Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > Apple ಹೆಮ್ಮರವಾಗಲು ಆತ ಹರಿಸಿದ ಬೆವರು ಎಂಥಾದ್ದು?

Apple ಹೆಮ್ಮರವಾಗಲು ಆತ ಹರಿಸಿದ ಬೆವರು ಎಂಥಾದ್ದು?

ಐ ಮ್ಯಾಕ್, ಐ ಪಾಡ್, ಐ ಟ್ಯೂನ್ಸ್, ಐ ವರ್ಕ್, ಐ ಲೈಫ್, ಐ ಫೋನ್, ಈಗ ಐ ಪ್ಯಾಡ್. ಇವುಗಳಲ್ಲಷ್ಟೇ ಅಲ್ಲ, ಆತನ ಬಗ್ಗೆ ಬರೆಯಲಾಗಿರುವ ಅನಧಿಕೃತ ಆತ್ಮಚರಿತ್ರೆಯಾದ “ಐಕಾನ್್”ನಲ್ಲೂ “ಐ” ಇದೆ! ಅವನನ್ನು ಟೀಕಾಕಾರರು “Ego Maniac” ಎಂದು ಜರಿದರೂ ಆತನಲ್ಲಿರುವುದು “ನಾನು” ಎಂಬ “ಅಹಂ” ಅಲ್ಲ, ನಾನೇನಾದರೂ ವಿಭಿನ್ನವಾದುದನ್ನು ಮಾಡಬೇಕೆಂಬ ಹಂಬಲ. ಇಂತಹ ಹಂಬಲವನ್ನು ಕೆಲವರು ಆಡಿಕೊಂಡಿದ್ದೂ ಇದೆ. ಯಾವುದಕ್ಕೂ ತಲೆ ಕೆಡಿಸಿಕೊಳ್ಳುವ ವ್ಯಕ್ತಿಯಲ್ಲ ಸ್ಟೀವ್ ಜಾಬ್ಸ್. ಆದರೆ ಬೇರೆಯವರ ತಲೆಕೆಡಿಸಿ ಬಿಡುತ್ತಾನೆ. ಅದಕ್ಕಾಗಿಯೇ “Reality Distortion” ಎಂದು ದೂರುತ್ತಾರೆ. ಆದರೇನಂತೆ ಹುಚ್ಚು ಭ್ರಮೆ ಎನಿಸುವುದನ್ನೂ ವಾಸ್ತವಕ್ಕಿಳಿಸುವ ಆತನನ್ನು ನಿರ್ಲಕ್ಷಿಸಲು ಜಗತ್ತಿನಲ್ಲಿ ಯಾರಿಗೂ ಸಾಧ್ಯವಿಲ್ಲ.

