇಮಿಸಿದ್ದ? ಯುದ್ಧರಂಗದಲ್ಲಿ ಹೋರಾಡಬೇಕಾಗಿದ್ದ ಶೂರ ಕೊಡವರ ಐನ್ ಮನೆಗಳನ್ನೇ ಹುಡುಕಿ ದಾಳಿ ಮಾಡುತ್ತಿದ್ದುದೇಕೆ? ಅದೂ ರಾತ್ರಿ ಹೊತ್ತಿನಲ್ಲಿ ಮಲಗಿದ್ದವರನ್ನು ಬೆಂಕಿ ಇಟ್ಟು ಕೊಲ್ಲುವುದು ಯಾವ ಪರಾಕ್ರಮ? ಮಹಾನ್ ಲೇಖಕ, ಚಿಂತಕ ಕೋ.ಚೆ.ಯವರಿಗೆ ಪರಾಕ್ರಮಕ್ಕೂ ಕ್ರೌರ್ಯಕ್ಕೂ ವ್ಯತ್ಯಾಸವೇ ತಿಳಿದಿಲ್ಲವೆ?

ಫ್ರೆಂಚರ ಬಲದಿಂದ ಆಧುನಿಕ ಸೈನ್ಯ, ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಟಿಪ್ಪುವಿನ ಪಡೆಯ ಮುಂದೆ ಕೊಡವರ ಶಕ್ತಿ ಏನೇನೂ ಇರಲಿಲ್ಲ. ಆದರೂ ಧೈರ್ಯ-ಪರಾಕ್ರಮಗಳ ಒಂದೇ ಅಸ್ತ್ರದಿಂದ ಕೊಡವರು ಟಿಪ್ಪುವಿನ ಪಡೆಗಳನ್ನು ಮಣ್ಣುಮುಕ್ಕಿಸುತ್ತಿದ್ದರು. ಕೊಡವರ ಗೆರಿಲ್ಲಾ ತಂತ್ರಗಳಿಂದ ಫ್ರೆಂಚ್ ತರಬೇತಿಯ ಟಿಪ್ಪು ಪಡೆ ದಿಕ್ಕೆಡುತ್ತಿತ್ತು. ಫ್ರೆಂಚ್ ಫಿರಂಗಿಗಳು, ಕೋವಿಗಳೇ ಕೊಡವರ ಪೀಚೆಕತ್ತಿ-ಒಡಿಕತ್ತಿಗಳ ಮುಂದೆ ಮಂಕಾಗುತ್ತಿದ್ದವು. ಆದರೆ ಸತತವಾದ ಉಪಟಳಗಳಿಂದ ಕೊಡವರು ಮುಕ್ತರಾಗಲು ಇಂಗ್ಲಿಷರ ಜೊತೆ ಸೇರದೇ ಬೇರೆ ವಿಧಿ ಇರಲಿಲ್ಲ. ಅತ್ತ ಇಂಗ್ಲಿಷರಿಗೂ ಮಾರ್ಷಲ್ ಗುಣದ ಕೊಡವರು ಕಂಡಿದ್ದರು. ಇಬ್ಬರೂ ನೊಂದಿದ್ದರು. ಸಮರ್ಥ ರಣನೀತಿಯೊಂದು ಅವರಲ್ಲಿ ರೂಪಿತವಾಯಿತು. ಅದರಲ್ಲಿ ತಪ್ಪೇನಿದೆ? ಹಿಂದುಗಳೇ ಟಿಪ್ಪುವನ್ನು ಎದುರಿಸಬೇಕಿತ್ತು ಆಗ ಧೈರ್ಯಶಾಲಿಗಳು ಎನ್ನಬಹುದಿತ್ತು ಎನ್ನುವ ತರ್ಕವನ್ನು ಕೋ. ಚನ್ನಬಸಪ್ಪನವರು ನಿಜಾಮ ಹಾಗೂ ನವಾಬರಿಗೂ ಅನ್ವಯಿಸುತ್ತಾರಾ?

ಅದಿರಲಿ, “ಹಿಂದೂ ರಕ್ಷಕ ಟೀಪೂ ಸುಲ್ತಾನ್‌” ಅದು ಯಾವ ಆಧಾರದ ಮೇಲೆ ಬರೆಯುತ್ತಾರೆ ಇವರು? ನಂಜುಂಡನಿಗೆ ಆನೆ ಕೊಟ್ಟ, ಶೃಂಗೇರಿಗೆ ದಾನ ಕೊಟ್ಟ ಎಂಬ ಕಾರಣಕ್ಕೋ? ಯಾಕೆ ಕೊಟ್ಟ, ಯಾವಾಗ ಕೊಟ್ಟ ಚೆನ್ನಬಸಪ್ಪನವರೇ?

ಇತಿಹಾಸದ ಪುಟಗಳನ್ನು ಸ್ವಲ್ಪ ತೆರೆದು ನೋಡಿ. ಹದಿನೆಂಟನೇ ಶತಮಾನದ ಆದಿಯಲ್ಲಿ ದಿಲ್ಲಿಯ ಗದ್ದುಗೆಯ ಮೇಲೆ ಕುಳಿತ ಮೊಘಲ್ ಮಹಾರಾಜ ಔರಂಗಜೇಬ್ ಭಾರತ ಕಂಡ ಅತ್ಯಂತ ಕ್ರೂರಿ ಮುಸ್ಲಿಂ ಮತಾಂಧನಾದರೆ ಅದೇ ಶತಮಾನದ ಅಂತ್ಯದಲ್ಲಿ ಔರಂಗಜೇಬ್‌ಗೆ ಸರಿಸಾಟಿಯಾಗಿ ನಿಲ್ಲಬಲ್ಲ ಮುಸ್ಲಿಂ ದೊರೆಯೆಂದರೆ ಮೈಸೂರಿನ ಟಿಪ್ಪು ಸುಲ್ತಾನ್. ಔರಂಗಜೇಬನಾದರೋ 50 ವರ್ಷಗಳ ದೀರ್ಘ ಆಡಳಿತಾವಧಿಯಲ್ಲಿ ಹಿಂದುಗಳು, ಹಿಂದು ಶ್ರದ್ಧಾಸ್ಥಾನಗಳ ಮೇಲೆ ಮಾಡಿದ ಎಗ್ಗಿಲ್ಲದ ದೌರ್ಜನ್ಯಗಳಿಗೆ ಸರಿಸಮಾನವಾಗಿ ಟಿಪ್ಪು ಸುಲ್ತಾನನು ಕೇವಲ 17 ವರ್ಷಗಳ ಅವಧಿಯಲ್ಲಿ ಮಾಡಿದ್ದೇನೆಂದರೆ ಅವನ ಮತಾಂಧತೆಯ ಆಳ ಅಗಲ ಹಾಗೂ ವ್ಯಾಪ್ತಿ ಯಾವ ಮಟ್ಟದ್ದು ಎಂದು ಗ್ರಹಿಸಲು ಸಾಧ್ಯವಾಗುತ್ತದೆ. ಔರಂಗಜೇಬನಿಗಾದರೋ ಸರಿಸುಮಾರು ಇಡೀ ಭಾರತವೇ ದೊರೆತಿತ್ತು. ದೆಹಲಿ, ಆಗ್ರಾ, ಉತ್ತರಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್, ಕಾಶ್ಮೀರ, ಪಂಜಾಬ್, ಹರ್ಯಾಣ… ಈ ವಿಶಾಲ ವಿಸ್ತೀರ್ಣದಲ್ಲಿ ಹಿಂದುಗಳ ವಿರುದ್ಧ ಆತನು ದೌರ್ಜನ್ಯ ಎಸಗಿದ. ಆದರೆ ಟಿಪ್ಪುವಿನ ವ್ಯಾಪ್ತಿ ಇದ್ದದ್ದು ಕರ್ನಾಟಕ, ತಮಿಳುನಾಡಿನ ಸ್ವಲ್ಪ ಭಾಗ, ಆಂಧ್ರದ ಸ್ವಲ್ಪ ಭಾಗ ಹಾಗೂ ಕೇರಳದ ಮಲಬಾರ್ ಪ್ರದೇಶಗಳಷ್ಟೇ. ಆದರೂ ಇಷ್ಟು ಚಿಕ್ಕ ಪ್ರದೇಶದಲ್ಲಿ ಟಿಪ್ಪುವಿನ ಹಿಂದು ವಿರೋಧಿ ದೌರ್ಜನ್ಯಗಳು ಅತ್ಯಂತ ಅಲ್ಪಾವಧಿಯಲ್ಲಿ ಅತ್ಯಂತ ಬರ್ಬರ ರೀತಿಯಲ್ಲಿ ನಡೆದವು. ಈ ದೌರ್ಜನ್ಯಗಳು ಕೇವಲ ಹಿಂದುಗಳ ಮೇಲಷ್ಟೇ ಸೀಮಿತಗೊಳ್ಳದೆ ಹಿಂದು ಸಮಾಜದ, ಹಿಂದು ಶ್ರದ್ಧಾ ಕೇಂದ್ರಗಳ, ನಂಬಿಕೆಗಳ, ಆಚಾರ ವ್ಯವಹಾರಗಳ ಮೇಲೂ ಹಬ್ಬಿತು. ಲೂಯಿಸ್ ರೈಸ್ ಎಂಬ ಬ್ರಿಟಿಷ್ ಇತಿಹಾಸಕಾರ ತನ್ನ  H‌ist‌o‌ry ‌of ‌Mys‌o‌re and C‌o‌o‌r‌g​  ನಲ್ಲಿ “ಟಿಪ್ಪುವಿನ ಸಾವಿನ ಕಾಲದಲ್ಲಿ ಅವನ ವಿಶಾಲ ಸಾಮ್ರಾಜ್ಯದಲ್ಲಿ ಶ್ರೀರಂಗಪಟ್ಟಣದಲ್ಲಿ ಕೇವಲ ಎರಡೇ ಎರಡು ಹಿಂದು ದೇವಸ್ಥಾನಗಳಲ್ಲಿ ನಿತ್ಯ ಪೂಜೆ ನಡೆಯುತ್ತಿದ್ದವು. ಈ ಎರಡು ದೇವಸ್ಥಾನಗಳನ್ನು ಅವನು ತನ್ನ ಜಾತಕವನ್ನು ನೋಡುತ್ತಿದ್ದ ಬ್ರಾಹ್ಮಣ ಜ್ಯೋತಿಷಿಗಳ ಅಣತಿಯ ಮೇರೆಗೆ ಉಳಿಸಿಕೊಟ್ಟಿದ್ದ. ರಾಜ್ಯದಲ್ಲಿರುವ ಎಲ್ಲ ದೇವಸ್ಥಾನಗಳ ಸಂಪತ್ತನ್ನು 1790ರ ಮೊದಲೇ ಟಿಪ್ಪು ಸುಲಿಗೆ ಮಾಡಿದ್ದ” ಎಂದು ಬರೆಯುತ್ತಾರೆ. ಟಿಪ್ಪುಸುಲ್ತಾನನ ಮತಾಂಧತೆಯ ಕರಾಳ ಹಾಗೂ ಸಂಪೂರ್ಣ ಸ್ವರೂಪ ನಮಗೆ ದೊರೆಯುವುದು ಮೂರು ಮುಖ್ಯ ಐತಿಹಾಸಿಕ ಮೂಲಗಳಿಂದ: ಒಂದು, ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಕರ್ನಲ್ ವಿಲಿಯಮ್ ಕರ್ಕ್‌ಪ್ಯಾಟ್ರಿಕ್ ಸಂಪಾದಿಸಿದ 2000ಕ್ಕೂ ಹೆಚ್ಚು ಟಿಪ್ಪು ತನ್ನ ಸ್ವಹಸ್ತದಲ್ಲಿ ಪಾರ್ಸಿ ಭಾಷೆಯಲ್ಲಿ ಬರೆದ ಪತ್ರಗಳು. ಎರಡು: ಅವನು ಕೊಡಗು ಹಾಗೂ ಕೇರಳದ ಮೇಲೆ ನಡೆಸಿದ ಅಮಾನವೀಯ ದಾಳಿ ಹಾಗೂ ಮೂರು: ಕೇರಳದ ಮಲಬಾರಿನ ಕಲೆಕ್ಟರ್ ಆಗಿ ದುಡಿದ ವಿಲಿಯಂ ಲೋಗಾನ್ ಬರೆದ “ಮಲಬಾರ್ ಮ್ಯಾನುವಲ್‌” ಎಂಬ ಬೃಹತ್ ಗ್ರಂಥ. ಇನ್ನು ಟಿಪ್ಪುಸುಲ್ತಾನನ ಕೇರಳದ ದಾಳಿಯ ಕರಾಳ ಇತಿಹಾಸಕ್ಕೆ ಒಂದು ಪ್ರತ್ಯೇಕ ಪುಸ್ತಕವೇ ಮೀಸಲಿಡಬೇಕು. ಟಿಪ್ಪು ಅಲ್ಲಿ ಹಿಂದುಗಳ ಮೇಲೆ ಮಾಡದ ಅತ್ಯಾಚಾರವಿಲ್ಲ. ಹರಿಸಿದ ರಕ್ತಕ್ಕೆ ಲೆಕ್ಕವೇ ಇಲ್ಲ. ತೋರಿಸಿದ ಕ್ರೌರ್ಯಕ್ಕೆ ಮಿತಿಯೇ ಇಲ್ಲ. ವಿಲಿಯಂ ಲೋಗಾನನು ಚಿರಚ್ಕಲ್ ತಾಲೂಕಿನಲ್ಲಿ ಇದ್ದ ತಿಚಂಬರಂ ಹಾಗೂ ತಳಿಪ್ಪರಂಬ, ತೆಲಿಚೇರಿಯಲ್ಲಿರುವ ತಿರುವೆಂಕಟು ಹಾಗೂ ಬಡಗರದ ಸಮೀಪದಲ್ಲಿರುವ ಪೋನ್ ಮೇರಿ ದೇವಸ್ಥಾನಗಳನ್ನು ಟಿಪ್ಪುಸುಲ್ತಾನನು ನಾಶ ಮಾಡಿದನೆಂದು ಬರೆಯುತ್ತಾರೆ. ಕೇರಳದಲ್ಲಿ ಟಿಪ್ಪು ಧ್ವಂಸ ಮಾಡಿದ ದೇವಸ್ಥಾನಗಳ ಅಪೂರ್ಣ ಪಟ್ಟಿ ಇಲ್ಲಿದೆ: ಥಳಿ, ತಿರುವಣ್ಣೂರ್, ವರಕ್ಕಳ್, ಪುತೂರ್, ಗೋವಿಂದಪುರಮ್, ಥಳಕ್ಕನು, ಕೇರಳಾಧೀಶ್ವರಂ, ತ್ರಿಕ್ಕುಂಡಿಯೂರ್, ತ್ರಿಪ್ರಂಗತು, ತಿರುನವಾಯು, ಕೋಟಕ್ಕುನ್ನು, ತ್ರಿತಾಳ, ಪಣ್ಯೂರ್, ಶುಕಪುರಂ, ಪೆರುಂಪರಂಪು, ಮರಣೆಲಿರ, ವೆಂಗಾರಿ, ತ್ರಿಕ್ಕುಲಂ, ಆಳನ್ಜಿಲ್ಲಂ, ಇಂದ್ಯಾನ್ನೂರ್, ಮಣ್ಣೂರ್, ಮಮ್ಮಿಯೂರ್, ಪರಂಪಾತಳಿ, ಪಣ್ಮಯನಾಡು, ವೆಂಗಿಡಗು, ಹಾಗೂ ಸುಪ್ರಸಿದ್ಧವಾದ ಗುರುವಾಯೂರು ಕೃಷ್ಣನ ದೇವಸ್ಥಾನ.

