Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ‘ಅತ್ತೆ’ಗೊಂದು ನ್ಯಾಯ, ‘ಮಾವ’ನಿಗೊಂದು ನ್ಯಾಯವೇ?!

‘ಅತ್ತೆ’ಗೊಂದು ನ್ಯಾಯ, ‘ಮಾವ’ನಿಗೊಂದು ನ್ಯಾಯವೇ?!

ಇದನ್ನು ಸಮರ್ಥಿಸಿಕೊಳ್ಳಲು ಸಾಧ್ಯವೇ ಇಲ್ಲ. ಒಂದು ಕಣದಷ್ಟಾದರೂ ವಿಶ್ವಾಸಾರ್ಹತೆ ಉಳಿದಿದೆಯೇ? ಬಿಸಿಸಿಐ ಅಧ್ಯಕ್ಷ ಎನ್. ಶ್ರೀನಿವಾಸನ್ ಕೂಡಲೇ ರಾಜಿನಾಮೆ ನೀಡಬೇಕು!

-ಕಮಲ್‌ನಾಥ್, ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ

ಒಂದು ವೇಳೆ ನಿಮ್ಮ ಕುಟುಂಬ ಸದಸ್ಯನೊಬ್ಬನ ಮೇಲೆ ಅವ್ಯವಹಾರದ ಆರೋಪ ಬಂದರೆ ಋಜುವರ್ತನೆ, ನಡವಳಿಕೆಯ ಪ್ರಕಾರ ಯಜಮಾನ ರಾಜಿನಾಮೆ ನೀಡಲೇಬೇಕು. ಶ್ರೀನಿವಾಸನ್ ಜಾಗದಲ್ಲಿ ನಾನಿದ್ದರೆ ನಾನೂ ಅದನ್ನೇ ಮಾಡುತ್ತಿದ್ದೆ.

-ಜ್ಯೋತಿರಾದಿತ್ಯ ಸಿಂಧಿಯಾ, ಕೇಂದ್ರ ವಾಣಿಜ್ಯ,ಕೈಗಾರಿಕಾ ಖಾತೆ ರಾಜ್ಯ ಸಚಿವ

ಬಿಸಿಸಿಐ ಅಧ್ಯಕ್ಷ ಎನ್. ಶ್ರೀನಿವಾಸನ್ ಅವರು ನೈತಿಕ ತಳಹದಿಯ ಆಧಾರದ ಮೇಲೆ ಕೂಡಲೇ ರಾಜಿನಾಮೆ ನೀಡಬೇಕು ಹಾಗೂ ತನಿಖೆಗೆ ಅವಕಾಶ ಮಾಡಿಕೊಡಬೇಕು.

-ಜಿತೇಂದ್ರ ಸಿಂಗ್, ಕೇಂದ್ರ ಕ್ರೀಡಾ ಸಚಿವ

ಕ್ರೀಡೆ ಹಾಗೂ ರಾಜಕಾರಣ ಒಂದಕ್ಕೊಂದು ಬೆರಕೆಯಾಗಬಾರದು.

-ಮನಮೋಹನ್ ಸಿಂಗ್, ಪ್ರಧಾನಿ

ಹೀಗೆ ಮೇಲಿಂದ ಮೇಲೆ, ಒಬ್ಬರ ನಂತರ ಒಬ್ಬರು ಕಾಂಗ್ರೆಸ್ಸಿಗರು ಕಳೆದೊಂದು ವಾರದಿಂದ ಬಿಸಿಸಿಐ ಅಧ್ಯಕ್ಷ ನಾರಾಯಣಸ್ವಾಮಿ ಶ್ರೀನಿವಾಸನ್ ಅವರ ರಾಜಿನಾಮೆಗೆ ಒತ್ತಾಯಿಸುತ್ತಿದ್ದಾರೆ, ಟೀಕಾ ಪ್ರಹಾರ ಮಾಡುತ್ತಿದ್ದಾರೆ, ನೈತಿಕತೆಯ ಪಾಠ ಹೇಳುತ್ತಿದ್ದಾರೆ, Conflict of Interest ನ (ಸ್ವ ಹಾಗೂ ಸಾರ್ವಜನಿಕ ಹಿತಾಸಕ್ತಿಗಳ ನಡುವಿನ ಸಂಘರ್ಷ) ಮಾತನಾಡುತ್ತಿದ್ದಾರೆ. ಸಾಲುಸಾಲು ಹಗರಣಗಳನ್ನು ಸೃಷ್ಟಿಸಿ ದೇಶವನ್ನು ಲೂಟಿ ಹೊಡೆದಾಗಲೂ ಬಾಯ್ಮುಚ್ಚಿಕೊಂಡಿದ್ದ ಮನಮೋಹನ್ ಸಿಂಗ್ ಕೂಡ ಇದ್ದಕ್ಕಿದ್ದಂತೆ ಬಾಯಿ ತೆರೆದುಬಿಟ್ಟಿದ್ದಾರೆ!

ಏಕೆ ಸ್ವಾಮಿ?

ಖಂಡಿತ ಮುಕ್ತ ಮತ್ತು ನ್ಯಾಯಸಮ್ಮತ ತನಿಖೆಯಾಗಬೇಕೆಂದರೆ ಶ್ರೀನಿವಾಸನ್ ರಾಜಿನಾಮೆ ನೀಡಿ, ದೋಷಮುಕ್ತರಾಗುವವರೆಗೂ ಬಿಸಿಸಿಐನ ಚಟುವಟಿಕೆಗಳಿಂದ ದೂರವಿರಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ ಬಿಡಿ. ಇಷ್ಟೆಲ್ಲ ಬೆಳವಣಿಗೆಗಳ ಮಧ್ಯೆ ಶ್ರೀನಿವಾಸನ್ ಅವರನ್ನು ಸಾಚಾ ಎನ್ನಲು ಯಾರಿಗೂ ಸಾಧ್ಯವಿಲ್ಲ.

