Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ನಾಳೆಯ ಬದುಕಿಗೆ ಇವತ್ತು ಒಪ್ಪೊತ್ತಿನ ಊಟ ಬಯಸಿದ್ದೇ ಆ ಮಕ್ಕಳು ಮಾಡಿದ ತಪ್ಪಾ?

ನಾಳೆಯ ಬದುಕಿಗೆ ಇವತ್ತು ಒಪ್ಪೊತ್ತಿನ ಊಟ ಬಯಸಿದ್ದೇ ಆ ಮಕ್ಕಳು ಮಾಡಿದ ತಪ್ಪಾ?

ನಮ್ಮ ದೇಶದ ಪರಿಸ್ಥಿತಿ ಹೇಗಿದೆಯೆಂದರೆ ಹತ್ತು ಮಕ್ಕಳಿಗಾಗುವಷ್ಟು ವಿಟಮಿನ್‌ಯುಕ್ತ ಆಹಾರವನ್ನು ತಟ್ಟೆತುಂಬಾ ತುಂಬಿಕೊಂಡು ಅಯ್ಯೋ ನನ್ನ ಮಗ ತಿನ್ನಲ್ಲ, ಅಯ್ಯೋ ನನ್ನ ಮಗಳು ಬಾಯಿಗೇ ಹಾಕಿಸಿಕೊಳ್ಳುವುದಿಲ್ಲ ಎಂದು ಹಳಹಳಿಸುವ, ಕೊನೆಗೆ ಬಿಸಾಡುವ ತಾಯಂದಿರು ಒಂದು ಕಡೆ, ಇನ್ನೊಂದು ಕಡೆ ಊಟಕ್ಕೂ ಗತಿಯಿಲ್ಲದೆ ತಮ್ಮ ಮಕ್ಕಳಿಗಾದರೂ ಒಂದು ಹೊತ್ತಿನ ಊಟ ಸಿಗಲಿ ಎಂದು ಹಪಾಹಪಿಸುವ ಬಡ ತಾಯಂದಿರು. ಹಾಗೆಯೇ, ಶಾಲೆಗೆ ಕಟ್ಟಿಕೊಟ್ಟ ಡಬ್ಬ ಹಾಗೇ ವಾಪಸ್ ಬಂದೀತು ಎಂಬ ಚಿಂತೆಯಿಂದ, ಚೆನ್ನಾಗಿ ತಿನ್ನಲಿ ಎಂಬ ಬಯಕೆಯಿಂದ ಬಗೆ ಬಗೆಯ ತಿಂಡಿ-ತಿನಿಸುಗಳನ್ನು ಮಾಡಿ ತುಂಬಿ ಕಳಿಸುವ ಪೋಷಕರು ಒಂದೆಡೆಯಾದರೆ, ಒಪ್ಪೊತ್ತಿನ ಊಟವಾದರೂ ತಮ್ಮ ಮಕ್ಕಳ ಬಾಯಿಗೆ ಬೀಳಲಿ ಎಂಬ ಆಸೆಯಿಂದ ಶಾಲೆಗೆ ಕಳುಹಿಸುವ ಅಮ್ಮಂದಿರು ಮತ್ತೊಂದೆಡೆ.

ಎಂತಹ Irony,  ಅಣಕ ಅಲ್ಲವೇ?

ಏಕಿಂಥಾ ಮಾತು ಹೇಳಬೇಕಾಗಿದೆಯೆಂದರೆ, ಏಕಿಂಥಾ ಯೋಚನೆ ಬರುತ್ತಿದೆಯೆಂದರೆ ಕಳೆದ ಮಂಗಳವಾರ ಬಿಹಾರದ ಸಾರನ್ ಜಿಲ್ಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವಿಸಿ 23 ಶಾಲಾ ಮಕ್ಕಳು ಅನ್ಯಾಯವಾಗಿ ಜೀವ ಕಳೆದುಕೊಂಡಿವೆ! ಎಲ್ಲರೂ 1ರಿಂದ 5ನೇ ತರಗತಿಯೊಳಗಿನವರು. ಅಷ್ಟೂ ಮಕ್ಕಳು 10 ವರ್ಷದೊಳಗಿನವರು. ವಿಷಪೂರಿತ ಆಹಾರ ಸೇವನೆಯಿಂದ ಮಂಗಳವಾರ ತಡರಾತ್ರಿ ವೇಳೆಗೆ 16 ಮಕ್ಕಳು ಅಸುನೀಗಿದ್ದರೂ ಇನ್ನುಳಿದ 7 ಮಕ್ಕಳು ಸತ್ತಿದ್ದು ಮಾತ್ರ ಆಡಳಿತ ವರ್ಗದ ವಿಳಂಬ, ಉದಾಸೀನದಿಂದ ಎಂಬುದು ಅಷ್ಟೇ ಸತ್ಯ.

ನಾಳೆವರೆಗೂ ಬದುಕಲು ಇವತ್ತಿನ ಒಪ್ಪೊತ್ತಿನ ಊಟ ಬಯಸಿದ ಆ ಅಮಾಯಕ ಮಕ್ಕಳು ಮಾಡಿದ ತಪ್ಪಾದರೂ ಏನು, ಹೇಳಿ?

