Date : 15-02-2013, Friday | 8 Comments
Netaji Subhash Chandra Bose and Germany!
ಈ ಹೆಸರಿನ ಪುಸ್ತಕವೊಂದು ಮೊನ್ನೆ ಬುಧವಾರ ರಾಷ್ಟ್ರಪತಿ ಭವನದಲ್ಲಿ ಬಿಡುಗಡೆಯಾಯಿತು. ಅದನ್ನು ಬರೆದವರು ಮತ್ತಾರೂ ಅಲ್ಲ ನೇತಾಜಿ ಸುಭಾಶ್ಚಂದ್ರ ಬೋಸರ ಏಕಮಾತ್ರ ಪುತ್ರಿ ಪ್ರೊ.ಅನಿತಾ ಬೋಸ್ ಫಾಫ್! ಪುಸ್ತಕವನ್ನು ಬಿಡುಗಡೆ ಮಾಡಿದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ‘ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ನೇತಾಜಿ ಪಾತ್ರ ತುಂಬಾ ವಿಶಿಷ್ಟವಾದುದು. ‘ಇಂದಿಗೂ’ ನೇತಾಜಿ ಭಾರತೀಯರೆಲ್ಲರಿಗೂ ಪ್ರೇರಕರಾಗಿದ್ದಾರೆ’ ಎಂದರು.
ಆದರೆ…
‘ಇಂದಿಗೂ’ ಪ್ರೇರಕಶಕ್ತಿಯಾಗಿರುವ ನೇತಾಜಿಯವರ ಆಂತ್ಯ ಮಾತ್ರ ‘ಇಂದಿಗೂ’ ಅರಿಯದಾಗಿರುವುದೇಕೆ?
ಸ್ವಾತಂತ್ರ್ಯ ಬಂದು 65 ವರ್ಷಗಳಾದರೂ ಇಂದಿಗೂ ಜನರಲ್ಲಿ ದೇಶ ಪ್ರೇಮವನ್ನು ಬಡಿದೆಬ್ಬಿಸುವ ಆ ಪ್ರೇರಕ ಶಕ್ತಿ ಎಲ್ಲಿ ಕಣ್ಮರೆಯಾಯಿತು? ದಿಲ್ಲಿಗೆ ನಡೆಯಿರಿ, ಅಧಿಕಾರವನ್ನು ಕಸಿದುಕೊಳ್ಳೋಣ ಎಂದು ರಣ ಕಹಳೆಯೂದಿದ್ದ, ಬ್ರಿಟಿಷರ ಎದೆಯಲ್ಲಿ ನಡುಕವನ್ನು ಹಾಗೂ ಭಾರತ ರಾಷ್ಟ್ರೀಯ ಸೇನೆಯಲ್ಲಿ ಸ್ವಾತಂತ್ರ್ಯದ ತುಡಿತವನ್ನು ತುಂಬಿದ್ದ ಆ ನಾಯಕ ಹೋಗಿದ್ದಾದರೂ ಎಲ್ಲಿಗೆ?
1999, ಏಪ್ರಿಲ್ 14ರಂದು ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ರಚಿಸಿದ ಜಸ್ಟೀಸ್ ಮನೋಜ್ಕುಮಾರ್ ಮುಖರ್ಜಿ ಆಯೋಗ ಪತ್ತೆ ಮಾಡಲು ಹೊರಟಿದ್ದೂ ಇದೇ ರಹಸ್ಯವನ್ನ!