ಇಂದು ಸ್ಟೀವ್ ಜಾಬ್ ಹೆಸರು ಕೇಳಿದರೆ ಜಗತ್ತೇ ರೋಮಾಂಚನಗೊಳ್ಳುತ್ತಿರಬಹುದು. ಆದರೆ ಆತನ ಬದುಕಿನ ಪುಟಗಳನ್ನು ತಿರುವುತ್ತಾ ಹೋದರೆ ಅವನ ಹುಟ್ಟೇ ಒಂದು ಆಕಸ್ಮಿಕವೆಂಬುದು ತಿಳಿಯುತ್ತದೆ. ಅವಿವಾಹಿತಳಾಗಿದ್ದ ಅಮ್ಮ ಕಾಲೇಜಿಗೆ ಹೋಗುತ್ತಿರುವಾಗಲೇ ಗರ್ಭ ಧರಿಸಿದ್ದಳು. ಹಾಗಾಗಿ ಮಗು ಹೊಟ್ಟೆಯಲ್ಲಿರುವಾಗಲೇ ದತ್ತು ನೀಡುವ ನಿರ್ಧಾರಕ್ಕೆ ಬಂದಳು. ಆದರೆ ಆಕೆಯದ್ದೊಂದು ಪೂರ್ವ ಷರತ್ತಿತ್ತು. ಮಗುವನ್ನು ದತ್ತು ಸ್ವೀಕರಿಸುವ ಪೋಷಕರಿಬ್ಬರೂ ಕಾಲೇಜು ಪದವೀಧರರಾಗಿರಬೇಕು. ವಿದ್ಯಾವಂತ ಪೋಷಕರು ದೊರೆತರೆ ತನ್ನ ಮಗುವನ್ನೂ ಕಾಲೇಜು ವ್ಯಾಸಂಗ ಮಾಡಿಸುತ್ತಾರೆ ಎಂಬ ನಂಬಿಕೆ ಆಕೆಯದ್ದು. ಪದವೀಧರ ದಂಪತಿಯೊಬ್ಬರು ಮಗುವನ್ನು ದತ್ತು ಸ್ವೀಕರಿಸಲು ಮುಂದೆ ಬಂದರು. ಆದರೆ ಅವರಿಗೆ ಬೇಕಿದ್ದಿದ್ದು ಹೆಣ್ಣು ಮಗು. ಹುಟ್ಟಿದ್ದು ಗಂಡು ಮಗು. ಹುಟ್ಟಿದ ಕ್ಷಣದಲ್ಲೇ ಮಗು ಅನಾಥವಾಯಿತು. ಈ ಮಧ್ಯೆ ಜಸ್ಪಿನ್ ಹಾಗೂ ಕ್ಲಾರಾ ಜಾಬ್ಸ್ ಎಂಬ ಕ್ಯಾಲಿಫೋರ್ನಿಯಾದ ದಂಪತಿಯೊಬ್ಬರು ಮಗುವನ್ನು ದತ್ತು ತೆಗೆದುಕೊಳ್ಳಲು ಮುಂದಾದರು. ಆದರೆ ಅವರು ಪದವೀಧರರಾಗಿರಲಿಲ್ಲ. ಹಾಗಾಗಿ ದತ್ತು ನೀಡಲು ಒಪ್ಪಲಿಲ್ಲ. ಕೊನೆಗೂ ಹರಸಾಹಸ ಮಾಡಿ, ಮನವೊಲಿಸಿದ ಜಾಬ್ಸ್ ದಂಪತಿಗಳು ಮಗುವನ್ನು ದತ್ತು ತೆಗೆದುಕೊಂಡು ಸ್ಟೀವನ್ ಪೌಲ್ ಜಾಬ್ಸ್ ಎಂಬ ಹೆಸರಿಟ್ಟರು. 17ನೇ ವರ್ಷಕ್ಕೆ ಕಾಲೇಜು ಮೆಟ್ಟಿಲು ತುಳಿದ ಸ್ಟೀವ್ ಜಾಬ್ಸ್್ಗೆ ಓದು ರುಚಿಸಲಿಲ್ಲ. ಕಾಲೇಜನ್ನು ಅರ್ಧಕ್ಕೇ ಬಿಟ್ಟ ಆತನಿಗೆ ಒಪ್ಪೊತ್ತಿನ ಊಟಕ್ಕೂ ಕುತ್ತು ಬಂತು. ಆದರೂ ಭಾನುವಾರ ಮಾತ್ರ”ಫುಲ್ ಮೀಲ್ಸ್ ದೊರೆಯುತ್ತಿತ್ತು! ಕಾಲೇಜಿನಿಂದ 7 ಕಿ.ಮೀ. ದೂರದಲ್ಲಿದ್ದ ಹರೇ ಕೃಷ್ಣ ದೇವಾಲಯದಲ್ಲಿ ಪ್ರತಿ ಭಾನುವಾರ ಉಚಿತ ಊಟ ನೀಡಲಾಗುತ್ತಿತ್ತು. ಆ ಊಟಕ್ಕಾಗಿ 7 ಕಿ.ಮೀ. ನಡೆದು ಹೋಗುತ್ತಿದ್ದ. ಆತ ಹೋಗಿದ್ದು ಹೊಟ್ಟೆ ತುಂಬಿಸುವ ಊಟಕ್ಕಾದರೂ ಊಟಕ್ಕಿಂತ ಆಧ್ಯಾತ್ಮ ರುಚಿಸತೊಡಗಿತು. ಆಧ್ಯಾತ್ಮವನ್ನು ಅರಸಿಕೊಂಡು ಭಾರತಕ್ಕೂ ಭೇಟಿ ನೀಡಿದ. ಭಾರತದಿಂದ ವಾಪಸ್ಸಾದ ಜಾಬ್ಸ್ ಅಟಾರಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡ. ಸ್ಟೀವ್ ವೋಝ್ನಿಯಾಕ್ ಪರಿಚಯವಾಗಿದ್ದು ಅಲ್ಲೇ. ಆತ ಮಹಾಬುದ್ಧಿವಂತ. ತಾಂತ್ರಿಕ ವಿಷಯಗಳಲ್ಲಿ ಪರಿಣತ. ಇತ್ತ ಜಾಬ್ಸ್ ಕೂಡ ತಾಂತ್ರಿಕ ವಿಷಯದಲ್ಲಿ ಉತ್ತಮ ಜ್ಞಾನ ಹೊಂದಿದ್ದರೂ ಮಾರ್ಕೆಟಿಂಗ್್ನಲ್ಲಿ ಪಂಟ.