ಈ ಘಟನೆಯ ಹಿಂದೆ ಯಾರದ್ದೋ ಕೈವಾಡವಿದೆ, ಪಿತೂರಿ ನಡೆದಿದೆ ಎಂದು ಆಳುವ ನಿತೀಶ್ ಕುಮಾರ್ ಸರ್ಕಾರ ಹೇಳುತ್ತಿದೆ. ಆ ಮಾತುಗಳಲ್ಲಿ ಧ್ವನಿಸುತ್ತಿರುವುದಾದರೂ ಏನು? ತಪ್ಪಿಗೆ ಕಾರಣ ಹುಡುಕುತ್ತಿದ್ದಾರೆಯೇ ಹೊರತು, ಇವರ ಅಂತಃಕರಣಕ್ಕೆ ಏನೂ ಅನ್ನಿಸುತ್ತಿಲ್ಲವೆ? ಪಿತೂರಿ ನಡೆದಿದೆ ಎನ್ನುವ ಇವರು ಹೊಣೆಗೇಡಿತನವನ್ನು ಮುಚ್ಚಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆಯೇ ಹೊರತು ಕರುಳಬಳ್ಳಿಗಳನ್ನು ಕಳೆದುಕೊಂಡವರ ವೇದನೆಯನ್ನು ಅರ್ಥಮಾಡಿಕೊಳ್ಳುತ್ತಿಲ್ಲ. ಅಮಾಯಕ ಮಕ್ಕಳ ಸಾವಿನಲ್ಲೂ ಪಿತೂರಿಯಿದೆ ಎನ್ನುವ ಮೂಲಕ ವಿಷಯಾಂತರ ಮಾಡಲು, ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಪ್ರಯತ್ನಿಸುತ್ತಾರಲ್ಲಾ ಇವರು ಮನುಷ್ಯರಾ? ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಅವರ ಜೆಡಿಯು ಕಥೆ ಹಾಗಿರಲಿ, ಇಂತಹ ಘೋರ ದುರಂತದ ಹೊರತಾಗಿಯೂ ಬಹುತೇಕ ಎಲ್ಲ ಪ್ರಮುಖ ರಾಜಕೀಯ ಪಕ್ಷಗಳು ದಿವ್ಯ ಮೌನವಹಿಸಿದ್ದಾವಲ್ಲಾ ಅದು ಏಕೆ? ಮಹಾ ಭ್ರಷ್ಟ ಕಾಂಗ್ರೆಸ್‌ಗಂತೂ ಮಕ್ಕಳ ದುರ್ಮರಣದಲ್ಲೂ ಜೆಡಿಯು ರೂಪದಲ್ಲಿ ಸಂಭವನೀಯ ಸಹಯೋಗಿ ಪಕ್ಷ ಹಾಗೂ ಅದರ 20 ಎಂಪಿಗಳ ಬೆಂಬಲದ ಆಸೆ ಮೊಳಕೆಯೊಡೆಯುತ್ತಿದೆ. ಇನ್ನು ಉಳಿದ ಪಕ್ಷಗಳಿಗೆ ‘ಸೆಕ್ಯುಲರ್‌’ ಪಕ್ಷ ಬಿಹಾರವನ್ನು ಆಳುತ್ತಿದೆ, ಅದನ್ನು ನೋಯಿಸಬಾರದೆಂಬ ಚಿಂತೆ.

ಇದೆಲ್ಲಾ ಏನನ್ನು ಸೂಚಿಸುತ್ತದೆ? ನಮ್ಮ ರಾಜಕೀಯ ವರ್ಗ ಅಂತಃಕರಣವನ್ನೇ ಕಳೆದುಕೊಂಡು ಬಿಟ್ಟಿದೆಯೇ? ಇವರ ಅಂತಃಕರಣವೂ ರಾಜಕೀಯ ಲಾಭ-ನಷ್ಟಗಳ ಲೆಕ್ಕಾಚಾರ ಹಾಕುತ್ತದೆಯೇ?

