Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಧೋನಿ ನಿವೃತ್ತಿ ಬಗ್ಗೆ ಮಾತಾಡುವವರು ಅವರ ಸಾಧನೆ ಮರೆತುಬಿಟ್ಟರೇ?

ಧೋನಿ ನಿವೃತ್ತಿ ಬಗ್ಗೆ ಮಾತಾಡುವವರು ಅವರ ಸಾಧನೆ ಮರೆತುಬಿಟ್ಟರೇ?

ಧೋನಿ ನಿವೃತ್ತಿ ಬಗ್ಗೆ ಮಾತಾಡುವವರು ಅವರ ಸಾಧನೆ ಮರೆತುಬಿಟ್ಟರೇ?

2013ರಲ್ಲಿ ಭಾರತ, ಶ್ರೀಲಂಕಾ ಮತ್ತು ವೆಸ್ಟಿಂಡೀಸ್ ತ್ರಿಕೋನ ಸರಣಿ -ನಲ್ ಪಂದ್ಯ ನಡೆಯುತ್ತಿತ್ತು. ಬಾಲಿಂಗ್ ಪಿಚ್. ಚೆಂಡು ಎಂದಿಗಿಂತ ಹೆಚ್ಚು ಪುಟಿಯುತ್ತಿತ್ತು. ಕುಮಾರ ಸಂಗಕ್ಕರ ಅವರ 71 ರನ್‌ಗಳ ನೆರವಿನಿಂದ ಶ್ರೀಲಂಕಾ ಕೇವಲ ೨೦೧ ರನ್‌ಗಳನ್ನು ಗಳಿಸಿತ್ತು. ಅದನ್ನು ಬೆನ್ನತ್ತಿದ ಭಾರತ ತಂಡ 152ರನ್‌ಗಳಿಗೆ ಏಳು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಇನ್ನೊಂದು ಬದಿಯಲ್ಲಿ 16 ಬಾಲ್‌ಗಳಲ್ಲಿ ಕೇವಲ 4 ರನ್‌ಗಳಿಸಿ ಆಡುತ್ತಿದ್ದ. ಕೆಲವೇ ಹೊತ್ತಿನಲ್ಲಿ ತಂಡದ ಮೊತ್ತ 167ಕ್ಕೆ 8 ವಿಕೆಟ್ ಆಯಿತು. ಆಗ ಸುಲಭವಾದ ಒಂದು ರನ್‌ಗಳನ್ನೂ ಧೋನಿ ನಿರಾಕರಿಸಲಾರಂಭಿಸಿದರು.

ಎಲ್ಲ ಜವಾಬ್ದಾರಿಯನ್ನೂ ತಾವೇ ಹೊತ್ತಿದ್ದರು. ಆದರೂ ಸ್ಕೋರ್ 182ಕ್ಕೆ 9 ವಿಕೆಟ್ ಆಗಿ ಬಿಟ್ಟಿತು. ಇನ್ನುಳಿದಿದ್ದು ಒಂದೇ ವಿಕೆಟ್. ಇಶಾಂತ್ ಶರ್ಮ ಹೇಗೆ ಬ್ಯಾಟಿಂಗ್ ಮಾಡುತ್ತಾನೆಂದು ನಿಮಗೆಲ್ಲ ಗೊತ್ತು. ಈ ಪರಿಸ್ಥಿತಿಯಲ್ಲಿ 9 ಬಾಲ್‌ಗಳಲ್ಲಿ 17ರನ್‌ಗಳು ಬೇಕು. ಮುಂದಿನ ಎರಡು ಬಾಲ್‌ಗಳಲ್ಲಿ ಎರಡು ರನ್‌ಗಳು ಬಂದವು. ೪೯ನೇ ಓವರ್‌ನ ಕೊನೆಯ ಎಸೆತವನ್ನು ಇಶಾಂತ್ ಶರ್ಮ ಮುಟ್ಟುವ ಗೋಜಿಗೆ ಹೋಗಲಿಲ್ಲ.

ಧೋನಿ ಡ್ರೆಸ್ಸಿಂಗ್ ರೂಂ ಕಡೆ ಸನ್ನೆ ಮಾಡಿ ಭಾರವಾದ ಬ್ಯಾಟ್ ತರಿಸಿ ಕೊಂಡರು. ಶ್ರೀಲಂಕಾ ತಂಡದ ಎರಂಗಾ ಕೊನೆಯ ಓವರ್ ಎಸೆಯಲು ಸಿದ್ಧರಾಗುತ್ತಿದ್ದರು. ಈ ಪಂದ್ಯದಲ್ಲಿ ಎರಂಗಾ ಒಂಬತ್ತು ಓವರ್ ಎಸೆದು ಕೇವಲ 23 ರನ್ ನೀಡಿ ಎರಡು ವಿಕೆಟ್ ಕಬಳಿಸಿದ್ದರು. ಕೊನೆಯ ಓವರ್‌ನಲ್ಲಿ 15 ರನ್ ಬೇಕು. ಎರಂಗಾ ಎಸೆದ ಮೊದಲ ಬಾಲ್ ಧೋನಿ ಬ್ಯಾಟಿಗೆ ಎಟುಕಲಿಲ್ಲ. ಎರಡನೇ ಎಸೆತ ಸಿಕ್ಸ್. ಅಲ್ಲಿಗೆ ನಾಲ್ಕು ಬಾಲ್‌ಗಳಲ್ಲಿ 9 ರನ್ ಬೇಕಿತ್ತು. ಮುಂದಿನ ಎಸೆತವನ್ನು ಧೋನಿ ಪಾಯಿಂಟ್ ಮೇಲಿನಿಂದ ಬೌಂಡರಿಗಟ್ಟಿದ. ಮೂರು ಎಸೆತದಲ್ಲಿ ಐದು ರನ್ ಬೇಕಿತ್ತು. ಮುಂದಿನ ಎಸೆತವನ್ನು ಧೋನಿ ಎಕ್ಸ್ ಟ್ರಾ ಕವರ್ ನಲ್ಲಿ ಸಿಕ್ಸ್ ಎತ್ತಿ ಜಯಭೇರಿ ಬಾರಿಸಿದ. ಧೋನಿ ಮ್ಯಾಚ್ ವಿನ್ನರ್ ಎಂದು ನಾವೆಲ್ಲ ಅಂದುಕೊಂಡಿದ್ದೇ ಈ ಕಾರಣಕ್ಕಲ್ಲವೇ?

