Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಕೊಡಗಿಗೆ ಜನರಲ್‌ಗಳು ಬರುವುದೆಂದರೆ ಊರಿಗೇ ಹಬ್ಬ ಬಂದಂತೆ

ಕೊಡಗಿಗೆ ಜನರಲ್‌ಗಳು ಬರುವುದೆಂದರೆ ಊರಿಗೇ ಹಬ್ಬ ಬಂದಂತೆ

ಕೊಡಗಿಗೆ ಜನರಲ್‌ಗಳು ಬರುವುದೆಂದರೆ ಊರಿಗೇ ಹಬ್ಬ ಬಂದಂತೆ

ಕೊಡಗಿನಲ್ಲಿ ನಾಟಿ ಕೆಲಸವಿರಲಿ, ಕಟಾವಿನ ಭರಾಟೆಯಿರಲಿ, ಕಾಫಿಯ ಸೀಸನ್ನೇ ಇರಲಿ ಬೆಳಗೆದ್ದು ಕ್ಷೌರ ಮುಗಿಸಿ ಟಾಕುಠೀಕಾಗಿ ತಯಾರಾಗಿ ಪೇಟೆಗೆ ಹೋಗುವ ಮಧ್ಯವಯಸ್ಕರನ್ನು ಕಂಡರೆ ನಿಸ್ಸಂಶಯವಾಗಿ ಅವರು ಮಾಜಿ ಯೋಧರೆಂದೇ ಅರ್ಥ! ಪುಟಿಯುವ ಚೆಂಡಿನಂಥಾ ಉತ್ಸಾಹ, ಬಿರುಸಾದ ನಡಿಗೆ, ಮಾತಿನಲ್ಲಿ ಶಿಸ್ತು, ಸಮಯದಲ್ಲಿ ಕಟ್ಟುನಿಟ್ಟು. ಅಂಥ ಮಾಜಿ ಯೋಧರು ಕೆಲದಿನಗಳಿಂದ ಎಂದಿಗಿಂತ ಹೆಚ್ಚು ಉಲ್ಲಸಿತರಾಗಿದ್ದರು. ಏಕೆಂದರೆ ಅವರ ಮೆಚ್ಚಿನ ಚೀಫ್ ‘ಆಫ್ ಆರ್ಮಿ ಸ್ಟಾಫ್’ ಇಂದು ಕೊಡಗಿಗೆ ಆಗಮಿಸುತ್ತಿದ್ದಾರೆ. ಅದರಲ್ಲೂ ದಕ್ಷಿಣ ಕೊಡಗಿನ ಗೋಣಿಕೊಪ್ಪಕ್ಕೆ ಬರುತ್ತಿರುವುದರಿಂದ ಎಲ್ಲರ ಉತ್ಸಾಹ ಹೆಚ್ಚಿತ್ತು. ಮಿಲಿಟರಿ ಮುಖ್ಯಸ್ಥರ ಕೊಡಗು ಭೇಟಿ ಇದೇ ಮೊದಲೇನಲ್ಲ. ಆದರೆ ಈ ಭೇಟಿ ಎಲ್ಲಾ ಭೇಟಿಗಿಂತ ವಿಶೇಷ.

1972ರಲ್ಲಿ ಫೀಲ್ಡ್‌ ಮಾರ್ಷಲ್ ಮಾಣಿಕ್ ಷಾ
1979-80ರಲ್ಲಿ ಜನರಲ್ ಓಂ ಪ್ರಕಾಶ್ ಮಲೊತ್ರಾ
1991-91ರಲ್ಲಿ ಜನರಲ್ ಸುನಿತ್ ಫ್ರಾನ್ಸಿಸ್ ರೋಡ್ರಿಗಸ್
1996ರಲ್ಲಿ ಜನರಲ್ ಶಂಕರ್ ರಾವ್ ಚೌಧರಿ
2015ರಲ್ಲಿ ಜನರಲ್ ದಲ್ಬಿರ್ ಸಿಂಗ್ ಸುಹಾಗ್ ಕೊಡಗಿನ ಮುಖ್ಯಪಟ್ಟಣ ಮಡಿಕೇರಿಗೆ ಬಂದಿದ್ದರು. ಇದೀಗ ಗೋಣಿಕೊಪ್ಪ ದೇಶದ 26ನೇ ಚೀಫ್ ಆಫ್ ಆರ್ಮಿ ಸ್ಟಾಫ್ ಆಗಮನಕ್ಕೆ ಲವಲವಿಕೆಯಿಂದ ಸಜ್ಜುಗೊಂಡಿದೆ. ಕೊಡಗಿನ ಕಣ್ಮಣಿಗಳೆಂದೇ ಹೆಸರಾದ ಜನರಲ್ ಕಾರ್ಯಪ್ಪ ಮತ್ತು ತಿಮ್ಮಯ್ಯರ ಪುತ್ಥಳಿಗಳ ಅನಾವರಣ ಮುಖ್ಯಸ್ಥರ ಹಸ್ತದಿಂದ ಆಗಲಿದೆ. ದಕ್ಷಿಣ ಕೊಡಗಿನಲ್ಲಿ ಇದೇ ಮೊದಲ ಬಾರಿಗೆ ಪ್ರತಿಮೆಗಳು ನಿಂತಿರುವುದು ಮಾಜಿಗಳಷ್ಟೇ ಅಲ್ಲದೆ ನಾಗರಿಕರ ಉಲ್ಲಾಸಕ್ಕೆ ಮತ್ತೊಂದು ಕಾರಣ. ಹಲವು ವರ್ಷಗಳ ನಿವೃತ್ತರ ಶ್ರಮ, ಶ್ರದ್ಧೆಯ ಫಲದಿಂದ ಇಂದು ಪ್ರತಿಮೆಗಳ ಅನಾವರಣವಾಗಲಿದೆ.