ಒಟ್ಟಾರೆ ಕೇರಳದಲ್ಲಿ ನಡೆಸಿದ ಅತ್ಯಂತ ಮೃಗೀಯ ದಾಳಿಯು ಟಿಪ್ಪುವಿಗೆ ಯಾವ ಪರಿ ಸಂತೋಷವನ್ನುಂಟು ಮಾಡಿತೆನ್ನುವುದರ ಸತ್ಯ ಜನವರಿ 19, 1790ರಲ್ಲಿ ಅವನು ತನ್ನ ಬಂಟನಾದ ಬುದ್ರುಜ್ ಜುಮಾನ್ ಖಾನ್‌ಗೆ ಬರೆದ ಪತ್ರದಿಂದ ಗೋಚರವಾಗುತ್ತದೆ. “ಇತ್ತೀಚೆಗೆ ನಾನು ಮಲಬಾರಿನಲ್ಲಿ ಮಹತ್ತರ ವಿಜಯ ಸಾಧಿಸಿದರ ಬಗ್ಗೆ ನಿನಗೆ ಗೊತ್ತೇ? ಅಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಕಾಫಿರ್‌ರನ್ನು ಇಸ್ಲಾಂಗೆ ಮತಾಂತರಗೊಳಿಸಿದೆ. ಈಗ ನಾನು ಆ ಶಾಪಗ್ರಸ್ಥನಾದ ರಾಮನ್ ನಾಯರ್ ವಿರುದ್ಧ ಹೋರಾಡಬೇಕೆಂಬ ಸಂಕಲ್ಪ ಮಾಡಿದ್ದೇನೆ. ಅವನನ್ನೂ ಅವನ ಅಷ್ಟೂ ಪ್ರಜೆಗಳನ್ನೂ ಇಸ್ಲಾಂಗೆ ಮತಾಂತರ ಮಾಡುವುದು ನನಗೆ ಖಾತ್ರಿಯಾಗಿದೆ.”