ಆದರೆ…
ಈ ಕಾಂಗ್ರೆಸ್ಸಿಗರಿದ್ದಾರಲ್ಲಾ ಇವರಿಗೆ ಶ್ರೀನಿವಾಸನ್ ರಾಜಿನಾಮೆಗೆ ಒತ್ತಾಯಿಸಲು ಯಾವ ಅರ್ಹತೆ ಇದೆ ಹೇಳಿ? ಈಗ್ಗೆ ಆರೆಂಟು ತಿಂಗಳ ಹಿಂದಷ್ಟೇ, ಅಂದರೆ ಅಕ್ಟೋಬರ್‌ನಲ್ಲಷ್ಟೇ ಅಳಿಯ ರಾಬರ್ಟ್ ವಾದ್ರಾರ ಹಗರಣ ಬಯಲಿಗೆ ಬಂದಾಗ ಸೋನಿಯಾ ಗಾಂಧಿಯವರ ರಾಜಿನಾಮೆಗೆ ಯಾರಾದರೂ ಒತ್ತಾಯಿಸಿದ್ದರೆ? ಕುಟುಂಬದ ಸದಸ್ಯನೊಬ್ಬನ ಮೇಲೆ ಆರೋಪ ಬಂದರೆ ಯಜಮಾನ ರಾಜಿನಾಮೆ ನೀಡಬೇಕೆನ್ನುವ ಜ್ಯೋತಿರಾದಿತ್ಯ ಸಿಂಧಿಯಾ, ವಾದ್ರಾ ಹಗರಣ ಬಯಲಾದಾಗ, ಗುರುತರ ಆರೋಪ ಬಂದಾಗ ಸರ್ಕಾರದ ಕಡಿವಾಣ ಹಿಡಿದುಕೊಂಡಿರುವ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿಯವರೂ ರಾಜಿನಾಮೆ ನೀಡಬೇಕೆಂದು ಸಲಹೆ ಕೊಡಬಹುದಿತ್ತಲ್ಲವೆ? ಅಳಿಯನ ಮೇಲೆ ಆರೋಪ ಬಂದಿದೆ ಎಂಬ ಕಾರಣಕ್ಕೆ ಮಾವ ಶ್ರೀನಿವಾಸನ್ ರಾಜಿನಾಮೆ ಕೊಡಬೇಕು ಎನ್ನುವುದಾದರೆ, ಅಳಿಯ ವಾದ್ರಾನ ಮೇಲೆ ಆರೋಪ ಬಂದಾಗ ಅತ್ತೆ ಸೋನಿಯಾ ಗಾಂಧಿಯವರು ರಾಜಿನಾಮೆ ನೀಡಿದ್ದರೇ? ಬಿಸಿಸಿಐ ಅಧ್ಯಕ್ಷರಾಗಿ ಶ್ರೀನಿವಾಸನ್ ಅವರೇ ಇದ್ದರೆ, ಅಳಿಯನ ವಿರುದ್ಧ ನ್ಯಾಯಸಮ್ಮತ ತನಿಖೆ ನಡೆಯಲು ಸಾಧ್ಯವಿಲ್ಲ ಅನ್ನುವುದಾದರೆ, ವಾದ್ರಾ ಕೂಡ ಸೋನಿಯಾ ಗಾಂಧಿಯವರ ಮನೆಯಲ್ಲೇ ಅಡ್ಡಾಡುತ್ತಿರುತ್ತಾರೆ, ಅಳಿಯನ ಮೇಲೆ ಆರೋಪ ಬಂದರೆ ಅತ್ತೆ ರಕ್ಷಿಸದೇ ಇರುತ್ತಾರೆಯೇ? ಹಾಗಾಗಿ ಯುಪಿಎ ಹಾಗೂ ಸರ್ಕಾರ ನೀತಿ ನಿರೂಪಣೆ ಮಾಡುತ್ತಿರುವ ಪ್ರಭಾವಿ ರಾಷ್ಟ್ರೀಯ ಸಲಹಾ ಮಂಡಳಿಯ(NAC) ಅಧ್ಯಕ್ಷ ಸ್ಥಾನಕ್ಕೆ ಆಕೆ ರಾಜಿನಾಮೆಯನ್ನೇಕೆ ಕೊಟ್ಟಿರಲಿಲ್ಲ? 2007ರಲ್ಲಿ 50 ಲಕ್ಷ ಮೂಲ ಬಂಡವಾಳದೊಂದಿಗೆ ದಂಧೆ ಆರಂಭಿಸಿದ ರಾಬರ್ಟ್ ವಾದ್ರಾ ಕೇವಲ ಮೂರ್ನಾಲ್ಕು ವರ್ಷಗಳಲ್ಲಿ 500 ಕೋಟಿ ಒಡೆಯನಾಗಿದ್ದು ಹೇಗೆ? ಮೂರು ವರ್ಷಗಳಲ್ಲಿ ರಾಜಧಾನಿ ದಿಲ್ಲಿ ಹಾಗೂ ಅದರ ಸುತ್ತಮುತ್ತ 31 ಸ್ವತ್ತುಗಳನ್ನು ಖರೀದಿಸುವಷ್ಟು ‘ತಾಕತ್ತು’ ಎಲ್ಲಿಂದ ಬಂದಿತ್ತು? ಹರ್ಯಾಣದಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಮಾಡಲು, ರಾಜಸ್ಥಾನದಲ್ಲಿ ವಿದ್ಯುತ್ ಸ್ಥಾವರವೊಂದು ಬರಲಿದೆ ಎಂಬುದನ್ನು ಮುಂಚೆಯೇ ತಿಳಿದುಕೊಂಡು ಅದರ ಸಮೀಪದಲ್ಲಿದ್ದ ರೈತರಿಂದ ನೂರಾರು ಎಕರೆ ಕೃಷಿ ಭೂಮಿ ಖರೀದಿಸಲು ಹೇಗೆ ಸಾಧ್ಯವಾಯಿತು? ಒಬ್ಬ ಸಣ್ಣ ಪ್ರಮಾಣದ ಚರ್ಮದ ವ್ಯಾಪಾರಿಯಾಗಿದ್ದ ರಾಬರ್ಟ್ ವಾದ್ರಾ ಏಕಾಏಕಿ ಬಿಲಿಯನೇರ್ ಆಗಿದ್ದು ಹೇಗೆ?

ಇದರ ಬಗ್ಗೆಯೂ ನ್ಯಾಯಸಮ್ಮತ ತನಿಖೆ ಆಗಬೇಕಿತ್ತಲ್ಲವೆ?

ಹಾಗೆ ಆಗಬೇಕಾದರೆ ಸೋನಿಯಾ ಗಾಂಧಿಯವರೂ ರಾಜಿನಾಮೆ ನೀಡಿ ಅಧಿಕಾರದಿಂದ ದೂರ ಉಳಿಯಬೇಕಿತ್ತಲ್ಲವೆ? ಇಂದು ಶ್ರೀನಿವಾಸನ್ ಅವರಿಂದ ರಾಜಿನಾಮೆ ಕೊಡಿಸಿಯೇ ತೀರುತ್ತೇವೆ ಎಂದು ರಣಹದ್ದುಗಳಂತೆ ಅವರ ಮೇಲೆ ಮುಗಿಬಿದ್ದಿರುವ ಇಂಗ್ಲಿಷ್ ಮಾಧ್ಯಮಗಳು, ಕಳೆದ ಅಕ್ಟೋಬರ್‌ನಲ್ಲಿ ವಾದ್ರಾ ಪ್ರಕರಣ ಬೆಳಕಿಗೆ ಬಂದಾಗ ಸೋನಿಯಾ ಗಾಂಧಿಯವರೂ ರಾಜಿನಾಮೆ ನೀಡಬೇಕು ಎಂದು ಸಣ್ಣ ಧ್ವನಿಯನ್ನೂ ಎತ್ತಲಿಲ್ಲವೇಕೆ? ಅಂದರೆ ಈ ನೈತಿಕತೆಯ ಪ್ರಶ್ನೆ ನೆಹರು ಕುಟುಂಬಕ್ಕೆ ಅನ್ವಯಿಸುವುದೇ ಇಲ್ಲವೆ? ಅಥವಾ ನೆಹರು ಕುಟುಂಬಕ್ಕೆ ನೈತಿಕತೆಯ ಪ್ರಶ್ನೆ ಕೇಳಲು ಯಾರಿಗೂ ತಾಕತ್ತಿಲ್ಲವೆ? ಸೋನಿಯಾ ಯುಪಿಎ ಮುಖ್ಯಸ್ಥೆಯಾಗಿರುವವರೆಗೂ ನ್ಯಾಯಸಮ್ಮತ ತನಿಖೆ ನಡೆಯಲು ಸಾಧ್ಯವಿಲ್ಲ ಎಂದು ಏಕೆ ಯಾರಿಗೂ ಅನಿಸಲಿಲ್ಲ? ಅದರ ಪರಿಣಾಮವೇನಾಯಿತು? ವಾದ್ರಾ ವಿರುದ್ಧ ಧ್ವನಿಯೆತ್ತಿದ ಐಎಎಸ್ ಅಧಿಕಾರಿ ಆಶೋಕ್ ಖೇಮ್ಕಾ ವಿರುದ್ಧವೇ ಪ್ರಕರಣ ದಾಖಲಿಸಿದರು, ಟೀಕಾ ಪ್ರಹಾರ ಮಾಡಿದರು, ಬೆನ್ನಲ್ಲೇ ಹುದ್ದೆಯಿಂದಲೇ ಎತ್ತಂಗಡಿ ಮಾಡಿದರು. ಈ ಮಧ್ಯೆ, ಮೊನ್ನೆ ಏಪ್ರಿಲ್‌ನಲ್ಲಿ ಹರ್ಯಾಣ ಸರ್ಕಾರ ವಾದ್ರಾಗೆ ‘ಕ್ಲೀನ್‌ಚಿಟ್‌’ (ಶುದ್ಧಹಸ್ತ) ಕೊಟ್ಟುಬಿಟ್ಟಿದೆ.

ಸೋನಿಯಾ ಗಾಂಧಿಯವರ ಅಳಿಯ ಎಂಬ ಕಾರಣಕ್ಕೇ ಅಲ್ಲವೆ?

ಅದಿರಲಿ, ನೈತಿಕತೆ ಆಧಾರದ ಮೇಲೆ ಶ್ರೀನಿವಾಸನ್ ರಾಜಿನಾಮೆ ನೀಡಬೇಕು ಎನ್ನುತ್ತಿರುವ ಕಾಂಗ್ರೆಸ್, ರಾಬರ್ಟ್ ವಾದ್ರಾ ಪ್ರಕರಣ ಬಯಲಿಗೆ ಬಂದ ದಿನ ನಡೆದುಕೊಂಡಿದ್ದಾದರೂ ಹೇಗಿತ್ತು? ಅರವಿಂದ್ ಕೇಜ್ರಿವಾಲ್ ಸಂಜೆ ಪತ್ರಿಕಾಗೋಷ್ಠಿ ನಡೆಸಿ, ಮೇಲೇಳುವಷ್ಟರಲ್ಲಿ ಕೆಲವೇ ದಿನಗಳ ಹಿಂದಷ್ಟೇ ಮಂತ್ರಿಯಾಗಿ ವಕ್ತಾರಗಿರಿ ಬಿಟ್ಟಿದ್ದ ಮನೀಶ್ ತಿವಾರಿ, ಮಂತ್ರಿಯಾದ ನಂತರ ಟಿವಿ ಚರ್ಚೆಯಿಂದ ದೂರವೇ ಉಳಿದಿದ್ದ ಜಯಂತಿ ನಟರಾಜನ್ ಅವರಿಗೆ ನಿರ್ದೇಶನ ನೀಡಿ ಮಾಧ್ಯಮಗಳಲ್ಲಿ ವಾದ್ರಾ ಅವರನ್ನು ಸಮರ್ಥಿಸಿಕೊಳ್ಳಲು ಕಳುಹಿಸಿತು. ಅಂದರೆ ಸೋನಿಯಾ ಅಳಿಯನ ವಿಷಯಕ್ಕೊಂದು ನ್ಯಾಯ, ಶ್ರೀನಿವಾಸನ್ ಅಳಿಯನಿಗೊಂದು ನ್ಯಾಯವೇ?