1945ರ ಆಗಸ್ಟ್ ಬಳಿಕವೂ ನೇತಾಜಿ ರಷ್ಯಾದಲ್ಲಿ ಕಾಣಿಸಿಕೊಂಡಿದ್ದರು ಎನ್ನುವ ಹಲವು ಕಥೆಗಳು ಮುಖರ್ಜಿ ಆಯೋಗದ ಬಳಿ ಇತ್ತು. ಆದರೆ ಸಾಕ್ಷಿ ಕೊರತೆಯಿಂದ ಇವ್ಯಾವುದನ್ನೂ ಒಪ್ಪಿಕೊಳ್ಳಲಾಗಲಿಲ್ಲ. ಇಂಥದ್ದೇ ಒಂದು ಕಥೆಯನ್ನು ಖೋಸ್ಲಾ ಆಯೋಗದೆದುರು ಡಾ. ಸತ್ಯನಾರಾಯಣ ಸಿಂಗ್ ಎಂಬುವರು ಹೇಳಿದ್ದರು. ಅವರ ಪ್ರಕಾರ ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾದ (ಸಿಪಿಐ) ಸ್ಥಾಪಕ ಅಬಾನಿ ಮುಖರ್ಜಿಯವರ ಪುತ್ರ ಜಾರ್ಜ್ ಮುಖರ್ಜಿ ಒಮ್ಮೆ ಸತ್ಯನಾರಾಯಣ ಸಿಂಗ್ಗೆ ಒಂದು ಘಟನೆಯನ್ನು ಹೇಳಿದ್ದರಂತೆ. ಜಾರ್ಜ್ ಮುಖರ್ಜಿ ಹೇಳಿದ ಹಾಗೆ ಅವರ ತಂದೆ ಅಬಾನಿ ಮುಖರ್ಜಿ ಮತ್ತು ನೇತಾಜಿ ಸೈಬೀರಿಯಾದ ಜೈಲೊಂದರಲ್ಲಿ ಅಕ್ಕಪಕ್ಕದ ಕೊಠಡಿಗಳಲ್ಲಿದ್ದರಂತೆ. ನೇತಾಜಿ ರಷ್ಯಾದಲ್ಲಿದ್ದರು ಅನ್ನುವ ಹಲವಾರು ಕತೆಗಳಲ್ಲಿ ಇದೂ ಒಂದು. ಆದರೆ ಇಲ್ಲಿ ಒಂದು ಮುಖ್ಯ ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಅಬಾನಿ ಮುಖರ್ಜಿ ಮತ್ತು ಅವರ ಸ್ನೇಹಿತ ವೀರೇಂದ್ರನಾಥ್ ಇಬ್ಬರನ್ನೂ 1937ರಲ್ಲಿ ರಷ್ಯಾದಲ್ಲಿ ಬಂಧಿಸಿ ಜೈಲಿನಲ್ಲಿಡಲಾಗಿತ್ತು. ಬಳಿಕ ಅವರಿಬ್ಬರನ್ನೂ ಸ್ಟಾಲಿನ್ನ ಆಜ್ಞೆ ಪ್ರಕಾರ ಕೊಲ್ಲಲಾಯಿತು. ಈ ಕತೆಗೆ ಪೂರಕವಾಗಿ ಏಷ್ಯಾಟಿಕ್ ಸೊಸೈಟಿ ಮುಖಾಂತರ ರಷ್ಯಾಕ್ಕೆ ಹೋಗಿ ಸಂಶೋಧನೆ ನಡೆಸುತ್ತಿದ್ದಾಗ ಎರಡನೇ ಮಹಾಯುದ್ಧ ಮುಗಿದ ನಂತರವೂ ಬೋಸ್ ಅಲ್ಲಿದ್ದರು ಎಂಬ ಸ್ಫೋಟಕ ವಿಚಾರವನ್ನು ದಾಖಲೆ ಸಮೇತ ಹೊರತೆಗೆದ ಡಾ. ಪುರಬಿರಾಯ್ ತಮ್ಮ ಅಫಿಡವಿಟ್ನಲ್ಲಿ ಕೆಲವೊಂದು ನಿದರ್ಶನಗಳನ್ನು ಕೊಡುತ್ತಾರೆ- ‘ಗೋರ್ಬಚೆವ್ರ ಗ್ಲಾಸ್ನಾಸ್ಟ್ ಮತ್ತು ಪೆರಿಸ್ಟ್ರೋಯಿಕಾದ ಸಂದರ್ಭದಲ್ಲಿ ಅದೆಷ್ಟೋ ಮುಚ್ಚಿಟ್ಟ ಸತ್ಯಗಳು ಹೊರಬಂದವು. ಎನ್ಕೆಜಿಬಿ-ಕೆಜಿಬಿಯ ರಹಸ್ಯ ಪತ್ರಾಗಾರಗಳಿಂದ ದೊರಕಿದ ದಾಖಲೆಗಳಿಂದ ಈ ರಹಸ್ಯಗಳು ಬಯಲಾದವು. ಇದಕ್ಕೆ ಸರಿಯಾಗಿ ರಷ್ಯಾದ ಇಂಡಾಲಜಿಸ್ಟ್ ಮಿಟ್ರೋಕಿನ್ ಹೇಳುವಂತೆ, ಗ್ಲಾಸ್ನಾಸ್ಟ್ನಿಂದಾಗಿ ಸೋವಿಯತ್ ಚರಿತ್ರೆಯ ಕೆಲ ಖಾಲಿ ಜಾಗಗಳು ತುಂಬುತ್ತಿವೆ. ಭಾರತೀಯ ಕ್ರಾಂತಿಕಾರರಾದ ವೀರೇಂದ್ರನಾಥ ಮತ್ತು ಅಬಾನಿ ಮುಖರ್ಜಿ ಸೋವಿಯತ್ ರಷ್ಯಾದಿಂದ ಯಾವ ಸುಳಿವೂ ಇಲ್ಲದೆ ಕಾಣೆಯಾಗಿದ್ದರು. ಆದರೆ 1989ರಲ್ಲಿ ಸೋವಿಯತ್ ಲ್ಯಾಂಡ್ ಪತ್ರಿಕೆಯಲ್ಲಿ ಒಂದು ಲೇಖನ ಪ್ರಕಟವಾಗಿತ್ತು. ಅದರಲ್ಲಿ ಈ ಇಬ್ಬರು ಕ್ರಾಂತಿಕಾರಿಗಳ ಕತೆ ಏನಾಯಿತೆಂಬುದನ್ನು ತಿಳಿಸಲಾಗಿದೆ. ದೆಹಲಿಯ ನ್ಯಾಷನಲ್ ಆರ್ಕೈವ್ಸ್ನಲ್ಲಿರುವ ಒಂದು ವರದಿ ಸಿ-4, ಪಾರ್ಟ್ ಜಿ, ಏಪ್ರಿಲ್ 8-1946ರ ಪ್ರಕಾರ ಇಂಟೆಲಿಜೆನ್ಸ್ ಬ್ಯೂರೋ ಒಂದು ರಷ್ಯನ್ ವರದಿ ಬಗ್ಗೆ ಚರ್ಚಿಸುತ್ತಿತ್ತು. ರಷ್ಯನ್ ವರದಿ ಹೀಗೆ ಹೇಳಿತ್ತು-‘ಮಾಸ್ಕೋದಲ್ಲಿ ಕಾಂಗ್ರೆಸ್ನ ಹಲವಾರು ನಿರಾಶ್ರಿತರು ಇದ್ದಾರೆ. ಅವರ ಪೈಕಿ ಬೋಸ್ ಕೂಡ ಒಬ್ಬರು’ ಎಂಬ ಮಾಹಿತಿಯನ್ನು ಕಾಬೂಲ್ನಲ್ಲಿದ್ದ ರಷ್ಯಾದ ರಾಯಭಾರಿ ಖೋಸ್ ಪ್ರಾಂತ್ಯದ ಆಫ್ಘಾನಿಸ್ತಾನದ ಗವರ್ನರ್ಗೆ ತಿಳಿಸಿದ್ದರು. ಇದೇ ಸಮಯದಲ್ಲಿ ರಷ್ಯಾದ ಕೆಲ ಅಧಿಕಾರಿಗಳೂ ಬೋಸ್ ರಷ್ಯಾದಲ್ಲಿದ್ದಾರೆಂದು ಹೇಳುತ್ತಿದ್ದರು. ಈ ವಿಷಯ ಪ್ರಸ್ತಾಪವಾಗಿದ್ದು ಇರಾನ್ನ ಟೆಹರಾನ್ನಿಂದ ಬಂದ ವರದಿಯೊಂದರಲ್ಲಿ. ಅಂದರೆ ರಷ್ಯಾದ ವೈಸ್ ಕಾನ್ಸುಲರ್ ಆಗಿದ್ದ ಮೊರಾಡೋಫ್ ‘ಬೋಸ್ ರಷ್ಯಾದಲ್ಲಿದ್ದರು’ ಎಂಬುದನ್ನು ಮಾರ್ಚ್ ತಿಂಗಳಲ್ಲಿ ಬಹಿರಂಗಗೊಳಿಸಿದ್ದರು ಎಂಬುದು ನಿಚ್ಚಳವಾಗುತ್ತದೆ.
ಹಾಗಾದರೆ ನೇತಾಜಿ ರಷ್ಯಾದಲ್ಲಿದ್ದರು ಎಂಬುದು ನೆಹರು ಅವರಿಗೆ ಗೊತ್ತಿತ್ತಾ?
ಬಹುಶಃ ಇಂಥದ್ದೊಂದು ಪ್ರಶ್ನೆಗೆ ಉತ್ತರ ನೇತಾಜಿ ಸಾವಿನ ರಹಸ್ಯದ ಬಗ್ಗೆ ಈ ಹಿಂದೆ ತನಿಖೆ ನಡೆಸಿದ್ದ ಖೋಸ್ಲಾ ಆಯೋಗದ ವಿಚಾರಣೆಯ ಸಂದರ್ಭದಲ್ಲೇ ಸಿಕ್ಕಿತ್ತು. ಆದರೆ ಇದರ ಬಗ್ಗೆ ಯಾರೆಂದರೆ ಯಾರೂ, ಖುದ್ದು ಜಸ್ಟಿಸ್ ಖೋಸ್ಲಾ ಕೂಡಾ ತಲೆಕೆಡಿಸಿಕೊಳ್ಳಲೇ ಇಲ್ಲ! ಖೋಸ್ಲಾ ಆಯೋಗದೆದುರು ಹೇಳಿಕೆ ನೀಡಿದ ಒಬ್ಬ ಸಾಕ್ಷಿದಾರನ ಹೆಸರು ಶ್ಯಾಮಲಾಲ್ ಜೈನ್. ಈತ ಸತ್ಯ ಪ್ರಮಾಣ ಮಾಡಿದ ಬಳಿಕ ಜಸ್ಟಿಸ್ ಖೋಸ್ಲಾ ಎದುರು ನೀಡಿದ ವಿಸ್ತಾರವಾದ ಹೇಳಿಕೆ ಅತ್ಯಂತ ಕುತೂಹಲಕರವಾಗಿದೆ. ಶ್ಯಾಮಲಾಲ್ ಜೈನ್ ಹೇಳಿಕೆ ಪ್ರಕಾರ, ನೇತಾಜಿ ರಷ್ಯಾದಲ್ಲಿರುವುದು ನೆಹರುಗೆ ಗೊತ್ತಿತ್ತು!