ಆದರೆ ಅದೇ ಸಂಕಲ್ಪವು ಟಿಪ್ಪುವಿಗೆ ಮುಳುವಾಯಿತು!

ರಾಜಾ ರಾಮನ್ ನಾಯರ್ ಅಥವಾ ತಿರುವಾಂಕೂರಿನ ಧರ್ಮರಾಜನು ಟಿಪ್ಪುವಿನ ಮೊದಲ ಸುತ್ತಿನ ದಾಳಿಯನ್ನು ಸಮರ್ಥವಾಗಿ ಹಿಮ್ಮೆಟ್ಟಿಸಿದ. ಜೊತೆಯಲ್ಲೇ ಸಹಾಯ ಕೋರಿ ಬ್ರಿಟಿಷರಿಗೆ ಪತ್ರ ಬರೆದ. ಅಲ್ಲಿಗೆ 3ನೇ ಮೈಸೂರು ಯುದ್ಧದ ಘೋಷಣೆಯಾಯಿತು. ತಕ್ಷಣವೇ ಲಾರ್ಡ್ ಕಾರ್ನ್‌ವಾಲಿಸ್ ಒಂದು ದೊಡ್ಡ ದಂಡನ್ನು ನಡೆಸಿಕೊಂಡು ಬಂದು ತಾನೇ ಮುಂದೆ ನಿಂತು ಧರ್ಮರಾಜನಿಗೆ ನೆರವಾದ. ಇದರೊಟ್ಟಿಗೆ ಮರಾಠರ ಹಾಗೂ ಹೈದರಾಬಾದಿನ ನಿಜಾಮನ ಜೊತೆ ಸಂಧಾನ ಮಾಡಿಕೊಂಡ ಕಾರ್ನ್‌ವಾಲಿಸ್, ಟಿಪ್ಪುವಿನ ಸಾಮ್ರಾಜ್ಯದ ಬೇರೆ ಬೇರೆ ಭಾಗಗಳ ಮೇಲೆ ದಾಳಿ ಮಾಡಿದ. ಕಾರ್ನ್‌ವಾಲಿಸ್‌ನ ತಂತ್ರ ಎಷ್ಟು ಯಶಸ್ವಿಯಾಯಿತೆಂದರೆ ಟಿಪ್ಪುವಿನಿಂದ ಬೆಂಗಳೂರನ್ನು ಕಸಿದುಕೊಂಡು ಕಡೆಗೆ ಅವನನ್ನು ಶ್ರೀರಂಗಪಟ್ಟಣದ ಕೋಟೆಯೊಳಗೆ ಅವಿತುಕೊಳ್ಳುವಂತೆ ಮಾಡಿದ. ಗತಿಯಿಲ್ಲದೆ 1792ರಲ್ಲಿ “ಮೈಸೂರಿನ ಹುಲಿ”(?) ಶರಣಾಗತಿ ಕೋರಿದ.

ಈ ಘಟನೆಯ ನಂತರ ಟಿಪ್ಪು ಮೇಲ್ನೋಟಕ್ಕೆ ಮೆತ್ತಗಾದ.

ಕಳೆದುಕೊಂಡಿದ್ದ ಅರ್ಧರಾಜ್ಯವನ್ನು ಮರಳಿ ಗಳಿಸಬೇಕಾದರೆ, ತನ್ನ ಹಿಡಿತದಲ್ಲಿದ್ದ ಪ್ರದೇಶಗಳಲ್ಲಿ ಬಹುಸಂಖ್ಯಾತರಾಗಿದ್ದ ಹಿಂದುಗಳನ್ನು ಎದುರು ಹಾಕಿಕೊಳ್ಳುವ ಹಾಗಿರಲಿಲ್ಲ. ಈ ಸಂದರ್ಭದಲ್ಲೇ ಅವನು ಶೃಂಗೇರಿಯ ಮಠಕ್ಕೆ ಕಾಣಿಕೆಯನ್ನು ಕೊಟ್ಟಿದ್ದು. ಇದೊಂದನ್ನು ಮಾತ್ರ ಹಿಡಿದು ನಮ್ಮ ಸ್ವಯಂಘೋಷಿತ ಬುದ್ಧಿಜೀವಿಗಳು, ಇತಿಹಾಸಾಭಾಷಿಗಳು ಟಿಪ್ಪುಸುಲ್ತಾನನನ್ನು ಪರಧರ್ಮ ಸಹಿಷ್ಣುತೆಯ ಪ್ರತೀಕ ಎಂಬಿತ್ಯಾದಿ ಸುಳ್ಳುಗಳನ್ನು ನುಡಿಯುತ್ತಾರೆ. ಟಿಪ್ಪು ಶೃಂಗೇರಿಯ ಮಠಕ್ಕೆ ಕೊಟ್ಟ ಹಣ, ಆ ಮಠದ ಸ್ವಾಮಿಗಳಿಗೆ ಬರೆದ ಜೇನು ಜಿನುಗುವ ಪತ್ರಗಳ ಸಂದರ್ಭವನ್ನು ಕೂಲಂಕಷವಾಗಿ ಪರಿಶೀಲಿಸಿದರೆ ಬೇರೆಯದೇ ಚಿತ್ರ ಮೂಡುತ್ತದೆ. ಲೀಲಾಪ್ರಸಾದ್ ಎಂಬುವರು ಶೃಂಗೇರಿಯನ್ನು ಕುರಿತ ತಮ್ಮ P‌oe​t‌i‌cs ‌of C‌ond‌u‌ct:​ O‌ral ‌Na‌r‌ra​t‌i​ve and ‌M‌o‌ral Be‌in‌g ‌in a S‌o‌ut‌h Ind‌ian T‌own ಪುಸ್ತಕದಲ್ಲಿ ಸುರೇಂದ್ರನಾಥ್ ಸೇನ್ ಎಂಬ ವಿದ್ವಾಂಸರ ಮಾತನ್ನು ಉದ್ಧರಿಸುತ್ತಾರೆ- “ಈ ಸಮಯದಲ್ಲಿ (ಅಂದರೆ 1793ರಲ್ಲಿ) ಟಿಪ್ಪುವಿಗೆ ಎಲ್ಲ ಕಡೆಯಿಂದಲೂ ಶತ್ರುಗಳ ಭಯವಿತ್ತು. ಹೀಗಾಗಿ ಅವನಿಗೆ ತನ್ನ ಹಿಂದು ಪ್ರಜೆಗಳನ್ನು ತಾತ್ಕಾಲಿಕವಾಗಿ ಸಮಾಧಾನಪಡಿಸುವ ತುರ್ತಿತ್ತು. ಮತ್ತೊಂದೆಡೆ ಅವನು ಹಿಂದು ಸ್ವಾಮಿಗಳಿಂದಲೇ ಪೂಜೆ ಹೋಮ ಇತ್ಯಾದಿಗಳನ್ನು ಮಾಡಿಸಿ ಹಿಂದುಗಳಾದ ಮರಾಠರ ಎದೆಯಲ್ಲಿ ಮೂಢನಂಬಿಕೆ ಜನಿತವಾದ ಭಯ ಮೂಡಿಸುವ ತಂತ್ರವೂ ಅಡಗಿತ್ತು.”