ಮಿಗಿಲಾಗಿ, ನೈತಿಕತೆಗೆ ಕಾಂಗ್ರೆಸ್ ಯಾವ್ಯಾವ್ಯಾಗ, ಎಷ್ಟೆಷ್ಟು ಬೆಲೆ ಕೊಟ್ಟಿದೆ ಸ್ವಾಮಿ?

ಕಾಮನ್ವೆಲ್ತ್ ಹಗರಣ ಹೊರಬಿದ್ದ ಕೂಡಲೇ ಕಾಂಗ್ರೆಸ್‌ನ ಸುರೇಶ್ ಕಲ್ಮಾಡಿ ರಾಜಿನಾಮೆ ನೀಡಿದ್ದರೇ? ಅಥವಾ ನೀಡಬೇಕು ಎಂದು ಯಾವ ಕಾಂಗ್ರೆಸ್ಸಿಗನಾದರೂ ಒತ್ತಾಯಿಸಿದ್ದನೇ? ಕಾಮನ್ವೆಲ್ತ್ ನಡೆದ ರಾಜಧಾನಿ ದಿಲ್ಲಿಯಲ್ಲಿ ಮೂಲ ಸೌಕರ್ಯಗಳ ಸಿದ್ಧತೆ ಹಾಗೂ ಕ್ರೀಡಾಂಗಣ ನಿರ್ಮಾಣದವರೆಗೂ ಎಲ್ಲದರಲ್ಲೂ ಅವ್ಯವಹಾರ ನಡೆದು ಇಡೀ ಜಗತ್ತಿನ ಎದುರು ತಲೆತಗ್ಗಿಸುವಂಥ ಪರಿಸ್ಥಿತಿ ಸೃಷ್ಟಿಯಾದಾಗ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ರಾಜಿನಾಮೆ ನೀಡಿದ್ದರೇ? ಕೊನೆಗೆ ನ್ಯಾಯಾಲಯ ಕಾರ್ಯಪ್ರವೃತ್ತವಾಗಿ ಕಲ್ಮಾಡಿಯವರನ್ನು ಜೈಲಿಗೆ ದಬ್ಬಿತೇ ಹೊರತು, ಕಾಂಗ್ರೆಸ್ ಅವರನ್ನು ಪಕ್ಷದಿಂದ ಹೊರಹಾಕಲಿಲ್ಲ. ಅದರ ಬೆನ್ನಲ್ಲೇ 2ಜಿ ಹಗರಣ ಬಟ್ಟಬಯಲಾದಾಗಲೂ ಕಾಂಗ್ರೆಸ್ ಎ. ರಾಜಾ ಅವರ ರಾಜಿನಾಮೆ ಪಡೆದುಕೊಂಡಿತೇ? ಸುಪ್ರೀಂ ಕೋರ್ಟ್ ಇಡೀ ತನಿಖೆಯನ್ನು ತನ್ನ ಹತೋಟಿಗೆ ತೆಗೆದುಕೊಳ್ಳದಿದ್ದರೆ ಬಹುಶಃ ರಾಜಾ ರಾಜಿನಾಮೆಯನ್ನೂ ನೀಡುತ್ತಿರಲಿಲ್ಲವೇನೋ? ಇಷ್ಟಕ್ಕೂ ಜಾಮೀನು ಮೇಲೆ ಜೈಲಿನಿಂದ ವಾಪಸ್ಸಾದ ಕೂಡಲೇ ಕಲ್ಮಾಡಿ ಹಾಗೂ ಎ. ರಾಜಾ ಅವರನ್ನು ಸಂಸದೀಯ ಸ್ಥಾಯಿ ಸಮಿತಿಯ ಸದಸ್ಯರನ್ನಾಗಿ ಮಾಡಿದ ಈ ನಾಚಿಕೆಗೇಡಿ ಕಾಂಗ್ರೆಸ್‌ಗೆ ನೈತಿಕತೆಯ ಬಗ್ಗೆ ಮಾತನಾಡುವ ಕನಿಷ್ಠ ಅರ್ಹತೆಯಾದರೂ ಇದೆಯೇ?