ಕೊಡಗಿಗೆ ಜನರಲ್‌ಗಳು ಬರುವುದೆಂದರೆ ಊರಿಗೇ ಒಂದು ಹಬ್ಬದಂತೆ. ಈವರೆಗೆ ಬಂದ ಎಲ್ಲಾ ಜನರಲ್‌ಗಳ ಲೆಕ್ಕವನ್ನೂ ಕೊಡಗು ಇಟ್ಟುಕೊಂಡಿದೆ. ಎಲ್ಲಾ ಕಾರ್ಯಕ್ರಮಗಳ ನೆನಪುಗಳೂ ಮಡಿಕೇರಿಗೆ ಇನ್ನೂ ಹಸಿರಾಗಿದೆ. ಏಕೆ ಹೀಗೆ? ಮಿಲಿಟರಿ ಮುಖ್ಯಸ್ಥರು ದೇಶದ ನಾನಾ ಭಾಗಗಳಿಗೆ ಕಾರ್ಯ ನಿಮಿತ್ತ ಪ್ರವಾಸ ಕೈಗೊಳ್ಳುತ್ತಾರೆ. ನಾನಾ ಭಾಗಗಳಲ್ಲಿ ಮಾಜಿಗಳನ್ನು ಭೇಟಿಯಾಗುತ್ತಾರೆ. ಆದರೆ ಕೊಡಗೇಕೆ ಈ ಪರಿಯಲ್ಲಿ ಜನರಲ್ ಆಗಮನಕ್ಕೆ ಸಿದ್ಧವಾಗುತ್ತದೆ?

ಇಲ್ಲಿ ಇನ್ನೂ ಒಂದು ವಿಷಯವಿದೆ. ಈ ಜನರಲ್‌ಗಳ ಭೇಟಿಯಿಂದ ಕೊಡಗಿನ ಜನ ಎಷ್ಟೊಂದು ಪುಳಕಗೊಳ್ಳುತ್ತಾರೋ ಭೇಟಿ ನೀಡಿದ ಜನರಲ್‌ಗಳೂ ವೀರಭೂಮಿಯ ನೆಲವನ್ನು ಸ್ಪರ್ಶಿಸಿ ಪುಳಕಗೊಳ್ಳುತ್ತಾರೆ. ಈ ಐದು ಜನ ಜನರಲ್‌ಗಳು ಮಾತ್ರ ಅಲ್ಲ. ಇದುವರೆಗೆ ಆಗಿಹೋದ ಎಲ್ಲಾ ಜನರಲ್‌ಗಳಿಗೂ ಕೊಡಗು ಎಂದರೆ ಅದೇನೋ ಕುತೂಹಲ, ಸೆಳೆತ. ಎಲ್ಲರಿಗೂ ಇಲ್ಲಿನ ಮಾಜಿಗಳೊಡನೆ ಬೆರೆಯುವ ಹಂಬಲ. ವೀರಯೋಧರ ವಿಧವೆ ಪತ್ನಿಯರೊಡನೆ, ಮಕ್ಕಳೊಡನೆ ಮಾತಾಡುವ ಉಮೇದು. ಹಳೆಯ ಗೆಳೆಯರೊಡನೆ ಕುಳಿತು ಊಟ ಮಾಡುವ ಆಸೆ. ಅವರೊಡನೆ ಹಳೆಯ ದಿನಗಳ ನೆನಪು, ಹರಟೆಗಳಿಗೆ ಜೊತೆಯಾಗಲು ಮನಸ್ಸು.