ಇವರಿಬ್ಬರೂ ಸೇರಿ 1976, ಏಪ್ರಿಲ್ 1 ರಂದು ಆರಂಭಿಸಿದ್ದೇ “ಆ್ಯಪಲ್ ಕಂಪ್ಯೂಟರ್್”!

ಆಗ ಜಾಬ್ಸ್್ಗೆ ಕೇವಲ 21 ವರ್ಷ. ಆ್ಯಪಲ್ ಪ್ರಾರಂಭವಾಗಿದ್ದು ಜಾಬ್ಸ್್ನ ಮನೆಯ ಗ್ಯಾರೇಜ್್ನಲ್ಲಿ. ಆ್ಯಪಲ್-1, ಆ್ಯಪಲ್-2 ಕಂಪ್ಯೂಟರ್್ಗಳು ಕಂಪನಿಗೆ ಒಳ್ಳೆಯ ಹೆಸರು, ಹಣ ತಂದುಕೊಟ್ಟವು. ಈ ಮಧ್ಯೆ 1981ರಲ್ಲಿ ನಡೆದ ವಿಮಾನ ದುರ್ಘಟನೆಯೊಂದರಲ್ಲಿ ವೋಝ್ನಿಯಾಕ್ ಗಾಯಗೊಂಡರು. ಹಾಗಾಗಿ ಕಂಪನಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ (ಸಿಇಒ) ಜಾಬ್ಸ್ ಜವಾಬ್ದಾರಿ ವಹಿಸಿಕೊಂಡರು. ಹಾಗೆ ಅಧಿಕಾರ ವಹಿಸಿಕೊಂಡ ಜಾಬ್ಸ್್ಗೆ ಕಂಪನಿಯನ್ನು ಇನ್ನೂ ವಿಸ್ತಾರಗೊಳಿಸಲು, ಯಶಸ್ಸಿನತ್ತ ಕೊಂಡೊಯ್ಯಲು ಸೂಕ್ತ ವ್ಯಕ್ತಿಯೊಬ್ಬರ ಸಾಥ್ ಬೇಕೆನಿಸತೊಡಗಿತು. ಆಗ ಕಣ್ಣಿಗೆ ಕಂಡಿದ್ದೇ ಪೆಪ್ಸಿ ಕಂಪನಿಯ ಸಿಇಒ ಜಾನ್ ಸ್ಕೂಲಿ. ಆದರೆ ಪೆಪ್ಸಿಯಂತಹ ಕಂಪನಿಯನ್ನು ಬಿಟ್ಟು ಯಾರು ತಾನೇ ಆ್ಯಪಲ್್ನಂತಹ ಅದಾಗತಾನೇ ಹೊರಹೊಮ್ಮುತ್ತಿರುವ ಕಂಪನಿಗೆ ಬರುತ್ತಾರೆ? ಹಾಗಂತ ಜಾಬ್ಸ್ ಸುಮ್ಮನಾಗಲಿಲ್ಲ. ಸ್ಕೂಲಿಯನ್ನು ಮನವೊಲಿಸಲು ಮುಂದಾದ. Do you want to spend the rest of your life selling sugared water, or do you want a chance to change the world? ಎಂಬ ಜಾಬ್ಸ್್ನ ಮಾತುಗಳು ಸ್ಕೂಲಿಯನ್ನು ಯಾವ ರೀತಿ ಪ್ರಚೋದಿಸಿದವೆಂದರೆ ಪೆಪ್ಸಿ ಕಂಪನಿ ಬಿಟ್ಟ ಸ್ಕೂಲಿ 1983ರಲ್ಲಿ ಆ್ಯಪಲ್ ಸೇರಿಬಿಟ್ಟ. 1984ರಲ್ಲಿ ಆ್ಯಪಲ್ ಕಂಪನಿ ಅತ್ಯಂತ ಆಕರ್ಷಕ ಟಿವಿ ಜಾಹೀರಾತೊಂದನ್ನು ಹೊರತಂದಿತು. ಇದಾಗಿ ಎರಡು ದಿನಗಳಲ್ಲೇ ಅಂದರೆ1984, ಜನವರಿ 24 ರಂದು ನಡೆದ ಆ್ಯಪಲ್ ಕಂಪನಿಯ ಷೇರುದಾರರ ಸಭೆಯಲ್ಲಿ ಜಾಬ್ಸ್”ಮ್ಯಾಕಿಂತೋಷ್್’ (ಪಿಸಿ) ಕಂಪ್ಯೂಟರನ್ನು ಅನಾವರಣಗೊಳಿಸಿದರು. ನಾವು ಬಳಸುವ”ಮೌಸ್್’ ಮೊದಲಿಗೆ ಬಳಕೆಗೆ ಬಂದಿದ್ದೇ ಮ್ಯಾಕಿಂತೋಷ್್ನೊಂದಿಗೆ! ಇಂತಹ ನವೀನ ಸಂಶೋಧನೆಯಿಂದಾಗಿ ಆ್ಯಪಲ್ 2 ಶತಕೋಟಿ ಡಾಲರ್ ಮೌಲ್ಯದ ಕಂಪನಿಯಾಗಿ ಹೊರಹೊಮ್ಮಿತು. ಈ ನಡುವೆ ಜಾಬ್ಸ್ ಮತ್ತು ಸ್ಕೂಲಿ ನಡುವೆ ಭಿನ್ನಾಭಿಪ್ರಾಯ ಕಾಣಿಸತೊಡಗಿತು.  ಅದು ಯಾವ ಮಟ್ಟಕ್ಕೆ  ಹೋಯಿತೆಂದರೆ ಆಡಳಿತ ಮಂಡಳಿಯ ಸದಸ್ಯರು ಸ್ಕೂಲಿ ಪರ ನಿಂತ ಕಾರಣ ಕಂಪನಿಯ ಸ್ಥಾಪಕನಾದ ಜಾಬ್ಸ್್ನನ್ನೇ ಹೊರಹಾಕಲಾಯಿತು!