ಅಷ್ಟು ಮಾತ್ರವಲ್ಲ, ಸುಭಗ, ಸಾಚಾ, ಸಜ್ಜನ ಎಂದೆಲ್ಲ ಕರೆಯಿಸಿಕೊಳ್ಳುವ, ಬಿರುದು ಬಾವಲಿಗಳನ್ನು ಪಡೆದುಕೊಂಡಿರುವ ಪ್ರಧಾನಿ ಮನಮೋಹನ್ ಸಿಂಗ್ ಅವರು ನೈತಿಕತೆ ವಿಷಯದಲ್ಲಿ ಹೇಗೇಗೆ ನಡೆದುಕೊಂಡಿದ್ದಾರೆ? 1.86 ಕೋಟಿಯ ಕಲ್ಲಿದ್ದಲು ಹಗರಣ ಹೊರಬಿದ್ದಾಗ, ಆ ಹಗರಣ ಸಂಭವಿಸಿದಾಗ ಕಲ್ಲಿದ್ದಲು ಖಾತೆ ಪ್ರಧಾನಿ ಬಳಿಯೇ ಇತ್ತು ಎಂದು ಗೊತ್ತಾದ ಮೇಲೂ ಪ್ರಧಾನಿ ನೈತಿಕ ಜವಾಬ್ದಾರಿ ಹೊತ್ತು ಏಕೆ ರಾಜಿನಾಮೆ ನೀಡಲಿಲ್ಲ? ಸುಪ್ರೀಂ ಕೋರ್ಟ್ ಸುಪರ್ದಿನಡಿ ಕಲ್ಲಿದ್ದಲು ಹಗರಣದ ಬಗ್ಗೆ ನಡೆಯುತ್ತಿರುವ ಸಿಬಿಐ ತನಿಖೆಯ ಕರಡು ವರದಿಯನ್ನು ತರಿಸಿ ತಿದ್ದಿ ಕಾನೂನು ಸಚಿವ ಅಶ್ವಿನಿ ಕುಮಾರ್ ಸಿಕ್ಕಿ ಹಾಕಿಕೊಂಡಾಗ ಪ್ರಧಾನಿ ಮನಮೋಹನ್ ಸಿಂಗ್ ಅವರಿಗಾಗಲಿ, ಕಾಂಗ್ರೆಸ್ಸಿಗರಿಗಾಗಲಿ ನೈತಿಕ ಪ್ರಶ್ನೆಯ ನೆನಪಾಗಲಿಲ್ಲವೆ? ಕೊನೆಗೆ ಸುಪ್ರೀಂ ಕೋರ್ಟ್ ಟೀಕಾಪ್ರಹಾರ ಮಾಡಿ ಆಶ್ವಿನಿ ಕುಮಾರರನ್ನು ಇಳಿಸಬೇಕಾಗಿ ಬಂತಲ್ಲಾ, ಆಗ ನೈತಿಕತೆ ಎಲ್ಲಿ ಸತ್ತು ಬಿದ್ದಿತ್ತು? ಮಾಜಿ ರೇಲ್ವೆ ಸಚಿವ ಪವನ್ ಕುಮಾರ್ ಬನ್ಸಲ್ ಅವರ ಸಂಬಂಧಿ ವಿಜಯ್ ಸಿಂಗ್ ಲಂಚ ತೆಗೆದುಕೊಳ್ಳುತ್ತಿದ್ದಾಗ ಸಿಕ್ಕಿಬಿದ್ದಾಗ ಕಾಂಗ್ರೆಸ್ 15 ದಿನಗಳಾದರೂ ಬನ್ಸಲ್ ಅವರನ್ನು ಏಕೆ ಕೆಳಗಿಳಿಸಿರಲಿಲ್ಲ? ಕೊನೆಗೆ ರಾಜಿನಾಮೆ ಪಡೆದುಕೊಂಡಿದ್ದು ಸಿಬಿಐ ತನಿಖೆ ಬನ್ಸಲ್ ಕುತ್ತಿಗೆಗೆ ಸುತ್ತಿಕೊಳ್ಳುತ್ತಿದೆ ಎಂದು ಗೊತ್ತಾದಾಗಲೇ ಅಲ್ಲವೆ?

ಶ್ರೀನಿವಾಸನ್ ರಾಜಿನಾಮೆಗೆ ಒತ್ತಾಯಿಸುತ್ತಿರುವ ಕಾಂಗ್ರೆಸ್ಸಿಗರೇ, ಐಪಿಎಲ್ ಅಥವಾ ಬಿಸಿಸಿಐನಲ್ಲಿ ದಂಧೆ ನಡೆಯುತ್ತದೆ ಎನ್ನುವುದಾದರೆ ಅದರ ನೈತಿಕ ಹೊಣೆಯನ್ನೂ ನಿಮ್ಮ ಪಕ್ಷವೇ ಹೊರಬೇಕಾಗುತ್ತದೆ. ಕಳೆದ ಆರೆಂಟು ವರ್ಷಗಳಿಂದ ಬಿಸಿಸಿಐ ಹಾಗೂ ಬಹುತೇಕ ರಾಜ್ಯಗಳ ಕ್ರಿಕೆಟ್ ಸಂಸ್ಥೆಗಳನ್ನು ಆಳುತ್ತಿರುವವರು ಒಂದೋ ಕಾಂಗ್ರೆಸ್ಸಿಗರು, ಇಲ್ಲವೆ ಕಾಂಗ್ರೆಸ್‌ನ ಮಿತ್ರಪಕ್ಷಗಳು. ರಾಜಸ್ಥಾನ್ ರಾಯಲ್ಸ್‌ನ ಮೂವರು ಆಟಗಾರರು ಸ್ಪಾಟ್ ಫಿಕ್ಸಿಂಗ್‌ನಲ್ಲಿ ಸಿಕ್ಕಿಕೊಂಡಿದ್ದಾರಲ್ಲಾ, ಅದರ ಹೊಣೆಗಾರಿಕೆಯನ್ನು ಯಾರು ಹೊರಬೇಕು? ಐಪಿಎಲ್ ಕಮಿಷನರ್ ರಾಜೀವ್ ಶುಕ್ಲಾ ಯಾವ ಪಕ್ಷದ ವ್ಯಕ್ತಿ, ಹೇಳಿ ಕಾಂಗ್ರೆಸ್ಸಿಗರೇ?

ನೈತಿಕತೆ ಎನ್ನುವುದು ಅನ್ಯರಿಗೆ ಬೋಧಿಸಲು, ವೈರಿಗಳನ್ನು ಹಣಿಯಲು, ಗಮನವನ್ನು ಬೇರೆಡೆ ಸೆಳೆಯಲು ಇರುವ ತಂತ್ರವೇ?

