ಒಮ್ಮೆ ಸುರತ್ಕಲ್್ನಲ್ಲಿರುವ ಪ್ರತಿಷ್ಠಿತ ನ್ಯಾಷನಲ್ ಇನ್ಸ್್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕದಲ್ಲಿ (ಎನ್್ಐಟಿಕೆ) ‘ಅವಧಾನ’ ನಡೆಯುತ್ತಿತ್ತು. ಶತಾವಧಾನಿ ಆರ್. ಗಣೇಶರ ಬರವಣಿಗೆ ಕ್ಲಿಷ್ಟವಾದರೂ ಮಾತುಗಳು ಎಂಥವರನ್ನೂ ಮಂತ್ರಮುಗ್ಧರನ್ನಾಗಿಸುತ್ತವೆ. ಅಂದು ಎನ್್ಐಟಿಕೆಯಲ್ಲೂ ಅಂಥದ್ದೇ ವಾತಾವರಣ ಸೃಷ್ಟಿಯಾಗಿತ್ತು. ಅವಧಾನವೆಂದರೆ ಪ್ರಶ್ನೆಗಳಿಗೆ ಚೌಕಟ್ಟು ಇರುವುದಿಲ್ಲ, ಧರ್ಮ-ಶಾಸ್ತ್ರಗಳಿಂದ ಲೌಕಿಕ ವಿಷಯಗಳವರೆಗೂ ಏನನ್ನು ಬೇಕಾದರೂ ಕೇಳಬಹುದು. ಧರ್ಮ-ಅಧರ್ಮ, ಯುದ್ಧ-ಅಹಿಂಸೆ ಯಾವ ವಿಷಯಗಳ ಬಗ್ಗೆ ಕೇಳಿದರೂ ಅವಧಾನಿಗಳು ಸಮರ್ಥವಾಗಿ ಉತ್ತರಿಸಬೇಕು.
ಹಾಗಿರುವಾಗ…
ಎದ್ದುನಿಂತ ವಿದ್ಯಾರ್ಥಿಯೊಬ್ಬ ಈ ಯುದ್ಧ ಅನ್ನುವುದೇ ಒಂದು ಕೆಟ್ಟ ವಿಚಾರ, ಮಹಾತ್ಮ ಗಾಂಧಿಯವರ ಅಹಿಂಸೆಯೇ ಪರಮೋಧರ್ಮ ಅಂತೆಲ್ಲ ಬಡಬಡಾಯಿಸಿದ. ಸರಕ್ಕನೆ ವೇದಿಕೆಯಿಂದ ಕೆಳಗಿಳಿದ ಗಣೇಶ್, ಪ್ರಶ್ನಿಸಿದ ವಿದ್ಯಾರ್ಥಿಯ ಕಪಾಳಕ್ಕೆ ರಪ್ಪನೆ ಹೊಡೆದರು! ನೆರೆದಿದ್ದವರೆಲ್ಲ ಅವಾಕ್ಕಾದರೆ, ಆ ವಿದ್ಯಾರ್ಥಿ ಬಾಯಿ ತೆರೆಯುವ ಮೊದಲೇ ‘ಇನ್ನೊಂದು ಕೆನ್ನೆ ತೋರು…’ ಎಂದರು ಗಣೇಶ್!! ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆಯನ್ನು ತೋರಿ ಎಂಬ ಗಾಂಧಿ ತತ್ವ ಆಲಿಸುವುದಕ್ಕಷ್ಟೇ ಚೆನ್ನ ಎಂಬ ಗಣೇಶರ ಸಂದೇಶ ಆ ವಿದ್ಯಾರ್ಥಿಗೆ ಮಾತ್ರವಲ್ಲ, ಅವಧಾನಕ್ಕೆ ಬಂದವರಿಗೆಲ್ಲ ಅರ್ಥವಾಯಿತು. ಅಹಿಂಸೆಯೇ ಎಲ್ಲದಕ್ಕೂ ಉತ್ತರವಲ್ಲ, ಕ್ಷಾತ್ರಗುಣವನ್ನು ಹೊಂದಿರಬೇಕು, ಎಲ್ಲ ಸಂದರ್ಭಕ್ಕೂ ಸಿದ್ಧರಾಗಿರಬೇಕು ಎಂಬುದನ್ನು ಗಣೇಶರು ಅಂದು ಸ್ಥಳದಲ್ಲೇ ಉದಾಹರಣೆ ಸಮೇತ ಮನವರಿಕೆ ಮಾಡಿಕೊಟ್ಟಿದ್ದರು!
ಹಾಗಂತ…
ಪ್ರಸ್ತುತ ಬೆಂಗಳೂರಿನ ಎನ್್ಎಂಕೆಆರ್್ವಿ ಕಾಲೇಜಿನಲ್ಲಿ ನಡೆಯುತ್ತಿರುವ ಡಾ. ಆರ್. ಗಣೇಶರ ‘ಶತಾವಧಾನ’ ಕಾರ್ಯಕ್ರಮಕ್ಕೆ ಹೋಗಬೇಡಿ ಅಥವಾ ಹೋದರೂ ಮಹಾತ್ಮನ ಅಹಿಂಸೆಯ ಬಗ್ಗೆ ಅವರನ್ನು ಪ್ರಶ್ನಿಸಬೇಡಿ ಎಂದು ನಿಮ್ಮನ್ನು ಬೆದರಿಸುತ್ತಿಲ್ಲ. ತಪ್ಪದೆ ಸಾಕ್ಷೀಭೂತರಾಗಿ. ಗಣೇಶರ ಅವಧಾನವೆಂದರೆ ನೆರೆದವರಿಗೆ ಜ್ಞಾನದಾನ. ಇಷ್ಟಕ್ಕೂ ಅಷ್ಟಾವಧಾನ ಮಾಡುವವರೇ ವಿರಳವಾಗಿರುವ ಈ ಕಾಲದಲ್ಲಿ ಶತವಾಧಾನವೆಂದರೆ ಸಾಮಾನ್ಯ ವಿಷಯವೇ?