ಕೊಡಗಿಗೆ ಬಂದ ಎಲ್ಲಾ ಜನರಲ್‌ಗಳೂ ನಡೆಸಿದ್ದು ಇಂಥ ಕಾರ್ಯಕ್ರಮವನ್ನೇ. ಹೆಸರಿಗೆ ಅದು ಸೈನಿಕ ಸಮ್ಮೇಳನವಾದರೂ ಅಲ್ಲಿ ನೆರೆದವರಿಗೆ ಅದೊಂದು ಸಂತೋಷ ಕೂಟ. ಇಂದು ಗೋಣಿಕೊಪ್ಪದಲ್ಲೂ ಅಂಥ ಸಂತೋಷ ಕಾಣಲಿದೆ. ಮಾಜಿ ಯೋಧರು ತಿಂಗಳ ಹಿಂದಿನಿಂದಲೇ ಕಾತುರದಿಂದ ಕಾಯುತ್ತಿದ್ದ ದಿನ ಬಂದೇಬಿಟ್ಟಿದೆ. ಎರಡನೆ ಮಹಾಯುದ್ಧದಲ್ಲಿ ಭಾಗವಹಿಸಿದ ವೃದ್ಧರು, 62ರ ಚಳಿಯಲ್ಲಿ ನಲುಗಿದವರು, 71ರ ವಿಜಯವನ್ನು ಕಂಡವರು, ಶಾಂತಿ ಪಾಲನೆಗೆ ವಿದೇಶಕ್ಕೆ ಹೋದವರೆಲ್ಲರನ್ನೂ ಗೋಣಿಕೊಪ್ಪ ಇಂದು ಕಣ್ಣುತುಂಬಿಕೊಳ್ಳಲಿದೆ. ಆದರೆ ಮತ್ತದೇ ಪ್ರಶ್ನೆ! ಕೊಡಗಿನಲ್ಲೇಕೆ ಮಿಲಿಟರಿ ಎಂದರೆ ಅಷ್ಟೊಂದು ಉತ್ಸಾಹ? ಮಹಾನಗರಗಳ ಮಿಲಿಟರಿ ಕಾರ್ಯಕ್ರಮಗಳಲ್ಲಿ ಕಾಣದ ಉಲ್ಲಾಸ ಕೊಡಗಿನಲ್ಲಿ ಮಾತ್ರ ಏಕೆ ಕಾಣುತ್ತದೆ?

ಏಕೆಂದರೆ ಅದು ಕೊಡಗು. ಇದಕ್ಕಿಂತ ಹೆಚ್ಚಿನ ಉತ್ತರವನ್ನೇನೂ ಅದಕ್ಕೆ ನೀಡಲಾಗದು. ಪ್ರಪಂಚದ ಯಾವ ಪ್ರದೇಶವನ್ನಾದರೂ ತೆಗೆದುಕೊಳ್ಳಿ. ಅಲ್ಲಿನ ಭೌಗೋಳಿಕ ಪರಿಸರ, ರಾಜಕೀಯ ಚಟುವಟಿಕೆ, ಸಾಮಾಜಿಕ ವ್ಯವಸ್ಥೆಗಳಿಂದ ಅಲ್ಲಿನ ಪರಿಸರವನ್ನು ಅರಿಯಬಹುದು. ಆದರೆ ಕೊಡಗನ್ನಲ್ಲ. ಕೊಡಗು ತನ್ನ ಪರಿಚಯವನ್ನು ಮಾಡಿಕೊಳ್ಳುವುದೇ ಯೋಧರ ನಾಡು ಎಂಬುದರ ಮೂಲಕ. ಕೊಡಗಿನ ಇತಿಹಾಸ, ಕೊಡಗಿನ ಸಾಮಾಜಿಕ ವ್ಯವಸ್ಥೆ, ಅವಿಭಕ್ತ ಮನೆತನಗಳು, ಕೊಡಗಿನ ಕಾಫಿ, ಜಮ್ಮಾ ಎಂಬ ಆಸ್ತಿಯ ಹಕ್ಕು, ಅವರ ಕೋವಿಯ ಹಕ್ಕು… ಎಲ್ಲವೂ ಸೈನಿಕ ಪರಂಪರೆಯಿಂದ ಹೊರತಾಗಿ ಕಾಣುವುದಿಲ್ಲ. ಇಲ್ಲಿ ಯೋಧರನ್ನು ಹೊರತಾಗಿಸಿ ಕೊಡಗನ್ನು ಸಂಪೂರ್ಣ ಹೇಳಲಾಗುವುದಿಲ್ಲ. ನೀವು ಕೊಡಗಿನ ಬಗ್ಗೆ ಯಾವುದೇ ವಿವರಣೆಗಳನ್ನು ಬೇಕಾದರೂ ಕೊಡಬಹುದು. ಆದರೆ ಕೊಡಗಿನ ಜನರ ದೇಶಭಕ್ತಿಯ ಬಗ್ಗೆ ಸಂದೇಹ ಪಡಲಾರಿರಿ. ಆತ ಯೋಧ, ಮಾಜಿ ಯೋಧನೇ ಆಗಬೇಕಿಲ್ಲ. ಸಾಮಾನ್ಯ ವ್ಯಕ್ತಿಯೂ ದೇಶ ಎಂದರೆ ಎರಡು ಹೆಮ್ಮೆಯ ಮಾತಾಡುತ್ತಾನೆ. ಆಥವಾ ಪಾಕಿಸ್ಥಾನಕ್ಕೆ ವಾಚಾಮಗೋಚರ ಬಯ್ಯುತ್ತಾನೆ! ಮುಲಾಜಿಲ್ಲದೆ ವಾರ್ ಆಗಬೇಕು ಎನ್ನುತ್ತಾನೆ!

