
“ಇನ್ಸ್ಪೆಕ್ಟರ್ ಹಾಗೂ ಕಿರಿಯ ದರ್ಜೆ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಸರಕಾರ ಇನ್ನು ಮುಂದೆ ಹಸ್ತಕ್ಷೇಪ ಮಾಡುವುದಿಲ್ಲ. ವರ್ಗಾವಣೆಗೆ ಸಂಬಂಧಿಸಿದಂತೆ ರಚಿಸಲಾಗಿರುವ ಪೊಲೀಸ್ ಎಸ್ಟಾಬ್ಲಿಶ್ಮೆಂಟ್ ಬೋರ್ಡ್ ಮೂಲಕ ಹಿರಿಯ ಅಧಿಕಾರಿಗಳೇ ವರ್ಗಾವಣೆ ಪ್ರಕ್ರಿಯೆ ನಡೆಸುತ್ತಾರೆ”.
ಹಾಗಂತ ಅಕ್ಟೋಬರ್ 21ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಹೇಳಿದ್ದಾರೆ.
ಬೆಂಗಳೂರಿನ ಸಿಎಆರ್ ಕೇಂದ್ರ ಮೈದಾನದಲ್ಲಿ ನಡೆದ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡುತ್ತಾ ಅವರು ಇಂತಹ ಭರವಸೆ ನೀಡಿದ್ದಾರೆ. ಆ ಮೂಲಕ ಸರಕಾರ ಪೊಲೀಸ್ ವರ್ಗಾವಣೆಯಲ್ಲಿ ಈವರೆಗೂ ಹಸ್ತಕ್ಷೇಪ ಮಾಡುತ್ತಿತ್ತು ಎಂಬ ಅಂಶವನ್ನು ಅವರು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಇಲ್ಲಿ ಒಬ್ಬ ಯಡಿಯೂರಪ್ಪನವರನ್ನು ದೂರಿ ಲಾಭವಿಲ್ಲ. ನೀವು ‘ಮಿನಿಟ್’ ಎಂಬ ಪದವನ್ನು ಖಂಡಿತ ಕೇಳಿರುತ್ತೀರಿ. ಈ ‘ಮಿನಿಟ್’ ಪದ್ಧತಿಯೆಂಬ ಕೆಟ್ಟಚಾಳಿಯನ್ನು ಹುಟ್ಟುಹಾಕಿದ್ದು ಮಾಜಿ ಮುಖ್ಯಮಂತ್ರಿ ದಿ. ರಾಮಕೃಷ್ಣ ಹೆಗಡೆಯವರು. ಏಕೆ ಹಾಗೆ ಮಾಡಿದರು ಎಂಬುದಕ್ಕೂ ಹಲವು ಕಥೆಗಳಿವೆ. ಅವು ಇಲ್ಲಿ ಅನಗತ್ಯ ಬಿಡಿ. ಒಂದು ಠಾಣೆಗೆ ಒಬ್ಬ ಪೊಲೀಸ್ ಇನ್ಸ್ಪೆಕ್ಟರ್, ಸಬ್ ಇನ್ಸ್ಪೆಕ್ಟರ್ನನ್ನು ವರ್ಗ ಅಥವಾ ಪೋಸ್ಟ್ ಮಾಡುವ ಮೊದಲು ಅದಕ್ಕೆ ಸ್ಥಳೀಯ ಶಾಸಕ ಅಸ್ತು ನೀಡಬೇಕು. ಅಂದರೆ ನೀವೊಬ್ಬ ಸಬ್ಇನ್ಸ್ಪೆಕ್ಟರ್ ಆಗಿದ್ದು, ಉದಾಹರಣೆಗೆ ಬೆಂಗಳೂರಿನ ಬಸವನಗುಡಿ ಪೊಲೀಸ್ ಠಾಣೆಗೆ ವರ್ಗಾವಣೆ ಬಯಸಿದರೆ ಸ್ಥಳೀಯ ಎಮ್ಮೆಲ್ಲೆ ಬಾಟ್ಲಿ ರವಿ ಅಲಿಯಾಸ್ ರವಿ ಸುಬ್ರಹ್ಮಣ್ಯ ಅವರಿಂದ ಮೊದಲು ‘ನೋ ಅಬ್ಜೆಕ್ಷನ್ ಸರ್ಟಿಫಿಕೆಟ್’(ಮಿನಿಟ್) ಪಡೆದುಕೊಂಡು ಬರಬೇಕು!! ಸಮಸ್ಯೆ ಇರುವುದೇ ಇಲ್ಲಿ. ಎಮ್ಮೆಲ್ಲೆ ಯಾರಿಗೆ ‘ಮಿನಿಟ್’ ಕೊಡುತ್ತಾನೆ? ತನಗೆ ಬೇಕಾದವರಿಗೆ, ಹೆಚ್ಚು ಕಪ್ಪ ಕಾಣಿಕೆ ಕೊಟ್ಟವರಿಗೆ, ತಾನು ಹೇಳಿದಂತೆ ಕೇಳಿಕೊಂಡಿರುವವರಿಗೆ. ಅಲ್ಲವೆ? ಪೊಲೀಸರನ್ನು ಭ್ರಷ್ಟಾತಿಭ್ರಷ್ಟರನ್ನಾಗಿ, ನಿಷ್ಕ್ರಿಯರು, ಅಸಮರ್ಥರು ಆಗುವಂತೆ ಮಾಡಿದ್ದೇ ಈ ಮಿನಿಟ್ ಪದ್ಧತಿ. ದುಡ್ಡು ಕೊಟ್ಟು ಇಂಥದ್ದೇ ಠಾಣೆಗೆ ವರ್ಗ ಮಾಡಿಸಿಕೊಂಡ ಇನ್ಸ್ಪೆಕ್ಟರ್ ಸುಮ್ಮನಿರುತ್ತಾನೆಯೇ? ಕೊಟ್ಟ ದುಡ್ಡನ್ನು ಮರಳಿ ಗಳಿಸಲೇಬೇಕಲ್ಲವೆ? ಇನ್ನೂ ಹೆಚ್ಚನ್ನು ಕೂಡಿಕೊಳ್ಳದೇ ಇರಲು ಸಾಧ್ಯವೆ? ಎಮ್ಮೆಲ್ಲೆ ಅಸ್ತು ಕೇಳಬೇಕಾದವನು ಮುಂದೆ ಹೇಗೆ ನಿಷ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯ? ಜತೆಗೆ ವರ್ಗಾ ವಣೆ ಮಾಡಲು ದುಡ್ಡು ಕಿತ್ತುಕೊಳ್ಳುವ ಸರಕಾರ ಅಧಿಕಾರಿಗಳಿಂದ ಪ್ರಾಮಾಣಿಕತೆಯನ್ನು ನಿರೀಕ್ಷಿಸುವುದಾದರೂ ಹೇಗೆ ಸಾಧ್ಯ? ಇದು ಯಾವುದೇ ಒಂದು ಜಿಲ್ಲೆ, ಇಲಾಖೆ, ಕಚೇರಿ, ರಾಜ್ಯಕ್ಕೆ ಸೀಮಿತವಾಗಿಲ್ಲ. ದೇಶಾದ್ಯಂತ ಇರುವ ಎಲ್ಲ ರಾಜ್ಯಗಳಲ್ಲೂ ಒಂದಲ್ಲ ಒಂದು ವಿಧದಲ್ಲಿ ಪೊಲೀಸರನ್ನು ರಾಜಕಾರಣಿಗಳು ತಮ್ಮ ಹಿಡಿತದಲ್ಲೇ ಇಟ್ಟುಕೊಂಡಿದ್ದಾರೆ. ಪೊಲೀಸ್ ಇಲಾಖೆ ಇರಬಹುದು ಅಥವಾ ಇತರ ಸರಕಾರಿ ಕಚೇರಿಗಳಿರಬಹುದು, ನೌಕರ ವರ್ಗವನ್ನು, ಅಧಿಕಾರಿಗಳನ್ನು ಮೂಲತಃ ಭ್ರಷ್ಟಗೊಳಿಸಿದ್ದೇ ಸರಕಾರ. ಅದರಲ್ಲೂ ಪೊಲೀಸರದಂತೂ ಒಂಥರಾ ಪ್ರಾಣಸಂಕಟ. ದುಡ್ಡು ಕೊಡದಿದ್ದರೆ ಠಾಣೆ ಸಿಕ್ಕುವುದಿಲ್ಲ, ಶಾಸಕ-ಸಂಸದರ ಮಾತು ಕೇಳದಿದ್ದರೆ ಠಾಣೆ ಉಳಿಯುವುದಿಲ್ಲ. ಕಳ್ಳರು, ಭ್ರಷ್ಟರು, ಅಸಮರ್ಥರು ಅಂತ ಜನರಿಂದ ಬೈಯ್ಯಿಸಿ ಕೊಳ್ಳುವುದೂ ತಪ್ಪಲ್ಲ.