ಇಷ್ಟಕ್ಕೂ ಅವಧಾನವೆಂದರೇನು?
‘ಚಿತ್ತೈಕಾಗ್ರ್ಯಮವಧಾನಂ’ ಎಂದು ವಾಮನನು ಹೇಳಿರುವಂತೆ ಮನಸ್ಸಿನ ಏಕಾಗ್ರತೆಯೇ ಅವಧಾನ. ಸ್ಮರಣೆ, ಸದ್ಯಸ್ಸ್ಫೂರ್ತಿ, ಬುದ್ಧಿ ಮತ್ತು ಕವಿತ್ವಶಕ್ತಿಗಳಿಂದ ನಡೆಸುವ ಒಂದು ವಿದ್ವತ್ಕಲೆಯೇ ‘ಅವಧಾನಕಲೆ’. ಅವಧಾನಿಯು ಪೃಚ್ಛಕ ಪಂಡಿತರು ಒಡ್ಡುವ ಸಮಸ್ಯೆಗಳಿಗೆ ಯಥೋಚಿತವಾಗಿ, ಆಶುವಾಗಿ, ಯಾವುದೇ ಲೇಖನಸಾಮಗ್ರಿಯಿಲ್ಲದೆ, ಛಂದೋಬದ್ಧ ಪದ್ಯಗಳ ರೂಪದಲ್ಲಿ ಪರಿಹಾರ ನೀಡುವುದು ಈ ಕಲೆಯ ವಿಶೇಷ. ಧಾರಣ ಹಾಗೂ ಪೂರಣ ಅವಧಾನದ ಮೂಲಧಾತುಗಳು. ಸಮಸ್ಯೆಗಳನ್ನು ನಾಲ್ಕು ಸುತ್ತುಗಳಲ್ಲಿ ಸ್ವಾರಸ್ಯಕರವಾಗಿ ಪರಿಹರಿಸುವುದು ಪೂರಣವಾದರೆ, ಸಮಸ್ಯೆ ಮತ್ತು ಹಿಂದಿನ ಸುತ್ತುಗಳಲ್ಲಿ ನೀಡಿರುವ ಪರಿಹಾರಪಾದಗಳನ್ನು ನೆನಪಿನಲ್ಲಿಟ್ಟು, ಮುಂದುವರಿಸುವುದು ಧಾರಣೆ. ಅವಧಾನಗಳಲ್ಲಿ ಅನೇಕ ವಿಧಗಳಿದ್ದರೂ, ಅಷ್ಟಾವಧಾನ ಮತ್ತು ಶತಾವಧಾನಗಳು ಪ್ರಚುರವಾಗಿವೆ. ಅಷ್ಟಾವಧಾನದಲ್ಲಿ, ಎಂಟು ಸಮಸ್ಯೆಗಳನ್ನೂ, ಶತಾವಧಾನದಲ್ಲಿ ನೂರನ್ನೂ ಏಕಕಾಲದಲ್ಲಿ ಪರಿಹರಿಸುವುದಾಗುತ್ತದೆ. ಕೊನೆಯಲ್ಲಿ, ಪೃಚ್ಛಕರ ಪರಿಹಾರಗಳೊಡನೆ ಅವಧಾನವು ಪೂರ್ಣವಾಗುತ್ತದೆ.
ಅವಧಾನ ಹೇಗೆ ಬೆಳೆಯಿತು?
ರಸಮಯವಾದ ಕವಿತೆಯು ಹೇಗೆ ಜನರನ್ನು ಆರ್ದ್ರಗೊಳಿಸುತ್ತದೆಯೋ ಹಾಗೆಯೇ ಚಮತ್ಕಾರಿಯಾದ ಕವಿತೆಗಳು ಜನರನ್ನು ನಿಬ್ಬೆರಗಾಗಿಸುತ್ತವೆ. ಕವಿಗಳ ತಂತ್ರಗಾರಿಕೆಯನ್ನೂ, ಕವಿತೆಯ ವಿಲಕ್ಷಣತೆಯನ್ನೂ ಸಹೃದಯರು ಅನುಭವಿಸುತ್ತಾರೆ. ಸ್ವಯಂ ಕವಿ-ಪಂಡಿತರಾಗಿದ್ದ ರಾಜರ ಆಸ್ಥಾನಗಳಲ್ಲಿ ಇಂತಹ ಚಮತ್ಕಾರ ಕವಿತೆಗಳಿಗೆ ಮನ್ನಣೆ ದೊರೆತು, ಚಿತ್ರಕವಿತ್ವದ ಹಲವು ರೂಪಗಳ ಜನ್ಮವಾಗಿ, ಅವು ಬೆಳೆದದ್ದರಲ್ಲೇ ಅವಧಾನದ ಹುಟ್ಟು ಮತ್ತು ಬೆಳೆವಣಿಗೆಗಳನ್ನು ನೋಡಬಹುದು. ಅವಧಾನದ ಮೂಲವನ್ನು ನಾವು ವಾತ್ಸ್ಯಾಯನ ಮಹರ್ಷಿಯ ಕಾಮಸೂತ್ರದಲ್ಲಿಯೇ ಕಾಣಬಹುದು. ಸಂಸ್ಕೃತದಲ್ಲಿ ಅವಧಾನದ ಉದಯವು ಏಳನೆಯ ಶತಮಾನದಿಂದಲೇ ಆಗಿತ್ತಾದರೂ ಶಾಸನಾದಿಗಳ ಆಧಾರದ ಮೇಲೆ, ಅದು ಒಂದು ಸ್ಪಷ್ಟ ರೂಪವನ್ನು ಪಡೆದದ್ದು ಹನ್ನೊಂದನೆಯ ಶತಮಾನವೆಂದು ಊಹಿಸಬಹುದು. ಇನ್ನು ಕನ್ನಡದಲ್ಲಿ, 11ನೆಯ ಶತಮಾನದ ಕಂತಿಯೆಂಬ ಕವಯತ್ರಿಯ ಆಶುಕವಿತೆಗಳೇ ಹೆಚ್ಚು ಪ್ರಾಚೀನವಾದದ್ದು. ಕಂತಿ-ಹಂಪರದ್ದೆಂದು ಉಳಿದುಬಂದಿರುವ ಸಮಸ್ಯಾಪೂರಣ, ದತ್ತಪದಿ, ನಿರೋಷ್ಠ್ಯ, ಪ್ರಹೇಲಿಕೆ, ಆಶುಕವಿತೆಗಳನ್ನು ಗಮನಿಸಿದರೆ, ಕಂತಿಯೇ ಕನ್ನಡ ಅವಧಾನ ಪರಂಪರೆಯಲ್ಲಿ ಆದ್ಯಳೆಂದೆನಿಸಿಕೊಳ್ಳುತ್ತಾಳೆ. ಆದರೆ ಭಾರತೀಯ ಭಾಷೆಗಳೆಲ್ಲಕ್ಕೂ ಒಪ್ಪುವಂತಹ ಅಷ್ಟಾವಧಾನದ ಸಮಗ್ರ ಲಕ್ಷಣವನ್ನು ಕೊಟ್ಟ ಮೊದಲ ವಿದ್ವತ್ಕವಿಯೆಂದರೆ ಕನ್ನಡದ ಕವಿಕಾಮ (ಕ್ರಿ.ಶ. 1200). ಈತನ ಶೃಂಗಾರರತ್ನಾಕರದಲ್ಲಿನ ವಿವರಣೆಯಿಂದ ಇಂದಿನ ಅವಧಾನ ಸ್ವರೂಪವು ಹೇಗೆ 800-900 ವರ್ಷಗಳಷ್ಟು ಹಿಂದೆಯೇ ನಿರೂಪಿಸಲ್ಪಟ್ಟಿತ್ತೆಂಬುದು ತಿಳಿಯುತ್ತದೆ.
ಅವಧಾನ ಎಂದಕೂಡಲೇ ಗಣೇಶ್ ಯಾವ ಕಾರಣಕ್ಕೆ ಮಹತ್ವ ಪಡೆಯುತ್ತಾರೆ, ಪ್ರಮುಖರಾಗುತ್ತಾರೆ ಅಂದುಕೊಂಡಿರಿ?