ಇಂತಹ ಅವೆಷ್ಟು ಪಂದ್ಯಗಳನ್ನು ಧೋನಿ ಭಾರತಕ್ಕೆ ಜಯಗಳಿಸಿ ಕೊಟ್ಟಿಲ್ಲ. ತಂಡ ಯಾವುದೇ ಇರಲಿ. ಬೌಲರ್ ಯಾರೇ ಆಗಿರಲಿ. ಯಾವುದೇ ದೇಶದಲ್ಲಿರಲಿ. ಯಾವುದೇ ಪಿಚ್ ಇರಲಿ, ಯಾವ ಪಂದ್ಯಾವಳಿ ಬೇಕಾದರೂ ಇರಲಿ ಆತ ಬ್ಯಾಟ್ ಅಂಕೆ ಯಿಲ್ಲದೆ ಬ್ಯಾಟ್ ಬೀಸುತ್ತಾನೆ. ಧೋನಿ ಇದ್ದಾನೆಂದರೆ ನಮಗೆಲ್ಲ ಏನೋ ಧೈರ್ಯ. ಕೊನೆಯ ಒಂದೆರಡು ಓವರ್ ನಲ್ಲಿ ಅವೆಷ್ಟೇ ರನ್ ಬೇಕಿರಲಿ. ಧೋನಿ ಪಂದ್ಯ ಗೆದ್ದು ಕೊಟ್ಟಿದ್ದಾನೆ.

2011ರ ವಿಶ್ವಕಪ್ ಫೈನಲ್ ಪಂದ್ಯ ನೆನಪಿಸಿಕೊಳ್ಳಿ. ಆ ಪಂದ್ಯದಲ್ಲಿ ಧೋನಿ 79 ಎಸೆತಗಳಲ್ಲಿ ಗಳಿಸಿದ 91 ರನ್‌ಗಳು, 1975ರ ವಿಶ್ವ ಕಪ್ -ನಲ್ಲಿ ಪಂದ್ಯದಲ್ಲಿ ಕ್ಲೈವ್ ಲಾಯ್ಡ ಗಳಿಸಿದ ೧೦೨ ರನ್‌ಗಳಿಗೆ ಸಮವಾಗಿತ್ತು ಎಂದು ಇಂಗ್ಲೆಂಡ್‌ನ ಮಾಜಿ ನಾಯಕ ಅಥರ್ಟನ್ ಹೇಳಿದ್ದಾರೆ. ವಿಶೇಷವೆಂದರೆ 2011ರ ವಿಶ್ವಕಪ್ ನಲ್ಲಿ ಪಂದ್ಯದ ನಂತರ ನಡೆದ ಸಮಾರಂಭದಲ್ಲಿ ಐಸಿಸಿ ಅಧ್ಯಕ್ಷ ಕ್ಲೈವ್ ಲಾಯ್ಡ್ ಇದ್ದರು. ಅವರೇ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಮಹೇಂದ್ರ ಸಿಂಗ್ ಧೋನಿಗೆ ನೀಡಿದ್ದು!

೨೦೧೧ರಲ್ಲಿ ಭಾರತ ತಂಡ ಸಚಿನ್ ತೆಂಡೂಲ್ಕರ್ ಮತ್ತು ವೀರೇಂದ್ರ ಸೆಹ್ವಾಗ್ ಆಟವನ್ನು ಹೆಚ್ಚು ಅವಲಂಬಿಸಿತ್ತು. ಆದರೆ 2011ರ ವಿಶ್ವಕಪ್ -ನಲ್ಲಿ ವೀರೇಂದ್ರ ಸೆಹ್ವಾಗ್ (೦) ಹಾಗೂ ತೆಂಡೂಲ್ಕರ್ (೧೮), ವಿರಾಟ್ ಕೊಹ್ಲಿ (೩೫) ಬೇಗನೆ ಔಟಾಗಿದ್ದರು. ಅಂತಹ ಸಂದರ್ಭದಲ್ಲಿ ಯಾವಾಗಲೂ ಬರುವುದಕ್ಕಿಂತ ಮೇಲಿನ ಕ್ರಮಾಂಕದಲ್ಲಿ ಧೋನಿ ಬ್ಯಾಟಿಂಗ್‌ಗೆ ಇಳಿದಿದ್ದರು. ಅದು ವಿಶ್ವಕಪ್ ಇತಿಹಾಸದಲ್ಲಿ ನಾಯಕನೊಬ್ಬನ ಅತ್ಯುತ್ತಮ ಆಟಗಳಲ್ಲಿ ಒಂದೆಂದು ದಾಖಲಾಗಿದೆ.