ಆಷ್ಟೇ ಏಕೆ ನೀವೆಂದಾದರೂ ಮಡಿಕೇರಿಗೆ ಪ್ರವಾಸ ಹೋಗಿದ್ದರೆ ಕೊಡಗಿನ ಮಿಲಿಟರಿಯ ಹೆಜ್ಜೆ ಗುರುತುಗಳನ್ನು ಕಂಡೇ ಇರುತ್ತೀರಿ. ಫೀ.ಮಾ. ಕಾರ್ಯಪ್ಪನವರ ಮನೆ, ಪ್ರತಿಮೆ, ತಿಮ್ಮಯ್ಯನವರ ಮನೆ ಮತ್ತು ಪ್ರತಿಮೆ, ಮುಂದೆ ಸಾಗಿದರೆ ಮೇಜರ್ ಮಂಗೇರಿರ ಮುತ್ತಣ್ಣ ಪ್ರತಿಮೆ, ಬಸ್ ಸ್ಟಾಂಡಿನಲ್ಲಿ ಸ್ಕಾ.ಲಿ.ಎಬಿ ದೇವಯ್ಯ ವೃತ್ತ, ಕೋಟೆ ಬಳಿಯ ಮಹಾಯುದ್ಧದ ಸ್ಮಾರಕ, ರಾಜಾಸೀಟು ಮೂಲಕ ಕೊಡವರ ಸೇನೆ ಇಳಿದುಹೋಗುತ್ತಿದ್ದ ದಾರಿ, ಯೋಧರ ಕಥೆಯನ್ನು ಬಚ್ಚಿಟ್ಟುಕೊಂಡ ಕುಂದುರುಮೊಟ್ಟೆ ಅಮ್ಮನ ಗುಡಿ, ಕೋಟೆಯೊಳಗಿನ ಮುರಿದ ಕಲ್ಲಿನ ಕಂಬ, ಕನ್ನಂಡ ಬಾಣೆ ಎಂಬ ವೀರ ಯೋಧನ ವಂಶಸ್ಥರ ಮನೆ… ಹೀಗೆ ಒಂದು ಪೇಟೆಯಲ್ಲಿ ಯೋಧತನದ ಎಷ್ಟೋ ಕುರುಹುಗಳು. ಇದು ಮಡಿಕೇರಿಯೊಂದರ ಕುರುಹುಗಳು ಮಾತ್ರ. ಕೊಡಗಿನ ಪ್ರತೀ ಊರುಗಳೂ ಮಿಲಿಟರಿಮಯ. ಯಾವ ಮನೆಗೆ ಹೋದರೂ ಅಲ್ಲೊಬ್ಬ ಮಿಲಿಟರಿ ಮನುಷ್ಯನಿರುತ್ತಾನೆ. ಅಥವಾ ಪುರಾತನ ಯೋಧತನದ ಇತಿಹಾಸವನ್ನು ಆ ಮನೆ ಹೊತ್ತುಕೊಂಡಿರುತ್ತವೆ.

ಕೊಡಗಿನ ಎಲ್ಲಾ ಪೇಟೆಗಳಲ್ಲಿ ಒಂದಲ್ಲಾ ಒಂದು ಅಂಗಡಿಯ ಹೆಸರು ಜೈ ಜವಾನ್ ಸ್ಟೋರ್ ಎಂದಿರುತ್ತದೆ. ಮಾಜಿ ಸೈನಿಕರ ಸಂಘ ಎಂಬ ಬಸ್ಸೊಂದು ಮಡಿಕೇರಿಯಿಂದ ವೀರಾಜಪೇಟೆಗೆ ಓಡಾಡುತ್ತದೆ. ಪೇಟೆಯಲ್ಲಿ ಕಾರು ಹತ್ತುವ ಹುರಿ ಮೀಸೆಯ ಅಂಕಲ್‌ಗಳು ಖಂಡಿತ ಕರ್ನಲೋ ಮೇಜರೋ, ಬ್ರಿಗೇಡಿಯರೋ ಆಗಿರುತ್ತಾರೆ. ಶಿಸ್ತಿನಿಂದ ಹ್ಯಾಟು ಹಾಕಿರುವ ಅಜ್ಜಂದಿರು ಯಾವುದೋ ಯುದ್ಧದಲ್ಲಿ ಭಾಗವಹಿಸಿದ ಮಾಜಿ ಯೋಧರಾಗಿರುತ್ತಾರೆ. ಇದು ಕೊಡಗಿನ ಎಲ್ಲಾ ಪೇಟೆಗಳ ಸಾಮಾನ್ಯ ದೃಶ್ಯ. ಪರಿಸ್ಥಿತಿ ಇಂತಿರುವಾಗ ತಮ್ಮ ಚೀಫ್ ಆಫ್ ಆರ್ಮಿ ಸ್ಟಾಫ್ ಬಂದರೆ ಕೊಡಗಿನ ಜನ ಪುಳಕಗೊಳ್ಳದೆ ಹೇಗಿದ್ದಾರು?