ಅವಧಾನವೆಂಬ ಅಭಿಜಾತಕಲೆಯನ್ನು ಕನ್ನಡದಲ್ಲಿ ಪುನರುಜ್ಜೀವನಗೊಳಿಸಿದ ಶ್ರೇಯಸ್ಸು ಶತಾವಧಾನಿ ಡಾ. ರಾ. ಗಣೇಶ್್ರವರಿಗೆ ಸಲ್ಲುತ್ತದೆ. ಅವಧಾನವೆಂಬ ಈ ಅಸಾಧಾರಣ ಕಲೆಯು, ಭಾರತೀಯ ಕಲಾಪ್ರಕಾರಗಳಲ್ಲಿ ಮಾತ್ರವಲ್ಲ, ಜಾಗತಿಕ ಕಲಾಪ್ರಕಾರಗಳಲ್ಲೇ ಅನ್ಯಾದೃಶವಾದುದು. ಸೃಜನಶೀಲತೆ, ಶಬ್ದಶಕ್ತಿ, ಅಸಾಧಾರಣ ವಿದ್ವತ್ತು, ಸಭಾರಂಜನೆಗಳ ಸಂಗಮವಾದ, ನವನವೋನ್ಮೇಷಶಾಲಿನೀ ಪ್ರತಿಭೆ ಹಾಗೂ ಅಸೀಮ ಧಾರಾ-ಧಾರಣ-ಧೈರ್ಯಗಳೆಂಬೀ ‘ಧ’ತ್ರಯವನ್ನು ಅಪೇಕ್ಷಿಸುವ ಈ ಅಭಿಜಾತ ಕಲೆಯ ಉದ್ಗಮವಾದುದು ಸಂಸ್ಕೃತ ಭಾಷೆಯಲ್ಲಿಯೇ ಆದರೂ ಅದರ ಸುಂದರ ಕಲಾಶರೀರವನ್ನು ಪೋಷಿಸಿ ಪ್ರಬುದ್ಧತೆಗೆ ತಂದ ಯಶಸ್ಸು ಕನ್ನಡ-ತೆಲುಗು ಭಾಷೆಗಳಿಗೆ ಸಲ್ಲುತ್ತದೆ. ವಿಶೇಷವಾಗಿ ಕನ್ನಡದೊಂದಿಗೆ ಅದರ ಅವಿನಾಭಾವ ಸಂಬಂಧವಿದ್ದಿತಾದರೂ, 20ನೆಯ ಶತಾಬ್ದದ ಆದಿಯಲ್ಲಿ ವಿಸ್ಮೃತಪ್ರಾಯವಾದ ಅವಧಾನ ಕಲೆಯು ಬೆಳ್ಳಾವೆ ನರಹರಿ ಶಾಸ್ತ್ರಿಗಳಿಂದ ಬೆಳಕು ಕಂಡಿತಾದರೂ, ಮೂರೇ ವರ್ಷಗಳ ಅಲ್ಪ ಸಮಯದಲ್ಲಿಮರೆಯಾಯಿತು. ಕನ್ನಡ ಸಾರಸ್ವತಾಕಾಶದಲ್ಲಿ ಅವಧಾನ ಕಲಾಸೂರ್ಯ ಮತ್ತೆ ಮಿನುಗಿದ್ದು 1981ರಲ್ಲಿ. ಪಾಂಡಿತ್ಯವನ್ನೇ ಬೇರಾಗಿಸಿಕೊಂಡು ಪ್ರತಿಭೆಯ ಹೂಗಳನ್ನು ತಳೆದ ಈ ಮಹಾವೃಕ್ಷವು ಕೇವಲ ಈ ಕಲೆಯ ಪುನರುಜ್ಜೀವನವೆನಿಸದೆ, ಹಲವಾರು ಸಹೃದಯರಿಗೂ ಅಭೀಪ್ಸಿತರಿಗೂ ವಿಪುಲಾಶ್ರಯವೀಯಿತು. ವಿದ್ವದ್ವಲಯದಲ್ಲಿ ‘ಶತಾವಧಾನಿ’ ಎಂದೇ ಪ್ರಸಿದ್ಧರಾಗಿರುವ ಡಾ. ರಾ. ಗಣೇಶ್್ರವರು ತಮ್ಮ ಪ್ರಖರವಾದ ಪಾಂಡಿತ್ಯದಿಂದ ಅವಧಾನಕಲೆಯನ್ನು ಕನ್ನಡದಲ್ಲಿ ಅದರ ಪೂರ್ಣಸ್ವರೂಪದಲ್ಲಿ ಪುನಶ್ಚೇತನಗೊಳಿಸಿದ್ದು ಮಾತ್ರವಲ್ಲದೆ, ಔಚಿತ್ಯಪೂರ್ಣ ಹಾಗೂ ಅಭೂತಪೂರ್ವವಾದ ಸಾರ್ಥಕ ಪ್ರಯೋಗಗಳನ್ನು, ಅವಧಾನದ ಚೌಕಟ್ಟಿನಲ್ಲಿ ದುಷ್ಕರವೆಂದು ಖ್ಯಾತನಾಮವಾದ ಪ್ರಯೋಗಗಳನ್ನು ಮಾಡಿದರು. ಈ ಕಲೆಯ ಪ್ರಚ್ಛನ್ನಶಕ್ತಿಯನ್ನು ಪ್ರಕಟಗೊಳಿಸಿ ಕನ್ನಡ ನಾಡಿನೆಲ್ಲೆಡೆ ಅವಧಾನಪುಷ್ಪದ ಸೊಗಡನ್ನು ಪಸರಿಸಿದರು.
