Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ನಾವು ಅಟಲ್್ಗೇಕೆ ಆಭಾರಿಯಾಗಿರಬೇಕು ಗೊತ್ತಾ?

ನಾವು ಅಟಲ್್ಗೇಕೆ ಆಭಾರಿಯಾಗಿರಬೇಕು ಗೊತ್ತಾ?

ಇನ್ನು ಐವತ್ತು ವರ್ಷಗಳ ನಂತರ ಇತಿಹಾಸಕಾರರು ಆಧುನಿಕ ಭಾರತದ ನಿರ್ಮಾತೃಗಳಾರು ಎಂಬ ಪ್ರಶ್ನೆಯನ್ನಿಟ್ಟುಕೊಂಡು ತುಲನೆ ಮಾಡಿದರೆ ನಮ್ಮ ಕಾಲದ ಇಬ್ಬರು ವ್ಯಕ್ತಿಗಳು ಬಹಳ ಪ್ರಮುಖವಾಗಿ ಕಾಣಿಸಿಕೊಳ್ಳುತ್ತಾರೆ. ಒಂದು ಪಿ.ವಿ. ನರಸಿಂಹರಾವ್ ಹಾಗೂ ಮತ್ತೊಬ್ಬರು ಅಟಲ್ ಬಿಹಾರಿ ವಾಜಪೇಯಿ. ಒಂದು ವೇಳೆ ನ್ಯಾಯ ಸಂದಿದ್ದೇ ಆದರೆ ಆ ವೇಳೆಗೆ ಇವರಿಬ್ಬರಿಗೂ ‘ಭಾರತರತ್ನ’ ನೀಡಿ ಈ ದೇಶ ಸಮ್ಮಾನಿಸಿರುತ್ತದೆ.

ಹಾಗೆಂದು ಬರೆಯಲಾಗಿದೆ, ಕಳೆದ ವಾರ ಇದೇ ಅಂಕಣದಲ್ಲಿ ಉಲ್ಲೇಖಿಸಲಾಗಿದ್ದ “A forgotten Revolutionary’ ಲೇಖನದಲ್ಲಿ!

ಈ ಮಾತು ನಿಮಗೆ ಅತಿಶಯೋಕ್ತಿ ಅಥವಾ ಉತ್ಪ್ರೇಕ್ಷೆ ಎನಿಸುತ್ತಿದೆಯೇ? ಕಳೆದ ವಾರ ‘ರಾಯರ’ ಮಹಿಮೆಯ ಬಗ್ಗೆ ಬೆಳಕು ಚೆಲ್ಲಲಾಗಿದೆ, ಈಗ ಅಟಲ್ ಬಗ್ಗೆ. ಹೌದು, ಅಟಲ್ ಬಿಹಾರಿ ವಾಜಪೇಯಿ ನಿಜಕ್ಕೂ ಭಾರತರತ್ನಕ್ಕೆ ಅರ್ಹರೆ? ಅವರು ಈ ದೇಶಕ್ಕೆ ನೀಡಿದ ಕೊಡುಗೆಯಾದರೂ ಏನು? ಈ ಮಧ್ಯೆ, ‘ಗಾಂಧಿ ನಂತರ ಈ ದೇಶ ಕಂಡ ಮಹಾನ್ ವ್ಯಕ್ತಿ ಯಾರು?’ ಎಂಬ ಪ್ರಶ್ನೆಯನ್ನಿಟ್ಟುಕೊಂಡು ದೇಶಾದ್ಯಂತ ಸಮೀಕ್ಷೆಯೊಂದು ನಡೆಯುತ್ತಿದ್ದು, ಅದರಲ್ಲಿ ಅಟಲ್ ಬಿಹಾರಿ  ವಾಜಪೇಯಿಯವರ ಹೆಸರೂ ಇದೆ. ಹಾಗಾದರೆ ಅಟಲ್ ಈ ದೇಶದ ನಿರ್ಮಾತೃಗಳಲ್ಲಿ ಒಬ್ಬರಾ?

Grand Trunk Road!