ಕೊಡಗಿನ ಯೋಧ ಸಂಸ್ಕೃತಿಯ ಬಗ್ಗೆ ಹಲವು ಕಥೆಗಳಿವೆ. ಆದರೆ ಅವೆಲ್ಲವೂ ದಂತೆಕತೆಗಳೋ, ಗಾಳಿ ಸುದ್ದಿಗಳೋ ಖಂಡಿತಾ ಅಲ್ಲ. ಕೊಡಗಿನಲ್ಲಿ ಯಾರಾದರೊಬ್ಬ ಸಾಮಾನ್ಯ ಮಾಜಿ ಸೈನಿಕ ಚೀಫ್ ಆಫ್ ಆರ್ಮಿ ಸ್ಟಾಫ್ ನನ್ನ ಗೆಳೆಯ ಎಂದರೆ ಅದು ನೂರಕ್ಕೆ ನೂರು ಸತ್ಯ! ಏಕೆಂದರೆ ದಲ್ವೀರ್ ಸಿಂಗ್ ಸುಹಾಗ್ ಚೀಫ್ ಆಗಿದ್ದಾಗ ಅವರ ಗೆಳೆಯರನೇಕರು ಕೊಡಗಿನಲ್ಲಿದ್ದರು. ಪೇಟೆಯಲ್ಲಿ ಸಿಕ್ಕ ಮಾಜಿ ಯೋಧರೊಬ್ಬರು ನಾನು ಚೀನಾ ಯುದ್ಧದಲ್ಲಿ ಸೆರೆಸಿಕ್ಕಿದ್ದೆ ಎಂದರೂ ಅದಕ್ಕೆ ಆಧಾರಗಳಿವೆ. ಏಕೆಂದರೆ ಚೀನಾ ಯುದ್ಧದಲ್ಲಿ ಸುಮಾರು ನಲ್ವತ್ತಕ್ಕೂ ಹೆಚ್ಚಿನ ಕೊಡಗಿನ ಯೋಧರು ಸೆರೆಸಿಕ್ಕಿದ್ದರು. ಇನ್ನೊಬ್ಬ ನನ್ನ ದೊಡ್ಡಪ್ಪ ಯುದ್ಧಕ್ಕೆ ಹೋದವರು ಮರಳಲೇ ಇಲ್ಲ ಎಂದರೆ ಆತ ಸುಳ್ಳು ಹೇಳುತ್ತಿದ್ದಾನೆ ಎಂದಲ್ಲ. ಇಂದಿಗೂ ತವಾಂಗ್ ಪ್ರದೇಶದಲ್ಲಿ ಮುದ್ದಪ್ಪ, ಮಾದಪ್ಪ ಹೆಸರಿನ ಯೋಧರ ಸಮಾಧಿಗಳಿವೆೆ. ಕೊಡವರ ಮನೆ ಮನೆಗಳು ಹೇಳುವ ಪ್ರತೀ ಸೈನ್ಯದ ಕತೆಗಳೂ ಅವರ ಪರಂಪರೆಯನ್ನು ರೂಪಿಸಿವೆ. ಯೋಧತನ ಕೊಡಗಿನ ಸಂಸ್ಕೃತಿಯನ್ನು ರೂಪಿಸಿದೆ.

ಖ್ಯಾತ ಸಂಶೋಧಕ ಡಾ. ಐ.ಎಂ ಮುತ್ತಣ್ಣನವರು 11ನೇ ಶತಮಾನದಲ್ಲೇ ಹೊಯ್ಸಳ ಸೈನ್ಯದ ದಂಡನಾಯಕನಾಗಿ ಮಾದಪ್ಪ ಎಂಬ ಕೊಡವನಿದ್ದ ಎಂಬುದನ್ನು ಎತ್ತಿತೋರಿಸುತ್ತಾರೆ. ಮುಂದೆ ಕೊಡಗು ರಾಜಾಡಳಿತಕ್ಕೆ ಒಳಪಟ್ಟಾಗ ಕುಲ್ಲೇಟಿ ಪೊನ್ನಣ್ಣ, ಅಪ್ಪಚ್ಚೀರ ಮಂದಣ್ಣ, ಕನ್ನಂಡ ದೊಡ್ಡಯ್ಯ ಮುಂತಾದ ಮಹಾ ಮಹಾಯೋಧರನ್ನು ಕೊಡಗು ನೋಡಿತು. ಆದರೂ ಕೊಡಗಿನ ಸೈನಿಕ ಪ್ರಜ್ಞೆಯನ್ನು ಮೊದಲು ಕಂಡುಹುಡುಕಿದವರು ಬ್ರಿಟಿಷರು. ಮೊದಲ ಮಹಾಯುದ್ಧದ ಕಾಲದಲ್ಲಿ ಕೊಡವರ ಮಾರ್ಷಲ್ ಗುಣವನ್ನು ಮನಗಂಡ ಬ್ರಿಟಿಷರು ಕೂರ್ಗ್ ರೆಜಿಮೆಂಟ್ ಅನ್ನು ಸ್ಥಾಪಿಸಿದ್ದರು. ಮೊದಲ ಮಹಾಯುದ್ಧದಲ್ಲಿ ಸಾವಿರಾರು ಸಂಖ್ಯೆಯ ಕೊಡವ ಯೋಧರು ವಿದೇಶಗಳಲ್ಲಿ ಹೋರಾಡಿ ಬ್ರಿಟಿಷರಿಗೆ ಜಯವನ್ನು ತಂದುಕೊಟ್ಟರು.