ಈ ದೇಶದ ಯಾರೋ ಪ್ರಭಾವಿ ವ್ಯಕ್ತಿ ಅಥವಾ ರಾಜಕಾರಣಿಯನ್ನು ಕೋಮು ಹಿಂಸಾಚಾರದ ಬಗ್ಗೆ ಪ್ರಶ್ನಿಸಿದಾಗ “ನಾವು ಕಾರಿನ ಹಿಂದೆ ಕುಳಿತಿದ್ದರೂ, ಡ್ರೈವರ್ ವಾಹನ ಚಾಲನೆ ಮಾಡುತ್ತಿದ್ದರೂ ನಾಯಿ ಮರಿಯೊಂದು ಚಕ್ರದಡಿ ಸಿಕ್ಕಿದರೂ ನಮ್ಮ ಮನಸ್ಸಿಗೆ ನೋವಾಗುತ್ತದೆ” ಎಂದು ಹೇಳಿದ ಒಂದು ಮಾತನ್ನು ಹಿಡಿದುಕೊಂಡು ವಾರಗಟ್ಟಲೆ ಚರ್ಚೆ ನಡೆಯುತ್ತವೆ, ಟೀವಿ ಮುಂದೆ ಕುಳಿತು ನಾವೂ ನೋಡುತ್ತೇವೆ, ಆಲಿಸುತ್ತೇವೆ. ಅವರು ಹಾಗೆಂದರು, ಹೀಗೆಂದರು, ಅವರ ಮಾತಿನ ನಿಜಾರ್ಥ, ಒಳಾರ್ಥ ಹಾಗೂ ಗೂಡಾರ್ಥ ಇದು, ಅವರ ಮಾತಿನಲ್ಲಿ ದ್ವೇಷ ಅಡಗಿದೆ ಎಂದು ತಲೆಗೊಬ್ಬ ತಲೆಗೊಂದರಂತೆ ವ್ಯಾಖ್ಯಾನ ಮಾಡುತ್ತಾನೆ, ಭಾಷಣ ಕೊಡುತ್ತಾನೆ. ಒಬ್ಬ ಪುಟಗೋಸಿ ಲೀಡರ್ರೂ ಅದರ ಬಗ್ಗೆ ಪ್ರತಿಕ್ರಿಯಿಸುತ್ತಾನೆ. ಜನರನ್ನು ನಾಯಿಗೆ ಹೋಲಿಸಿದ್ದಾರೆ ಎಂದು ಸಾರ್ವಜನಿಕವಾಗಿ ಕೋಪ-ತಾಪ ವ್ಯಕ್ತಪಡಿಸುತ್ತಾನೆ. ಮಾನವೀಯ ಮೌಲ್ಯಗಳ ಬಗ್ಗೆ ಭಾಷಣ ಕೊಡುತ್ತಾನೆ. ಒಂದು ಮಾತಿನ ಬಗ್ಗೆ, ಅದನ್ನೂ ತಮ್ಮ ಮೂಗಿನ ನೇರಕ್ಕೆ ತಿರುಚಿಕೊಂಡು ಬೊಬ್ಬೆ ಹಾಕುವ ಪಕ್ಷಗಳ ನಾಲಿಗೆ ಈಗ ಬಿದ್ದು ಹೋಗಿದೆಯೇ? ಇನ್ನು ನಮ್ಮ ರಾಜ್ಯದ ವಿಷಯಕ್ಕೆ ಬರುವುದಾದರೆ ಮಾಜಿ ಪ್ರಧಾನಿ ದೇವೇಗೌಡರ ಫೋಟೋವನ್ನು ತೆಗೆದುಹಾಕಿದ್ದಾರೆ ಎಂಬ ಕಾರಣಕ್ಕೆ ವಿಧಾನಸಭೆಯ ಒಂದೂವರೆ ಗಂಟೆ ಕಲಾಪವನ್ನೇ ಬಲಿತೆಗೆದುಕೊಳ್ಳುವವರಿಗೆ, ಫೋಟೋ ತೆಗೆದುಹಾಕುವಂಥ ಸಣ್ಣಬುದ್ಧಿ ತೋರಿದ ಮಂದಿಗೆ ಬಡವರ ಮಕ್ಕಳ ಬದುಕೇ ಕಮರಿ ಹೋಗಿರುವುದು ಚಿಂತಿಸಬೇಕಾದ, ಪ್ರತಿಭಟಿಸಬೇಕಾದ ವಿಷಯವೆನಿಸುವುದಿಲ್ಲವೆ?

ನಮ್ಮ ದೇಶದ ದುರಂತ ಏನೆಂದರೆ ಈ ಸೆಕ್ಯುಲರಿಸಂ, ಓಲೈಕೆ ರಾಜಕಾರಣ ಹಾಗೂ ಓಲೈಕೆ ಪತ್ರಿಕೋದ್ಯಮಕ್ಕೆ ದೊರೆಯುವ ಪ್ರಾಶಸ್ತ್ಯ, ಪ್ರಾಧಾನ್ಯತೆ ಬಡ ಜೀವ, ಬದುಕಿಗೆ ಸಿಗುವುದಿಲ್ಲ. ಏಕೆ?