ಅಮೆರಿಕದ ಹೆದ್ದಾರಿಗಳನ್ನು ‘ಫ್ರೀ ವೇಸ್್’ ಎನ್ನುತ್ತಾರೆ, ಜರ್ಮನಿಯ ಹೆದ್ದಾರಿಗಳನ್ನು ‘ಅಟೋಬಾನ್ಸ್್’ ಎಂದು ಕರೆಯುತ್ತಾರೆ, ಇಟಲಿಯ ಹೆದ್ದಾರಿಗಳಿಗೆ ‘ಅಟೋಸ್ಟ್ರೆಡ್ಸ್್’ ಎನ್ನಲಾಗುತ್ತದೆ, ಹಾಗಾದರೆ ಭಾರತದ ಹೆದ್ದಾರಿಗಳನ್ನು ಏನೆಂದು ಕರೆಯುತ್ತಾರೆ? ಇಂಥದ್ದೊಂದು ಪ್ರಶ್ನೆಯನ್ನು ನಾವು ಶಾಲೆಯಲ್ಲಿದ್ದಾಗ ‘ಕ್ವಿಝ್್’ ಕಾಂಪಿಟಿಷನ್ಸ್್ನಲ್ಲಿ ಕೇಳುತ್ತಿದ್ದರು. ಆಗ ‘ಗ್ರಾಂಡ್ ಟ್ರಂಕ್ ರೋಡ್್’ ಎಂದು ಉತ್ತರಿಸುತ್ತಿದ್ದೆವು. ಆದರೆ ಈ ಗ್ರಾಂಡ್ ಟ್ರಂಕ್ ರೋಡ್ ಯಾವುದು, ಯಾರು, ಯಾವ ಕಾಲದಲ್ಲಿ ನಿರ್ಮಿಸಿದ್ದು ಎಂದು ಕೇಳಿದರೆ ಇಡೀ ದೇಶವೇ ತಲೆತಗ್ಗಿಸಬೇಕಾಗಿತ್ತು. ಇಷ್ಟಕ್ಕೂ ಈ ರಸ್ತೆಯನ್ನು ನಿರ್ಮಾಣ ಮಾಡಿದ್ದು ಶೇರ್ ಶಾ ಸೂರಿ, ಅದೂ 16ನೇ ಶತಮಾನದಲ್ಲಿ. ಹಾಗಿರುವಾಗ ಎತ್ತಿನ ಬಂಡಿಗಳು ನಮ್ಮ ರಸ್ತೆಯನ್ನು ಆಳುತ್ತಿದ್ದ ಕಾಲಘಟ್ಟದ ಅದನ್ನು ಯಾವ ಮಾನದಂಡದ ಮೂಲಕ ಹೆದ್ದಾರಿ ಎಂದು ಹೇಳಲು ಸಾಧ್ಯವಿತ್ತು ಹೇಳಿ? 1947ರಲ್ಲಿ ಸ್ವಾತಂತ್ರ್ಯ ಬಂದ ನಂತರವೂ ಪರಿಸ್ಥಿತಿ ಬದಲಾಗಲಿಲ್ಲ. ಆ ನಮ್ಮ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಮಹಾಶಯರು 16 ವರ್ಷ ದೇಶವನ್ನಾಳಿದರೂ, ಅವರ ಮಗಳು ಇಂದಿರಾ ಗಾಂಧಿ 15 ವರ್ಷ ಪ್ರಧಾನಿ ಗದ್ದುಗೆಯಲ್ಲಿ ಮೆರೆದರೂ ಭಾರತದ ರಸ್ತೆಗಳು ಬದಲಾಗಲಿಲ್ಲ. 1998ರಲ್ಲಿ ಅಂದರೆ ಸ್ವಾತಂತ್ರ್ಯ ಬಂದು 50 ವರ್ಷಗಳು ಕಳೆದ ನಂತರವೂ ಭಾರತದಲ್ಲಿದ್ದ ಚತುಷ್ಪಥ ಅಥವಾ Four-lane ಹೆದ್ದಾರಿಯ ಉದ್ದವೆಷ್ಟೆಂದರೆ ಕೇವಲ 334 ಕಿ. ಮೀಟರ್ ಎಂದರೆ ನಂಬುತ್ತೀರಾ? ಭಾರತದ ಸಂಪತ್ತನ್ನು ಸಾಗಿಸಲು ಹಾಗೂ ವ್ಯಾಪಾರ ವಹಿವಾಟಿಗೆ ಅಗತ್ಯವೆಂದು ಭಾವಿಸಿ ಶೇರ್ ಶಾ ಸೂರಿ ನಿರ್ಮಿಸಿದ ಗ್ರಾಂಡ್ ಟ್ರಂಕ್, ಅದೇ ಕಾರಣಕ್ಕಾಗಿ ಬ್ರಿಟಿಷರು ಹಾಕಿದ ರೈಲು ಹಳಿಗಳನ್ನು ಬಿಟ್ಟರೆ ಈ ದೇಶದ ಸರ್ವತೋಮುಖ ಅಭಿವೃದ್ಧಿಗೆ ಸುಸಜ್ಜಿತ ರಸ್ತೆಗಳ ನಿರ್ಮಾಣದ ಅಗತ್ಯವಿದೆ ಎಂದು ಯಾರಿಗೂ ಏಕೆ ಅನಿಸಲಿಲ್ಲ? ಇಂಥದ್ದೊಂದು ಹೀನಾಯ ಪರಿಸ್ಥಿತಿ ಕೇವಲ ಕಳೆದ 14 ವರ್ಷಗಳಲ್ಲಿಯೇ ಬದಲಾಗಿದ್ದು ಹೇಗೆ?

ಭಾರತದ ರಸ್ತೆಗಳನ್ನು ಬದಲಾಯಿಸಿದ ಮಹಾನ್ ವ್ಯಕ್ತಿ ಯಾರು?