ಶ್ಯಾಮಲಾಲ್ ಜೈನ್ ಅವರ ಹೇಳಿಕೆಯನ್ನು ಪರಿಶೀಲಿಸುವ ಮುನ್ನ ಇನ್ನೊಂದು ಹಳೆಯ ರಹಸ್ಯ ಸರ್ಕಾರಿ ದಾಖಲೆಯ ಬಗ್ಗೆ ತಿಳಿಯಬೇಕು. ದೆಹಲಿಯಲ್ಲಿರುವ ಭಾರತ ಸರ್ಕಾರದ ಪತ್ರಾಗಾರ ‘ನ್ಯಾಷನಲ್ ಆರ್ಕೈವ್ಸ್ನಲ್ಲಿ ಒಂದು ದಾಖಲೆ ಇದೆ. ಇದು ಬ್ರಿಟಿಷ್ ಬೇಹುಗಾರಿಕಾ ತಂಡವೊಂದು ಬ್ರಿಟನ್ ಸರ್ಕಾರಕ್ಕೆ ಸಲ್ಲಿಸಿದ್ದ ವರದಿಯೊಂದರ ಪ್ರತಿ. ನ್ಯಾಷನಲ್ ಆರ್ಕೈವ್ಸ್ನಲ್ಲಿರುವ ಈ ದಾಖಲೆಯ ಫೈಲ್ ನಂಬರ್ 273/ಐಎನ್ಎ. ಡಾಕ್ಯುಮೆಂಟ್ ಸಿ-4, ಪ್ಯಾರಾ-ಜಿನಲ್ಲಿರುವ ಮಾಹಿತಿ ಪ್ರಕಾರ ಖುದ್ದು ಜವಾಹರಲಾಲ್ ನೆಹರು ನೇತಾಜಿಯವರಿಂದ ಒಂದು ಸಂದೇಶವನ್ನು ಸ್ವೀಕರಿಸಿದ್ದರು. ಆ ಸಂದೇಶದಲ್ಲಿ ‘ನೇತಾಜಿಯು ರಷ್ಯಾದಲ್ಲಿದ್ದು, ಅವರು ಅಲ್ಲಿಂದ ಭಾರತಕ್ಕೆ ಪಲಾಯನ ಮಾಡಲು ಸಿದ್ಧರಾಗಿದ್ದಾರೆ. ಅವರು ಚಿತ್ರಾಲ್ನ ಮೂಲಕ ಭಾರತಕ್ಕೆ ಬರಲಿದ್ದು, ತನ್ನಣ್ಣ ಶರತ್ ಬೋಸ್ರ ಯಾವುದಾದರೊಬ್ಬ ಮಗ ನೇತಾಜಿಯವರನ್ನು ಚಿತ್ರಾಲ್ನಲ್ಲಿ ಭೇಟಿ ಮಾಡಬೇಕು’ ಎಂದು ಬರೆದಿತ್ತು. ಅಲ್ಲದೆ ನೇತಾಜಿಯವರು ತಾವು ಭಾರತಕ್ಕೆ ಮರಳಲು ಬೇಕಾದ ಎಲ್ಲ ವ್ಯವಸ್ಥೆಯನ್ನು ಮಾಡುವಂತೆ ನೆಹರು ಅವರಲ್ಲಿ ಕೇಳಿಕೊಂಡಿದ್ದರು. ಇದು ದೆಹಲಿಯ ನ್ಯಾಷನಲ್ ಆರ್ಕೈವ್ಸ್ನಲ್ಲಿರುವ ಒಂದು ರಹಸ್ಯ ದಾಖಲೆ.