ಅಂದಮಾತ್ರಕ್ಕೆ ಗಣೇಶ್ ಎಂದರೆ ಇಷ್ಟೇ, ಈ ವಿಷಯಕ್ಕೆ ಮಾತ್ರ ಸೀಮಿತ, ಇಂತಹ ವಿಷಯಗಳಷ್ಟೇ ಅವರಿಗೆ ಗೊತ್ತು ಎನ್ನುವಂತಿಲ್ಲ. ಅವಧಾನದಾಚೆಗೂ ಅವರಲ್ಲಿ ಒಬ್ಬ ವಿಧೇಯ ವಿದ್ಯಾರ್ಥಿ, ಒಬ್ಬ ಅದ್ಭುತ ಸಂಶೋಧಕ ಇದ್ದಾನೆ. ಬಿಇ ಮಾತ್ರವಲ್ಲ, ಎಂಜಿನಿಯರಿಂಗ್್ನಲ್ಲಿ ಎಂಎಸ್್ಸಿ ಕೂಡ ಮಾಡಿದ್ದಾರೆ. ಸಂಸ್ಕೃತದಲ್ಲಿ ಎಂಎ, ಕನ್ನಡದಲ್ಲಿ ಡಿ.ಲಿಟ್ ಮಾಡಿದ್ದಾರೆ. ನಿಮಗೆ ಗೊತ್ತಾ, 1990ರಲ್ಲೇ ರಾಜ್ಯೋತ್ಸವ ಪುರಸ್ಕಾರ ಪಡೆದ ಅತ್ಯಂತ ಕಿರಿಯ ವ್ಯಕ್ತಿ, ಗಣೇಶ್. ಅದೂ ಸಂಗೀತಕ್ಕಾಗಿ ಪಡೆದಿದ್ದಾರೆ. ಸಂಸ್ಕೃತಕ್ಕೆ ಉತ್ಕೃಷ್ಟ ಕೊಡುಗೆ ಕೊಟ್ಟವರಿಗೆ ರಾಷ್ಟ್ರಪತಿ ನೀಡುವ ‘ಬಾದರಾಯಣ’ ಪುರಸ್ಕಾರ ಪಡೆದ ಅತ್ಯಂತ ಕಿರಿಯ ವ್ಯಕ್ತಿಯೂ ಡಾ. ಗಣೇಶರೇ. “ಭಾರತೀಯ ಧರ್ಮ, ದರ್ಶನಶಾಸ್ತ್ರಗಳ ವಿಷಯವಾಗಿ ನನ್ನ ನೆನಪು ಮಸುಕಾದಾಗ ಖಚಿತವಾದ ಸಂದರ್ಭಗಳನ್ನು ಹುಡುಕಿಕೊಟ್ಟಿದ್ದಲ್ಲದೆ ಕಾದಂಬರಿಯ ಇಡೀ ಹಸ್ತಪ್ರತಿಯನ್ನು ಓದಿ ವಿಮರ್ಶಿಸಿದ್ದಾರೆ” ಎಂದು ಗಣೇಶ್ ಬಗ್ಗೆ ಸರಸ್ವತಿ ಸುತ ಡಾ. ಎಸ್.ಎಲ್. ಭೈರಪ್ಪನವರು ‘ಆವರಣ’ದ ಪ್ರವೇಶದಲ್ಲಿ ಬರೆದಿದ್ದಾರೆಂದರೆ ಗಣೇಶರ ಅಧ್ಯಯನ ಹಾಗೂ ಜ್ಞಾನದ ಆಳ ಎಷ್ಟಿರಬೇಕೆಂದು ಯೋಚನೆ ಮಾಡಿ? ಒಂದು ಸಲ ಅವರು ರಾಜಸ್ಥಾನದ ಮೌಂಟ್ ಅಬುಗೆ ಹೋಗಿದ್ದರು. ಅಲ್ಲೊಂದು ಜೈನ ದೇವಾಲಯವಿದೆ. ಅಲ್ಲಿ ಜೈನೇತರ ಸಾರ್ವಜನಿಕರ ಪ್ರವೇಶಕ್ಕೆ ನಿರ್ದಿಷ್ಟ ಕಾಲ ನಿಗದಿಯಾಗಿದೆ. ಆ ಕಾಲಕ್ಕೆ ವ್ಯತಿರಿಕ್ತವಾದ ಸಮಯದಲ್ಲಿ ಸ್ನೇಹಿತರೊಂದಿಗೆ ಹೋದ ಗಣೇಶರನ್ನು ದ್ವಾರಪಾಲಕ ತಡೆಯುತ್ತಾನೆ. ‘ಏಕೆ?’ ಎಂದು ಪ್ರಶ್ನಿಸಿದಾಗ, ‘ಈ ಸಮಯದಲ್ಲಿ ಜೈನರಿಗೆ ಮಾತ್ರ ಅವಕಾಶ’ ಎನ್ನುತ್ತಾನೆ. ಜೈನರು ಹೌದೋ ಅಲ್ಲವೋ ಎಂದು ಹೇಗೆ ಗುರುತಿಸುತ್ತೀರಿ? ಎಂದು ಗಣೇಶ್ ಮರುಪ್ರಶ್ನೆ ಹಾಕಿದಾಗ ‘ಇಂಥದ್ದೊಂದು ಶ್ಲೋಕವಿದ್ದು, ಅದು ಜೈನರಾದವರಿಗೆ ಗೊತ್ತಿರುತ್ತದೆ ಹಾಗೂ ಅದನ್ನು ಹೇಳಿದವರಿಗಷ್ಟೇ ಪ್ರವೇಶ ದೊರೆಯುತ್ತದೆ’ ಎನ್ನುತ್ತಾನೆ ದ್ವಾರಪಾಲಕ. ಮರುಕ್ಷಣವೇ ಐದು ನಿಮಿಷಗಳ ಕಾಲ ನಿರರ್ಗಳವಾಗಿ ಮೂಲದ ಸಮೇತ ಶ್ಲೋಕವನ್ನು ಗಣೇಶ್ ಹೇಳುತ್ತಿದ್ದರೆ ದ್ವಾರಪಾಲಕ ಮೂಕನಾಗಿಬಿಡುತ್ತಾನೆ, ಬಾಗಿಲು ತೆರೆಯುತ್ತದೆ!
ಡಾ. ಗಣೇಶ್ ಎಂಬ ಇಂತಹ ಪ್ರತಿಭೆ ದಂತಗೋಪುರದ ಮೇಲೆ ಕುಳಿತಿದೆ ಎಂದು ಭಾವಿಸಬೇಡಿ!