ಭಾರತಕ್ಕೆ ಏಕದಿನ ಹಾಗೂ ಟ್ವೆಂಟಿ- ಟ್ವೆಂಟಿ ಎರಡೂ ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ ಹಾಗೂ ಏಷ್ಯಾಕಪ್‌ನಲ್ಲಿ ಇಷ್ಟೂ ಪ್ರಶಸ್ತಿಗಳನ್ನು ಗೆದ್ದುಕೊಟ್ಟ ಏಕೈಕ ನಾಯಕ. ಇನ್ನು ಐಪಿಎಲ್ ಹಾಗೂ ಚಾಂಪಿಯನ್ಸ್ ಲೀಗ್ ಎರಡನ್ನೂ ಗೆದ್ದ ನಾಯಕನೂ ಹೌದು. ಧೋನಿ ಕೇವಲ ಭಾರತ ಕಂಡ ಅತ್ಯುತ್ತಮ ನಾಯಕ ನಷ್ಟೇ ಅಲ್ಲ, ವಿಶ್ವದ ಅತ್ಯುತ್ತಮ ನಾಯಕರಲ್ಲಿ ಒಬ್ಬ. ಕೇವಲ ಒಬ್ಬರಾಗಿದ್ದರೆ ಇಷ್ಟೆಲ್ಲ ಬರೆಯಬೇಕಾಗಿರಲಿಲ್ಲ. ಅವರು ಬಹು ದೀರ್ಘ ಸಮಯದವರೆಗೆ ವಿಶ್ವದ ಅತ್ಯುತ್ತಮ ನಾಯಕರಲ್ಲಿ ಪ್ರತಿಯೊಂದು ವಿಭಾಗದಲ್ಲೂ ಒಂದರಿಂದ ಮೂರನೇ ಸ್ಥಾನದಲ್ಲಿದ್ದರು.

ನಾಯಕನಾಗಿ ಧೋನಿಯ ರನ್‌ಗಳಿಕೆಯ ಸರಾಸರಿ 53.93. ಈ ಪಟ್ಟಿಯಲ್ಲಿ ಧೋನಿಗಿಂತ ಮೇಲಿರುವವರು ದಕ್ಷಿಣ ಆಫ್ರಿಕಾದ ಡಿ.ವಿಲಿಯರ್ಸ್ (ಸರಾಸರಿ 65.92) ಮಾತ್ರ. ವಿವಿಯನ್ ರಿಚರ್ಡ್ಸ್ ವಿಶ್ವ ಕಂಡ ಅತ್ಯುತ್ತಮ ಕ್ರಿಕೆಟ್ ಬ್ಯಾಟ್ಸ್‌ಮನ್‌ಗಳಲ್ಲೊಬ್ಬರು. ಅವರ ಜೀವಮಾನದ ರನ್‌ಗಳಿಕೆಯ ಸರಾಸರಿ 57.39 ಇದ್ದರೂ, ನಾಯಕರಾಗಿ ಅವರ ಸರಾಸರಿ 38.81 ಇತ್ತು. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ನಾಯಕತ್ವದ ಒತ್ತಡ ತಡೆದುಕೊಳ್ಳಲು ಸಾಧ್ಯವಾಗಲಿಲ್ಲ ಎಂಬುದನ್ನು ನಾವಿಲ್ಲಿ ಗಮನಿಸಬೇಕು.

ವಿಕೆಟ್ ಕೀಪಿಂಗ್‌ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದವರ ಪಟ್ಟಿಯಲ್ಲಿ ಧೋನಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ನಾಯಕನಾಗಿ ಅವರು 15 ಪಂದ್ಯಗಳಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ. ಇನ್ನೊಂದು ವಿಷಯದಲ್ಲಿ ನಂ.1. ಅದೇನೆಂದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಟವಾಡಿದ ಸಮಯದ ಬಹುತೇಕ ಅವರು ನಾಯಕನಾಗಿಯೇ ಆಡಿದ್ದಾರೆ. ಅವರು 199 ಪಂದ್ಯಗಳಲ್ಲಿ ನಾಯಕ ನಾಗಿ ಆಡಿದ್ದರೆ, ಆಟಗಾರನಾಗಿ 84 ಪಂದ್ಯಗಳನ್ನು ಮಾತ್ರ ಆಡಿದ್ದಾರೆ. ಇದರರ್ಥ ನಾಯಕನ ಮೇಲಿರುವ ಒತ್ತಡವನ್ನು ಧೋನಿ ಅತ್ಯಂತ ಚೆನ್ನಾಗಿ ನಿಭಾಯಿಸಿದ್ದಾರೆ. ನಾಯಕನಾಗಿ ಅತಿಹೆಚ್ಚು ಅರ್ಧ ಶತಕ ಗಳಿಸಿದವರ ಪಟ್ಟಿಯಲ್ಲಿ ಧೋನಿಯನ್ನು ವಿಶಿಷ್ಠ ವಾಗಿ ಗುರುತಿಸಲಾಗುತ್ತದೆ. ಟಿ೨೦ ಪಂದ್ಯಗಳಲ್ಲಿ ಅತಿ ಹೆಚ್ಚು ಗೆಲುವು ಸಾಧಿಸಿದ ನಾಯಕನೂ ಹೌದು.