ಈ ಖಾಕಿ ಬಗೆಗೆ ನಮ್ಮಲ್ಲಿರುವ ಅನುಮಾನ, ವಾಕರಿಕೆಗಳು ಇಂದು-ನಿನ್ನೆಯದ್ದಲ್ಲ. ಬ್ರಿಟಿಷರು ಭಾರತವನ್ನಾಳಿದ್ದೇ ಈ ಖಾಕಿಧಾರಿಗಳನ್ನಿಟ್ಟುಕೊಂಡು?!
1857ರ ಕ್ರಾಂತಿಯನ್ನು ನಾವು ‘ಮೊದಲ ಸ್ವಾತಂತ್ರ್ಯ ಸಂಗ್ರಾಮ’ ಎನ್ನುತ್ತೇವೆ. ಬ್ರಿಟಿಷರು ಅದನ್ನು ‘ಸಿಪಾಯಿ ದಂಗೆ’ ಎಂದಿದ್ದರು. ಅಂದು ಬ್ರಿಟಿಷ್ ಸೇನೆಯಲ್ಲಿದ್ದ ಭಾರತೀಯ ಸೈನಿಕರು ದಂಗೆಯೇಳುವ ಮೂಲಕ ಬ್ರಿಟಿಷ್ ಚಕ್ರಾಧಿಪತ್ಯವನ್ನು ಅಲುಗಾಡಿಸಿದ್ದರು. ಇದನ್ನು ಗಮನದಲ್ಲಿಟ್ಟುಕೊಂಡು 1861ರಲ್ಲಿ ಬ್ರಿಟಿಷರು ‘ಪೊಲೀಸ್ ಕಾಯಿದೆ’ಯನ್ನು ಜಾರಿಗೆ ತಂದರು. ಒಂದೆಡೆ ಸೇನೆ ಇದ್ದರೂ ಮತ್ತೊಂದೆಡೆ ಪೊಲೀಸ್ ಪಡೆಯನ್ನೂ ಕಟ್ಟಿದರು. ಪೊಲೀಸ್ ಪಡೆ ತಮ್ಮ ಆಡಳಿತಕ್ಕೆ ವಿಧೇಯವಾಗಿರುವಂತೆ ಮಾಡಲು, ತಮ್ಮ ನಿಯಂತ್ರಣದಲ್ಲಿಟ್ಟುಕೊಳ್ಳಲು ಬೇಕಾದ ಎಲ್ಲ ನೀತಿ-ನಿಯಮಗಳನ್ನೂ ಪೊಲೀಸ್ ಕಾಯಿದೆಯಲ್ಲಿ ಸೇರಿಸಿದರು. ಹೀಗೆ ಭಾರತೀಯರನ್ನು(ಪೊಲೀಸರು) ಬಳಸಿಕೊಂಡು ಭಾರತೀ ಯರ ಸ್ವಾತಂತ್ರ್ಯ ಸಮರವನ್ನೇ ಹತ್ತಿಕ್ಕುತ್ತಾ, ತುಳಿಯುತ್ತಾ ಬಂದರು. ಬ್ರಿಟಿಷರು 1947ರವರೆಗೂ ಭಾರತವನ್ನಾಳಿದ್ದೇ ಖಾಕಿಧಾರಿ ಪೊಲೀಸರ ಬಲದಿಂದ. 1947ರಲ್ಲಿ ನಮಗೆ ಸ್ವಾತಂತ್ರ್ಯ ಬಂದರೂ, ದುರದೃಷ್ಟವಶಾತ್ ಪೊಲೀಸ್ ವ್ಯವಸ್ಥೆ ಮಾತ್ರ ಬದಲಾಗಲಿಲ್ಲ. ಸ್ವಾತಂತ್ರ್ಯಕ್ಕೂ ಮೊದಲು ಬ್ರಿಟಿಷರಿಗೆ ಅಧೀನರಾಗಿದ್ದ ಪೊಲೀಸರು, ಸ್ವಾತಂತ್ರ್ಯಾನಂತರ ನಮ್ಮನ್ನಾಳುವ ರಾಜಕಾರಣಿಗಳ ಕೈಗೊಂಬೆಗಳಾಗಿ ಬಿಟ್ಟರು. ಅಂದೇ 1861ರ ಪೊಲೀಸ್ ಕಾಯಿದೆಗೆ ತಿದ್ದುಪಡಿ ತಂದು ಪೊಲೀಸರನ್ನು ಜನರಿಗೆ ಹೊಣೆಗಾರರನ್ನಾಗಿ ಮಾಡಬಹುದಿತ್ತು. ಆದರೆ ಯಾವ ರಾಜಕಾರಣಿ ಆ ಕೆಲಸ ಮಾಡುತ್ತಾನೆ? 1975ರಲ್ಲಿ ದೇಶದ ಮೇಲೆ ತುರ್ತುಪರಿಸ್ಥಿತಿಯನ್ನು ಹೇರಿದ ಪ್ರಧಾನಿ ಇಂದಿರಾಗಾಂಧಿಯವರು ಬ್ರಿಟಿಷರಿಗಿಂತ ತಾವೇನು ಕಡಿಮೆಯಲ್ಲ ಎಂಬಂತೆ ಪೊಲೀಸರನ್ನು ದುರುಪಯೋಗಪಡಿಸಿಕೊಂಡು ರಾಜಕೀಯ ವಿರೋಧಿಗಳನ್ನು ಮಟ್ಟಹಾಕಲು ಪ್ರಯತ್ನಿಸಿದರು. 1977ರಲ್ಲಿ ಅಧಿಕಾರಕ್ಕೆ ಬಂದ ಜನತಾ ಸರಕಾರ, ಕೊನೆಗೂ ಪೊಲೀಸ್ ಇಲಾಖೆಗೆ ಕಾಯಕಲ್ಪ ನೀಡಲು ಮುಂದಾಯಿತು. 1977ರಲ್ಲಿ ‘ರಾಷ್ಟ್ರೀಯ ಪೊಲೀಸ್ ಆಯೋಗ’ ರಚನೆಯಾಯಿತು. ಅದು 1979-81ರ ನಡುವೆ ೮ ವಿಸ್ತೃತ ವರದಿಗಳನ್ನು ನೀಡಿತು. ಆ ವೇಳೆಗಾಗಲೇ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೇರಿತ್ತು. ವರದಿ ಮೂಲೆ ಸೇರಿತು. 1983ರಲ್ಲಿ ವರದಿಯ ಪ್ರತಿಯನ್ನು ಎಲ್ಲ ರಾಜ್ಯ ಸರಕಾರಗಳಿಗೂ ಕಳುಹಿಸಲಾಯಿತಾದರೂ ಯಾವೊಂದೂ ಶಿಫಾರಸುಗಳು ಜಾರಿಯಾಗಲಿಲ್ಲ. 1984ರ ಸಿಖ್ ವಿರೋಧಿ ದಂಗೆಯ ಬಗ್ಗೆ ತನಿಖೆ ನಡೆಸಿದ ನ್ಯಾಯಮೂರ್ತಿ ನಾನಾವತಿ ಆಯೋಗ, “ಪೊಲೀಸ್ ಇಲಾಖೆ ರಾಜಕೀಯ ಪ್ರಭಾವದಿಂದ ಮುಕ್ತವಿರಬೇಕು ಹಾಗೂ ಶೀಘ್ರ ಮತ್ತು ಪರಿಣಾಮ ಕಾರಿಯಾಗಿ ಕ್ರಮ ತೆಗೆದುಕೊಳ್ಳಲು ಅವರನ್ನು ಸಜ್ಜುಗೊಳಿಸಬೇಕು” ಎಂದು ಹೇಳಿತು.
ಯಾರೂ ಕಿವಿಗೆ ಹಾಕಿಕೊಳ್ಳಲಿಲ್ಲ.