ಇಷ್ಟಕ್ಕೂ ನಮ್ಮ ಮಾಧ್ಯಮಗಳು ನಡೆದುಕೊಳ್ಳುತ್ತಿರುವುದಾದರೂ ಹೇಗಿದೆ? “ಬಿಹಾರದಲ್ಲಿ ವಿಷಪೂರಿತ ಆಹಾರ ಸೇವಿಸಿ 16 ಮಕ್ಕಳು ಜೀವ ಕಳೆದುಕೊಂಡರು. ಹಾಗೆ ಸತ್ತವರ ಸಂಖ್ಯೆ ಈಗ 23ಕ್ಕೇರಿದೆ…” ಖಂಡಿತ ಇವಿಷ್ಟೂ ವಿಷಯಗಳು ಟೀವಿಗಳಲ್ಲಿ ಬ್ರೇಕಿಂಗ್ ನ್ಯೂಸ್ ಆಗಿ, ಚರ್ಚೆಯಾಗಿ ಪ್ರಸಾರವಾದವು. ಆದರೆ ಆ ಚರ್ಚೆಗಳಲ್ಲಿ ಇರಬೇಕಾಗಿದ್ದ ತೀವ್ರತೆ, ಕಳಕಳಿ ನಿಜಕ್ಕೂ ಇತ್ತಾ?Is it simply the death of school children or is there a large question? ಎಂದು ಟಿ.ವಿ ಆ್ಯಂಕರ್‌ಗಳು “ಸ್ಪಿನ್‌” ಮಾಡಿ ಬಿಡುತ್ತಾರೆ, ಇಲ್ಲವೇ ಚರ್ಚೆಯ ದಿಕ್ಕು ತಪ್ಪಿಸುತ್ತಾರೆ. ದಯವಿಟ್ಟು ಕೆಟ್ಟದ್ದು ಬಯಸಲಾಗುತ್ತಿದೆ ಎಂದು ಭಾವಿಸಬೇಡಿ. ಒಂದು ವೇಳೆ ದಿಲ್ಲಿಯ ಪ್ರತಿಷ್ಠಿತ ಶಾಲೆಗಳ 23 ಮಕ್ಕಳು ಇದೇ ರೀತಿ ಬಲಿಯಾಗಿದ್ದರೆ ಏನಾಗುತ್ತಿತ್ತು ಹೇಳಿ? ಆಕಾಶವೇ ಮುರಿದು ಬಿದ್ದಂತೆ ಮಾಧ್ಯಮಗಳೂ ವರ್ತಿಸುತ್ತಿದ್ದವು, ವ್ಯವಸ್ಥೆಯೂ ಧಾವಿಸುತ್ತಿತ್ತಲ್ಲವೆ? ಹಾಗಾದರೆ ನಮ್ಮ ಆತ್ಮಸಾಕ್ಷಿಗೂ ಆಯ್ಕೆಗಳಿವೆಯೇ? ನಮ್ಮ ಪ್ರತಿಕ್ರಿಯೆಗೂ ಇಷ್ಟ-ಕಷ್ಟಗಳಿವೆಯೇ?

ಒಬ್ಬ ಬಡ, ದಲಿತ, ಸಾಮಾನ್ಯ ಯುವತಿ, ಮಹಿಳೆ ಮೇಲೆ ಅತ್ಯಾಚಾರವಾದಾಗ ಅದಕ್ಕೆ ಸಿಗುವ ಮಾಧ್ಯಮದ ಕವರೇಜ್‌ಗೂ ಮಹಾನಗರವಾಸಿ ಯುವತಿ ಮೇಲೆ ನಡೆಯುವ ದೌರ್ಜನ್ಯಕ್ಕೆ ದೊರೆಯುವ ಆದ್ಯತೆಗೂ ಅಜಗಜಾಂತರ ವ್ಯತ್ಯಾಸವನ್ನು ಇವತ್ತು ಕಾಣಬಹುದು. ಏಕೆ ಹೀಗೆ ಹೇಳಬೇಕಾಗಿದೆಯೆಂದರೆ 2008ರಲ್ಲಿ ಆರುಷಿ ತಲ್ವಾರ್ ಎಂಬ ಬಾಲಕಿ ದಿಲ್ಲಿಯಲ್ಲಿ ಕೊಲೆಯಾದಾಗ ಆಕೆಯ ಮನೆಯ ಮುಂದೆ ತಿಂಗಳಾನುಗಟ್ಟಲೆ ಠಿಕಾಣಿ ಹೂಡಿದ್ದ ರಾಷ್ಟ್ರೀಯ ಮಾಧ್ಯಮಗಳು ಇಂದು ಎಲ್ಲಿ ಅಡಗಿ ಕುಳಿತಿವೆ? ಅವುಗಳ ಆತ್ಮಸಾಕ್ಷಿ ಎಲ್ಲಿ ಸತ್ತು ಬಿದ್ದಿದೆ ಹೇಳಿ? ಆರುಷಿ ತಲ್ವಾರ್‌ಳ ನಿಗೂಢ ಕೊಲೆ ಬಗ್ಗೆ ಚರ್ಚೆ ಮಾಡಬಾರದೆಂದಲ್ಲ. ಮಗು ಎಂಬುದು ಕರುಳಿನ ಬಳ್ಳಿ, ಕರುಳಿನ ಕುಡಿ. ಕಳೆದುಕೊಂಡ ತಾಯಿಯ ಸಂಕಟವೊಂದೇ. ಆದರೆ ತಂದೆ-ತಾಯಿಗಳೇ ಆರೋಪಿಗಳ ಸ್ಥಾನದಲ್ಲಿ ನಿಂತಿರುವ ಆರುಷಿ ಪ್ರಕರಣಕ್ಕೆ ಕೊಟ್ಟ ಮಹತ್ವ ಬದುಕೇನೆಂದೇ ಅರಿಯದ ಅಮಾಯಕ ಮಕ್ಕಳ ಹಾಗೂ ತಮಗೆ ಗತಿಯಿಲ್ಲದಿದ್ದರೂ ಮಕ್ಕಳಾದರೂ ಹೊಟ್ಟೆ ತುಂಬಿಸಿಕೊಳ್ಳಲಿ ಎಂಬ ಕಾರಣಕ್ಕೆ ಶಾಲೆಗೆ ಕಳುಹಿಸಿದ ತಂದೆತಾಯಿಗಳ ವೇದನೆಗೆ ಸಿಕ್ಕಿತೇ?