ಅವರನ್ನು ಯಾರೇ ಮಾತನಾಡಿಸಿದರೂ ವಿನಮ್ರತೆಯಿಂದ ನಡೆದುಕೊಳ್ಳುತ್ತಾರೆ, ಯಾರು ಏನೇ ಕೇಳಿದರೂ ಸ್ಪಂದಿಸುತ್ತಾರೆ. ಯಾವ ವಿಷಯವನ್ನೂ ನನಗೆ ಗೊತ್ತು ಎಂದು ಧಿಮಾಕಿನಿಂದ ಮಾತನಾಡುವುದಿಲ್ಲ, ಯಾರೇ ಮಾತನಾಡುತ್ತಿದ್ದರೂ ಆಲಿಸುತ್ತಾರೆ. ಯಾವುದಾದರೂ ರೆಫೆರೆನ್ಸ್ ಕೇಳಿದರೆ ಮೂಲವನ್ನು ತೆಗೆದು ಹೇಳುವ ಸಾಮರ್ಥ್ಯವಿರುವ ನಮ್ಮ ದೇಶದ ಕೆಲವೇ ಕೆಲವು ವ್ಯಕ್ತಿಗಳಲ್ಲಿ ಗಣೇಶ್ ಅವರೂ ಒಬ್ಬರು. ಅದರಲ್ಲೂ ಡಿವಿಜಿಯ ಬಗ್ಗೆ ಕೇಳಿದರೆ ನಿದ್ರೆಯಲ್ಲೂ ಉತ್ತರಿಸಿ ಬಿಡುತ್ತಾರೆ. ‘ಬ್ರಹ್ಮಪುರಿಯ ಭಿಕ್ಷುಕ’ ಎಂಬ ಪುಸ್ತಕ ಬರೆದಿರುವ ಅವರು ಡಿವಿಜಿ ಬಗ್ಗೆ ಪ್ರೀತಿಯನ್ನಷ್ಟೇ ಇಟ್ಟುಕೊಂಡಿಲ್ಲ, ವೈಯಕ್ತಿಕ ಜೀವನದಲ್ಲೂ ಡಿವಿಜಿಯವರ ಪ್ರಾಮಾಣಿಕತೆ, ಸರಳತೆ ಹಾಗೂ ಸತ್ಯಸಂಧತೆಯನ್ನು ಮಾದರಿಯಾಗಿ ಇಟ್ಟುಕೊಂಡಿದ್ದಾರೆ. ಗಣೇಶರು ಬೋಧನೆ ಮಾಡಲ್ಲ, ಅವರ ನಡತೆಯೇ ಮಾದರಿ. ಅವರೊಂದು ಪ್ರೇರಕ ಶಕ್ತಿಯೂ ಹೌದು. ಐಟಿಯಲ್ಲಿದ್ದ ಸಂದೀಪ್ ಬಾಲಕೃಷ್ಣ ಎಂಬ ಅದ್ಭುತ ಬರಹಗಾರ ಇವತ್ತು ನಮ್ಮ ಪತ್ರಿಕೋದ್ಯಮ ಪ್ರಪಂಚಕ್ಕೆ ಸಿಕ್ಕಿದ್ದರೆ ಅದು ಗಣೇಶರ ಪ್ರೇರಣೆಯಿಂದ. ಗಣೇಶರೆಂದರೆ ಬರೀ ಪಾಠ, ಪ್ರವಚನ, ಅವಧಾನ ಅಂದುಕೊಳ್ಳಬೇಡಿ. ಗಣೇಶರು ಮಾಡಿದ ಚಹಾ ಕುಡಿಯುವುದಕ್ಕೂ ಅದೃಷ್ಟ ಬೇಕು. ನಮ್ಮ ಮಹಿಳೆಯರೂ ನಾಚುವಂಥ ಬಾಣಸಿಗ ಅವರು! ಉಪ್ಪಿಟ್ಟಿನಲ್ಲಿ ಎಷ್ಟು ಬಗೆಗಳಿವೆ ಎಂಬುದನ್ನು “ಶೆಫ್್”ಗಿಂತ ಮಿಗಿಲಾಗಿ ಗಣೇಶರು ಬಲ್ಲರು. ಅವರೊಬ್ಬ ಕರ್ಮಠವಾದಿ ಎಂದುಕೊಂಡಿರುವವರೂ ಇದ್ದಾರೆ.
ಆದರೆ…
ನನ್ನ ತಂದೆ ಕಳೆದ ವರ್ಷ ತೀರಿಕೊಂಡಾಗ ಕೇಶ ಮುಂಡನ ಬೇಕೋ ಬೇಡವೋ ಎಂಬ ತಾಕಲಾಟ ಶುರುವಾಯಿತು, ಕೂಡಲೇ ಗಣೇಶರಿಗೆ ಕರೆ ಮಾಡಿ ವಿಷಯ ಹೇಳಿದೆ. ‘ತಲೆ ಕೂದಲು ಬೋಳಿಸಿಕೊಳ್ಳುವುದಕ್ಕೆ ಮಹದಾದ ಅರ್ಥವೇನೂ ಇಲ್ಲ. ಕೂದಲು ಪ್ರತಿಷ್ಠೆಯ ಸಂಕೇತ, ಅದನ್ನೇ ತ್ಯಾಗ ಮಾಡುತ್ತಿದ್ದೇನೆ ಎಂಬ ಸಂಕೇತವಷ್ಟೇ. ನನ್ನ ಅಪ್ಪ ತೀರಿಕೊಂಡಾಗಲೂ ತಲೆಬೋಳಿಸಿಕೊಳ್ಳಬೇಡ, ನಿನ್ನನ್ನು ಆ ರೂಪದಲ್ಲಿ ನೋಡಲು ನನ್ನಿಂದಾಗುವುದಿಲ್ಲ ಎಂದು ಅಮ್ಮ ಹೇಳಿದಳು. ನಾನೂ ಬೋಳಿಸಿಕೊಂಡಿರಲಿಲ್ಲ’ ಎಂದಿದ್ದರು ಗಣೇಶ್. ಗೋಹತ್ಯೆ ವಿಚಾರ ಬಂದಾಗಲೂ ಗಣೇಶ್ ವೇದ ಕಾಲದಲ್ಲಿ ಅಂತಹ ಕೆಲಸ ನಡೆಯುತ್ತಿತ್ತು ಎಂಬ ಸತ್ಯ ಹೇಳಲು ಹಿಂದೇಟು ಹಾಕಿರಲಿಲ್ಲ.