ಅಟಲ್ ಬಿಹಾರಿ ವಾಜಪೇಯಿ! ಆ ಬಗ್ಗೆ ಅನುಮಾನವೇ ಬೇಡ. ಆರ್ಯನ್ನರ ವಲಸೆ, ಮೊಘಲರ ಆಕ್ರಮಣ ಮತ್ತು ದರ್ಬಾರು, ಬ್ರಿಟಿಷರ ಸಾಮ್ರಾಜ್ಯಶಾಹಿತ್ವ ಇವೆಲ್ಲವೂ ಭಾರತದ ನಾಗರಿಕತೆಯ ವಿಕಾಸಕ್ಕೆ ಕಾರಣವಾದರೂ ಅಟಲ್ ಪ್ರಭಾವ ಅಮೋಘ ಬದಲಾವಣೆಗೆ ನಾಂದಿಯಾಯಿತು. 1998ರಲ್ಲಿ ಅಟಲ್ ಅಧಿಕಾರಕ್ಕೆ ಬಂದ ಕೂಡಲೇ ಮಾಡಿದ ಮೊದಲ ಕೆಲಸವೆಂದರೆ ಅಣು ಪರೀಕ್ಷೆಗೆ ಆದೇಶ. ಅದಕ್ಕೂ ಮೊದಲಿದ್ದ ಪರಿಸ್ಥಿತಿಯನ್ನು ನೆನಪಿಸಿಕೊಳ್ಳಿ. 1962ರಲ್ಲಿ ಚೀನಾದ ಎದುರು ನಾವು ಹೀನಾಯವಾಗಿ ಸೋಲು ಅನುಭವಿಸಿ ಆತ್ಮಸ್ಥೈರ್ಯವನ್ನೇ ಕಳೆದುಕೊಂಡಿದ್ದೆವು. ಆ ಮುಖಭಂಗದ ನಂತರ ಜಗತ್ತಿನ ಎದುರು ಎದೆ ಸೆಟೆಸಿ ನಿಲ್ಲುವ ತಾಕತ್ತೇ ನಮ್ಮಿಂದ ದೂರವಾಗಿತ್ತು. ಆದರೆ 1998, ಮೇ 11ರಂದು ಅಟಲ್ ನಡೆಸಿದ ಅಣುಪರೀಕ್ಷೆ ಇಡೀ ದೇಶವೇ ಬೀದಿಗಿಳಿದು ಪಟಾಕಿ ಸಿಡಿಸಿ ನವೋತ್ಸಾಹ ಬೀರುವಂತೆ ಮಾಡಿತು. ಯಾವ ಆರ್ಥಿಕ ದಿಗ್ಬಂಧನೆಗೂ ಅಟಲ್ ಸೊಪ್ಪುಹಾಕಲಿಲ್ಲ. 1974ರಲ್ಲೇ ನಾವು ಅಣುಪರೀಕ್ಷೆ ನಡೆಸಿದ್ದರೂ ಅದರ ಯೋಗ್ಯಾಯೋಗ್ಯತೆ ಬಗ್ಗೆ ಅನುಮಾನಗಳಿದ್ದವು. ಆದರೆ 1998ರ ಪರೀಕ್ಷೆ ಭಾರತ ಕೂಡ ಒಂದು ಕ್ರೆಡಿಬಲ್ ನ್ಯೂಕ್ಲಿಯರ್ ಪವರ್ ಎಂಬುದನ್ನು ನಿರೂಪಿಸಿತು. ಲಾಲ್ ಬಹದ್ದೂರ್ ಶಾಸ್ತ್ರಿಯವರ, ‘ಜೈ ಜವಾನ್, ಜೈ ಕಿಸಾನ್್’ಗೆ ಅಟಲ್ ‘ಜೈ ವಿಜ್ಞಾನ್್’ ಸೇರಿಸಿದರು. ಈ ದೇಶ ಅಭಿವೃದ್ಧಿ ಕಾಣಬೇಕಾದರೆ ವಿಜ್ಞಾನಕ್ಕೆ ಮೊದಲ ಆದ್ಯತೆ ನೀಡಬೇಕೆಂಬುದನ್ನು ಮನದಟ್ಟು ಮಾಡಿಕೊಟ್ಟರು. ಹಾಗಂತ ಅಟಲ್ ಬಡಾಯಿ ಕೊಚ್ಚಿಕೊಳ್ಳುವುದರಲ್ಲೇ ಕಾಲಹರಣ ಮಾಡಲಿಲ್ಲ. 1999ರಲ್ಲಿ ದೇಶದ 4 ಮಹಾನಗರಗಳಾದ ದೆಹಲಿ, ಮುಂಬೈ, ಕೋಲ್ಕತಾ ಹಾಗೂ ಚೆನ್ನೈ ಹೀಗೆ ದೇಶದ ನಾಲ್ಕೂ ಮೂಲೆಗಳಿಗೆ ಸಂಪರ್ಕ ಕಲ್ಪಿಸುವಂಥ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಮುಂದಾದರು. ಒಂದು ದೇಶ ಬದಲಾಗುತ್ತಿದೆ, ಅಭಿವೃದ್ಧಿ ಹೊಂದುತ್ತಿದೆ ಎಂದು ಬಹಳ ವಿಸಿಬಲ್ ಆಗಿ ಕಾಣುವುದೇ ರಸ್ತೆಗಳಲ್ಲಿ.

ಅದಕ್ಕಾಗಿಯೇ ನಾಲ್ಕು ಹಾಗೂ 6 ಪಥಗಳನ್ನು ಹೊಂದಿರುವ “Golden Quadrilateral’ ಅಥವಾ ಸುವರ್ಣ ಚತುಷ್ಪಥದ ನೀಲನಕ್ಷೆ ರೂಪಿಸಿದರು!