ನಾಯಕನಾಗಿ ಅತಿಹೆಚ್ಚು ಏಕದಿನ ಪಂದ್ಯದಲ್ಲಿ ಗೆಲವು ಸಾಧಿಸಿದ ನಾಯಕರ ಪಟ್ಟಿಯಲ್ಲಿ ಧೋನಿಗೆ ಎರಡನೇ ಸ್ಥಾನ. ಅತಿಹೆಚ್ಚು ಏಕದಿನ ಪಂದ್ಯಗಳನ್ನು ಗೆದ್ದು ವಿಶ್ವದ ಅತ್ಯುತ್ತಮ ನಾಯಕರ ಸ್ಥಾನದಲ್ಲಿ ರಿಕಿ ಪಾಂಟಿಂಗ್ ನಂ.1 ಸ್ಥಾನದಲ್ಲಿದ್ದಾರೆ. ಅದು ಅಂಕಿ ಸಂಖ್ಯೆಯ ಲೆಕ್ಕ. ಆದರೆ ನನ್ನ ಪ್ರಕಾರ ಧೋನಿಗೆ ಮೊದಲ ಸ್ಥಾನ ಸಿಗಬೇಕು. ಯಾಕೆಂದರೆ ಧೋನಿ ಕೀಪರ್ ಕೂಡ ಹೌದು. ಏಕದಿನ ಪಂದ್ಯದಲ್ಲಿ ಬೌಲಿಂಗ್ ಮಾಡುವಾಗ ಪ್ರತಿ ಬಾಲ್ ಮೇಲೂ ಗಮನ ಕೇಂದ್ರೀಕರಿಸಬೇಕು. ಜತೆಗೆ ನಾಯಕ ಸ್ಥಾನದ ಒತ್ತಡ. ರಿಕಿ ಪಾಂಟಿಂಗ್ ಒನ್ಡೌನ್ ಆಟಗಾರ. ಆದರೆ ಧೋನಿ ಐದು- ಆರನೇ ಆಟಗಾರನಾಗಿ ಬ್ಯಾಟಿಂಗ್ ಇಳಿಯುತ್ತಿದ್ದರು. ಒಳ್ಳೆಯ ಬ್ಯಾಟಿಂಗ್ ಪಿಚ್‌ನಲ್ಲಿ ಮೇಲಿನ ಕ್ರಮಾಂಕದ ಆಟಗಾರರು ಭರ್ಜರಿ ಆಟ ಪ್ರದರ್ಶಿಸುವುದರಿಂದ ಕೆಳ ಕ್ರಮಾಂಕದಲ್ಲಿ ಆಡು ವವರಿಗೆ ಅವಕಾಶವೇ ಸಿಗುವುದಿಲ್ಲ. ಸಿಕ್ಕರೂ ಕೊನೆಯ ಐದಾರು ಓವರ್ ಗಳು ಮಾತ್ರ. ಹೆಚ್ಚು ಬ್ಯಾಟಿಂಗ್ ಮಾಡುವ ಅವಕಾಶ ಸಿಗುವುದೇ ಅತ್ಯಂತ ಕಡಿಮೆ ರನ್‌ಗಳಿಗೆ ಹೆಚ್ಚು ವಿಕೆಟ್ ಕಳೆದುಕೊಂಡ ಒತ್ತಡದ ಸಮಯದಲ್ಲಿ. ಹೀಗಿರುವಾಗಲೂ ಹೆಚ್ಚು ರನ್ ಗಳಿಸುವುದರ ಜತೆಗೆ ಉತ್ತಮ ನಾಯಕತ್ವವನ್ನೂ ತೋರಿರುವುದು ಧೋನಿಯ ಹೆಗ್ಗಳಿಕೆ.

ಸಾಕಷ್ಟು ಜನ ದಿಗ್ಗಜರು ಕ್ರಿಕೆಟ್ ಆಡಿದ್ದಾರೆ. ಆದರೆ ಮಹೇಂದ್ರ ಸಿಂಗ್ ಧೋನಿ ಎಂಬ ಜಾರ್ಖಂಡ್ ರಾಜ್ಯದ ರಾಂಚಿ ಎಂಬ ಸಣ್ಣ ಊರಿನಿಂದ ಕ್ರಿಕೆಟ್ ವಿಶ್ವಕ್ಕೆ ಕಾಲಿಡುವವರೆಗೂ ಹೆಲಿಕಾಪ್ಟರ್ ಶಾಟ್ ಎಂಬ ಹೆಸರೇ ಇರಲಿಲ್ಲ. ಅಲ್ಲಿಯವರೆಗೂ ಯಾರ್ಕರ್ ಎಂದರೆ ಬೌಲರ್ ಗಳ ಬ್ರಹ್ಮಾಸ್ತ್ರ ಎಂದೇ ಭಾವಿಸಲಾಗಿತ್ತು. ಯಾರ್ಕರ್ ಹಾಕಿದರೆ ಅದರಿಂದ ಬೋಲ್ಡ್ ಆಗದೇ ಬಚಾವ್ ಆಗುವು ದೊಂದೇ ಮಾರ್ಗವಾಗಿತ್ತು. ಆದರೆ ಯಾರ್ಕರ್ ಬಾಲನ್ನೂ ಸಿಕ್ಸರ್ ಬಾರಿಸುವುದು ಹೇಗೆ ಎಂಬ ಅನೂಹ್ಯ ಕಲೆಯನ್ನು ಧೋನಿಯೇ ತೋರಿಸಿದ್ದು. ಬೌಲರ್ ಗಳು ಬ್ರಹ್ಮಾಸ್ತ್ರ ಪ್ರಯೋಗ ಮಾಡಲೇ ಹೆದರುವಂತೆ ಮಾಡಿದ್ದು ಧೋನಿಯ ಹೆಗ್ಗಳಿಕೆ. ಇದೇ ಹೆಲಿಕಾಪ್ಟರ್ ಶಾಟ್ ಮೂಲಕ ಹಲವು ಗೆಲುವುಗಳನ್ನು ತಂದುಕೊಟ್ಟಿದ್ದಾರೆ. 2011ರ ವಿಶ್ವಕಪ್ ನಲ್ಲಿ ಸಿಕ್ಸರ್ ಹೊಡೆದ ರೀತಿ ಎಂದಿಗೂ ಮರೆಯಲು ಸಾಧ್ಯವಿಲ್ಲ.