ಮೊದಲ ಮಹಾಯುದ್ಧದ ಬಳಿಕ ಬ್ರಿಟಿಷರು ಕೂರ್ಗ್ ರೆಜಿಮೆಂಟನ್ನು ವಿಸರ್ಜಿಸಿದ್ದರು. ಆದರೆ ಎರಡನೆ ಮಹಾಯುದ್ಧದ ಹೊತ್ತಿಗೆ ಬ್ರಿಟಿಷರ ಪರಿಸ್ಥಿತಿ ಕುತ್ತಿಗೆಗೆ ಬಂದಿತ್ತು. ವಿಸರ್ಜಿಸಲಾಗಿದ್ದ ಕೂರ್ಗ್ ರೆಜೆಮೆಂಟನ್ನು ಮತ್ತೆ ಸ್ಥಾಪಿಸಲಾಯಿತು. ಕೊಡವ ಸೈನಿಕರು ಬರ್ಮಾ, ಜಪಾನ್, ಆಫ್ರಿಕಾ ದೇಶಗಲ್ಲಿ ಮತ್ತು ಫ್ರಾನ್ಸ್‌‌ಗಳಲ್ಲಿ ತಮ್ಮದಲ್ಲದ ವಾತಾವರಣದಲ್ಲಿ ಸೆಣಸಿದರೂ ಹೆಚ್ಚಿನ ಕ್ಯಾಶ್ವಲ್ಟೀಸ್ ಆಗದೆ ಮರಳಿದ್ದರು. ಅಷ್ಟರವರೆಗೂ ಬ್ರಿಟಿಷ್ ಸೈನ್ಯದಲ್ಲಿದ್ದ ನೇಟಿವ್ ಇಂಡಿಯನ್ಸ್‌ ಎಂಬ ಪಕ್ಷಪಾತ ಧೋರಣೆಯ ಬಿಸಿ ಬ್ರಿಟಿಷರಿಗೆ ತಟ್ಟಿತು. ಅದಕ್ಕೆ ಮೊದಲು ನೇಟಿವ್‌ಗಳನ್ನು ಅಧಿಕಾರಿಗಳನ್ನಾಗಿ ನೇಮಿಸಲು ಹಿಂದೇಟು ಹಾಕುತ್ತಿದ್ದ ಬ್ರಿಟಿಷರು ಕೊಡವ ಯೋಧರನ್ನು ಸೈನ್ಯದಲ್ಲಿ ಅಧಿಕಾರಿಗಳನ್ನಾಗಿ ನೇಮಿಸಲು ಆರಂಭಿಸಿದ್ದರು. ಈ ಹೊತ್ತಲ್ಲಿ ಹಲವು ಕೊಡಗಿನ ಸೈನಿಕರು ಅಧಿಕಾರಿಗಳಾಗಿ ಹೆಸರುವಾಸಿಯಾದರು.