ಇನ್ನು ಶ್ಯಾಮಲಾಲ್ ಜೈನ್ ಖೋಸ್ಲಾ ಆಯೋಗದೆದುರು ನೀಡಿದ್ದ ಹೇಳಿಕೆಯನ್ನು ಗಮನಿಸೋಣ-‘ಒಂದು ದಿನ ಸಂಜೆ, ಅದು ಬಹುಶಃ 1945ರ ಡಿಸೆಂಬರ್ 26 ಅಥವಾ 27 ಇರಬೇಕು. ಜವಾಹರಲಾಲ್ ನೆಹರು ಅವರೇ ಖುದ್ದಾಗಿ ನನಗೆ ಫೋನ್ ಮಾಡಿದ್ದರು. ‘ಕೂಡಲೇ ನೀನು ಟೈಪ್ರೈಟರ್ ಜತೆ ಅಸಫ್ ಅಲಿಯವರ ಮನೆಗೆ ಬಾ, ನೀನು ಹಲವಾರು ಪತ್ರಗಳನ್ನು ಟೈಪ್ ಮಾಡೋದಿದೆ’ ಎಂದು ಹೇಳಿದ್ದರು. ನಾನು ಅದಕ್ಕೆ ಒಪ್ಪಿ ಕೂಡಲೇ ಟೈಪ್ರೈಟರನ್ನೂ ತೆಗೆದುಕೊಂಡು ಅಸಫ್ ಅಲಿಯವರ ಮನೆಗೆ ಹೋದೆ. ಅಲ್ಲಿ ಮೊದಲಿಗೆ ಕೆಲವೊಂದು ಪತ್ರಗಳನ್ನು ನನ್ನಿಂದ ಟೈಪ್ ಮಾಡಿಸಿದ ಜವಾಹರಲಾಲ್ ನೆಹರು ಬಳಿಕ ತಮ್ಮ ಕೋಟಿನ ಕಿಸೆಯಿಂದ ಒಂದು ಪತ್ರವನ್ನು ತೆಗೆದು, ಇದರ ನಾಲ್ಕು ಪ್ರತಿಗಳನ್ನು ಮಾಡಿಕೊಡುವಂತೆ ಕೇಳಿಕೊಂಡರು. ಈ ಕಾಗದವನ್ನು ನೋಡಿದ ನಾನು ಇದು ಕೈಯಲ್ಲಿ ಬರೆದ ಪತ್ರ ಹಾಗಾಗಿ ಓದಲು ಕೊಂಚ ಕಷ್ಟವಾಗುತ್ತದೆ’ ಅಂತಂದೆ. ಆಯೋಗದ ಮುಂದೆ ತನ್ನ ಹೇಳಿಕೆಯನ್ನು ಮುಂದುವರಿಸುತ್ತಾ ಶ್ಯಾಮಲಾಲ್ ಜೈನ್ ಹೇಳಿದ್ದರು- ‘ಈಗ ಆ ಕಾಗದಲ್ಲಿ ಏನು ಬರೆದಿತ್ತು ಎಂಬುದನ್ನು ಜ್ಞಾಪಿಸಿಕೊಂಡು, ಅದನ್ನೇ ಹೇಳಲು ಪ್ರಯತ್ನಿಸುತ್ತೇನೆ’.
‘ಸೈಗಾನ್ನಿಂದ ವಿಮಾನದ ಮೂಲಕ ಹೊರಟ ನೇತಾಜಿ ಸುಭಾಶ್ಚಂದ್ರ ಬೋಸ್, 1945ರ ಆಗಸ್ಟ್ 23ರಂದು ಮಂಚೂರಿಯಾದ ಡಿರೇನ್ಗೆ ಮಧ್ಯಾಹ್ನ 1-30ಕ್ಕೆ ಬಂದಿಳಿದರು. ಈ ವಿಮಾನವು ಜಪಾನಿ ಬಾಂಬರ್ ವಿಮಾನವಾಗಿತ್ತು. ನೇತಾಜಿ ಎರಡೂ ಕೈಗಳಲ್ಲಿ ಎರಡು ಸೂಟ್ಕೇಸ್ ಹಿಡಿದಿದ್ದರು. ನೇತಾಜಿ ಮತ್ತು ಅವರ ಜೊತೆಗೆ ಬಂದಿದ್ದ ಬೇರೆ ನಾಲ್ವರು, ಅವರಲ್ಲೊಬ್ಬ ಜನರಲ್ ಶಿಡೈ ಎಂಬ ಹೆಸರಿನ ಜಪಾನಿ (ಇತರರ ಹೆಸರು ನನಗೆ ಮರೆತು ಹೋಗಿದೆ…) ಹತ್ತಿರದಲ್ಲೇ ಇದ್ದ ಜೀಪ್ನಲ್ಲಿ ಕುಳಿತರು. ಈ ಜೀಪ್ ರಷ್ಯಾದ ಕಡೆಗೆ ಪ್ರಯಾಣ ಬೆಳೆಸಿತು. ಸುಮಾರು ಮೂರು ಗಂಟೆಯ ಬಳಿಕ ಈ ಜೀಪ್ ಮರಳಿ ಬಂತು. ಅಲ್ಲಿ ಕಾಯುತ್ತಿದ್ದ ವಿಮಾನದ ಪೈಲಟ್ಗೆ ವಿಚಾರ ತಿಳಿಸಿದ ಬಳಿಕ ಆತ ಮರಳಿ ಟೋಕಿಯೋಗೆ ಮರುಪ್ರಯಾಣ ಬೆಳೆಸಿದ.’