ತಾಯಿಯ ಸಂಕಟ, ವೇದನೆಗೆ ಬಡತನ, ಶ್ರೀಮಂತಿಕೆ ಇದೆಯೇ? ಆದರೂ ನಮ್ಮ ಸ್ಪಂದನೆಯಲ್ಲೇಕೆ ಇಂಥ ವ್ಯತ್ಯಾಸ?

ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಎನ್ನುತ್ತಾರೆ. ಅದು ಬರೀ ದುಡ್ಡಿರುವವರ ಮಕ್ಕಳಿಗೆ ಮಾತ್ರ ಅನ್ವಯವೇ? ಎಲ್ಲಾ ಅನುಕೂಲಗಳಿರುವವರಿಗೆ ಮಾತ್ರವೇ? ಬಡವರ ಮಕ್ಕಳು ಒಳ್ಳೆಯ ಪ್ರಜೆಗಳಾಗುವುದಿಲ್ಲವೆ? ಕನಿಷ್ಠ ಬದುಕುವ ಹಕ್ಕೂ ಅವರಿಗಿಲ್ಲವಾಯಿತೇ? ಒಬ್ಬ ವ್ಯಕ್ತಿಯ ಜೀವನದಲ್ಲಿ ಬಾಲ್ಯ ಎನ್ನುವುದು ಎಷ್ಟು ಮುಖ್ಯ ಅಲ್ಲವೆ? ಇವತ್ತು ಒಬ್ಬ ವ್ಯಕ್ತಿಯ ಜತೆ ಸ್ನೇಹ ಮಾಡುವುದಕ್ಕೂ ನಾವು ಹಿಂಜರಿಯುತ್ತೇವೆ. ಯಾರೇ ಪರಿಚಿತರಾದರೂ ಒಂದು ಬಗೆಯ ಅನುಮಾನ ಹೊಂದಿರುತ್ತೇವೆ. ಆದರೆ ಬಾಲ್ಯದ ಸ್ನೇಹಿತ/ಸ್ನೇಹಿತೆ ಸಿಕ್ಕಿದರೆ, ಅವರು ಈಗ ಎಂಥ ಕಿರಾತಕರೇ ಆಗಿದ್ದರೂ ಮೊದಲಿನ ಆಪ್ತತೆ ಕ್ಷಣಮಾತ್ರದಲ್ಲಿ ಜಾಗ ಪಡೆದು ಬೆರೆತು ಮಾತನಾಡುತ್ತೇವೆ. ಬಾಲ್ಯದ ಸ್ನೇಹ ನಿಷ್ಕಲ್ಮಶ. ಅಂತಹ ನಿಷ್ಕಲ್ಮಶ ಬಾಲ್ಯದ ಬದಲು, ನಾವೆಂತಹ ಬಾಲ್ಯವನ್ನು ಮಕ್ಕಳಿಗೆ ಕೊಡುತ್ತಿದ್ದೇವೆ?

ಇದೆಂಥಾ ದಾರಿದ್ರ್ಯ?

ಮಕ್ಕಳನ್ನೇ ಬಲಿತೆಗೆದುಕೊಳ್ಳುವಂಥ ಘಟನೆಗಳು ನಮ್ಮ ಸಮಾಜದ Collective consciousness, ಒಟ್ಟಾರೆ ಅಥವಾ ಸಾಮುದಾಯಿಕ ಸಾಕ್ಷಿಪ್ರಜ್ಞೆಯನ್ನು ಪ್ರಶ್ನಿಸುವಂತೆ, ಗೇಲಿ ಮಾಡುವಂತೆ ಕಾಣುತ್ತಿಲ್ಲವೆ? ಇದಕ್ಕೆಲ್ಲಾ ಯಾರು ಹೊಣೆ? ಯಾರೂ ಉದ್ದೇಶಪೂರ್ವಕವಾಗಿ ಮಾಡಿಲ್ಲದಿರಬಹುದು. ಆದರೆ ಅದರ ಹೊಣೆಯನ್ನು ಯಾರು ಹೊರಬೇಕು? ನಮ್ಮ ಮಗುವೊಂದಕ್ಕೆ ಕೈ ತುತ್ತು ನೀಡುವ ಮೊದಲು ಡೆಟಾಲ್ ಹಾಕಿ ತೊಳೆದುಕೊಂಡು ಮುಂಜಾಗ್ರತೆ ವಹಿಸುತ್ತೇವೆ, ಕೈ ಕ್ಲೀನ್ ಇದೆಯಾ ಎಂದು ನೋಡಿಕೊಳ್ಳುತ್ತೇವೆ. ಆದರೆ ನೂರಾರು ಮಕ್ಕಳಿಗೆ ಬೇಯಿಸಿ, ಬಡಿಸುವಾಗ ಇಂತಹ ಎಚ್ಚರಿಕೆ, ಮುಂಜಾಗ್ರತೆಗಳೇಕೆ ಮಾಯವಾಗಿ ಬಿಡುತ್ತವೆ? ಪುಕ್ಕಟೆ ಕೊಡುತ್ತಿದ್ದೇವೆ, ತಿಂದು ಸಾಯಲಿ ಎಂಬ ಉಡಾಫೆಯೇ? ನಮ್ಮದು ಎಂದಾಗ ಅತೀ ಕಾಳಜಿ ತೋರುವ ನಾವು, ಸಾರ್ವಜನಿಕ, ಉಚಿತ ಎಂದ ಕೂಡಲೇ ಏಕೆ ನಮ್ಮ ಮನಸ್ಸು ನಿರ್ಲಕ್ಷ್ಯ ತೋರಲಾರಂಭಿಸುತ್ತದೆ? ಸರ್ಕಾರದ ಯೋಜನೆ ತಪ್ಪು ಎನ್ನುವುದಕ್ಕಾಗುವುದಿಲ್ಲ, ಸರಿಯಾಗಿಯೇ ಇದೆ. ಆದರೆ ಆ ಯೋಜನೆ ನಮ್ಮ ಮಕ್ಕಳ ಬಳಿಗೆ ಬರುವಷ್ಟರಲ್ಲಿ ಯಾವ ಸ್ಥಿತಿಯಲ್ಲಿರುತ್ತದೆ? ಇದು ನಮ್ಮ ವ್ಯವಸ್ಥೆ ಹೇಗಿದೆ ಎಂಬುದನ್ನು ತೋರಿಸುವುದಿಲ್ಲವೆ? ಇದಕ್ಕೆ ಯಾರನ್ನು ದೂರಬೇಕು? ಸರ್ಕಾರವನ್ನೋ ಅಥವಾ ಎಲ್ಲವೂ ನಡೆಯುತ್ತದೆ ಎಂಬ ನಮ್ಮ ಚಲ್ತಾ ಹೈ ಆ್ಯಟಿಟ್ಯೂಡನ್ನೋ? (ಮನೋಭಾವವನ್ನೋ?) ಇದಕ್ಕೆಲ್ಲಾ ಬೇಕಾಗಿರುವುದು ನಮ್ಮ ಸಾಂತ್ವನ, ಛೇ ಎಂಬ ಮರುಕ ಮಾತ್ರವಾ ಅಥವಾ ಚುನಾವಣೆಯಲ್ಲಿ ಪಾಠವನ್ನೂ ಕಲಿಸಬೇಕಾ?