ಅಂತಹ ಆಘಾತದಿಂದಲೂ ಸಾವರಿಸಿಕೊಂಡ ಜಾಬ್ಸ್ “ನೆಕ್ಸ್ಟ್್” ಎಂಬ ಕಂಪನಿ ಪ್ರಾರಂಭಿಸಿದ. ಅಲ್ಲದೆ ಜಾರ್ಜ್ ಲುಕಾಸ್ ಎಂಬುವರಿಂದ “ಪಿಕ್ಸರ್್” ಎಂಬ ಡಿಜಿಟಲ್ ಗ್ರಾಫಿಕ್ಸ್ ಕಂಪನಿಯನ್ನೂ ಖರೀದಿ ಮಾಡಿದ. ಆ ಕಂಪನಿ Toy Story ಎಂಬ ಆ್ಯನಿಮೇಷನ್ ಚಿತ್ರವನ್ನು ರೂಪಿಸಿತು. ಅದು ಗಲ್ಲಾಪೆಟ್ಟಿಗೆಯಲ್ಲಿ ಭಾರೀ ಯಶಸ್ಸು ಕಂಡಿತು. ಕಂಪನಿಗೂ ಒಳ್ಳೆಯ ಹೆಸರು ಬಂತು. ಇದನ್ನು ಗಮನಿಸಿದ ವಿಶ್ವವಿಖ್ಯಾತ”ಡಿಸ್ನಿ’ ಕಂಪನಿ 7.4 ಶತಕೋಟಿ ಡಾಲರ್ ಕೊಟ್ಟು”ಪಿಕ್ಸರ್್’ ಅನ್ನೇ ಖರೀದಿ ಮಾಡಿತು. ಸ್ಟೀವ್ ಜಾಬ್ಸ್್ನ ಗ್ರಹಗತಿಯೇ ಬದಲಾಯಿತು. ಇತ್ತ ಜಾಬ್ಸ್ ಅನುಪಸ್ಥಿತಿಯಲ್ಲಿ ಐಬಿಎಂ, ಮೈಕ್ರೊಸಾಫ್ಟ್್ಗಳ ಜತೆ ಸ್ಪರ್ಧೆ ಮಾಡಲಾಗದೆ, ಹೊಸ ಹೊಸ”ಆಪರೇಟಿಂಗ್ ಸಿಸ್ಟಮ್್’ ಗಳನ್ನು ಹೊರತರಲಾಗದೆ ಆ್ಯಪಲ್ ಕಂಪನಿ ನಷ್ಟ ಅನುಭವಿಸಲಾರಂಭಿಸಿತು.

ಮತ್ತೆ ಆ್ಯಪಲ್ ತಲೆಯೆತ್ತಬೇಕಾದರೆ ಜಾಬ್ಸ್್ನ”ನೆಕ್ಸ್ಟ್್’ ಕಂಪನಿಯ ಜತೆ ಕೈ ಜೋಡಿಸುವುದು ಮಾತ್ರವಲ್ಲ ಜಾಬ್ಸ್್ನ ನಾಯಕತ್ವದ ಅಗತ್ಯವೂ ಅನಿವಾರ್ಯವಾಯಿತು!