ಧೋನಿಗೂ ಉಳಿದ ಕ್ರಿಕೆಟ್ ಆಟಗಾರರಿಗೂ ಇದ್ದ ವ್ಯತ್ಯಾಸವೆಂದರೆ ಲೆಕ್ಕಾಚಾರ. ಕೊನೇ ಕ್ಷಣದಲ್ಲಿ ಯಾವ ಯಾವ ಬೌಲರ್‌ಗಳಿದ್ದಾರೆ ? ಎಷ್ಟು ಬಾಲ್‌ಗಳಿವೆ? ಎಷ್ಟು ರನ್ ಬೇಕು? ಯಾವ ಬೌಲರ್ ಗೆ ಕೊನೆಯ ಓವರ್ ನೀಡಬಹುದು? ಯಾವ ಬೌಲರ್ ನನ್ನು ಟಾರ್ಗೆಟ್ ಮಾಡಬೇಕು? ಎಂಬಿತ್ಯಾದಿ ಲೆಕ್ಕವೆಲ್ಲ ಅವರ ತಲೆಯಲ್ಲಿ ಸರಾಗವಾಗಿ ಸುತ್ತುತ್ತಿತ್ತು. ಎಷ್ಟೇ ಒತ್ತಡವಿದ್ದರೂ ಅದನ್ನು ಎಂದು ಧೋನಿ ತೋರಿಸಿಕೊಂಡಿದ್ದೇ ಇಲ್ಲ. ಕೊನೆಯ ಓವರ್ ನಲ್ಲಿ 20 ರನ್ ಬೇಕಿದ್ದರೂ ಅತ್ಯಂತ ನಿರಾಳವಾಗಿ ಬ್ಯಾಟಿಂಗ್ ನಿಲ್ಲುತ್ತಿದ್ದ. ಬಹುಶಃ ಈ ನಿರಾಳ ಅಥವಾ ಸ್ಥೈರ್ಯವೇ ಬೌಲರ್ ನನ್ನು ಕುಗ್ಗಿಸುತ್ತಿತ್ತು. ಅದೇ ಅವರ ಯಶಸ್ಸಿನ ಗುಟ್ಟು.

ಅವರು ಎಷ್ಟು ನಿರಾಳವಾಗಿರುತ್ತಿದ್ದರು ಎಂಬುದನ್ನು ಕೆಲವರ್ಷಗಳ ಹಿಂದೆ ಸಂಜಯ್ ಮಾಂಜ್ರೇಕರ್ ಹೇಳಿದ ಮಾತುಗಳಿಂದ ಅರ್ಥಮಾಡಿಕೊಳ್ಳಬಹುದು. ಮಾಂಜ್ರೇಕರ್ ಆಗ ಆಯ್ಕೆ ಸಮಿತಿಯಲ್ಲಿದ್ದರು. ಅವರು ಧೋನಿಯನ್ನು ನಾಯಕನನ್ನಾಗಿ ಮಾಡುವ ಬಗ್ಗೆ ಯೋಚಿಸುತ್ತಿದ್ದರು. ಅದಕ್ಕೂ ಮೊದಲು ಅವರ ಜತೆ ಒಂದಷ್ಟು ಸಂಗತಿಗಳನ್ನು ಚರ್ಚಿಸಲು ಬಯಸಿದ್ದರು. ಇಬ್ಬರೂ ಒಂದೇ ದಿನ ಕೋಲ್ಕತಾಗೆ ಹೋಗುತ್ತಿರುವ ವಿಷಯ ತಿಳಿಯಿತು. ಆಗ ಮಾಂಜ್ರೇಕರ್ ಅವರೇ ತಮ್ಮ ವಿಮಾನ ಬದಲಿಸಿ ಧೋನಿ ಜತೆಗೆ ಪ್ರಯಾಣ ಬೆಳೆಸಿದರು. ಎರಡು ತಾಸು ವಿಮಾನದಲ್ಲಿ ಮಾತಾಡಬಹುದು ಎಂಬುದು ಮಾಂಜ್ರೇಕರ್ ಅವರ ಇರಾದೆಯಾಗಿತ್ತು. ಆದರೆ ವಿಮಾನ ನೆಲ ಬಿಟ್ಟು ಹಾರುತ್ತಿದ್ದಂತೆ ನಿದ್ರೆಗೆ ಜಾರಿದ ಧೋನಿ ಕೋಲ್ಕತಾದಲ್ಲಿ ವಿಮಾನ ಲ್ಯಾಂಡ್ ಆದಾಗಲೇ ಎಚ್ಚರಗೊಂಡಿದ್ದು!