ಅದು 13 ರಾಜ್ಯಗಳ ಮೂಲಕ ಹಾದುಹೋಗುವ, ದೇಶದ 75 ಪ್ರಮುಖ ನಗರಗಳನ್ನು ಸ್ಪರ್ಶಿಸುವ 5,846 ಕಿ. ಮೀಟರ್ ಹೆದ್ದಾರಿಯಾಗಿತ್ತು. ದಯವಿಟ್ಟು ನೆನಪಿಡಿ, ಸ್ವಾತಂತ್ರ್ಯ ಬಂದ ನಂತರದ 50 ವರ್ಷಗಳಲ್ಲಿ ನಿರ್ಮಾಣವಾಗಿದ್ದು ಕೇವಲ 334 ಕಿ. ಮೀಟರ್, ಅಟಲ್ ಕೇವಲ 4 ವರ್ಷಗಳಲ್ಲಿ ಅಂದರೆ 2003 ಡಿಸೆಂಬರ್್ನೊಳಗೆ ಪೂರ್ಣಗೊಳಿಸಲು ಹೊರಟಿದ್ದು 5,846 ಕಿ. ಮೀಟರ್ ಹೆದ್ದಾರಿ!! ಅದಕ್ಕಾಗಿ ಅಧಿಕಾರಶಾಹಿಗಳ ಜಂಜಾಟವೇ ಇಲ್ಲದ ಹೊಸ ವ್ಯವಸ್ಥೆಯನ್ನೇ ರೂಪಿಸಿದರು, ತ್ವರಿತವಾಗಿ ಭೂ ಸ್ವಾಧೀನ ನಡೆಯಿತು. ಅದರ ಹೊಣೆಗಾರಿಕೆಯನ್ನು ಸಾರಿಗೆ ಸಚಿವರಾಗಿದ್ದ ತಮ್ಮ ಆಪ್ತ ಸ್ನೇಹಿತ ಹಾಗೂ ಮಾಜಿ ಮೇಜರ್ ಜನರಲ್ ಬಿ.ಸಿ. ಖಂಡೂರಿಯವರಿಗೆ ವಹಿಸಿದರು. ಇಷ್ಟೊಂದು ವ್ಯಾಪ್ತಿಯ ಹೆದ್ದಾರಿಯನ್ನು ಕೇವಲ 4 ವರ್ಷಗಳೊಳಗೆ ಪೂರ್ಣಗೊಳಿಸುವ ಸಲುವಾಗಿ ತುಂಡುಗುತ್ತಿಗೆ ನೀಡಿದರು, ‘ನೀವು ದುಡ್ಡೊಂದನ್ನೇ ಮಾಡುತ್ತಿಲ್ಲ, ರಾಷ್ಟ್ರ ನಿರ್ಮಾಣ ಕಾರ್ಯವನ್ನೂ ಮಾಡುತ್ತಿದ್ದೀರಿ’ (You are not only making money, you are building a nation) ಎಂಬುದನ್ನು ಮರೆಯಬೇಡಿ ಎಂದು ಕಾಂಟ್ರ್ಯಾಕ್ಟರ್್ಗಳಿಗೆ ಕಿವಿಮಾತು ಹೇಳುವ ಮೂಲಕ ಹೊಣೆಗಾರಿಕೆಯನ್ನು ತುಂಬಲು ಯತ್ನಿಸಿದರು, ಪರೋಕ್ಷ ಎಚ್ಚರಿಕೆಯೂ ಅದರಲ್ಲಿತ್ತು. ಈ ಹೆದ್ದಾರಿಯ ಒಟ್ಟು ವೆಚ್ಚವನ್ನು 60 ಸಾವಿರ ಕೋಟಿ ಎಂದು ಅಂದಾಜು ಮಾಡಲಾಯಿತು. ಆದರೆ ಅದು 2011ರಲ್ಲಿ ಪೂರ್ಣಗೊಂಡಾಗ ಖರ್ಚಾಗಿದ್ದಿದ್ದು 30,858 ಕೋಟಿ ಮಾತ್ರ! ಅಟಲ್ ಅಂದುಕೊಂಡಂತೆ 2003 ಡಿಸೆಂಬರ್್ನೊಳಗೆ ಅದನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ, ಭೂಸ್ವಾಧೀನ ವಿಚಾರದಲ್ಲಿ ಕೆಲವು ರಾಜ್ಯಗಳಲ್ಲಿ ಉಂಟಾದ ತೀವ್ರ ಅಡಚಣೆ, ರೈತರ ವಿರೋಧ, ಕಾಮಗಾರಿಗೆ ಅಡ್ಡಿಯ ಕಾರಣ ಅವಧಿಯನ್ನು ಒಂದು ವರ್ಷ ವಿಸ್ತರಿಸಲಾಯಿತು. 2004 ಮೇನಲ್ಲಿ ಅಟಲ್ ಸರ್ಕಾರ ಪತನಗೊಳ್ಳುವ ವೇಳೆಗೆ ಹೆದ್ದಾರಿ ನಿರ್ಮಾಣ ಶೇ. 75ಕ್ಕೂ ಹೆಚ್ಚು ಪೂರ್ಣಗೊಂಡಿತ್ತು. ಆದರೆ ಅಧಿಕಾರಕ್ಕೇರಿದ  ಕಾಂಗ್ರೆಸ್ ಹೆಗ್ಗಳಿಕೆ ಅಟಲ್್ಗೆ ಸಲ್ಲುತ್ತದೆಂಬ ಸಣ್ಣತನ ತೋರಿ ಕಾಮಗಾರಿಯನ್ನೇ ಸ್ಥಗಿತಗೊಳಿಸಿದ ಕಾರಣ 2011ರವರೆಗೂ ಜಗ್ಗುವಂತಾಯಿತು. ಇದೇನೇ ಇರಲಿ, ಹೆದ್ದಾರಿಗಳು ಮಾತ್ರವಲ್ಲ, ಗ್ರಾಮಗಳತ್ತಲೂ ಅಟಲ್ ಮುಖ ಮಾಡಿದರು. ಅವರು ಜಾರಿಗೆ ತಂದ ಪ್ರಧಾನ್್ಮಂತ್ರಿ ಗ್ರಾಮ್ ಸಡಕ್ ಯೋಜನೆ ದೇಶದ ಮೂಲೆ ಮೂಲೆಯ ಹಳ್ಳಿ ಹಳ್ಳಿಗಳ ರಸ್ತೆಗಳನ್ನು ಬದಲಿಸಿಬಿಟ್ಟಿತು. ಪಾಶ್ಚಿಮಾತ್ಯರಲ್ಲಿ ‘ಖ್ಝಿಟಜ ಜಠ್ಡಿಛಟಡ ಟ್ಟಟಿಜಣ’ ಎಂಬ ಮಾತಿದೆ. ಅದನ್ನು ಭಾರತದಲ್ಲಿ ಮನಗಂಡವರು ಮತ್ತು ರಸ್ತೆ ನಿರ್ಮಾಣದ ಮೂಲಕ ಅದನ್ನು ವಾಸ್ತವದಲ್ಲಿ ಚಾಲ್ತಿಗೆ ತಂದವರು ಅಟಲ್ ಹಾಗೂ ಅಟಲ್ ಮಾತ್ರ. ರಸ್ತೆ, ಹೆದ್ದಾರಿ ನಿರ್ಮಾಣದಿಂದ ಸರಕು ಸಾಗಣೆ, ವ್ಯಾಪಾರ ವಹಿವಾಟು ಚುರುಕುಗೊಂಡಿತು, ಹೆದ್ದಾರಿ ಬದಿಯಲ್ಲಿ ಹೋಟೆಲ್ ಉದ್ಯಮ ಕೂಡ ಬೆಳೆಯಿತು, ಭೂಮಿಗೂ ಬೆಲೆ ಬಂತು, ಮಹಾನಗರಗಳ ಹೊರವಲಯದಲ್ಲಿ ಸುಸಜ್ಜಿತ ಉಪನಗರಗಳು ನಿರ್ಮಾಣಗೊಂಡವು. ಅದರಿಂದ ಸಾಫ್ಟ್್ವೇರ್ ಹಾಗೂ ಸರ್ವಿಸ್ ಇಂಡಸ್ಟ್ರಿಗೂ ಉತ್ತೇಜನ ದೊರೆಯಿತು.