ಅದಿರಲಿ, ನೋಡುಗರಾದ ನಾವೂ ಕೂಡ ಆ ಸುದ್ದಿಯನ್ನು ಸೀರಿಯಸ್ಸಾಗಿ ನೋಡುತ್ತೇವೆಯೇ? ನಮ್ಮಲ್ಲಾಗಿಲ್ಲವಲ್ಲಾ ಎಂದು ಚಾನೆಲ್ ಬದಲಿಸಿ ಬಿಡುತ್ತೇವೆ! ಸೆಲೆಬ್ರಿಟಿಗಳ ಉಡುಗೆ-ತೊಡುಗೆಗಳಿಗೆ ಕೊಟ್ಟಷ್ಟು ಆದ್ಯತೆ, ಅವುಗಳ ಬಗ್ಗೆ ತೋರಿಸುವ ಆಸಕ್ತಿಯನ್ನು ಈ ವಿಷಯದಲ್ಲಿ ತೋರಿಸಿದ್ದರೆ ಚುನಾವಣೆಯಲ್ಲಿ ಅಯೋಗ್ಯರಿಗೆ ಪಾಠ ಕಲಿಸಲು, ಅದರಿಂದ ವ್ಯವಸ್ಥೆಗೆ ಚಾಟಿಯೇಟು ನೀಡಲು ಸಾಧ್ಯವಾಗುತ್ತಿರಲಿಲ್ಲವಾ? ನಿಮ್ಮನ್ನು ನೀವೇ ಪ್ರಾಮಾಣಿಕವಾಗಿ ಪರೀಕ್ಷಿಸಿಕೊಳ್ಳಿ. ನಾವೇ ಆರಿಸಿ ಕಳುಹಿಸಿದ ಜನರಿಂದ ಉದ್ದೇಶಪೂರ್ವಕವಾಗಿ ಅಲ್ಲದಿದ್ದರೂ ಹೊಣೆಗೇಡಿತನದಿಂದ, ಬೇಜವಾಬ್ದಾರಿತನದಿಂದ ಇಂಥ ಘಟನೆಗಳು ಸಂಭವಿಸುತ್ತಲೇ ಇರುತ್ತವೆ. ಆದರೆ ಅಂಥವುಗಳನ್ನು ಕ್ಷಮಿಸುವಂಥ ಕೆಟ್ಟ ಉದಾರತೆಯನ್ನು ನಮ್ಮಲ್ಲಿ ಬೆಳೆಸಿಕೊಂಡಿದ್ದೇವಲ್ಲಾ ಇದು ಸರಿಯೇ? ವಿಷಪೂರಿತ ಆಹಾರ ಸೇವನೆಯಿಂದ ಇಂದು ಮಕ್ಕಳು ಸತ್ತರು. ಅದು ಎಷ್ಟು ದಿನ ನಮ್ಮ ನೆನಪಿನಲ್ಲಿ ಇರುತ್ತದೆ ಹೇಳಿ ನೋಡೋಣ? ಇಂಥ ಕರುಣಾಜನಕ ಘಟನೆಗಳನ್ನೂ ಮರೆಯುವಷ್ಟು ಅಥವಾ ಇನ್ನೊಂದು ಅಂಥದ್ದೇ ಘಟನೆ ನಡೆಯುವವರೆಗೂ ಸುಮ್ಮನಿರುವಷ್ಟು ನಮ್ಮ ಸಮಾಜದ ಮನಸ್ಸು ರೋಗಗ್ರಸ್ಥವಾಗಿಬಿಟ್ಟಿದೆಯೇ? ಬದುಕೇನು ಎಂದೇ ಅರಿಯದ, ಮುಂದೆ ಬಾಳಿ ಬದುಕಬೇಕಾದ ಮುಗ್ಧ ಮಕ್ಕಳು ಬಾಡಿ ಕಮರಿ ಹೋದರಲ್ಲಾ ಇದು ನಮ್ಮ ನಿಮ್ಮೆಲ್ಲ ದರಿದ್ರ ಮನಸ್ಥಿತಿ ಹಾಗೂ ಉದಾಸೀನದಿಂದಲೇ ಅಲ್ಲವೆ?