ಡೆಹರಾಡೂನಿನ ಇಂಡಿಯನ್ ಆಫೀಸರ್ಸ್ ಕೆಡೆಟ್‌ಗೆ ಕೊಡಗಿನ ಕಾರ್ಯಪ್ಪ ಮತ್ತು ತಿಮ್ಮಯ್ಯ ಇಬ್ಬರೂ ಆಯ್ಕೆಯಾಗಿ ದೇಶದಲ್ಲೇ ಹೆಸರು ಮಾಡಿದ್ದರು. ಮುಂದೆ ಅವರಿಬ್ಬರೂ ಚೀಫ್ ಆಫ್ ಆರ್ಮಿ ಸ್ಟಾಫ್ ಆಗಿ ಇತಿಹಾಸ ರಚನೆ ಮಾಡಿದರು. ಸ್ವಾತಂತ್ರ್ಯಾನಂತರ ಭಾರತೀಯ ಸ್ವತಂತ್ರ ಸೇನೆಯಲ್ಲಿ ಅಂತಾರಾಷ್ಟ್ರೀಯ ದರ್ಜೆಯ ಅಧಿಕಾರಿಗಳನ್ನು ಸರಕಾರ ಹುಡುಕುತ್ತಿದ್ದಾಗ ಕಂಡವರು ಕೂಡಾ ನಮ್ಮ ಕೊಡಗಿನ ಅಧಿಕಾರಿಗಳೆ. ಇನ್ನೂ ಸ್ವಾತಂತ್ರ್ಯದ ಭಾಷಣದ ಬಿಸಿ ಆರದೇ ಇದ್ದ ಹೊತ್ತಲ್ಲೂ ಕಾಶ್ಮೀರದ ಬಂಡಾಯವನ್ನು ಹತ್ತಿಕ್ಕಿ ಲೇಹ್, ಲಡಾಕ್, ಶ್ರೀನಗರಗಳನ್ನು ರಕ್ಷಿಸಿ, ಉತ್ತರದ ಕಾಶ್ಮೀರದತ್ತ ಸೈನ್ಯವನ್ನು ನುಗ್ಗಿಸಿದವರು ನಮ್ಮ ಕನ್ನಡನಾಡಿನ ಹೆಮ್ಮೆಯ ಕೊಡಗಿನ ಅಧಿಕಾರಿಗಳು. ಇಬ್ಬರು ಚೀಫ್ ಆಫ್ ಆರ್ಮಿ ಸ್ಟಾಫ್‌ಗಳು, ಮೂವತ್ತಕ್ಕೂ ಹೆಚ್ಚಿನ ಲೆಫ್ಟಿನೆಂಟ್ ಜನರಲ್‌ಗಳು, ಅವರಲ್ಲಿ ಆರ್ಮಿ ಮುಖ್ಯಸ್ಥರ ವಿಶೇಷ ಅಧಿಕಾರಿಗಳಾಗಿದ್ದ ಹಲವರು, ನಲ್ವತ್ತಕೂ ಹೆಚ್ಚಿನ ಮೇಜರ್ ಜನರಲ್‌ಗಳು, ಅಷ್ಟೇ ಸಂಖ್ಯೆಯ ಬ್ರಿಗೇಡಿಯರುಗಳು, ಲೆಕ್ಕಕ್ಕೆ ಸಿಗದಷ್ಟು ಲೆ.ಕರ್ನಲ್‌ಗಳು, ಮೇಜರ್‌ಗಳು ದೇಶದಲ್ಲಿ ಕಾಣಸಿಗುವುದು ನಮ್ಮ ಕರ್ನಾಟಕದ ಕೊಡಗಿನಲ್ಲಿ ಮಾತ್ರ.

ಕರ್ನಾಟಕಕ್ಕೆ ಸಿಕ್ಕ ಎರಡು ಮಹಾವೀರ ಚಕ್ರ ಪದಕಗಳಲ್ಲಿ ಇಬ್ಬರೂ ಕೊಡಗಿನ ವೀರರೇ ಎನ್ನುವುದು ಹೆಮ್ಮೆಯಲ್ಲವೇ? ಸ್ವತಂತ್ರ್ಯ ಭಾರತದಲ್ಲಿ ಇದುವರೆಗೆ ಕೊಡಗಿನ ನಲ್ವತ್ತೇಳು ಯೋಧರು ಯುದ್ಧರಂಗದಲ್ಲಿ ವೀರಮರಣ ಹೊಂದಿದ್ದಾರೆ ಎನ್ನುವುದೊಂದೇ ಕೊಡಗಿನ ಯೋಧ ಸಂಸ್ಕೃತಿಯ ಬಗ್ಗೆ ಗೌರವ ತಾಳಲು ಸಾಕು. ಅಂಥ ಮಹಾನ್ ಯೋಧ ಇತಿಹಾಸವನ್ನು ಹೊತ್ತುಕೊಂಡ ನಾಡಿಗೆ ಇಂದು ಸ್ಟಾಫ್ ಆಫ್ ಆರ್ಮಿ ಸ್ಟಾಫ್ ಬರುತ್ತಿದ್ದಾರೆ. ಅದೂ ಇಬ್ಬರು ಮಹಾತ್ಮರ ಪ್ರತಿಮೆಯ ಅನಾವರಣಕ್ಕೆ ಸ್ವತಃ ಸೇನಾ ಮುಖ್ಯಸ್ಥರೇ ಬರುತ್ತಿರುವುದು ದೇಶ ಕೊಡಗಿನ ಯೋಧತನವನ್ನು ಅರ್ಥಮಾಡಿಕೊಂಡಿದ್ದಕ್ಕೆ ಸಾಕ್ಷಿ. ಆದರೆ ಆರು ದಶಕಗಳನ್ನಾಳಿದವರು ಜಿಲ್ಲೆಯ ಸೈನಿಕ ಪ್ರಜ್ಞೆಗೇನು ಕೊಟ್ಟಿದ್ದರು? ಜಿಲ್ಲೆಯಲ್ಲೊಂದು ಆರ್ಮಿಶಾಲೆ ಇರುವುದೊಂದು ಬಿಟ್ಟರೆ ಕೊಡಗಲ್ಲಿ ಯೋಧರಿಗಾಗಲೀ, ಸೈನಿಕ ಪ್ರಜ್ಞೆಗಾಗಲೀ ಏನೆಂದರೆ ಏನನ್ನೂ ಕೊಟ್ಟಿಲ್ಲ.