‘ಈ ಪತ್ರವನ್ನು ನನಗೆ ಟೈಪ್ ಮಾಡಲು ಕೊಟ್ಟ ನಂತರ ಜವಾಹರಲಾಲ್ ನೆಹರು ಅಸಫ್ ಅಲಿ ಬಳಿಗೆ ಹೋಗಿ 10-15 ನಿಮಿಷ ಮಾತುಕತೆಯಲ್ಲಿ ನಿರತರಾದರು. ನಾನು ಈ ಪತ್ರವನ್ನು ಪೂರ್ತಿಯಾಗಿ ಟೈಪ್ ಮಾಡಲಾಗಿರಲಿಲ್ಲ. ಏಕೆಂದರೆ ಪತ್ರ ಬರೆದ ವ್ಯಕ್ತಿಯ ಹೆಸರನ್ನು ನನಗೆ ಓದಲು ಸಾಧ್ಯವಾಗಲಿಲ್ಲ. ಅದಕ್ಕಾಗಿ ಜವಾಹರಲಾಲ್ರೇ ಆ ಹೆಸರೇನೆಂದು ಹೇಳಿಯಾರು ಎಂದು ಅವರು ಮರಳುವುದನ್ನೇ ಕಾಯುತ್ತಿದ್ದೆ. ಇದರ ನಡುವೆ ಆ ಪತ್ರವನ್ನು ಹಲವಾರು ಬಾರಿ ಓದಿದೆ. ನೆಹರು ಅವರು ನಾನು ಟೈಪ್ ಮಾಡಿದ ಪೇಪರ್ಗಳನ್ನು ಟೈಪ್ರೈಟರ್ನಿಂದ ತೆಗೆದು ಹೇಗಿದೆಯೋ ಹಾಗೆ ಕೊಡಲು ಹೇಳಿದರು.’
ನಾನು ಸತ್ಯಪ್ರಮಾಣ ಮಾಡಿ ವಿಧಿಬದ್ಧವಾಗಿ ದೃಢೀಕರಿಸುತ್ತೇನೆ ಮತ್ತು ಆ ಬಳಿಕ ಜವಾಹರಲಾಲ್ ನೆಹರು ತಮ್ಮ ಬಳಿಯಿದ್ದ ರೈಟಿಂಗ್ ಪ್ಯಾಡ್ನಿಂದ ನಾಲ್ಕು ಹಾಳೆಗಳನ್ನು ಹರಿದುಕೊಟ್ಟರು. ಅವರಿಗೆ ಒಂದು ಪತ್ರದ ನಾಲ್ಕು ಪ್ರತಿಗಳು ಬೇಕಾಗಿದ್ದು, ಅವರು ನನಗೆ ಡಿಕ್ಟೇಷನ್ ನೀಡಿದ್ದನ್ನು ನಾನು ಟೈಪ್ ಮಾಡಬೇಕೆಂದು ಹೇಳಿದರು. ಅದಕ್ಕೂ ನಾನು ಒಪ್ಪಿಕೊಂಡೆ. ಆ ಪತ್ರದ ಸಾರಾಂಶ ನನಗೆ ಈಗ ನೆನಪಿರುವಂತೆ ಈ ಕೆಳಗಿನಂತಿದೆ’
‘ಡಿಯರ್ ಮಿಸ್ಟರ್ ಅಟ್ಲಿ
(ಬ್ರಿಟನ್ ಪ್ರಧಾನಿ)
ಒಂದು ನಂಬಲರ್ಹ ಮೂಲದ ಪ್ರಕಾರ ನನಗೆ ತಿಳಿದು ಬಂದದ್ದೇನೆಂದರೆ ನಿಮ್ಮ ಸುಭಾಶ್ಚಂದ್ರ ಬೋಸ್ರಿಗೆ ರಷ್ಯಾದೊಳಗೆ ಪ್ರವೇಶಿಸಲು ಸ್ಟಾಲಿನ್ ಅನುಮತಿ ಇತ್ತಿದ್ದಾರೆ. ಇದು ರಷ್ಯನ್ನರು ಮಾಡಿದ ಶುದ್ಧ ವಿಶ್ವಾಸಘಾತುಕತನ ಮತ್ತು ನಂಬಿಕೆದ್ರೋಹ. ಬ್ರಿಟನ್-ಅಮೆರಿಕದ ಮಿತ್ರರಾಷ್ಟ್ರವಾಗಿ ರಷ್ಯಾ ಈ ರೀತಿ ಮಾಡಬಾರದಿತ್ತು. ದಯವಿಟ್ಟು ಈ ವಿಷಯವನ್ನು ಗಮನಿಸಿ, ನಿಮಗೆ ಯಾವುದು ಸರಿಯೆಂದು ತೋರುತ್ತದೋ ಅದನ್ನೇ ಮಾಡಿ.