ಇಲ್ಲಿ ಟಿಪ್ಪುಸುಲ್ತಾನನ ವ್ಯಕ್ತಿತ್ವದ ಮತ್ತೊಂದು ಮುಖ ತೆರೆದುಕೊಳ್ಳುತ್ತದೆ.

ಟಿಪ್ಪುಗೆ ಜೋತಿಷ್ಯದಲ್ಲಿ ಅಚಲವಾದ ನಂಬಿಕೆಯಿತ್ತು. ತನ್ನ ಆಸ್ಥಾನದಲ್ಲಿ ಅನೇಕ ಜ್ಯೋತಿಷಿಗಳನ್ನು ಇಟ್ಟುಕೊಂಡಿದ್ದು, ಅವರಿಂದ ತನ್ನ ಯುದ್ಧಗಳಿಗೆ, ದಾಳಿಗೆ ಪ್ರಶಸ್ತ ಮುಹೂರ್ತ ಹಾಕಿಕೊಡಲು ಆಜ್ಞೆ ಮಾಡುತ್ತಿದ್ದುದು ನಿರ್ವಿವಾದವಾಗಿ ತಿಳಿದು ಬರುತ್ತದೆ. ವಿ.ಆರ್. ಪರಮೇಶ್ವರನ್ ಪಿಳ್ಳೈ ಅವರ ರಾಜಾ ಕೇಶವದಾಸ್ ಅವರ ಜೀವನ ಚರಿತ್ರೆಯಲ್ಲಿ ಟಿಪ್ಪುವಿನ ಈ ಅಂಧಶ್ರದ್ಧೆಯನ್ನು ಈ ರೀತಿ ವರ್ಣಿಸಲಾಗಿದೆ-“ಜ್ಯೋತಿಷ್ಯವು ಹೇಳುವ ಭವಿಷ್ಯ ವಾಣಿಯಲ್ಲಿ ಟಿಪ್ಪುವಿಗೆ ಅಪಾರ ನಂಬಿಕೆಯಿತ್ತು. 1792ರ ಅತ್ಯಂತ ಅವಮಾನಕರ ಸೋಲಿನ ನಂತರ ಟಿಪ್ಪುವಿನ ಆಸ್ಥಾನ ಜ್ಯೋತಿಷ್ಯರು ನೀನು ಬ್ರಿಟಿಷರನ್ನು ಸದೆಬಡಿದರೆ ದಕ್ಷಿಣ ಭಾರತದ ಬಾದಶಹನಾಗುವೆ ಎಂಬ ಭವಿಷ್ಯವನ್ನು ನುಡಿದರು. ಅವರ ಸಲಹೆಯಂತೆ ಟಿಪ್ಪು ಶೃಂಗೇರಿ ಮಠಕ್ಕೆ ಹಾಗೂ ಇನ್ನಿತರ ದೇವಸ್ಥಾನಗಳಿಗೆ ದಾನ ಕೊಡುವುದಕ್ಕೆ ಶುರು ಮಾಡಿದನು. ಈ ದಾನಗಳು ಹಿಂದುಗಳ ಮೇಲಿನ ಪ್ರೀತಿ, ಗೌರವಗಳಿಂದ ಬಂದದ್ದಲ್ಲ. ತಾನು ಬಾದಶಹ ಆಗುತ್ತೇನೆ ಎನ್ನುವ ನಂಬಿಕೆಯಿಂದ ಅಷ್ಟೇ.