ಖಂಡಿತ ಹೌದು! ಅಶ್ವಿನಿ ಕುಮಾರ್ ಪ್ರಕರಣದ ನಂತರ ಅಂತಿಮವಾಗಿ ಪ್ರಧಾನಿ ಮನಮೋಹನ್ ಸಿಂಗ್ ಸ್ಥಾನಕ್ಕೆ ಕುತ್ತು ಎದುರಾಗುವುದರಲ್ಲಿತ್ತು. ಈ ಮೊದಲೇ ಹೇಳಿದಂತೆ ಕಲ್ಲಿದ್ದಲು ಹಗರಣ ಸಂಭವಿಸಿದಾಗ ಆ ಖಾತೆ ಪ್ರಧಾನಿ ಬಳಿಯೇ ಇತ್ತು. ಅಂತಿಮವಾಗಿ ಹೊಣೆಗಾರಿಕೆ ಬಂದು ನಿಲ್ಲುವುದೇ ಅವರ ಬಳಿ. ಹಾಗಾಗಿ ಆಶ್ವಿನಿ ಕುಮಾರ್ ನಂತರ ಮನಮೋಹನ್ ಸಿಂಗ್ ರಾಜಿನಾಮೆಗೆ ಒತ್ತಡ ಆರಂಭವಾಗುತ್ತದೆ ಎಂಬ ಭಯ ಕಾಂಗ್ರೆಸ್‌ಗೂ ಇತ್ತು. ಪ್ರಧಾನಿಗೆ ಕುತ್ತು ಎದುರಾದರೆ ಕಾಂಗ್ರೆಸ್‌ನ ನಿಜಬಣ್ಣ ಬಯಲಾಗುತ್ತದೆ. ಮಾಧ್ಯಮಗಳ ಗಮನ ಈ ವಿಷಯಗಳ ಮೇಲೇ ಇರುತ್ತದೆ ಎಂಬ ಭಯ ಕಾಂಗ್ರೆಸ್ ಅನ್ನು ಆವರಿಸಿದ ಸಂದರ್ಭದಲ್ಲಿಯೇ, ದುರದೃಷ್ಟವಶಾತ್ ಐಪಿಎಲ್ ಹಗರಣ ಬೆಳಕಿಗೆ ಬಂದಿದೆ. ಅದನ್ನು ಸದುಪಯೋಗಪಡಿಸಿಕೊಂಡ ಕಾಂಗ್ರೆಸ್ ದೇಶದ ಗಮನವನ್ನು ಬೇರೆಡೆಗೆ ತಿರುಗಿಸಲು ಯತ್ನಿಸುತ್ತಿದೆ ಅಷ್ಟೇ. ಇಲ್ಲವಾದಲ್ಲಿ ಗುರುನಾಥ್ ಮೇಯಪ್ಪನ್ ಪಾತ್ರ ಬಯಲಾದ ಮರುದಿನವೇ ಶ್ರೀನಿವಾಸನ್ ರಾಜಿನಾಮೆ ಕೊಡಬೇಕೆಂದು ಕಮಲ್‌ನಾಥ್ ಆಕ್ರಮಣ ಆರಂಭಿಸಿದ್ದೇಕೆ? ಸಂಸದೀಯ ವ್ಯವಹಾರಗಳ ಖಾತೆ ಸಚಿವರಿಗೂ ಇದಕ್ಕೂ ಏನು ಸಂಬಂಧ? 2004ರಲ್ಲಿ ಯುಪಿಎ ಅಧ್ಯಕ್ಷ ಸ್ಥಾನ ಸೃಷ್ಟಿಸಿಕೊಂಡು ಸರ್ಕಾರವನ್ನು ಪರೋಕ್ಷವಾಗಿ ನಿಯಂತ್ರಣಕ್ಕೆ ತೆಗೆದುಕೊಂಡ ಹಾಗೂ 2006ರಲ್ಲಿ “Office of profit’  (ಲಾಭದಾಯಕ ಹುದ್ದೆ) ವಿಷಯ ರಾಜಕಾರಣಿಗಳನ್ನು ಸುತ್ತಿಕೊಳ್ಳಲು ಪ್ರಾರಂಭವಾದಾಗ ಜವಾಹರಲಾಲ್ ಮೆಮೋರಿಯಲ್ ಟ್ರಸ್ಟ್ ಹಾಗೂ ಸಂಸದ ಸ್ಥಾನ ಎರಡಕ್ಕೂ ರಾಜಿನಾಮೆ ಇತ್ತು ಮರು ಆಯ್ಕೆಯಾದ ಕೂಡಲೇ ರಾಷ್ಟ್ರೀಯ ಸಲಹಾ ಮಂಡಳಿಯ ಅಧ್ಯಕ್ಷರಾದ ಸೋನಿಯಾ ಗಾಂಧಿಯವರು ಹಾಗೂ ಅವರ ಪಕ್ಷಕ್ಕೆ Conflict of Interest  ಬಗ್ಗೆ ಎಷ್ಟು ಗೌರವವಿದೆ ಎಂಬುದು ನಮಗೆ ಗೊತ್ತಿಲ್ಲವೆ? ಹಾಗಿರುವಾಗ ಶ್ರೀನಿವಾಸನ್ ರಾಜಿನಾಮೆ ಆಂದೋಲನದ ಹಿಂದಿರುವ ಉದ್ದೇಶವೂ ಅರ್ಥವಾಗುವುದಿಲ್ಲವೆ?

ಇಷ್ಟೆಲ್ಲ ಹೇಳಿದ ನಂತರವೂ ಎನ್. ಶ್ರೀನಿವಾಸನ್ ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಬೇಕು ಎಂಬ ಬಗ್ಗೆ ಅನುಮಾನ, ತಕರಾರು ಇಲ್ಲ. ಅಳಿಯನ ದಂಧೆಯ ಬಗ್ಗೆ ಮಾವನಿಗೆ ಗೊತ್ತಿರಲಿಲ್ಲ, ಅದಕ್ಕೆ ಮಾವ ಜವಾಬ್ದಾರನಲ್ಲ ಎನ್ನಲು ಸಾಧ್ಯವಿಲ್ಲ.