ಚಿಂತೆ ಇಲ್ಲದವನಿಗೆ ನಿದ್ರಿಸಲು ಸಂತೆಯಾದರೇನು ವಿಮಾನವಾದರೇನು! ಎಲ್ಲರೂ ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುತ್ತಾರೆ. ಆದರೆ ಧೋನಿ ಆ ಮಾತಿಗೆ ಅಪವಾದ. ಯಾಕೆಂದರೆ ಅವರು ಮೊದಲು ಆಡುತ್ತಿದ್ದುದು ಹಾಕಿ. ಅವರು ಶಾಲೆಯಲ್ಲಿ ಹಾಕಿ ತಂಡದ ಗೋಲ್ ಕೀಪರ್ ಆಗಿದ್ದರು! ಗೋಲ್ ಕೀಪರ್ ಆಗಿದ್ದ ಅನುಭವದ ಆಧಾರದಲ್ಲಿ ಕ್ರಿಕೆಟ್ ಆಡುವಾಗ ವಿಕೆಟ್ ಕೀಪಿಂಗ್ ಸಿಗುತ್ತಿತ್ತು. ವಿಕೆಟ್ ಕೀಪಿಂಗ್‌ಗಾಗಿಯೇ ಧೋನಿ ಭಾರತ ತಂಡಕ್ಕೂ ಆಯ್ಕೆಯಾಗಿದ್ದು. 1997–&98ರಲ್ಲಿ 16 ವರ್ಷದೊಳಗಿನವರ ವಿನು ಮಂಕಡ್ ಪಂದ್ಯಾವಳಿಯಲ್ಲಿ ಧೋನಿಯ ಆಟ ಆಯ್ಕೆದಾರರ ಗಮನ ಸೆಳೆಯಿತು. ಅಲ್ಲಿಂದ 19 ವರ್ಷದೊಳಗಿನವರ ತಂಡ, ನಂತರ ಬಿಹಾರ ರಣಜಿ ತಂಡಕ್ಕೆ ಆಯ್ಕೆಯಾದರು. ರಣಜಿಯಲ್ಲಿ ಅಸ್ಸಾಂ ವಿರುದ್ಧದ ಮೊದಲ ಪಂದ್ಯದಲ್ಲಿ ಗಳಿಸಿದ್ದು 68 ರನ್. ಆದರೂ ರಣಜಿಯಲ್ಲಿ ೨೦೦೩ರವರೆಗೂ ಧೋನಿಯ ಸರಾಸರಿ 40 ರನ್ ಮಾತ್ರ.

ಧೋನಿ ಕ್ರಿಕೆಟ್ ಜೀವನದಲ್ಲಿ ತಿರುವು ನೀಡಿದ್ದು ಭಾರತ ‘ಎ’ ತಂಡಕ್ಕೆ ಆಯ್ಕೆಯಾಗಿದ್ದು. 2003ರಲ್ಲಿ ಕೀನ್ಯಾದಲ್ಲಿ ನಡೆದ ಪಾಕಿಸ್ತಾನ, ಭಾರತ ಮತ್ತು ಕಿನ್ಯಾದ ‘ಎ’ ತಂಡಗಳ ತ್ರಿಕೋನ ಸರಣಿಯಲ್ಲಿ ಧೋನಿ ೭೦ ರನ್‌ಗಳ ಸರಾಸರಿಯಲ್ಲಿ ಒಟ್ಟು 362 ರನ್ ಗಳಿಸಿದರು. ಅದರಲ್ಲಿ ಪಾಕಿಸ್ತಾನದ ವಿರುದ್ಧದ ಎರಡು ಶತಕ ಸೇರಿತ್ತು. ಇದು ಭಾರತ ಕ್ರಿಕೆಟ್ ತಂಡದ ಆಯ್ಕೆದಾರರ ಗಮನ ಸೆಳೆಯಿತು.

ಬಾಂಗ್ಲಾದೇಶದ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಧೋನಿ ಮೊದಲ ಪಂದ್ಯದಲ್ಲಿ ಸೊನ್ನೆಗೆ ರನ್ ಔಟ್! ಧೋನಿಯ ನಿಜವಾದ ಪರಿಚಯವಾಗಿದ್ದು ಅವರ ಐದನೇ ಏಕದಿನ ಪಂದ್ಯದಲ್ಲಿ ಅವರು ಪಾಕಿಸ್ತಾನ ವಿರುದ್ಧ 123 ಎಸೆತಗಳಲ್ಲಿ 148 ರನ್ ಗಳಿಸಿದಾಗ. ಆಗ ಭಾರತದ ಕ್ರಿಕೆಟ್ ಅಭಿಮಾನಿಗಳೆಲ್ಲ ಒಮ್ಮೆ ಈ ಉದ್ದ ಕೂದಲಿನ ಹುಡುಗನತ್ತ ಅಚ್ಚರಿಯ ದೃಷ್ಟಿ ಬೀರಿದರು. 2005ರಲ್ಲಿ ನವೆಂಬರ್‌ನಲ್ಲಿ ಪಂದ್ಯವೊಂದರಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 299 ರನ್‌ಗಳ ಗುರಿ ನೀಡಿತ್ತು. ಆ ಪಂದ್ಯದಲ್ಲಿ ಧೋನಿಯೊಬ್ಬರೇ 143 ಎಸೆತಗಳಲ್ಲಿ 183 ರನ್ ಬಾರಿಸಿ, ಗೆಲುವು ತಂದಿತ್ತರು.