ಅದರ ಬಗ್ಗೆ ವಿಲಿಯಂ ಕರ್ಕ್‌ಪ್ಯಾಟ್ರಿಕ್ ಹೀಗೆ ಹೇಳಿದ್ದಾರೆ-“ಟಿಪ್ಪು ಶ್ರೀರಂಗಪಟ್ಟಣ ಹಾಗೂ ಬೆಂಗಳೂರಿನ ಹೆಸರುಗಳನ್ನು ಮೂಲದಲ್ಲೇ ಏಕೆ ಉಳಿಸಿಕೊಂಡ? ಅದರಲ್ಲೂ ಶ್ರೀರಂಗಪಟ್ಟಣದ ಹೆಸರು ವಿಗ್ರಹದಿಂದಲೇ ಉತ್ಪತ್ತಿಯಾಗಿದ್ದರೂ ಸಹ ಈ ಮತಾಂಧ ಮುಸಲ್ಮಾನ ಆ ಹೆಸರನ್ನು ಏಕೆ ಬದಲಿಸಲಿಲ್ಲವೆಂದರೆ ಅದರಿಂದ ತನಗೆ ಕುತ್ತುಂಟಾಗಬಹುದೆಂಬ ಭಯ. ಅಂತಹ ಭಯವನ್ನು ಮೂಢನಂಬಿಕೆಯನ್ನು ಅವನ ಸುತ್ತ ಇದ್ದ ಜ್ಯೋತಿಷಿಗಳು ತುಂಬಿದ್ದರು.”

ಒಂದರ ಹಿಂದೆ ಒಂದರಂತೆ ಎದುರಾದ ಹಿನ್ನಡೆಗಳು ಟಿಪ್ಪುವಿನಲ್ಲಿ ಅಧೀರತೆಯನ್ನು ತುಂಬಿದ್ದವು. ಅದರಲ್ಲೂ ಮೂರನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ ಬ್ರಿಟಿಷರಿಗೆ ಶರಣಾಗಿ, ಅರ್ಧ ರಾಜ್ಯ ಕಳೆದುಕೊಂಡು ತನ್ನಿಬ್ಬರು ಮಕ್ಕಳನ್ನು ಒತ್ತೆಯಿಟ್ಟ ನಂತರ ಅವನ ಜಂಘಾಬಲ ಉಡುಗಿ ಹೋಗಿತ್ತು. 1782ರಿಂದ 1792ರವರೆಗೂ ಇದ್ದ ಮತಾಂಧ ಟಿಪ್ಪು ರಾಜ್ಯ ಉಳಿಸಿಕೊಳ್ಳಲು, ಕಳೆದುಕೊಳ್ಳಲು ಮರಳಿ ಪಡೆದುಕೊಳ್ಳಲು ಹೆಣಗಬೇಕಾಗಿ ಬಂದಿತ್ತು. ಅಂತಹ ಸಂದಿಗ್ದ ಹಾಗೂ ದುರ್ಬಲ ಸನ್ನಿವೇಶದಲ್ಲಿ, ಬ್ರಿಟಿಷರೆಂಬ ಬಲಿಷ್ಠ ಎದುರಾಳಿಗಳು ಮುಂದಿರುವಾಗ ಟಿಪ್ಪುಗೆ ತನ್ನ ರಾಜ್ಯದಲ್ಲಿರುವ ಹಿಂದುಗಳ ವಿಶ್ವಾಸವನ್ನು ಕಳೆದುಕೊಂಡರೆ ಅಥವಾ ವಿಶ್ವಾಸ ಗಳಿಸಿಕೊಳ್ಳದಿದ್ದರೆ ತನಗೇ ಕುತ್ತು ಎಂಬುದು ಅರಿವಾಗಿತ್ತು. ಅಂತಹ ಸಂದರ್ಭದಲ್ಲಿ ಶೃಂಗೇರಿ ಮಠಕ್ಕೆ ದಾನ ನೀಡುವ ಸೋಗು ಹಾಕಿದನೇ ಹೊರತು ಧರ್ಮಸಹಿಷ್ಣುತೆಯಿಂದಲ್ಲ.

ಒಂದು ವೇಳೆ…

ಆತ ಧರ್ಮಸಹಿಷ್ಣುವೇ ಆಗಿದ್ದರೆ ಏಕೆ ಹಿಂದೂ ದೇವಾಲಯಗಳನ್ನು ತನ್ನ ದಾಳಿಯ ಕೇಂದ್ರವಾಗಿರಿಸಿಕೊಳ್ಳುತ್ತಿದ್ದ? ಏಕೆ ಬಲವಂತದ ಮತಾಂತರಕ್ಕೆ ಕೈ ಹಾಕುತ್ತಿದ್ದ? ಏಕೆ ತನ್ನ ರಹಸ್ಯ ಪತ್ರಗಳಲ್ಲಿ ಮುಸ್ಲಿಮೇತರರನ್ನು ಕಾಫಿರರೆಂದು ಉಲ್ಲೇಖಿಸುತ್ತಿದ್ದ? ಅವರನ್ನು ಮತಾಂತರಗೊಳಿಸುವ ಮಾತನ್ನೇಕೆ ಆಡುತ್ತಿದ್ದ?