ಇವುಗಳನ್ನೆಲ್ಲ ಬದಿಗಿಟ್ಟು ನೋಡಿದರೂ ಗಣೇಶರಲ್ಲಿ ಮಾತೃಪ್ರೇಮವನ್ನು ಒಡಲಲ್ಲಿ ತುಂಬಿಕೊಂಡಿರುವ ಒಬ್ಬ ಪುತ್ರ ಕಾಣುತ್ತಾನೆ. ಹಾಸಿಗೆ ಹಿಡಿದಿರುವ, ಮಲಗಿದಲ್ಲೇ ಮಗುವಾಗಿರುವ ಆ ಮಾತೆಗೆ ಗಣೇಶರೇ ಇಂದು ತಾಯಿ. ಅಲ್ಝೈಮರ್ ಆಗಿ ಅದು ಡಿಮೆನ್ಶಿಯಾಗೆ (ಮೆದುಳು ನೆನಪಿನ ಶಕ್ತಿಯನ್ನು ಸಂಪೂರ್ಣವಾಗಿ ಕಳೆದುಕೊಳ್ಳುವುದು) ಪರಿವರ್ತನೆಯಾಗಿದೆ. ಆ ಕಾಯಿಲೆಗೆ ತಿರುಗಿತೆಂದರೆ ರೋಗಿ ಒಂದೆರಡು ವರ್ಷವೂ ಬದುಕುಳಿಯುವುದಿಲ್ಲ. ಆದರೆ ಗಣೇಶರ ತಾಯಿ ಕಳೆದ ಆರೇಳು ವರ್ಷಗಳಿಂದಲೂ ಅದೇ ಸ್ಥಿತಿಯಲ್ಲಿದ್ದಾರೆ. ಇದನ್ನು ಕಂಡ ವೈದ್ಯರು, ‘ಇದೊಂದು ಪವಾಡ ಎನ್ನಬಹುದು. ಆಕೆ ಇನ್ನೂ ಬದುಕಿದ್ದರೆ ಅದು ನಿಮ್ಮ Love and Care ನಿಂದ ಮಾತ್ರ’ ಎಂದಿದ್ದರು! ಸಮಾಜಸೇವೆಯಲ್ಲಿ ವೈಯಕ್ತಿಕ ಬದುಕನ್ನೇ ಮರೆತಿರುವ ಬ್ರಹ್ಮಚಾರಿ ಗಣೇಶ್ ಅಮ್ಮನನ್ನು ತನ್ನ ಮಗುವಿನಂತೆ ನೋಡಿಕೊಳ್ಳುತ್ತಿದ್ದಾರೆ. ಅವರ ಬದುಕಿನ ಬಗ್ಗೆ ಪ್ರಶ್ನಿಸಿದರೆ ‘ಮರುಜನ್ಮವೇನಾದರೂ ಇದ್ದರೆ ಡಾ.ಎಸ್.ಎಲ್. ಭೈರಪ್ಪನವರ ಮಗನಾಗಿ ಹುಟ್ಟಬೇಕು’ ಎನ್ನುತ್ತಾರೆ!
ಬದುಕಿಗೆ ಬೇಕಾದ ಪ್ರೇರಣೆಗೆ, ಧರ್ಮ-ಶಾಸ್ತ್ರದ ಬಗೆಗಿನ ಗೊಂದಲ ನಿವಾರಣೆಗೆ ಡಾ. ಎಸ್.ಎಲ್. ಭೈರಪ್ಪ ಹಾಗೂ ಡಾ. ಆರ್. ಗಣೇಶರತ್ತ ನೋಡುವ ಅವಕಾಶ ಹೊಂದಿರುವ ನಾವು ನಿಜಕ್ಕೂ ಧನ್ಯರು. ಗಣೇಶರ ಶತಾವಧಾನಕ್ಕೆ ಸಾಕ್ಷೀಭೂತರಾಗುವ ಅವಕಾಶ ಕಳೆದುಕೊಳ್ಳಬೇಡಿ, ಮೊಗೆದಷ್ಟೂ ಮುಗಿಯದೆ ಸಿಗುವ ಜ್ಞಾನ ಭಂಡಾರ ಅವರು.
December 3rd, 2012 at 584031
good one pratap…
December 3rd, 2012 at 281531
Relay i Missed the avadhana function….i felt very sad
December 3rd, 2012 at 201431
beautiful article
December 4th, 2012 at 431231
Super article sir thank U for special impormation.