ಆದರೆ…

‘ಅತ್ತೆ’ಗೊಂದು (ಸೋನಿಯಾ) ನ್ಯಾಯ, ‘ಮಾವ’ನಿಗೊಂದು (ಶ್ರೀನಿವಾಸನ್) ನ್ಯಾಯವೇಕೆ? ಇದೆಲ್ಲಕ್ಕಿಂತ ಮುಖ್ಯವಾಗಿ ಮ್ಯಾಚ್ ಫಿಕ್ಸಿಂಗ್, ಸ್ಪಾಟ್ ಫಿಕ್ಸಿಂಗ್ ಬಗ್ಗೆ ಭಾರೀ ಭಾರೀ ಮಾತನಾಡುತ್ತಿರುವ ಕಾಂಗ್ರೆಸ್ ಮ್ಯಾಚ್ ಫಿಕ್ಸಿಂಗ್ ಕಳಂಕವನ್ನು ನಮ್ಮ ದೇಶಕ್ಕಂಟಿಸಿದ ಮೊಹಮ್ಮದ್ ಅಜರುದ್ದೀನ್ ಎಂಬ ಮಹಾಶಯನಿಗೆ ಲೋಕಸಭೆ ಟಿಕೆಟ್ ಕೊಟ್ಟು ಗೆಲ್ಲಿಸಿದ್ದು ಯಾರಿಗೂ ನೆನಪಿಲ್ಲ ಅಂದುಕೊಂಡಿದ್ದಾರಾ? 1996ರಲ್ಲಿ ಮೊದಲಿಗೆ ಬುಕ್ಕಿಗಳಿಗೆ ನನ್ನನ್ನು ಪರಿಚಯ ಮಾಡಿಕೊಟ್ಟಿದ್ದೇ ಅಜರುದ್ದೀನ್ ಎಂದು  ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಹ್ಯಾನ್ಸಿ ಕ್ರೋನಿಯೆ ಹೇಳಿದ್ದು ಹಾಗೂ ಮ್ಯಾಚ್ ಫಿಕ್ಸಿಂಗ್‌ಗಾಗಿ ಅಜರುದ್ದೀನ್ ಜೀವಮಾನದ ನಿಷೇಧಕ್ಕೊಳಗಾಗಿದ್ದು ಏನನ್ನು ಸೂಚಿಸುತ್ತದೆ? ಇಂತಹ ವ್ಯಕ್ತಿಗೆ ಟಿಕೆಟ್ ನೀಡಿದ, ಸಂಸತ್ತಿಗೆ ತಂದು ಪ್ರತಿಷ್ಠಾಪಿಸಿದ ಕಾಂಗ್ರೆಸ್‌ಗೆ ಶ್ರೀನಿವಾಸನ್ ರಾಜೀನಾಮೆ ಕೇಳುವ ಯಾವ ನೈತಿಕ ಹಕ್ಕಿದೆ ಹೇಳಿ? ಜತೆಗೆ ರಾಡಿಯಾ ಟೇಪ್ ಹಗರಣ ಹೊರಬಿದ್ದಾಗ ತಮ್ಮ ಸಂಸ್ಥೆಗಳ ಕಳಂಕಿತ ಪತ್ರಕರ್ತರನ್ನು ಹೊರದಬ್ಬದೆ ರಕ್ಷಿಸಿಕೊಂಡ ಇಂಗ್ಲಿಷ್ ಚಾನೆಲ್‌ಗಳೂ ನೈತಿಕತೆ ಆಧಾರದ ಶ್ರೀನಿವಾಸನ್ ರಾಜಿನಾಮೆಗೆ ಒತ್ತಾಯಿಸುವ ಜತೆ ಜತೆಗೇ ತಮ್ಮ ಆತ್ಮಾವಲೋಕನವನ್ನೂ ಮಾಡಿಕೊಳ್ಳಬೇಕು, ಅಲ್ಲವೇ?

20 Responses to “‘ಅತ್ತೆ’ಗೊಂದು ನ್ಯಾಯ, ‘ಮಾವ’ನಿಗೊಂದು ನ್ಯಾಯವೇ?!”

  1. Kalavathi says:

    Dear Pratap Simha,

    Its been a great pleasure to read your articles. But recent articles are not to the expectations. But still a ray of hope that you will never loose that sharpness and focus. I admire for your straightforwardness, and feel proud of your pro Indian, pro Hindutva articles because in recent times the Congress has made us feel insecure. But your articles gives us a kind of proudness and make us feel proud.
    Kindly carry on this work. PLz

  2. vinay says:

    adbhta article sir,

  3. rajesh says:

    good one pratap

  4. Chenna says:

    Vinash Kale Viprit Buddhi….!

  5. Navya says:

    superb but is there any effect on dirty politicians ?

  6. Mahadeva prasad.s says:

    Great made us easy to read great articles.

  7. roopa hegde says:

    yes yes

  8. Sachin Shetty says:

    Good one….similar article was wriiten by S.Gurumurthy in Indian express dated 30th may 2013