1997ರಲ್ಲಿ ನೆಕ್ಸ್ಟ್ ಕಂಪನಿಯನ್ನು ಖರೀದಿ ಮಾಡಿದ ಆ್ಯಪಲ್, ಜಾಬ್ಸ್ ಅವರನ್ನೇ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯನ್ನಾಗಿ ನೇಮಕ ಮಾಡಿಕೊಂಡಿತು!!

ಆ್ಯಪಲ್್ಗೆ ಹಿಂದಿರುಗಿದ ಜಾಬ್ಸ್ “Mac OS X” ಹೊಸ ಆಪರೇಟಿಂಗ್ ಸಿಸ್ಟಮ್ ಅನ್ನು ಹೊರತರುವ ಮೂಲಕ ಕಂಪನಿಗೆ ಮತ್ತೆ ಜೀವ ತುಂಬಲಾರಂಭಿಸಿದ. ಅನಂತರ ಐಮ್ಯಾಕ್ ಬಂತು, ಐಪಾಡ್, ಐಟ್ಯೂನ್್ನೊಂದಿಗೆ ಸಂಗೀತ ಕ್ಷೇತ್ರಕ್ಕೂ ಕಾಲಿರಿಸಿದ ಆತ ಹೊರತಂದ ಐಫೋನ್ ಜಗತ್ತಿನ ಮೆಚ್ಚುಗೆ ಗಳಿಸಿದೆ. ಮೊಬೈಲ್ ಕ್ಷೇತ್ರಕ್ಕೆ ಹೊಸ ಭಾಷ್ಯ ಬರೆಯಿತು. ಇವತ್ತು ಜಾಬ್ಸ್ ಮಾಡುವ ಭಾಷಣಗಳು “Stevenotes” ಎಂದೇ ಪ್ರಸಿದ್ಧಿಯಾಗುತ್ತಿವೆ. ಆತ ಕಾಲೇಜು ಓದದಿದ್ದರೇನಂತೆ, ಜಗತ್ತಿನ ಅತ್ಯುತ್ತಮ ಕಾಲೇಜುಗಳು ಜಾಬ್ಸ್್ನನ್ನು ಉಪನ್ಯಾಸಕ್ಕಾಗಿ ಕರೆಯುತ್ತಿವೆ. ಅಂತಹ ಕಾಲೇಜುಗಳಲ್ಲಿ ವಿಶ್ವವಿಖ್ಯಾತ ಸ್ಟ್ಯಾನ್್ಪೋರ್ಡ್ ವಿಶ್ವವಿದ್ಯಾಲಯವೂ ಒಂದು 2005, ಜೂನ್ 12ರಂದು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಲು ನಿಂತ ಜಾಬ್ಸ್ “ಜಗತ್ತಿನ ಅತ್ಯುತ್ತಮ ವಿವಿಗಳಲ್ಲಿ ಒಂದಾದ ಸ್ಟ್ಯಾನ್ ಫೋರ್ಡ್್ನ ವಿದ್ಯಾರ್ಥಿಗಳಾದ ನಿಮ್ಮನ್ನುದ್ದೇಶಿಸಿ ಮಾತನಾಡುವ ಅವಕಾಶ ದೊರೆತಿರುವುದು ನನಗೆ ದೊಡ್ಡ ಗೌರವ. ಆದರೆ ನಾನೆಂದೂ ಕಾಲೇಜಿನಿಂದ ಪದವಿ ಪಡೆದು ಹೊರಹೋದವನಲ್ಲ. ಇಂದು ನಾನು ನಿಮಗೆ ನನ್ನ ಜೀವನದ ಮೂರು ಕಥೆಗಳನ್ನು ಹೇಳಲು ಬಯಸುತ್ತೇನೆ. ಅವುಗಳಲ್ಲಿ ವಿಶೇಷವೇನಿಲ್ಲ, ಬರೀ ಮೂರು ಕಥೆಗಳಷ್ಟೇ…..”

ಅಂದು ಆತ ಹೇಳಿದ ಮೊದಲ ಕಥೆ ಆತನ ದತ್ತು ಸ್ವೀಕಾರ ಹಾಗೂ ಕಾಲೇಜಿಗೆ ತಿಲಾಂಜಲಿ ಇತ್ತ ಘಟನೆಯ ಬಗ್ಗೆ, ಎರಡನೆಯದ್ದು ತಾನೇ ಪ್ರಾರಂಭಿಸಿದ ಕಂಪನಿಯಿಂದ ತನ್ನನ್ನೇ ಕಿತ್ತೊಗೆದಿದ್ದು ಹಾಗೂ ಅದನ್ನು ಸವಾಲಿನಂತೆ ತೆಗೆದುಕೊಂಡು ಪರಿಸ್ಥಿತಿಯನ್ನು ಎದುರಿಸಿದ ಘಟನೆಗೆ ಸಂಬಂಧಿಸಿದ್ದು, ಮೂರನೆಯದ್ದನ್ನು ಅವರ ಮಾತಿನಲ್ಲೇ ಕೇಳೋಣ.