ಇದರ ನಡುನಡುವೆಯೇ ಅಟಲ್ ತಲೆಯಲ್ಲಿ ಹೊಸದೊಂದು ಯೋಜನೆ ರೂಪ ಪಡೆಯುತ್ತಿತ್ತು!

ಅದೇ ರಾಷ್ಟ್ರೀಯ ನದಿ ಜೋಡಣೆ ಯೋಜನೆ (NRLPU). ಹಿಮಾಲಯದ ವ್ಯಾಪ್ತಿಯಿಂದ ಹುಟ್ಟಿ ಬರುವ ಉತ್ತರ ಭಾರತದ 14 ನದಿಗಳನ್ನು ಕೊಲ್ಲಿ ಸೇರುವ ದಕ್ಷಿಣ ಭಾರತದ 16 ನದಿಗಳೊಂದಿಗೆ ಸೇರಿಸುವ ಯೋಜನೆ ಅದಾಗಿತ್ತು!! ಅದಕ್ಕೆ ತಗುಲುವ ವೆಚ್ಚ 5 ಲಕ್ಷ ಕೋಟಿ ಎಂದು ಅಂದಾಜು ಮಾಡಲಾಯಿತು. 2002ರಲ್ಲಿ ಇಂಥದ್ದೊಂದು ಯೋಜನೆಯ ಪ್ರಸ್ತಾಪವನ್ನಿಟ್ಟ ಅಟಲ್, ಬಿಜೆಪಿ, ಕಾಂಗ್ರೆಸ್, ಶಿವಸೇನೆ, ಟಿಡಿಪಿ ಎಲ್ಲ ಪಕ್ಷಗಳ ಮುಖ್ಯಮಂತ್ರಿಗಳನ್ನೂ ಒಂದೆಡೆ ಸೇರಿಸಿ ಒಪ್ಪಿಗೆ ಪಡೆದುಕೊಂಡರು. ಅದರ ಅನುಷ್ಠಾನದ ಉಸ್ತುವಾರಿಯನ್ನು ಸುರೇಶ್ ಪ್ರಭು ಅವರಿಗೆ ವಹಿಸಿದರು. 2004ರಲ್ಲಿ ಯೋಜನೆಯ ಆರಂಭ ಹಾಗೂ 2016ರಲ್ಲಿ ಪೂರ್ಣ ಎಂದು ಸಮಯವನ್ನೂ ನಿಗದಿ ಮಾಡಿದರು. ಆದರೆ 2004ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್, ಈ ಮಹಾತ್ವಾಕಾಂಕ್ಷಿ ಯೋಜನೆಯ ಕತ್ತನ್ನೇ ಹಿಸುಕಿತು. ಈ ವಿಚಾರ ಸುಪ್ರೀಂ ಕೋರ್ಟ್್ನ ಗಮನಕ್ಕೆ ಬಂತು. ಮನಮೋಹನ್ ಸರ್ಕಾರದ ಧೂರ್ತತೆಯ ಬಗ್ಗೆ ಕುಪಿತಗೊಂಡ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎಚ್. ಕಪಾಡಿಯಾ ನೇತೃತ್ವದ ತ್ರಿಸದಸ್ಯ ಪೀಠ 2012, ಫೆಬ್ರವರಿ 27ರಂದು ನೀಡಿದ ತೀರ್ಪಿನಲ್ಲಿ 2016ರೊಳಗೆ ಯೋಜನೆಯನ್ನು ಅನುಷ್ಠಾನಗೊಳಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಕಟ್ಟುನಿಟ್ಟಾದ ಸೂಚನೆ ನೀಡಿದೆ. ಜತೆಗೆ ಉನ್ನತ ಮಟ್ಟದ ಸಮಿತಿಯನ್ನೂ ರಚಿಸಿದೆ. ಒಂದು ವೇಳೆ ಅಟಲ್ ಕನಸಿನ ಈ ಯೋಜನೆ ಅನುಷ್ಠಾನಗೊಂಡರೆ ಈ ದೇಶದ ಶೇ. 80ರಷ್ಟು ನೀರಾವರಿ ಸಮಸ್ಯೆ ಶಾಶ್ವತವಾಗಿ ಪರಿಹಾರವಾಗುತ್ತದೆ. ನಮ್ಮ ಉತ್ತರ ಕರ್ನಾಟಕ ಹಸಿರಾಗುತ್ತದೆ, ಕಾವೇರಿ ವಿವಾದ ಬಗೆಹರಿಯುತ್ತದೆ, ಮಹಾರಾಷ್ಟ್ರದ ವಿದರ್ಭ ಹಾಗೂ ಆಂಧ್ರದ ರೈತರು ಆತ್ಮಹತ್ಯೆ ಮಾಡಿಕೊಳ್ಳುವುದು ನಿಂತುಹೋಗುತ್ತದೆ, ಮಾನ್ಸೂನ್ ಏರುಪೇರು ಅಥವಾ ಮಳೆ ಕೊರತೆ ಎದುರಾದರೂ ರೈತರು ಚಿಂತಿಸುವಂತಿರುವುದಿಲ್ಲ, ಒಂದೆಡೆ ಮಳೆ ಅಗತ್ಯ ಮೀರಿ ಸುರಿದರೂ ಮತ್ತೊಂದೆಡೆ ಸದುಪಯೋಗವಾಗುತ್ತದೆ, ಬರ ಎಂಬ ಪದವನ್ನು ನಮ್ಮ ಶಬ್ದಕೋಶದಿಂದ ತೆಗೆದುಹಾಕಬಹುದು, ವಿದ್ಯುತ್್ಸಮಸ್ಯೆಗೂ ಪರಿಹಾರ ಕಂಡುಕೊಳ್ಳಬಹುದು. ನಿಮಗೆ ಗೊತ್ತಾ, ಸಾಂಪ್ರದಾಯಿಕ ನೀರಾವರಿ ಮೂಲಗಳಿಂದ ದೇಶಾದ್ಯಂತ ಕೃಷಿ ಮಾಡಲು ಸಾಧ್ಯವಿರುವುದು ಕೇವಲ 140 ದಶಲಕ್ಷ ಹೆಕ್ಟೇರ್. ಆದರೆ ನದಿ ಜೋಡಣೆ ಯೋಜನೆಯಿಂದ 160 ದಶಲಕ್ಷ ಹೆಕ್ಟೇರ್ ಭೂಮಿಗೆ ನೀರುಣಿಸಬಹುದು!