ಛೇ!

18 Responses to “ನಾಳೆಯ ಬದುಕಿಗೆ ಇವತ್ತು ಒಪ್ಪೊತ್ತಿನ ಊಟ ಬಯಸಿದ್ದೇ ಆ ಮಕ್ಕಳು ಮಾಡಿದ ತಪ್ಪಾ?”

  1. Suma says:

    Very true Sir,e jagathalli naav ella manaveeyathe na kalkond battidivi ansutte.

  2. jyothi says:

    Howdu.. a makkala savu nijakku anyaya.. namma vyavasthe echchara agovargu
    Intha amayakara bali naditha iruthe.. Devare putta kandammagalannu thayi inda dura madabedappa….

  3. Vidya says:

    Hi Pratap,

    Whatever is written is very right. Humanity is invisible in the society these days.

    However I would like ask you one thing. Casting the vote is the only responsibility of us? If we cast our vote to a right candidate, does our duty end there? Yes that is one of our main duties.

    But criticizing the current situation should not only be the motive behind your articles. You are concentrating a lot on problems. Can you pay attention to solution side? What can we do to improve things? What could be the collective actions of us?

    Would like to see some actions in thoughts.

  4. vishu says:

    ಈ ದೇಶದ ಕಥೆ ಇಷ್ಟೇ ಇಲ್ಲಿ ಚಿಂತೆ ಮಾಡಿ ಲಾಭವಿಲ್ಲವಾಗಿದೆ ಆದರೂ ನನಗೆ ತಿಳಿದ ಹಾಗೆ ಈ ಲಜ್ಜೆಗೇಡಿ ಸರಕಾರಕ್ಕೆ ಏನೆಂದರು ಅಷ್ಟೇ ಹಾಗೂ ಮಾಧ್ಯಮಗಳು ಅಷ್ಟೇ ತಮ್ಮ ಲಾಭಕ್ಕೆ ಬಾರತ ಸರಕಾರ ನಡೆಯುತ್ತಿದೆ ಅಂದರೆ ಬಹುಶಃ ತಪ್ಪಾಗುವದಿಲ್ಲ ಯಾರಿಗೆ ಏನೆ ಶಿಕ್ಷೆ ಕೊಟ್ಟರು ಆ ಪುಟ್ಟ ಮಕ್ಕಳು ಬದುಕಿ ಬರುವದಿಲ್ಲ ಇನ್ನು ಮುಂದೆಯಾದರೂ ಶಿಕ್ಷಕರು ಬಿಸಿಯೂಟ ಸೇವಿಸಿದ ನಂತರ ಮಕ್ಕಳಿಗೆ ಸೇವಿಸಲು ಅನುಮತಿ ಕೋಡಬೇಕು ಇದು ಪ್ರತಿ ಸರಕಾರಿ ಶಾಲೆಯಲ್ಲಿ ಜಾರಿಯಾಗಬೇಕು. ಇದರಿಂದ ಮಕ್ಕಳಿಗೆ ಒಳ್ಳೆಯ ಆಹಾರ ಜೊತೆ ಸುರಕ್ಷಿತೆ ಸಿಗುತ್ತದೆ.

  5. december, 15, 2012, “america” dalli ide reeti makkala maranahoma nededaga,
    alliya pradhani OBAMA “Heal the broken hearted and bind their wounds” anta heli
    attaru, But namma Pradhani Mouna manamohan SING yake idara bagge matanadta illa………………………………?

  6. Sandeep says:

    Dear Pratap,

    Nice article.

  7. siddaiah chikkamadegowda says:

    ಶಾಲಾ ಮಕ್ಕಳ ಸಾವಿನಲ್ಲೂ ಮೋದಿಯವರ ನಾಯಕತ್ವದ ಅವಶ್ಯಕತೆಯನ್ನು ಹೆತ್ತಿ ತೋರಿಸುವ ನಿಮ್ಮ ಚಾಣಾಕ್ಷತನಕ್ಕೆ ಮೆಚ್ಚಲೇಬೇಕು!!! ಇದನ್ನೇ ಅಲ್ಲವೇ “ಉರಿಯುವ ಮನೆಯಲ್ಲಿ ಗಳಹಿರಿಯುವುವವರು” ಎಂದು ಹೇಳುವುದು. ಇನ್ನು ನಿಮ್ಮ ಒಂದು ವಾಕ್ಯ ಓದಿ ನನಗೆ ದಿಗ್ಬ್ರಮೆಯಾಯಿತು. ಮೋದಿಯವರ ಬಗ್ಗೆ “ಒಬ್ಬ ಪುಟಗೋಸಿ ಲೀಡರೂ ಅದರ ಬಗ್ಗೆ ಮಾತನಾಡುತ್ತಾನೆ” ಎಂದು ಹೇಳಿರುವುದು, ನೀವು ಮತ್ತು ನಿಮ್ಮ ಅನುಯಾಯಿಗಳು ಎಂತಹವರನ್ನು ಬಯಸುತ್ತೀರೆಂದು ತಿಳಿಸುತ್ತದೆ. ಇದನ್ನು ಓದಿದ ಮೇಲೆ ನನಗನಿಸುತ್ತದೆ ನಾನೂ ನಿಮ್ಮ ಲೇಖನದ ಬಗ್ಗೆ ಚರ್ಚೆ ಮಾಡುವಷ್ಟು ಯೋಗ್ಯತೆ ನನಗಿಲ್ಲವೇನೋ ಎನಿಸುತ್ತದೆ. ನೀವು ಮಾಡಿದ್ದೆಲ್ಲವನ್ನೂ, ನೀವು ಹೇಳಿದ್ದೆಲ್ಲವನ್ನೂ ತಲೆಬಾಗಿ, ಯಾವುದೇ ಪ್ರಶ್ನೆ ಮಾಡದೆ “ಹೌದು ಸ್ವಾಮಿ” ಎನ್ನುವವರನ್ನು ನೀವು ಬಯಸುತ್ತೀರೆಂದು ಇದರಿಂದ ತಿಳಿಯುತ್ತದೆ. ಮೇ ಒಂದರ ಲೇಖನವೊಂದರಲ್ಲಿ, ಬಡವರಿಗೆ ಒಂದು ರೂಪಾಯಿಗೆ ಒಂದು ಕೆ.ಜಿ. ಅಕ್ಕಿ ಕೊಡುವುದನ್ನು ಬಲವಾಗಿ ಟೀಕಿಸುತ್ತಾ, “ನಮ್ಮ ರಾಜಕಾರಣಿಗಳು ನಮ್ಮ ಜನರನ್ನು ಭಿಕ್ಷುಕರು, ಬಿಕಾರಿಗಳು ಎಂದು ಭಾವಿಸಿದ್ದಾರೆಯೇ? ಇಂತಹ ಯೋಜನೆಗಳಿಂದ ಜನರು ಸೋಮಾರಿಗಳಾಗಿದ್ದಾರೆ. ಸಾರಾಯಿಗೆ ಮಾತ್ರ ದುಡಿಯುತ್ತಿದ್ದಾರೆ” ಎಂದು ಹೇಳಿದ ನಿಮಗೆ, ಇದ್ದಕ್ಕಿಂದಂತೆ ಬಡವರ ಮಕ್ಕಳ ಬಿಸಿಹೂಟದ ಬಗೆಗಿನ ಕಾಳಜಿ ಯಾಕೆ ಬಂತೋ?

  8. Upendra R says:

    Sir nevu yavathu “Garjane Nillisadha Pratap Simha Sir”

  9. bharath says:

    sir idu namma thppu sari……adre …..nammana belesiro GURUGALU AND KUTUMBA vargadavaru nammannu gulamaru agu hediglannagi madidare ………..

  10. Basavaraj Tatti says:

    good one..

  11. shruthi vivek says:

    pratap sir i’m a big fan of ur articles and books. Today when i read this article my eyes were filled with tears. Your writing has a magic. It can make readers connect with it. HATS OFF sir

  12. Anant says:

    Hi Pratap,

    I’m following your column from long time and they are really nice.

    This should reach a wider audience. I suggest converting the same to English and publishing it.

    Thanks.

  13. Ajay says:

    Self introspection time, literally.

  14. Mahesh Borale says:

    Hi,

    Pratap Sir,

    Duddigiro bele matte doddavrigiro kalaji, e desha dalli samanya janarigilla sir, idakella karna jana gale, nau galu modlu seriose agbeku yavde vishaya bandaga hagura vagi takobardu, avagle sarkarau seriose agi takolutte namge.

  15. Ravi says:

    People who can closely read and observe they will realize that your articles can mislead. In previous article you told congress is making people lazy by giving the rice for 1 Rupee, now all of a sudden how come you care about poor children who struggle to get food. I strongly stand with comments given by Mr.Siddaiah Chikkamadegowda. We know U your pure Brand of RSS/BJP and I guess ur very angry b’ze Nitesh is not Supporting Modi:). Hey come Pratap there are lot of other topics that you can right like BJP did construct the houses of poor people in North Karnataka which they promised during the flood in there 5 year term and we have some time to discuss indirectly about Modi may be You can start writing on Modi from Oct onwards. First Let your Article be useful for Karnataka People.

  16. Hari says:

    siddaiah chikkamadegowda avare bhahushaha thamage Mathibramane aagirabeku… treatment thegedhukolli……..

  17. manjunath says:

    plz give some strong solutions to prevent such accidents in future through your kannada prabha paper ,also again and again try to give some articles on schools which are not following rules..this may rise awareness in other schools also..I request this strongly…