“ಇದೇ ನಿನ್ನ ಕೊನೆಯ ದಿನ ಎಂಬಂತೆ ನೀನು ಪ್ರತಿದಿನವನ್ನೂ ಕಳೆದರೆ ಒಂದಲ್ಲ ಒಂದು ದಿನ ಅದು ನಿಜವಾಗುತ್ತದೆ ಎಂಬ ಯಾರೋ ಹೇಳಿದ್ದ ಮಾತು 17 ವರ್ಷದವನಾಗಿದ್ದ ನನ್ನ ಮೇಲೆ ತುಂಬಾ ಪ್ರಭಾವ ಬೀರಿತ್ತು. ಅನಂತರ ಪ್ರತಿದಿನವೂ ಬೆಳಗ್ಗೆ ಎದ್ದು ಕನ್ನಡಿಯ ಮುಂದೆ ನಿಂತು, ಇವತ್ತೇ ನನ್ನ ಜೀವಮಾನದ ಕಡೆಯ ದಿನ ಎಂದಾಗಿದ್ದರೆ ಇಂದು ಮಾಡಲು  ಹೊರಟಿರುವ ಕೆಲಸವನ್ನು ಮಾಡುತ್ತಿದ್ದೆನೆ? ಎಂದು ನನ್ನನ್ನು ನಾನೇ ಕೇಳಿಕೊಳ್ಳುತ್ತಿದ್ದೆ. ಅಷ್ಟಕ್ಕೂ ಸಾವು ಎದುರಿಗೆ ನಿಂತಿದ್ದಾಗ ಎಲ್ಲವೂ ನಗಣ್ಯವಾಗಿ ಬಿಡುತ್ತದೆ. ಒಂದು ವರ್ಷದ ಹಿಂದೆ ನನಗೆ ಕ್ಯಾನ್ಸರ್ ಬಂದಿರುವುದು ಪತ್ತೆಯಾಯಿತು. ಬೆಳಗ್ಗೆ 7.30ಕ್ಕೆ ವೈದ್ಯಕೀಯ ತಪಾಸಣೆ ನಡೆಯಿತು. ಅದರಲ್ಲಿ ಕ್ಯಾನ್ಸರ್ ಗಡ್ಡೆ ಇರುವುದು ಸ್ಪಷ್ಟವಾಗಿ ಗೋಚರಿಸಿತು. ಅದು ವಾಸಿಯಾಗದ ವಿಧದ ಕ್ಯಾನ್ಸರ್ ಆಗಿತ್ತು. ಆರು ತಿಂಗಳಿಗಿಂತ ಹೆಚ್ಚು ಕಾಲ ನಾನು ಬದುಕುವುದಿಲ್ಲ ಎಂದು ವೈದ್ಯರು ಹೇಳಿಯೂ ಬಿಟ್ಟರು. ಮನೆಗೆ ಹೋಗಿ ಬಾಕಿ ಉಳಿದಿರುವ ಕೆಲಸಗಳನ್ನು ಮುಗಿಸಿ ಬಿಡು ಎಂದು ಸಲಹೆ ನೀಡಿದರು. ವೈದ್ಯರು ನಮ್ಮನ್ನು ಸಾವಿಗೆ ಅಣಿಗೊಳಿಸುವುದೇ ಹಾಗೆ. ಅಂದರೆ ನಿನ್ನ ಹೆಂಡತಿ, ಮಕ್ಕಳ ಜತೆ ಏನೇನು ಮಾತನಾಡಿಕೊಳ್ಳಬೇಕು ಅದನ್ನೆಲ್ಲ ಮಾತಾಡಿ ಮುಗಿಸು, ಅವರ ಭವಿಷ್ಯಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡು, ನೀನು ಸತ್ತ ನಂತರವೂ ಅವರು ಖುಷಿಯಿಂದ ಇರಲು ಬೇಕಾದ ಮುಂಜಾಗ್ರತೆಗಳನ್ನು  ತೆಗೆದುಕೋ ಅಂತ. ಆದರೆ ಕ್ಯಾನ್ಸರ್ ಬಂದಿರುವ ವಿಚಾರ ನನ್ನನ್ನು ಸಂಪೂರ್ಣವಾಗಿ ಆವರಿಸಿತ್ತು. ಅದೇ ದಿನ ಸಂಜೆ ವೇಳೆಗೆ ಬಯಾಪ್ಸಿ ಮಾಡಿದರು. ಸೂಜಿ ಹಾಕಿ ಕ್ಯಾನ್ಸರ್ ಗಡ್ಡೆಯ ಕೆಲವು ಸೆಲ್್ಗಳನ್ನು ಹೊರತೆಗೆದು, ಪರೀಕ್ಷಿಸಿದರು. ಅದೃಷ್ಟವಶಾತ್, ಅದು ಶಸ್ತ್ರಚಿಕಿತ್ಸೆಯ ಮೂಲಕ ಗುಣಪಡಿಸಬಹುದಾದ ಕ್ಯಾನ್ಸರ್ ಆಗಿತ್ತು!