ಸಾಮಾನ್ಯವಾಗಿ ವಿಕೆಟ್ ಕೀಪರ್ ಗಳು ಒಳ್ಳೆಯ ಬ್ಯಾಟಿಂಗ್ ಮಾಡಿದರೆ ಅದು ಬೋನಸ್. ಆದರೆ ಧೋನಿಯ ವಿಷಯದಲ್ಲಿ ಕೀಪಿಂಗೇ ಬೋನಸ್ ಎಂಬಂತಾಗಿದೆ. ಧೋನಿ ಇಷ್ಟೆಲ್ಲ ಗೆಲುವುಗಳನ್ನು ತಂದುಕೊಟ್ಟರೂ ಬೀಗಲಿಲ್ಲ. ಸೋತಾಗ ಜರ್ಜರಿತ ರಾಗಲಿಲ್ಲ. ಸೋಲು ಗೆಲುವನ್ನು ಸಾಮನವಾಗಿ ಸ್ವೀಕರಿಸುವ ಗುಣ ಧೋನಿಯಲ್ಲಿತ್ತು. ಅವರ ಬ್ಯಾಟಿಂಗ್ ಎಷ್ಟು ಅಗ್ರೆಸ್ಸೀವ್ ಆಗಿತ್ತೋ ಅವರು ಅಷ್ಟೇ ಕೂಲ್ ಕ್ಯಾಪ್ಟನ್ ಆಗಿರುತ್ತಿದ್ದರು. ಅದಕ್ಕೇ ಅವರಿಗೆ ಕ್ಯಾಪ್ಟನ್ ಕೂಲ್ ಎಂಬ ಹೆಸರು.

ಧೋನಿ ಈಗ ಭಾರತ ತಂಡದ ನಾಯಕತ್ವ ಬಿಟ್ಟಿರಬಹುದು. ಆದರೆ ಕ್ರಿಕೆಟ್ ಅಲ್ಲ. ಕ್ರಿಕೇಟ್ ಬಿಡುವ ಹೊತ್ತೂ ಅಲ್ಲ. ಅಂತಲ್ಲಿ ಅವರ ನಿವೃತ್ತಿಯ ಬಗ್ಗೆ ಚರ್ಚೆಗಳಾಗುತ್ತಿವೆ. ರಟ್ಟೆಯಲ್ಲಿ ಕಸುವು, ಎದೆಯಲ್ಲಿ ಕಿಚ್ಚು ಇನ್ನೂ ಇರುವಾಗ ನಿವೃತ್ತಿಯ ಮಾತೇಕೆ ಬರುತ್ತಿದೆಯೋ ತಿಳಿಯುತ್ತಿಲ್ಲ. ಅವರು ತಂಡದಲ್ಲಿ ಆಟಗಾರನಾಗಿ ಮುಂದುವರಿಯಲಿದ್ದಾರೆ. ಅವರೀಗ ಅನುಭವೀ ಆಟಗಾರನ ಸ್ಥಾನ ನಿಭಾಯಿಸಬೇಕಿದೆ. ಅವರಿಂದ ಇನ್ನಷ್ಟು ಕೊನೆಯ ಓವರ್ ಗಳ ಆಟ, ಹೆಲಿಕಾಪ್ಟರ್ ಶಾಟ್‌ಗಳನ್ನು ನೋಡಲು ಅಭಿಮಾನಿಗಳು ಇನ್ನೂ ಕಾತರರಾಗಿದ್ದಾರೆ. ಆದರೆ ಸದಾ ಅವರೇ ಬಂದು ಕೊನೆಯ ಓವರ್ ನಲ್ಲಿ ಪಂದ್ಯ ಗೆಲ್ಲಿಸುತ್ತಾರೆಂದು ನಿರೀಕ್ಷಿಸುವುದು ತಪ್ಪಾದೀತು. ಕಾಲಕ್ಕೆ ತಕ್ಕಂತೆ ಅವರ ಆಟ, ಜವಾಬ್ದಾರಿ ಬದಲಾಗಬಹುದು. ಅವರ ಜವಾಬ್ದಾರಿಯನ್ನು ಹೊಸಬರು ನಿಭಾಯಿಸಬಲ್ಲರೇನೊ. ಇಲ್ಲಿ ಇನ್ನೊಂದು ಪ್ರಸಂಗ ಹೇಳಲೇಬೇಕು.