ಇನ್ನು ಹೌಸಿಂಗ್ ಲೋನ್/ಮನೆ ಕಟ್ಟಲು ಸಾಲ!

ಮನೆ ಕಟ್ಟಿ, ಮದುವೆ ಮಾಡಿ ನೋಡು ಎಂಬ ಮಾತಿದೆ. ಮಂದಿ ಹೈರಾಣವಾಗಿ ಬಿಡುತ್ತಾರೆ. ಆರ್ಥಿಕ ಉದಾರೀಕರಣ ನೀತಿಗಳನ್ನು ಜಾರಿಗೆ ತರುವ ಮೊದಲು ಮನೆ ಕಟ್ಟುವುದೆಂದರೆ ನಿವೃತ್ತಿಯಾದ ನಂತರ ಬರುವ ಪಿಎಫ್, ಗ್ರಾಚ್ಯುಟಿಯಿಂದ ಎಂದಾಗಿತ್ತು. ಹಾಗೆ ಬಂದ ಹಣದಲ್ಲಿ ಮನೆ ಕಟ್ಟಿ ನೆಮ್ಮದಿಯಾಗಿ ಕೊನೆಕಾಲ ಕಳೆಯಬೇಕು, ಅಲ್ಲಿಯವರೆಗೂ ದನದಂತೆ ದುಡಿಯುವುದೊಂದೇ ಮಾರ್ಗ ಎಂಬ ನಂಬಿಕೆಯಿತ್ತು. ಇಂಥದ್ದೊಂದು ಕಲ್ಪನೆಯನ್ನು ಬದಲಾಯಿಸಿದವರೇ ಅಟಲ್. ಒಂದು ಕಡೆ ನಮ್ಮ ಆಗಸ ಅಥವಾ ವಾಯುಯಾನವನ್ನು ಖಾಸಗಿಯವರಿಗೆ ತೆರೆದರೆ, ಮತ್ತೊಂದೆಡೆ ‘ಪ್ರಯಾರಿಟಿ ಸೆಕ್ಟರ್ ಲೆಂಡಿಂಗ್್’ನಡಿ  ಹೌಸಿಂಗ್ ಲೋನನ್ನು ಕಡ್ಡಾಯ ಮಾಡಿ ಬ್ಯಾಂಕ್್ಗಳು ವ್ಯಾಪಕವಾಗಿ ಮನೆ ಸಾಲ ನೀಡುವಂತೆ ಮಾಡಿದರು. ಸರ್ಕಾರಿ ನೌಕರರು ಮಾತ್ರವಲ್ಲ, ಖಾಸಗಿ ಹಾಗೂ ಸ್ವಉದ್ಯೋಗಿಗಳಿಗೂ ಮರುಪಾವತಿ ಸಾಮರ್ಥ್ಯಕ್ಕೆ ಅನುಗುಣವಾಗಿ ಸಾಲ ದೊರೆಯುವಂತೆ ಮಾಡಿದರು.   ಇಪ್ಪತ್ತಾರು, ಇಪ್ಪತ್ತೆಂಟು ವರ್ಷದ ಯುವಕ/ಯುವತಿಯರೂ ಕಂತಿನ ಸಾಲ ಪಡೆದು ಸ್ವಂತ ಮನೆಯ ಕನಸು ಕಾಣುವಂತಾಯಿತು, ಶೇ 6ರ ಬಡ್ಡಿ ದರದಲ್ಲಿ ಸಾಲ ಸಿಗುತ್ತಿತ್ತು. ಅದರಿಂದಾಗಿ ಕನ್್ಸ್ಟ್ರಕ್ಷನ್ ಕ್ಷೇತ್ರಕ್ಕೆ ದೊಡ್ಡ ಚಾಲನೆ ದೊರೆಯಿತು. ಇವತ್ತು ಬುಕ್ ಮಾಡಿ ಒಂದು ತಿಂಗಳಾದರೂ ಸಿಲಿಂಡರ್ ಬರುವುದಿಲ್ಲ, ಹೊಸ ಸಂಪರ್ಕ ಪಡೆಯುವುದಕ್ಕಂತೂ ಇನ್ನಿಲ್ಲದ ಗೋಳು. ಆದರೆ ಅಟಲ್ ಕಾಲದಲ್ಲಿ ಕಿಸೆಯಲ್ಲಿ ಹಣ, ಅಡ್ರೆಸ್ ಪ್ರೂಫ್ ಇಟ್ಟುಕೊಂಡು ಹೋದರೆ ಹೊಸ ಸಂಪರ್ಕ ಹಾಗೂ ಸಿಲಿಂಡರ್್ನೊಂದಿಗೆ ಮನೆಗೆ ಮರಳಬಹುದಿತ್ತು. ಆಗಿಗೂ ಈಗಿಗೂ ಹೋಲಿಸಿ, ನಿಮಗೆ ಸತ್ಯ ಅರಿವಾಗುತ್ತದೆ ಅಲ್ಲವೆ?

ಹಾಗಾದರೆ ಅಟಲ್ ಸರ್ಕಾರ ಸೋತಿದ್ದೇಕೆ ಅಂತೀರಾ?