“ಒಂದು ವೇಳೆ ಟಿಪ್ಪು ಹಿಂದುಗಳನ್ನು ಹಿಂಸೆಗೆ ಗುರಿಪಡಿಸಿದ್ದರೆ, ಹಿಂದುಗಳೆಲ್ಲರೂ ಸೇರಿ ಆತನನ್ನು ಕೊಲ್ಲಬಹುದಿತ್ತು” ಎಂಬ ನಿಮ್ಮ ಮಾತಿಗೆ ಮತ್ತೆ ಬರುವುದಾದರೆ, ಲಿಂಗಾಯತರ ಮೂಲ ಮಠವಾದ ಭಾಲ್ಕಿಯ ಇತಿಹಾಸ ಪ್ರಸಿದ್ಧ ಹಾಗೂ ದಂತಕತೆಯಾಗಿರುವ ಶ್ರೀಚೆನ್ನಬಸವ ಪಟ್ಟದದೇವರು ಹೈದ್ರಾಬಾದಿನ ನಿಜಾಮನ ಉಪಟಳ ತಾಳಲಾರದೆ ಮಹಾರಾಷ್ಟ್ರಕ್ಕೆ ಪಲಾಯನ ಮಾಡಬೇಕಾಗಿ ಬಂದಿತ್ತು. ಹೊರಗೆ ಉರ್ದು ಬೋರ್ಡ್ ಹಾಕಿ ಒಳಗೆ ಕನ್ನಡ ಪಾಠ ಕಲಿಸುತ್ತಿದ್ದರು. ಇದನ್ನೂ ಹೇಡಿತನ ಎನ್ನುತ್ತೀರಾ?  ಸುಭಾಷ್ ಚಂದ್ರ ಬೋಸ್ ಕೂಡ ಬ್ರಿಟೀಷರಿಂದ ತಪ್ಪಿಸಿಕೊಂಡು ದೇಶ ಬಿಟ್ಟು ಪಲಾಯನ ಮಾಡಿದ್ದರು. ಅವರನ್ನೂ ಹೇಡಿ ಎನ್ನುತ್ತೀರಾ? ಭಗತ್ ಸಿಂಗ್‌ನನ್ನು ಲಾಹೋರ್‌ನ ಬೀದಿಯಲ್ಲಿ ಬ್ರಿಟೀಷರು ಗಲ್ಲಿಗೇರಿಸಿದಾಗ, ಚಂದ್ರಶೇಖರ್ ಆಜಾದ್‌ರನ್ನು ಸಾರ್ವಜನಿಕವಾಗಿ ಗುಂಡಿಟ್ಟುಕೊಂದಾಗಲೂ ಭಾರತೀಯರು ಸುಮ್ಮನಿದ್ದದ್ದು ಅಧೈರ್ಯದಿಂದ ಎನ್ನುತ್ತೀರಾ? ಇಂಥ ಮಾತುಗಳನ್ನಾಡುತ್ತಿರುವ ನೀವು ಒಬ್ಬ ನ್ಯಾಯಾಧೀಶರಾಗಿ ಎಂಥ ತೀರ್ಪುಗಳನ್ನು ಕೊಟ್ಟಿರಬಹುದು ಎಂಬುದನ್ನು ಊಹಿಸುವುದಕ್ಕೂ ಸೋಜಿಗವೆನಿಸುತ್ತದೆ. ಇತಿಹಾಸವನ್ನೇ ಸರಿಯಾಗಿ ವಿಶ್ಲೇಷಣೆ ಮಾಡದ ನೀವು, ಅರವಿಂದರ “ಸಾವಿತ್ರಿ”ಯನ್ನು ಭಾಷಾಂತರ ಮಾಡುವಾಗ ಅದರ ಮೂಲ ಸಾರವನ್ನು ನಿಜಕ್ಕೂ ಅರ್ಥಮಾಡಿಕೊಂಡಿದ್ದೀರಾ ಎಂಬ ಬಗ್ಗೆ ಅನುಮಾನವುಂಟಾಗುವುದಿಲ್ಲವೇ?

ಇತಿಹಾಸದ ಕಾಲಘಟ್ಟ ಗೊತ್ತಿಲ್ಲದೆ ಟಿಪ್ಪುವಿನಂಥ ಕ್ರೂರಿಗೆ ದೇಶಭಕ್ತನ ಸ್ಥಾನಕೊಡುವ, ಯದು ವಂಶಕ್ಕೆ ಸಂಚಕಾರ ತಂದವನ ಮಗನನ್ನು ಹಾಗೂ ಇಸ್ಲಾಮೇ ತನ್ನ ಪರಮಧ್ಯೇಯ ಎಂದವನನ್ನು ‘ಹಿಂದು ರಕ್ಷಕ” ಎಂದು ಬರೆಯುವ ಹಾಗೂ ನಿಜವಾದ ದೇಶಭಕ್ತರಾದ ಕೊಡವರನ್ನು ಹೊರಗಿನವರೆನ್ನುವ ಇಂಥ ವ್ಯಕ್ತಿಯನ್ನು ಏನನ್ನಬೇಕು ಹೇಳಿ? ಕೊಡವರ ಬಗ್ಗೆ ಕೋಡಂಗಿಗಳಿಗೇನು ಗೊತ್ತು?

11 Responses to “ಕೊಡವರ ಬಗ್ಗೆ ಕೋಡಂಗಿಗಳಿಗೇನು ಗೊತ್ತು, ಕೋ.’ಛೇ’!”

  1. vivek says:

    Pls write a book in kannada about tipppu anti hindu works

  2. praveen says:

    tumba olle lekhana brother

  3. shivaylogi i h says:

    Ko (la) che’ ravru enjalakke kai chachidagide

  4. lakshmana says:

    ನನ್ನ ಪ್ರೀತಿಯ ಪ್ರತಾಪ್ ಸಿಂಹ ರವರೆ ನಿಮ್ಮ ಬರಹ ಓದಿ ನನಗೆ ತುಂಬಾ ಖುಷಿಯಾಯಿತು. ನಿಜವಾಗಲೂ ನೀವೊಬ್ಬ ಅದ್ಬುತ ಬರಹಗಾರರ. ನೀವು ನನ್ನ ನೆಚ್ಚನ ಬರಹಗಾರರು. ನಾನು ಪೊಲೀಸ್ ಕೆಲಸ ಮಾಡುತ್ತಿದ್ದೇನೆ. ನಿಮ್ಮನ್ನು ಒಮ್ಮೆ ಭೇಟಿಯಾಗಿದ್ದೇನೆ. ಚಿಕ್ಕ ವಯಸ್ಸಿನಲ್ಲಿ ನಾವು ಶಾಲೆಗೆ ಹೋಗುವಾಗ ಮೈಸೂರು ಹುಲಿ ಟಿಪ್ಪುಸುಲ್ತಾನ್ ಎಂಬ ಪಾಠ ಓದಿದ್ದೆ. ನಮ್ಮ ಹಿರಿಯರು ಮಾಡಿದ ತಪ್ಪನ್ನು ಚಿಕ್ದಕವರಾದ ನಾವು ಓದಿ ಆತನನ್ನು ಹುಲಿ ಎಂದೇ ನಂಬಿದ್ದವು. ಕಾಲೇಜು ದಿನಗಳ ಪಠ್ಯದಲ್ಲಿಯೂ ಇದೇ ಮುಂದುವರೆಯಿತು. ಬ್ರಿಟೀಷರ ವಿರುದ್ದ ಈತನು ಹೋರಾಡಿರುವುದನ್ನೇ ಅಂದಿನ ನಮ್ಮ ದೇಶದ ನಾಯಕರು ದೇಶಭಕ್ತ ಎಂಬು ಬಿಂಬಿಸಿ ಪಠ್ಯ ರಚಿಸಿ ಅದನ್ನೇ ಚಿಕ್ಕ ಮಕ್ಕಳ ಮನದಲ್ಲಿ ಮೂಡಿಸಿದ್ದು ಈ ದೇಶದ ದುದೈ್ವೇ ಸರಿ. ಇಂದಿ ಪ್ರಜ್ಞಾವಂತ ನಾಗರೀಕರಿಗೆ ಅದನ್ನು ನೀವು ತಲುಪಿಸಿರುವುದು ಸಂತೋಷದ ವಿಷಯ. ನಿಮ್ಮ ಹಾಗೂ ವಿಶ್ವೇಶ್ವರ ಹೆಗಡೆಯವರ ಬರಹ ನನಗೆ ಅಚ್ಚುಮೆಚ್ಚು. ಇತ್ತೀಚೆಗೆ ಅವರು ಬರೆದ ಶಿರಾಢಿಘಾಟ್ ರಸ್ತೆಯ ಬಗ್ಗೆ ಓದಿದೆ ಸಂತೋಷವಾಯಿತು. ಆದರೆ ಹಾಸನ ಜಿಲ್ಲೆಯಲ್ಲಿ ಅನಭಿಷಕ್ತರಾಗಿರು ಜೆಡಿಎಸ್ ನ ದೀಮಂತ ನಾಯಕರಾದ ಮಾನ್ಯ ಹೆಚ್.ಡಿ. ದೇವೇಗೌಡ ರವರ ಮತ ಕ್ಷೇತ್ರದ ರಸ್ತೆಯನ್ನು ಒಮ್ಮೆ ನೋಡಿ ಬರೆದರೆ ನಿಜಕ್ಕೂ ನಮಗೆ ಖುಚಿಯಾಗುತ್ತದೆ. ದೇವೇಗೌಡ ಹಾಗೂ ಅವರ ಮಕ್ಕಳು ತಮಗೆ ಮತ ದೊರೆಯುವ ಪ್ರದೇಶಗಳ ರಸ್ತೆ ಮತ್ತಿರ ಅಭಿವೃದ್ದಿ ಮಾಡಿರುತ್ತಾರೆ. ಅರಕಲಗೂಡು ವಿಧಾನ ಸಭಾ ಕ್ಷೇತ್ರ ಮಾತ್ರ ಪಾಪ ಮಾಡಿದೆಯೇ? ಒಮ್ಮೆ ನೋಡಿ ಈ ರಸ್ತೆಯ ಬಗ್ಗೆ ಬರೆದು ಸಕಾ್ರವನ್ನು ಎಚ್ಚರಿಸಿದರೆ ನಿಮಗೆ ಈ ಕ್ಷೇತ್ರದ ಜನರು ಋಣಿಯಾಗಿರುತ್ತಾರೆಂದು ನನ್ನ ಭಾವನೆ. ಧನ್ಯವಾಧಗಳು ಈ ನನ್ನ ಅನಿಸಿಕೆಗೆ ನಿಮ್ಮ ುತ್ತರಕ್ಕಾಗಿ ಕಾಯುತ್ತಿರುತ್ತೇನೆ.

  5. Prakash B says:

    Too good sir… Many people in karnataka still have a wrong perception about Tippu.. They think that he is Mysore Huli or whatever, but they dont know that he was an a*sh*le.. On top of this we had a lesson about him in our school days, which also potrayed a wrong image about him.. They should take off his lesson from syllabus otherwise coming generation will still think that he is so called Mysore Huli…

    Thanks for this wonderful article…

  6. MANJUNATH Ko.Vem says:

    Preethiya Prathap,

    Lekhana upayuktha mahitiyolgondide.

    Ee reetiya brahagalu eshtu janakke reach aagutte annode nanna prasne? So called Buddijeevigalaada Anantha murthi, GK Gaovindaraya,Baraguru ramachandra,Dwarkanatha … ivarella tippuvina daayadgalanthe madhyamagalli heluvudu nodidare ashyavaagutte. Patyapustakagala samithiyu saha inthavana bagge pata rachisdare makkala manassalli enu tumbutte?
    Namma samajada swastyavannu haalumadalu ishtujana SWAYAM GHOSHITA BUDDIJEEVIGALU SAAKU

  7. keshavamurthy says:

    Dear simha,
    very good article, each one should read atleast in Kiarnataka state.
    Clearly narrated the braveness of Kodagu people.

    All the Best for all your work.

  8. mohan says:

    Very nice artical & it correlates to my readings on tippu on several ocasions.

  9. M Ramesh Jamkhandi says:

    awesome….!!!

  10. raghu says:

    Sir please write a book on tippu.

  11. Jagadeesh says:

    Janagala dikkuthappisuva buddhijiviga sankhe jaasthiyaagiruvaga neevu mathra olleya kelasa maadtha edaare annisutte. Anyways this article is moreinformative & thought provoking