ಸ್ವಾತಂತ್ರ್ಯ ಬಂದು 5 ದಶಕಗಳು ಕಳೆದರೂ ಪೊಲೀಸರು ಮಾತ್ರ ಬಂಧಮುಕ್ತರಾಗಲಿಲ್ಲ ಎಂದು ನೊಂದುಕೊಂಡ ಇಬ್ಬರು ಮಾಜಿ ಡಿಜಿಪಿಗಳಾದ ಪ್ರಕಾಶ್ ಸಿಂಗ್ ಮತ್ತು ಎನ್.ಕೆ. ಸಿಂಗ್, 1996ರಲ್ಲಿ ಸುಪ್ರೀಂಕೋರ್ಟ್ನಲ್ಲಿ ಒಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಾಕಿದರು. “ಭಾರತೀಯ ಪೊಲೀಸ್ ಇಲಾಖೆಯ ಅತಿದೊಡ್ಡ ಸಮಸ್ಯೆಯೆಂದರೆ ರಾಜಕೀಯ-ಆಡಳಿತಶಾಹಿ ವ್ಯವಸ್ಥೆ. ಈ ರಾಜಕಾರಣಿಗಳು ಹಾಗೂ ಅಧಿಕಾರಶಾಹಿ ಪೊಲೀಸರ ಮೇಲೆ ಹೊಂದಿರುವ ಬಿಗಿ ನಿಯಂತ್ರಣವನ್ನು ಬಿಟ್ಟುಕೊಡಲು ತಯಾರಿಲ್ಲ. ಪೊಲೀಸರನ್ನು ಆಗಾಗ್ಗೆ ಬಳಕೆ, ದುರ್ಬಳಕೆ ಮಾಡಿಕೊಳ್ಳಲಾಗಿದೆ. ಹಾಗಾಗಿ ಪೊಲೀಸ್ ಇಲಾಖೆಯನ್ನು ಆಡಳಿತಶಾಹಿಗಳಿಂದ ಬಂಧಮುಕ್ತಗೊಳಿಸಬೇಕಾದ ಅಗತ್ಯವಿದೆ. ಅದೊಂಥರಾ ಜಮೀನುದಾರಿ ಪದ್ಧತಿಯನ್ನು ನಿಷೇಧ ಮಾಡಿ, ಜಮೀನುದಾರರಿಂದ ಭೂಮಿಯನ್ನು ಕಿತ್ತುಕೊಳ್ಳುವುದಾಗಿದೆ. ಬ್ರಿಟಿಷ್ ಸಾಮ್ರಾಜ್ಯಶಾಹಿಗಳ ಸೇವೆ ಮಾಡಿಕೊಂಡಿರುವಂತೆ ಮಾಡುವ ಉದ್ದೇಶದಿಂದ ಜಾರಿಗೆ ತರಲಾದ 150 ವರ್ಷಗಳ ಹಿಂದಿನ ಪೊಲೀಸ್ ಕಾಯಿದೆಗೆ ತಿದ್ದುಪಡಿ ತರದ ಹೊರತು ನಮ್ಮ ವ್ಯವಸ್ಥೆ ನವಭಾರತದ ಜತೆ ಹೆಜ್ಜೆಹಾಕಲು ಸಾಧ್ಯವಿಲ್ಲ” ಎಂದು ಮೊಕದ್ದಮೆಯಲ್ಲಿ ವಾದಿಸಿದರು. ಇದು “ಪ್ರಕಾಶ್ ಸಿಂಗ್ ಮತ್ತು ಇತರರು /ಖ ಕೇಂದ್ರ ಸರಕಾರ” ನಡುವಿನ ಮೊಕದ್ದಮೆ ಎಂದೇ ಪ್ರಸಿದ್ಧವಾಗಿದೆ.
ಎಲ್ಲ ಅಂಶಗಳನ್ನೂ ಪರಿಗಣಿಸಿದ, ಪರಾಮರ್ಶೆ ನಡೆಸಿದ ಭಾರತದ ಸುಪ್ರೀಂಕೋರ್ಟ್ 2006, ಸೆಪ್ಟೆಂಬರ್ 22ರಂದು ಒಂದು ಅಭೂತಪೂರ್ವ ತೀರ್ಪು ನೀಡಿತು!