ಎಷ್ಟೋ ಬಾರಿ ಒಳ್ಳೆಯ ನಾಯಕರು, ಒಳ್ಳೆಯ ಕೆಲಸ ಮಾಡಿದವರು ಚುನಾವಣೆಯಲ್ಲಿ ಸೋತುಬಿಡುತ್ತಾರೆ. 2004ರಲ್ಲಿ ಎಸ್.ಎಂ. ಕೃಷ್ಣ ಸರ್ಕಾರ ಸೋಲುವಂಥ ಯಾವ ಕೆಲಸವನ್ನೂ ಮಾಡಿರಲಿಲ್ಲ. ನಿಜ ಹೇಳಬೇಕೆಂದರೆ ಕೃಷ್ಣ ಕಾಲದಲ್ಲಿ ಆದಷ್ಟು ಒಳ್ಳೆಯ ಕೆಲಸಗಳು ಕಳೆದ 20 ವರ್ಷಗಳಲ್ಲಿ ಎಂದೂ ಆಗಿಲ್ಲ. ಆದರೂ ಸೋತರು. ಅಟಲ್ ಹಾಗೂ ಕೃಷ್ಣ ಇಬ್ಬರೂ ಸತತ ಮೂರು ವರ್ಷ ಬರ ಎದುರಿಸಿದ್ದರು. ಅದರಿಂದ ವ್ಯತಿರಿಕ್ತ ಪರಿಣಾಮವುಂಟಾಯಿತು. ಚುನಾವಣೆಯಲ್ಲಿ ಗೆಲ್ಲಲು ಒಳ್ಳೆಯ ಕೆಲಸಕ್ಕಿಂತ ಇನ್ನುಳಿದ ಲೆಕ್ಕಾಚಾರಗಳೇ ಬಹಳಷ್ಟು ಸಲ ಪ್ರಮುಖಪಾತ್ರ ವಹಿಸುತ್ತವೆ. ತಮ್ಮ ಮೂರೂವರೆ ವರ್ಷ ಅಧಿಕಾರಾವಧಿಯಲ್ಲಿ ಯಡಿಯೂರಪ್ಪನವರು ಮಾಡಿದ್ದೆಲ್ಲ ಬೇಡದ ಕೆಲಸವೇ ಆಗಿದ್ದರೂ, ಅವರ ಅವಧಿಯಲ್ಲಿ ನಡೆದ ಎಲ್ಲ ಉಪ ಚುನಾವಣೆಗಳಲ್ಲೂ ಜಯಿಸಿದ್ದರು. ಅಣಕವೆಂದರೆ, 2004ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದ್ದು 145 ಸೀಟುಗಳಾದರೆ, ಬಿಜೆಪಿ 138 ಸ್ಥಾನಗಳಲ್ಲಿ ಗೆದ್ದಿತ್ತು. ಆದರೆ ನಮ್ಮ ‘ಸಿಕ್್’ಯುಲರ್ ಮಾಧ್ಯಮಗಳು ಸೋನಿಯಾ ಗಾಂಧಿಯವರೇ ವಿಜಯಿಯೆಂದು ಬಿಂಬಿಸಿದವು. ಮಿತ್ರಪಕ್ಷಗಳ ಆಯ್ಕೆಯಲ್ಲಿ ಬಿಜೆಪಿ ಎಡವಿತ್ತು ಅಷ್ಟೇ.

ಇದೇನೇ ಇರಲಿ, ವಾಜಪೇಯಿ ಸರ್ಕಾರದಲ್ಲಿ ಎಂತೆಂಥ ಮಂತ್ರಿಗಳಿದ್ದರೆಂದರೆ ಸುರೇಶ್ ಪ್ರಭು, ಖಂಡೂರಿ, ರಾಮ್್ನಾಯ್ಕ್, ಅರುಣ್ ಜೇಟ್ಲಿ, ಅರುಣ್ ಶೌರಿ, ಮುರಸೋಳಿ ಮಾರನ್, ಜಸ್ವಂತ್ ಸಿಂಗ್ ಮುಂತಾದವರಿದ್ದರು. ಮನಮೋಹನ್ ಸಿಂಗ್ ಸರ್ಕಾರದಲ್ಲಿ ಇಂತಹ ಒಬ್ಬ ಯೋಗ್ಯ ಹಾಗೂ ಜನಪರ ವ್ಯಕ್ತಿ ಇದ್ದರೆ ಹೆಸರಿಸಿ ನೋಡೋಣ? ಜನರ ಮೂಗಿಗೆ ತುಪ್ಪ ಒರೆಸುವ ಕೆಲಸ ಬಿಟ್ಟರೆ ದೇಶದ ಪ್ರಗತಿಗೆ ಕಾರಣವಾಗುವ ಇಂಥ ಒಂದು ಕಾರ್ಯಕ್ರಮ, ಯೋಜನೆಯನ್ನು ಕಳೆದ 8 ವರ್ಷಗಳಲ್ಲಿ ಸೋನಿಯಾ ಗಾಂಧಿ ನಿಯಂತ್ರಿತ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಉದಾಹರಣೆ ಕೊಡಿ ನೋಡೋಣ? ಯುಪಿಎ ಸರ್ಕಾರ ಅಥವಾ ಮನಮೋಹನ್ ಸಿಂಗ್ ಅಧಿಕಾರಾವಧಿಯ ಮೊದಲ ಅವಧಿಯನ್ನು ತೆಗೆದುಕೊಳ್ಳಿ. ಮನಮೋಹನ್ ಸಿಂಗ್ ಸರ್ಕಾರ ಹೇಳಿಕೊಳ್ಳುವಂಥ ಯಾವ ಸಾಧನೆಯನ್ನು ಮಾಡದಿದ್ದರೂ, ಬೆಲೆಯೇರಿಕೆ ಶೇ.17ಕ್ಕೂ ಹೆಚ್ಚಾದರೂ ಅರ್ಥಿಕ ವ್ಯವಸ್ಥೆ ಆತಂಕದ ಲಕ್ಷಣಗಳನ್ನು ತೋರಲಿಲ್ಲ. ಆರ್ಥಿಕ ಅಭಿವೃದ್ಧಿ ದರ ಕುಸಿಯಲಿಲ್ಲ. ಏಕೆಂದರೆ ವಾಜಪೇಯಿಯವರ 6 ವರ್ಷಗಳ ಆಡಳಿತ ಅರ್ಥ ವ್ಯವಸ್ಥೆಗೆ ಅಂತಹ ಚಾಲನೆ ನೀಡಿತ್ತು, ಏಕೆಂದರೆ ವಾಜಪೇಯಿಯವರು ಕೈಗೊಂಡ ಕ್ರಮಗಳು, ನಿರ್ಧಾರಗಳು ಪೂರ್ಣ ಫಲಕೊಡಲು ಆರಂಭಿಸಿದ್ದೇ 2004ರ ನಂತರ. ಆದರೆ 2004ರಲ್ಲಿ ಜಡ ಸರ್ಕಾರ ಅಸ್ತಿತ್ವಕ್ಕೆ ಬಂದ ಕಾರಣ, ಅದು ಭ್ರಷ್ಟಗೊಂಡ ಕಾರಣ ಸಕಾರಾತ್ಮಕ ಪರಿಣಾಮ ಕಾಲಾಂತರದಲ್ಲಿ ನಿಂತುಹೋಗಿ ಅರ್ಥವ್ಯವಸ್ಥೆ ಕುಸಿಯಲಾರಂಭಿಸಿದೆಯಷ್ಟೇ. ಈಗಲಾದರೂ ನಮ್ಮ ಪತ್ರಕರ್ತ ಮಹಾಶಯರಲ್ಲಿ ಕೆಲವರಾದರೂ ಸೋನಿಯಾ ಭಜನೆಯನ್ನು ಬಿಟ್ಟು, ನರಸಿಂಹರಾವ್ ಹಾಗೂ ಅಟಲ್ ಬಿಹಾರಿ ವಾಜಪೇಯಿಯವರನ್ನು ನೆನಪಿಸಿಕೊಳ್ಳಲಾರಂಭಿಸಿದ್ದಾರಲ್ಲಾ, ಅಷ್ಟೇ ಸಮಾಧಾನ. ಈ ಇಬ್ಬರು ಮಹಾನ್ ವ್ಯಕ್ತಿಗಳನ್ನು ನೆನೆಯದೇ ಹೋದರೆ ಅದಕ್ಕಿಂತ ದೊಡ್ಡ ದ್ರೋಹ ಉಂಟೆ?!