ಇತೀ ತಮ್ಮ ವಿಶ್ವಾಸಿ
ಜವಾಹರಲಾಲ್ ನೆಹರು.’
ಖೋಸ್ಲಾ ಆಯೋಗದ ಮುಂದೆ ಇಂಥ ದಿಗ್ಭ್ರಮೆ ಹುಟ್ಟಿಸುವ ಹೇಳಿಕೆ ನೀಡಿದ ಈ ಶ್ಯಾಮಲಾಲ್ ಜೈನ್ ಯಾರೆಂದರೆ ಎರಡನೇ ಮಹಾಯುದ್ಧದಲ್ಲಿ ಜಪಾನ್ ಶರಣಾದ ಬಳಿಕ ನೇತಾಜಿಯವರ ಇಂಡಿಯನ್ ನ್ಯಾಷನಲ್ ಆರ್ಮಿ (ಐಎನ್ಎ) ಯೋಧರನ್ನು, ಅಧಿಕಾರಿಗಳನ್ನು ಬಂಧಿಸಿ ಬ್ರಿಟಿಷರು ಕೆಂಪುಕೋಟೆಯಲ್ಲಿ ವಿಚಾರಣೆ ನಡೆಸುತ್ತಿದ್ದರಲ್ಲಾ ಆ ಸಮಯದಲ್ಲಿ ಐಎನ್ಎ ಪರ ನ್ಯಾಯಾಲಯದಲ್ಲಿ ವಾದಿಸಲು ‘ಐಎನ್ಎ ಡಿಫೆನ್ಸ್ ಕಮಿಟಿ’ಯೊಂದನ್ನು ಕಾಂಗ್ರೆಸ್ ರಚಿಸಿತ್ತು. ಈ ಡಿಫೆನ್ಸ್ ಕಮಿಟಿಯ ಅಧ್ಯಕ್ಷರಾಗಿದ್ದು ಖ್ಯಾತ ವಕೀಲ ಹಾಗೂ ಕಾಂಗ್ರೆಸ್ ಧುರೀಣ ಭೂಲಾಭಾಯಿ ದೇಸಾಯಿ. ನೆಹರು ಈ ಕಮಿಟಿಯ ಪ್ರಮುಖ ಸದಸ್ಯರಾಗಿದ್ದರು. ಇದೇ ಕಮಿಟಿಯ ಕಾರ್ಯದರ್ಶಿಯಾಗಿದ್ದವರು ಅಸಫ್ ಅಲಿ. ಈ ಶ್ಯಾಮಲಾಲ್ ಜೈನ್ ಅಸಫ್ ಅಲಿಯ ‘ಕಾನ್ಫಿಡೆನ್ಷಿಯಲ್ ಸ್ಟೆನೋ’ ಆಗಿದ್ದರು!
ಶ್ಯಾಮಲಾಲ್ ಜೈನ್ ಖೋಸ್ಲಾ ಆಯೋಗದೆದುರು ಈ ರೀತಿ ಆಘಾತಕಾರಿ ಹೇಳಿಕೆ ನೀಡಿದ್ದಕ್ಕಿಂತಲೂ ಆಘಾತಕಾರಿ ವಿಷಯಗಳು ಬಳಿಕ ನಡೆದವು. ಶ್ಯಾಮಲಾಲ್ರ ಈ ಹೇಳಿಕೆಯನ್ನು ಯಾರೆಂದರೆ ಯಾರೂ ವಿರೋಧಿಸಲಿಲ್ಲ. ಖೋಸ್ಲಾ ಆಯೋಗದ ವಿಚಾರಣೆಯ ಯಾವ ಹಂತದಲ್ಲೂ ಶ್ಯಾಮಲಾಲ್ರ ಈ ಹೇಳಿಕೆಗೆ ವಿರೋಧ ವ್ಯಕ್ತವಾಗಲೇ ಇಲ್ಲ. ಆಯೋಗದ ವಿಚಾರಣೆಯಲ್ಲಿ ಸರ್ಕಾರದ ಪರ ವಕೀಲರೂ ಈ ಹೇಳಿಕೆಯ ಬಗ್ಗೆ ಮಾತಾಡಲಿಲ್ಲ. ಬಳಿಕ ಆಯೋಗದೆದುರು ಬಂದ ಇತರೆ ಯಾವುದೇ ಸಾಕ್ಷಿದಾರರೂ ಶ್ಯಾಮಲಾಲ್ರ ಈ ಹೇಳಿಕೆ ಸುಳ್ಳೆಂದು ಹೇಳಲಿಲ್ಲ. ಈ ಹೇಳಿಕೆಯ ಸತ್ಯಾಸತ್ಯತೆ ಬಗ್ಗೆ ಸಂಶಯ ವ್ಯಕ್ತಪಡಿಸಲಿಲ್ಲ. ಅದೆಲ್ಲಾ ಹೋಗಲಿ ಶ್ಯಾಮಲಾಲ್ ಜೈನ್ ಆಯೋಗದೆದುರು ಪ್ರಮಾಣ ಮಾಡಿ ನೀಡಿದ ಈ ಹೇಳಿಕೆ ನಿಜವೋ ಸುಳ್ಳೋ ಎಂದು ಸ್ವತಃ ಆಯೋಗದ ಅಧ್ಯಕ್ಷರಾದ ಜಿ.ಡಿ. ಖೋಸ್ಲಾ ಅವರೇ ಪರೀಕ್ಷಿಸಲು ಮುಂದಾಗಲಿಲ್ಲ. ಕೊನೆಗೆ ಖೋಸ್ಲಾ ಆಯೋಗದ ಅಂತಿಮ ವರದಿಯಲ್ಲೂ ಈ ಹೇಳಿಕೆ ನಂಬಲನರ್ಹ ಅಂತ ಕೂಡಾ ಹೇಳಿರಲಿಲ್ಲ. ಅಲ್ಲಿಗೆ ಶ್ಯಾಮಲಾಲ್ರ ಹೇಳಿಕೆಯನ್ನು ಎಲ್ಲರೂ ನಿಜವೆಂದೇ ಒಪ್ಪಿಕೊಂಡಾಯಿತಲ್ಲ!