ಅಂದು ನಾನು ಸಾವನ್ನು ಸ್ಪರ್ಷಿಸಿ ಬಂದಿದ್ದೆ!

ಅಂತಹ ಅನುಭವದ ಬಲದಿಂದ ಹೇಳುವುದಾದರೆ ಸಾವು ಕೂಡ ಒಂದು ಉಪಯುಕ್ತ ಅನುಭವ. ಆದರೆ ಅದು ಬುದ್ಧಿಗೆ ಮಾತ್ರ ನಿಲುಕುವಂಥದ್ದು. ಇಷ್ಟಕ್ಕೂ ಯಾರೂ ಸಾಯಲು ಬಯಸುವುದಿಲ್ಲ. ಸ್ವರ್ಗಕ್ಕೆ ಹೋಗಬೇಕು ಎಂದು ಬಯಸುವವರೂ ಸಾಯಲು ಇಷ್ಟಪಡುವುದಿಲ್ಲ. ಆದರೆ ನಾವೆಲ್ಲ ಸೇರುವ ಅಂತಿಮ ತಾಣ ಸಾವು. ಇದುವರೆಗೂ ಸಾವಿನಿಂದ ತಪ್ಪಿಸಿಕೊಳ್ಳಲು ಯಾರಿಗೂ ಸಾಧ್ಯವಾಗಿಲ್ಲ. ಅದು ಹಾಗೆಯೇ ಇರಬೇಕು. Death is very likely the single best invention of life! ಜೀವನದಲ್ಲಿ ಸಾವು ಬದಲಾವಣೆಯ ಏಜೆಂಟ್. ಹಳಬರನ್ನು ಜಾಗ ಖಾಲಿ ಮಾಡಿಸಿ ಹೊಸಬರಿಗೆ ಅವಕಾಶ ಮಾಡಿ ಕೊಡುತ್ತದೆ. ಇವತ್ತು ನೀವು ಹೊಸಬರು. ಆದರೆ ಮುಂದೊಂದು ದಿನ  ನೀವು ಕೂಡ ಹಳಬರಾಗಿ ಜಾಗ ಖಾಲಿ ಮಾಡಬೇಕಾಗುತ್ತದೆ! ನಿಮಗಿರುವ ಅವಧಿ ತೀರಾ ಕ್ಷಣಿಕ. ಬೇರೆಯವರಿಗಾಗಿ ನಿಮ್ಮ ಬದುಕನ್ನು ಸವೆಸಿ ಆ ಸಮಯವನ್ನು ವ್ಯರ್ಥ ಮಾಡಬೇಡಿ.  ಯಾವುದೋ ಸಿದ್ಧಾಂತಕ್ಕೆ ಸಿಕ್ಕಿಬಿದ್ದು ಬೇರೊಬ್ಬರ ಚಿಂತನೆಗಳ ಬಗ್ಗೆ ಚಿಂತೆ ಮಾಡುತ್ತಾ ಚಿತೆ ಏರಬೇಡಿ. ಇತರರ ಗದ್ದಲ ನಿಮ್ಮ ಅಂತರಾತ್ಮದ ಧ್ವನಿಯನ್ನು ಹೊಸಕಿಹಾಕಲು ಬಿಡಬೇಡಿ. ನಿಮ್ಮ ಮನಸ್ಸು ಮತ್ತು ಅಂತಃಧ್ವನಿಯನ್ನು ಹಿಂಬಾಲಿಸಿ ನೀವೇನಾಗಬೇಕು ಎಂಬುದು ನಿಮ್ಮ ಅಂತರಾತ್ಮಕ್ಕೆ ಚೆನ್ನಾಗಿ ಗೊತ್ತಿರುತ್ತದೆ. ನಾನು ಪ್ರಾಪ್ತವಯಸ್ಕನಾಗಿದ್ದಾಗ “The Whole Earth Catalog” ಎಂಬ ಅದ್ಭುತ ಪುಸ್ತಕವೊಂದಿತ್ತು. ನನ್ನ ತಲೆಮಾರಿನವರ ಬೈಬಲ್ ಅದಾಗಿತ್ತು. ಆದರೆ ಕಾಲಾಂತರದಲ್ಲಿ ಅದು ಕಾಲಗರ್ಭದಲ್ಲಿ ಸೇರುವ ಸಮಯ ಬಂತು. 1970ರ ದಶಕದ ಮಧ್ಯಭಾಗದಲ್ಲಿ The Whole Earth Catal