December 4th, 2012 at 464631
E karyakrama yalli yavaga irute swalpa detail kodtira sir
December 4th, 2012 at 323631
I met Shatavadhani Ganesh in a small village about 10 years ago called Karanagiri where he gave a programme. I felt very happy to see an article on Shatavadhani Ganesh.
Thank you very much Prathapji.
December 6th, 2012 at 541931
suberb article brother,,but humble request is please update last month archives on your website
iam waiting for it.
December 8th, 2012 at 591331
watching such a program was a privilege, I attended program,
and pratap sir, as always article is good.
December 8th, 2012 at 231931
tumba chennagide lekhana, ganesh avara bagge nanage ellu mahiti sikkirlilla.
thanks pratap sir
December 11th, 2012 at 523431
I did not like your artcles on 1st Dec and 8th Dec, both are focused on a person rather than the current issues at national level.
I was expecting something from you on the ongoing national issues.
December 11th, 2012 at 140431
sir, shanthavadhani r.ganesh sir is so tallented and excellent person sir.
December 12th, 2012 at 120731
Dear Prathapji Your articles captioned “BETTALE JAGATTU” is not being published in your home page every week. Will you please let me know the reason. Thank you.
December 12th, 2012 at 294931
NICE ONE SIR, REALLY A GREAT PERSONALITY ..REALLY AMAZING ..
December 15th, 2012 at 233731
Thumba Dhanyavadagalu Prathap sir, Shathavadhani Ganesh, S.L.Bhyrappa,Obba Prathapsimha,mathobba Sandeep Balakrishna ivaranthavara madhye naavu jeevisthaiddivi annode ondu mahabhagya… Vandanegalu
December 17th, 2012 at 515031
Gandhian principles work with friends not with terrorists!
And I accept Mahatma Gandhi as a philosopher but never as a freedom fighter!
December 28th, 2012 at 143631
I like gandiji incident in this article…kindly tell more in about Ganesh Shatavadani…
December 28th, 2012 at 232431
I realy like gandiji incident in this article…kindly tell more in about Ganesh Shatavadani…
January 2nd, 2013 at 503431
1. ಪ್ರಶ್ನೆ: ಪಿತ್ರವಾಕ್ಯ ಪರಿಪಾಲಕರಾಗಿ ರಾಮ ಮತ್ತು ಭೀಷ್ಮ ಇವರಿಬ್ಬರ ನಿದರ್ಶನ ನಮ್ಮ ಮು೦ದಿದ್ದರೂ, ರಾಮನಿಗೆ ಸಿಕ್ಕ ಮಾನ್ಯತೆ ಭೀಷ್ಮನಿಗೆ ಏಕೆ ಸಿಗಲಿಲ್ಲ ?
ಶತಾವದಾನಿಯ ಉತ್ತರ: ರಾಮನಿಗೆ constitutional crisis ಇತ್ತು ಆದರೆ ಭೀಷ್ಮನಿಗೆ ಇದ್ದುದು constipational crisis ಎ೦ದು ಅವಧಾನಿಗಳು ನಗೆಬುಗ್ಗೆ ಹರಿಸಿದರು. ರಾಮ ಪ್ರಜಾಪ್ರಭುತ್ವದ ಉಳಿವಿಗಾಗಿ ಪಿತ್ರವಾಕ್ಯ ಪರಿಪಾಲನೆ ಮಾಡಿದ. ಆದರೆ ಭೀಷ್ಮ ಪಿತೃಕಾಮ ಪರಿಹಾರಕ್ಕಾಗಿ ತ೦ದೆಗೆ ಮದುವೆ ಮಾಡಿಸಿದ. ಹೀಗೆ ಎಳೆಎಳೆಯಾಗಿ ಇಬ್ಬರ ವ್ಯಕ್ತಿತ್ವ ಮತ್ತು ಅವರು ನಡೆದು ಬ೦ದ ದಾರಿಯನ್ನು ವಿವರಿಸಿದ್ದು ಅರ್ಥಪೂರ್ಣವಾಗಿತ್ತು.
ನನ್ನ ಮಾತು: ಶತಾವದಾನದಲ್ಲಿ ಬರುವ ಉತ್ತರಗಳಲ್ಲಿ ಸರಿ-ತಪ್ಪುಗಳನ್ನು ಯಾರಾದರೂ ಅಳೆಯುತ್ತಾರೆಯೇ? ರಾಮ ಯಾವ ಪ್ರಜಾಪ್ರಬುತ್ವ ಉಳಿಸಿದ? ಅವನುಳಿಸಿದ್ದು, ಗಳಿಸಿದ್ದು, ನಡೆಸಿದ್ದು ರಾಜಪ್ರಬುತ್ವ. ಕಾಮ constipational crisis ಅಲ್ಲ. ಶತಾವದಾನದಲ್ಲಿ ಏನೇ ಉತ್ತರ ಬಂದರೂ ಸರಿ ಎನ್ನುವರೋ, ಇಲ್ಲ ದಿಟವಾದ ಮಾತುಕತೆ ನಡೆಸುವರೋ? ಅಲ್ಲಿ ತೊಡಗಿಕೊಳ್ಳುವವರು ಕೋಲೆಬಸವಗಳು ಅಲ್ಲ ತಾನೇ?
January 3rd, 2013 at 530731
great article