ಇಂತಹ ಸ್ಫೋಟಕ ಅಂಶಗಳು, ದಾಖಲೆಗಳನ್ನು ಹೊಂದಿರುವ, ಜಸ್ಟೀಸ್ ಮುಖರ್ಜಿ ಆಯೋಗದ ವರದಿಯನ್ನು ಆಧಾರವಾಗಿಟ್ಟುಕೊಂಡಿರುವ ಲೆಫ್ಟಿನೆಂಟ್ ಮಾನ್ವತಿ ಆರ್ಯ ಅವರ ‘ಜಡ್ಜ್ಮೆಂಟ್, ನೋ ಕ್ರಾಶ್, ನೋ ಡೆತ್’ ಎಂಬ ಪುಸ್ತಕವನ್ನು ಕನ್ನಡಕ್ಕೆ ತಂದಿದ್ದೇನೆ. ಇಂದು ಬಿಜಾಪುರದಲ್ಲಿ ಆರಂಭವಾಗುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನದ ವೇಳೆ ಅನೌಪಚಾರಿಕವಾಗಿ ಬಿಡುಗಡೆಯಾಗಲಿದೆ ಹಾಗೂ ಅದೇ ವೇಳೆ ರಾಜ್ಯದೆಲ್ಲೆಡೆಯ ಓದುಗರಿಗೂ ಲಭ್ಯವಾಗಲಿದೆ. ನೇತಾಜಿಯಂಥ ಮಹಾನ್ ವ್ಯಕ್ತಿಯ ಬಗ್ಗೆ ಬರೆಯುವುದಕ್ಕಿಂತ ಪುಣ್ಯದ ಕೆಲಸ ಏನಿದೆ, ಹೇಳಿ?
For books contact my publisher Subrahmanya- 9448110034
ಮಾಹಿತಿಗಾಗಿ ಧನà³à²¯à²µà²¾à²¦à²—ಳà³!
ಜಗತà³à²¤à²¿à²—ೆ ಸತà³à²¯ ಗೊತà³à²¤à²¾à²—ಲಿ ನೇತಾಜಿಯ ಸಾವಿನ ರಹಸà³à²¯ ಬಯಲಾಗಲಿ ಗೋಮà³à²– ವà³à²¯à²¾à²˜à³à²°à²—ಳ ಮà³à²– ಕಳಚಲಿ
Great Job! I make sure i will buy it!
Super article pratap sir.
Thanks you for impormation
Thank You For this great information .let all those culprits be punished
How about “India’s Biggest Coverup” – by Anuj Dhar?
Hi Sir,
Where can i get this book? can i get this book in online. please let me know sir
Thanks,
Gowda
why should we respect the people who behaved very badly with Netha ji…..I hate those people……..these Neharu and company still great for some blind so called intellectual people in India…….