ಧೋನಿ ಮೈದಾನದಲ್ಲಿ ಮಾತ್ರ ಭರ್ಜರಿ ಬ್ಯಾಟ್ ಬೀಸುತ್ತಿದ್ದರು ಎಂದು ಭಾವಿಸಬೇಡಿ. ಪತ್ರಿಕಾಗೋಷ್ಠಿಗಳಲ್ಲೂ ಅವರು ಬಾರಿಸಿದ ಸಿಕ್ಸರ್‌ಗಳಿಗೆ ಕೊರತೆಯಿಲ್ಲ. ಒಮ್ಮೆ ವಿದೇಶದಲ್ಲಿ ಪತ್ರಕರ್ತನೊಬ್ಬ ಅವರಿಗೆ ಇತ್ತೀಚೆಗೆ ನೀವು ಯಾವಾಗ ನಿವೃತ್ತಿ ಯಾಗುತ್ತೀರಾ? ಎಂಬ ಪ್ರಶ್ನೆ ಕೇಳಿದ್ದ. ಬಹುಶಃ ಬೇರೆಯವರಾಗಿದ್ದರೆ ಸಿಟ್ಟಿಗೇಳುತ್ತಿದ್ದರೇನೊ. ಆದರೆ ಧೋನಿ ಆ ಪತ್ರಕರ್ತನನ್ನೇ ವೇದಿಕೆಗೆ ಕರೆದು, ಅವನ ಬಳಿ ಮೈದಾನದಲ್ಲಿ ನಾನು ರನ್‌ಗಾಗಿ ಓಡುವುದನ್ನು ನೋಡಿದಾಗ ನಾನು ಫಿಟ್ ಇದ್ದೇನೆಂದು ಅನ್ನಿಸುವುದಿಲ್ಲವೇ? ಎಂದು ಪ್ರಶ್ನಿಸಿದರು. ಆತ ಖಂಡಿತ ಫಿಟ್ ಇದ್ದೀರಿ ಅಂದ. ನನ್ನ ಫಿಟ್ನೆಸ್ ಮತ್ತು ರನ್‌ ಗಳಿಕೆಗಳನ್ನು ನೋಡಿದರೆ ನಾನು 2019ರ ವಿಶ್ವಕಪ್ ತನಕ ಆಡಬ ಎನಿಸುತ್ತದೆಯೇ? ಎಂದು ಪ್ರಶ್ನಿಸಿದರು. ಅದಕ್ಕೂ ಆ ಪತ್ರಕರ್ತರ ಖಂಡಿತ ಆಡಬಲ್ಲಿರಿ ಎಂದ.

ನೀವು ಕೇಳಿದ ಪ್ರಶ್ನೆಗೆ ನೀವೇ ಉತ್ತರಿಸಿದ್ದೀರಿ ಎಂದು ಹೇಳಿ ಧೋನಿ ಪತ್ರಿಕಾಗೋಷ್ಠಿ ಮುಗಿಸಿದ್ದರು. ಕ್ರಿಕೆಟ್ ಇಷ್ಟಪಡುವವರು ಧೋನಿಯಿಂದ ಕ್ರಿಕೆಟ್ ಕಲಿಯಬಹುದು. ಆದರೆ ನಾವೆಲ್ಲರೂ ಅವರಿಂದ ಕಲಿಯಬೇಕಾದ್ದು ಸಾಕಷ್ಟಿದೆ. ಜೀವನದಲ್ಲೂ ಕ್ರಿಕೆಟ್‌ ನಂತೆ ಸೋಲು ಗೆಲುವುಗಳಿರುತ್ತವೆ. ಹೇಗೆ ಎರಡನ್ನೂ ಸಮಚಿತ್ತದಿಂದ ಸ್ವೀಕರಿಸಬೇಕು. ಸೋಲು ಬಂದಾಗ ಕುಗ್ಗದೆ, ಗೆಲುವು ಸಿಕ್ಕಾಗ ತುಂಬ ಹಿಗ್ಗದಿರುವುದನ್ನು ಧೋನಿಯಿಂದ ಕಲಿಯಬೇಕು. ನಾವು ಚಿಕ್ಕ ಚಿಕ್ಕ ವಿಷಯಕ್ಕೆ ಕೂಗಾಡುತ್ತೇವೆ. ಸಿಟ್ಟಾ ಗುತ್ತೇವೆ. ಎಂತಹ ಒತ್ತಡದ ಪರಿಸ್ಥಿತಿಯೇ ಇರಲಿ, ಯಾರೇ ಕ್ಯಾಚ್ ಬಿಡಲಿ, ಪಂದ್ಯ ಸೋಲಲಿ ಧೋನಿ ಕೂಗಾಡಿದ್ದು, ಕೈ ತೋರಿಸಿದ್ದು, ಮುಖದಲ್ಲಿ ಅಸಹನೆ ತೋರಿದ್ದನ್ನು ಯಾರೂ ನೋಡಿಲ್ಲ. ಧೋನಿಯ ಅಸಹನೆಯ ಮುಖವನ್ನು ಬಹುಶಃ ಯಾರೂ ನೋಡಿಯೇ ಇಲ್ಲ. ಧೋನಿಯ ಕ್ರಿಕೆಟ್‌ನಲ್ಲಿ ಜೀವನದ ಪಾಠವೂ ಇದೆ. ಹಳೆ ಕ್ರಿಕೆಟಿಗರ ಮಾತುಗಳಿಗೆ ಅವರ ಮೌನ ಅಸಹಾ ಯಕತೆಯಲ್ಲ, ಆ ಮೌನಕ್ಕೆ ಸಾವಿರ ಪದಗಳ ಅರ್ಥವಿದೆ. ಬಹುಶಃ ಅದರ ಅರ್ಥವನ್ನು ಚೆನ್ನಾಗಿ ಅರ್ಥೈಸಿಕೊಂಡವರು ರವಿಶಾಸಿ ಮಾತ್ರ ಇರಬೇಕು. ಅಂದ ಹಾಗೆ, ಧೋನಿ ನಿವೃತ್ತರಾಗಬೇಕೆನ್ನುತ್ತಿರುವ ಮಾಜಿ ಕ್ರಿಕೆಟಿಗರು ಒಮ್ಮೆ ಅವರ ದಾಖಲೆಗಳು, ಗೆಲ್ಲಿಸಿ ಕೊಟ್ಟ ಪಂದ್ಯಗಳನ್ನೊಮ್ಮೆ ಸಿಂಹಾವಲೋಕನ ಮಾಡಿಕೊಳ್ಳುವುದೊಳ್ಳೆಯದು.

 

Comments are closed.