ನಿಮಗೆ ಸಾಧ್ಯವಾದರೆ 2003ರಲ್ಲಿ ಮೂರು ಭಾಗಗಳಲ್ಲಿ ಖ್ಯಾತ ಪತ್ರಕರ್ತ ಅರುಣ್ ಶೌರಿ ಬರೆದ, 1. Before the whining drowns it out, listen to the new India, 2. When sky is the limit 3. This is India’s moment but it’s only a moment, can we grasp it? ಎಂಬ  ಲೇಖನಗಳನ್ನು ಇಂಟರ್್ನೆಟ್್ನಲ್ಲಿ ಓದಿ. ಅಟಲ್ ಸರ್ಕಾರವನ್ನು ಸೋಲಿಸಿದ ತಪ್ಪಿಗಾಗಿ ನೀವು ಪಶ್ಚಾತ್ತಾಪ ಪಡದಿದ್ದರೆ, ಕೇಳಿ?

56 Responses to “ನಾವು ಅಟಲ್್ಗೇಕೆ ಆಭಾರಿಯಾಗಿರಬೇಕು ಗೊತ್ತಾ?”

  1. Realy superb lines Prathap Sir…congress Vote haki punah congress thandhiddhu..Punaha briisharu bharatakke bhandha hage ayithu….I think its time to start one more freedom fight.. congress hatao..

  2. v.m.bhat says:

    sir ji nevu kevala olleya ankanakar matra agabedi, nanu atal ji jai

  3. ಮಾನ್ಯರೇ ಒಳ್ಳೆಯ ಲೇಖನ. ಆಗಿನ ಪ್ರಧಾನ ಮಂತ್ರಿಗಳಾದ ಶ್ರೀ ಅಟಲ್ ಬಿಹಾರಿ ವಾಜಪೇಯಿ, ಕಡಿಮೆ ಅವಧಿ ಕೆಲಸ ಮಾಡಿದ್ದರೂ ಒಳ್ಳೆಯ ಕೆಲಸ ಮಾಡಿದ್ದಾರೆ. ಆದರೆ, ಗಂಗಾ ಕಾವೇರಿ ಸೇರಿಸ ಬೇಕು. ಅದಕ್ಕಾಗಿ ಯೋಜನೆ ಜಾರಿಗೊಳಿಸಲು ಕನಸು ಕಾಣುತ್ತಿದ್ದರು. ಅವರ ಕನಸು ಕನಸಾಗಿಯೇ ಉಳಿಯಿತು. ಒಳ್ಳೆಯ ಮಾಹಿತಿ ನೀಡಿದ್ದೀರಿ. ನಿಮಗೆ ವಂದನೆಗಳು.

  4. anand g gowda says:

    salute to great legend……………no words to expresssssssssssssssssss,,,,,,,,,,,,,,,,,

  5. Prasad says:

    ಶ್ರೀಮಂತರಿಗಷ್ಟೇ ಕೈಗೆಟುಕುವಂತಿದ್ದ ಸ್ಠಿರ ಮತ್ತು ಚರ ದೂರವಾಣಿ, ಗ್ಯಾಸ್ ಕನೆಕ್ಷನ್ ಎಲ್ಲರಿಗೂ ಸಿಗುವಂತೆ ಮಾಡಿದವರು ಅಟಲ್ ಜಿ

  6. i love india says:

    great personality…… should be honoured with “bahrata ratna”. then that award itself can feel proud that it is in the great person’s hands :-)….