  9. ಕಲ್ಲಿದ್ದಲು ಹಗರಣ 1.86 ಲಕ್ಷ ಕೋಟಿ 2G ಹಗರಣ ಕ್ಕಿಂತ ಜಾಸ್ತಿ.
    ಆದರೆ ಈ ಐ ಪಿ ಎಲ್ ಫಿಕ್ಸಿಂಗ್ ವಿಚಾರದಲ್ಲಿ ಭಾ.ಜ.ಪಾ. ಸಹ ಮೌನವಾಗಿದೆ. ಅರುಣ್ ಜೈಟ್ಲಿ ಯವರೂ ಕೂಡ ಕ್ರಿಕೆಟ್ ಬೋರ್ಡ್ ನ ಸದಸ್ಯರು. ಒಟ್ಟಿನಲ್ಲಿ ತಮ್ಮ ರಾಜಕೀಯದ ಬೇಳೆ ಬೇಯಿಸಿಕೊಳ್ಳಲು ಎಲ್ಲರೂ ಪ್ರಯತ್ನ ಮಾಡ್ತಾ ಇದ್ದಾರೆ. ಮೂರ್ಖ ಜನರು ಇನ್ನು ಕೂಡ ಐ.ಪಿ.ಎಲ್. ನಲ್ಲಿ ಆಸಕ್ತಿ ಇಟ್ಕೊಂಡಿದಾರೆ. ಕ್ರಿಕೆಟ್ ನ ಬಗ್ಗೆ ಇನ್ನು ಸಹ ಅದೇ ಅಂಧ ಅಭಿಮಾನ ಇದೆ. ಇವುಗಳನ್ನೇ ರಾಜಕೀಯ ಪಕ್ಷಗಳು, ಇಂಗ್ಲಿಷ್ ಚಾನೆಲ್ ಗಳು ತಮ್ಮ ಸ್ವಾರ್ಥಕ್ಕೆ ಉಪಯೋಗಿಸುತ್ತಾ ಬಂದಿದೆ. ಇಂಗ್ಲಿಷ್ ಚಾನೆಲ್ ಗಳ “ಹೋರಾಟ” ದಿಂದ ಕ್ರಿಕೆಟ್ ಶುದ್ಧೀಕರಣ ಆಗುತ್ತದೆ ಅನ್ನೋದು ಹಗಲು ಕನಸು. ಜನ ಎಚ್ಚೆತ್ತು ಕೊಂಡು ನೈಜತೆಯನ್ನು ಅರಿತು ಐ.ಪಿ.ಎಲ್ ಗೆ ಬಹಿಷ್ಕಾರ ಹಾಕಿ ಕ್ರಿಕೆಟ್ ಅನ್ನು ಬಿಟ್ಟು ಬೇರೆ ಕ್ರೀಡೆಗಳತ್ತ ತಮ್ಮ ಆಸಕ್ತಿಯನ್ನು ಹರಿಯ ಬಿಟ್ಟಲ್ಲಿ ದೇಶದ ಕ್ರೀಡೆಗಳು ಮುಂದೆ ಬಂದು ದೇಶದ ಮಾನ ಕಾಪಾಡಲು ಸಾಧ್ಯ.

  10. Manju says:

    Anna nivu katu Satyevannaa nimma harithavaada Baravanegala moolaka heege nammaa Yechharisuttiri ,katu satyaa ellaa bharathiyerigu tiliyeli.. We missing this topic on Tv channel debate ..Thank you bro keep going

  11. nataraj says:

    Dear Sir,

    Exactly, what u r saying is rit.

    Thanks
    Nataraj

  12. Naveen says:

    Ha.. Ha.. Heege maatanaduva neevu maneya mooleyalli kootu type maduvudeke?
    Banni.. Ellarigu Satyada arivu moodisona.. Neevu BJP maneyavare? Avarenu tappu maadillave? Samarthisi.

  13. Naveen says:

    According to me we have to remove this Politics system from root. Particularly Making money for him, his son, grand son, grand grand son..

  14. ವಿಶ್ವನಾಥ್ says:

    ನೀವ್ ಹೇಳೋದು ಸತ್ಯವೇ ಸರ್. ಆದ್ರೆ ಈ ದೇಶದಲ್ಲಿ ಎಲ್ಲವೂ ಮಾರಾಟಕ್ಕಿದೆ. ಹೀಗಾಗಿ ಇಂಥ ಅವ್ಯವಹಾರ ನಡೆಯುತ್ತಲೇ ಇರುತ್ತದೆ. ನ್ಯಾಯಾಲಯಗಳು ತೀರ್ಪು ನೀಡೋದು ತಡವಾಗುತ್ತಿರುವುದೇ ಇದಕ್ಕೆಲ್ಲ ಕಾರಣ. ಕನಿಷ್ಠ ತಪ್ಪು ಮಾಡಿದ ಹಣವುಳ್ಳ ಒಬ್ಬನೇ ಒಬ್ಬ ವ್ಯಕ್ತಿಗೆ ಶಿಕ್ಷೆ ಯಾದರೂ ಸಾಕು ನೂರು ಜನ ತಾನೇ ತಾನಾಗಿ ಎಚ್ಚೆತ್ತುಕೊಳ್ಳುತ್ತಾರೆ. ಆದರೆ ಹಾಗಾಗುತ್ತಿಲ್ಲ. ನ್ಯಾಯವನ್ನೂ “ಸಕಾಲ” ವ್ಯಾಪ್ತಿಗೆ ತಂದರೆ ಇದಕ್ಕೆ ಪರಿಹಾರ ಸಿಗಬಹುದೇನೋ…..

  15. manjunath pyati says:

    ಸರಿಯಾಗಿ ಹೋಲಿಕೆ ಇದೆ ಸರ್ ಕಾಲಕ್ಕೆ ತಕ್ಕ ಹಾಗೆ ಬರೆಯುವ ನಿಮ್ಮ ಬರವಣೆಗೆ ಹಿಂದನ ಘಟನೆಗಳನ್ನು ನೆನಪಿಸುವುದರೊಂದಿಗೆ ಮನವರಿಕೆ ಮಾಡಿಕೊಡುತ್ತವೆ .

  16. shivanand madival says:

    hello sir,

    how r u?
    your are a geanous, sir…

  17. Murali says:

    Ha ha you are silly Pratapa.. Try to be more practical.
    Karnataka people can’t read your articles anymore.

  18. Sumanta says:

    Pratap,

    I guess you were waiting for this situation:)
    Enjoy madi..Yeh this article seems to be for guys who are just passed out of college.

    With regards,
    Sumanta

  19. Siddalingaswamy H E says:

    ಉತ್ತಮ ಲೇಖನ. ದನ್ಯವಾದಗಳು ಪ್ರತಾಪ್ ಸರ್.