ನ ಕೊನೆಯ ಪ್ರಕಟಣೆ ಹೊರಬಿತ್ತು. ಅದರ ಹಿಂಬದಿಯ ಪುಟದ ಮೇಲೆ ಹಳ್ಳಿಯ ರಸ್ತೆಯೊಂದರ ಮುಂಜಾವಿನ ಫೋಟೋ ಇತ್ತು. ಅದರ ಮೇಲೆ ವಿದಾಯದ ಒಕ್ಕಣೆಯೊಂದಿತ್ತು – Stay Hungry, Stay Foolish ! ನಾನು ನಿಮಗೆ ಹಾರೈಸುವುದೂ ಅದನ್ನೇ – Stay Hungry, Stay Foolish ! ಮನದ ತುಂಬಾ ಕಲಿಕೆಯ ಹಸಿವಿರಲಿ, ಮನದಾಸೆಯಂತೆ ನಡೆದುಕೊಳ್ಳಿರಿ”.

ಇಂತಹ ಪ್ರೇರಣಾದಾಯಿಕ ಭಾಷಣ ಮಾಡಿದ್ದ, ಸಾಧನೆಯಲ್ಲೂ ಪ್ರೇರಕ ಶಕ್ತಿಯಾಗಿರುವ ಸ್ಟೀವ್್ಜಾಬ್ಸ್ ಆ್ಯಪಲ್ ಕಂಪನಿಯ ಸಿಇಒ ಸ್ಥಾನಕ್ಕೆ ಆಗಸ್ಟ್ 24ರಂದು ರಾಜೀನಾಮೆ ನೀಡಿದ್ದಾರೆ. ಆರೋಗ್ಯ ಸಮಸ್ಯೆಯೇ ಅದಕ್ಕೆ ಮುಖ್ಯ ಕಾರಣವೆಂಬ ಗುಮಾನಿಯಿದೆ. 2008ರಲ್ಲಿ ಬ್ಲೂಮ್್ಬರ್ಗ್ ಟೀವಿಯಂತೂ ಜಾಬ್ಸ್ ತೀರಿಕೊಂಡಿದ್ದಾರೆ ಎಂದು ಶ್ರದ್ಧಾಂಜಲಿ ಸುದ್ದಿಯನ್ನು ಪ್ರಕಟಿಸಿಬಿಟ್ಟಿತ್ತು. ಇದೇನೇ ಇರಲಿ, ಹಾಲಿವುಡ್್ನಲ್ಲಿ ಜೇಮ್ಸ್ ಕ್ಯಾಮರಾನ್ ಹೇಗೆ ನಮ್ಮ ಕಲ್ಪನೆಗಳ ಹರವನ್ನೇ ವಿಸ್ತಾರ ಮಾಡುವ ನಿರ್ದೇಶಕರೋ, ಕಂಪ್ಯೂಟರ್ ಮತ್ತು ಮೊಬೈಲ್ ಕ್ಷೇತ್ರದಲ್ಲಿ ನಮ್ಮ ಕಲ್ಪನೆಗೂ ನಿಲುಕದ ಅದ್ಭುತ ಲೋಕವನ್ನು ವಾಸ್ತವಕ್ಕಿಳಿಸುವ ಮಾಂತ್ರಿಕ ಸ್ಟೀವ್್ಜಾಬ್ಸ್. ಅವರಿಲ್ಲದ ಆ್ಯಪಲ್ ಅನ್ನು ಊಹಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ, ಅಲ್ಲವೇ?

52 Responses to “Apple ಹೆಮ್ಮರವಾಗಲು ಆತ ಹರಿಸಿದ ಬೆವರು ಎಂಥಾದ್ದು?”

  1. channabasava says:

    its really a good article ..jobs has created jobs…a true entreprenuer..

  2. sundeep acharya says:

    very nice article…sir.