ದೇಶದ ಮೂರು ಏರ್ ಫೋರ್ಸ್ ಸೆಲೆಕ್ಷನ್ ಬೋರ್ಡ್‌ಗಳಲ್ಲಿ ಒಂದನ್ನು ಮ್ಯೆೆಸೂರಿಗೆ ಕೊಟ್ಟಿಿದ್ದು ಬಿಟ್ಟರೆ ಕೊಡಗು ಮತ್ತು ಕೊಡಗಿನ ಒತ್ತಿನ ಮ್ಯೆಸೂರಿನಲ್ಲಿ ಯೋಧರಿಗೆ ಏನೇನೂ ಇಲ್ಲ. ಮಡಿಕೇರಿಯಲ್ಲಿ ಮಿಲಿಟರಿ ಕ್ಯಾಂಟಿನ್ ಒಂದಿದೆಯಾದರೂ ಅದಕ್ಕಿಂತ ಸೂಪರ್ ಮಾರ್ಕೆಟುಗಳೇ ವಾಸಿ. ಬಿಎಸ್‌ಎಫ್ ಯೋಧರ ಕ್ಯಾಂಟಿನ್ ಮತ್ತು ವೈದ್ಯಕೀಯ ಸೌಲಭ್ಯಕ್ಕೆ ಕೊಡಗಿನ ಯೋಧ ಬೆಂಗಳೂರಿಗೆ ತೆರಳಬೇಕು. ಕೊಡಗಿನಲ್ಲಿ ಮೊದಲಿನಿಂದಲೂ ಕಮಿಶನ್ಡ್‌ ಪರೀಕ್ಷೆ ತೆಗೆದುಕೊಳ್ಳುವ ಯುವಕರ ಸಂಖ್ಯೆ ಹೆಚ್ಚಿತ್ತು. ಆದರೆ ಕಳೆದ ಅರವತ್ತು ವರ್ಷಗಳಿಂದ ಕೊಡಗಿನಲ್ಲಿ ರೆಜಿಮೆಂಟಲ್ ರೆಕಾರ್ಡ್ ಆಫೀಸ್ ಸ್ಥಾಪನೆ ಮಾಡಲು ಇಲ್ಲಿ ಆಳಿದವರಿಗೆ ಆಗಲಿಲ್ಲ. ರೆಜಿಮೆಂಟಲ್ ರೆಕಾರ್ಡ್ ಆಫೀಸ್ ಬಿಡಿ ಸೈನ್ಯಕ್ಕೆ ಇಷ್ಟೊಂದು ಸಂಖ್ಯೆಯಲ್ಲಿ ಯೋಧರನ್ನು ಕೊಟ್ಟ ಊರಲ್ಲಿ ರೆಜಿಮೆಂಟಲ್ ಸೆಂಟರೇ ಇಲ್ಲ!

ಕೊಡಗಿನ ಸೈನಿಕ ಇತಿಹಾಸಕ್ಕೆ ಇಲ್ಲೊಂದು ಸೈನ್ಯದ ಊನಿಟ್ಟೇ ಇರಬೇಕಿತ್ತು. ತರಬೇತಿ ಕೇಂದ್ರ ಎಂದೋ ಸ್ಥಾಪನೆಯಾಗಿ ಅದು ಹಳೆಯದಾಗಿರಬೇಕಿತ್ತು. ಕನಿಷ್ಠ ಇಬ್ಬರು ಜನರಲ್‌ಗಳ ಮನೆಗಳನ್ನಾದರೂ ವ್ಯವಸ್ಥಿತ ಮ್ಯೂಸಿಯಂ ಆಗಿ ಮಾಡಬಹುದಿತ್ತು. ಅವರ ಪಠ್ಯಗಳನ್ನು ಹೊರತರಬಹುದಿತ್ತು. ಆದರೆ ಕೆಲವರು ಅರವತ್ತು ವರ್ಷಗಳಿಂದ ಕೈಕಟ್ಟಿ ಕುಳಿತು ನಾಳೆ ರಾತ್ರಿಯೊಳಗಾಗಿ ಇವೆಲ್ಲವನ್ನೂ ಮೋದಿ ಸರಕಾರ ಮಾಡಬೇಕು ಎಂದು ಆರೋಪಿಸುತ್ತಿದ್ದಾರೆ! ಎರಡು ವರ್ಷಗಳ ಹಿಂದೆ ಜಿಲ್ಲೆಗೆ ಭೇಟಿ ನೀಡಿದ ರಕ್ಷಣಾ ಸಚಿವರ ಸೇನಾ ಅಕಾಡೆಮಿ ಸ್ಥಾಪಿಸುವ ನಿರ್ಧಾರ, ಇದೀಗ ಬಿಪಿನ್ ರಾವತರ ಆಗಮನ, ಪ್ರತಿಮೆಗಳ ಅನಾವರಣಗಳು ಜಿಲ್ಲೆಯ ಸೈನಿಕಪ್ರಜ್ಞೆಗೆ ಸರಕಾರ ನೀಡಿದ ಕೊಡುಗೆಗಳು.

Comments are closed.