ಸುಪ್ರೀಂಕೋರ್ಟ್ನ ಆಗಿನ ಮುಖ್ಯ ನ್ಯಾಯಮೂರ್ತಿ ವೈ.ಕೆ. ಸಬರ್ವಾಲ್ ಹಾಗೂ ನ್ಯಾಯಮೂರ್ತಿಗಳಾದ ಸಿ.ಕೆ. ಥಕ್ಕರ್ ಮತ್ತು ಪಿ.ಕೆ. ಬಾಲಸುಬ್ರಮಣ್ಯಂ ನೇತೃತ್ವದ ಪೀಠ ನಿಜಕ್ಕೂ ಕೆಲವು ಗಮನಾರ್ಹ ಟಿಪ್ಪಣಿಗಳನ್ನು ಮಾಡಿತು. ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿದ್ದ ವ್ಯಕ್ತಿಗಳ ಘನತೆಯ ಬಗ್ಗೆಯೂ ಒಂದೆರಡು ಮಾತನಾಡಿತು! “ಮೊದಲ ಅರ್ಜಿದಾರ(ಪ್ರಕಾಶ್ ಸಿಂಗ್) ಒಬ್ಬ ಅತ್ಯುತ್ತಮ ಪೊಲೀಸ್ ಅಧಿಕಾರಿಯಾಗಿದ್ದ ವ್ಯಕ್ತಿ. ಅವರ ಸೇವೆಗಾಗಿ 1991ರಲ್ಲಿ ಪದ್ಮಶ್ರೀ ಪುರಸ್ಕಾರವನ್ನೂ ನೀಡಲಾಗಿದೆ. ಐಪಿಎಸ್ ಅಧಿಕಾರಿಯಾದ ಅವರು ಮೂರೂವರೆ ದಶಕಗಳ ಕಾಲ ಹಲವು ರಾಜ್ಯಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಅಸ್ಸಾಂ ಮತ್ತು ಉತ್ತರ ಪ್ರದೇಶದ ಡಿಜಿಪಿಯಾಗಿದ್ದ ವ್ಯಕ್ತಿಯೂ ಹೌದು. ಜತೆಗೆ ಗಡಿ ಭದ್ರತಾ ಪಡೆ(ಬಿಎಸ್ಎಫ್)ಯಲ್ಲೂ ಸೇವೆ ಸಲ್ಲಿಸಿದ್ದಾರೆ. ಎರಡನೇ ಅರ್ಜಿದಾರ (ಎನ್.ಕೆ. ಸಿಂಗ್) ಕೂಡ ಪೊಲೀಸ್ ಇಲಾಖೆಯಲ್ಲಿ ಹಲವಾರು ಉನ್ನತ ಸ್ಥಾನಗಳನ್ನು ಅಲಂಕರಿಸಿದಾತ. ಮೂರನೇ ಅರ್ಜಿದಾರ ಸಾರ್ವಜನಿಕ ಹಿತಾಸಕ್ತಿ ಹೊಂದಿದ ಹಲವಾರು ಪ್ರಕರಣಗಳನ್ನು ಕೈಗೆತ್ತಿಕೊಂಡು ಹೋರಾಡಿದ ಸ್ವಯಂಸೇವಾ ಸಂಸ್ಥೆ(ಮಾಯಾ ಧಾರುವಾಲಾ ಅವರ). ಮೊದಲಿನ ಇಬ್ಬರಿಗೆ ಪೊಲೀಸರ ಕಾರ್ಯನಿರ್ವಹಣೆ ಹಾಗೂ ಸಂಕಷ್ಟಗಳ ಬಗ್ಗೆ ವೈಯಕ್ತಿಕ ಅನುಭವವಿದೆ”.
“ಸಾರ್ವಜನಿಕರ ಮಾನವ ಹಕ್ಕು ಹಾಗೂ ಮೂಲಭೂತ ಹಕ್ಕುಗಳ ಉಲ್ಲಂಘನೆಗೆ ಕಾನೂನಿನ ಅಸಮರ್ಪಕ ಹಾಗೂ ತಾರತಮ್ಯಯುತ ಜಾರಿಯೇ ಕಾರಣ. ಕಾನೂನನ್ನು ಉಲ್ಲಂಘಿ ಸಿದರೂ ಪ್ರಭಾವಿ ವ್ಯಕ್ತಿಗಳು ತಪ್ಪಿಸಿಕೊಳ್ಳುತ್ತಾರೆ. ಅಕ್ರಮ ಬಂಧನ, ಹಿಂಸೆ, ದೌರ್ಜನ್ಯ, ಸಾಕ್ಷಿಗಳ ನಾಶ ಮತ್ತು ತಿರುಚುವಿಕೆ ಇವೆಲ್ಲದಕ್ಕೂ ರಾಜಕೀಯ ಪ್ರಭಾವವೇ ಕಾರಣ. ಅರ್ಜಿದಾರರು ಕೆಲವು ಕಣ್ಣುಕುಕ್ಕುವಂತಹ ಉದಾಹರಣೆಗಳನ್ನು ನೀಡಿದ್ದಾರೆ. 1861ರ ಪೊಲೀಸ್ ಕಾಯಿದೆಯೇ ಎಲ್ಲ ಸಮಸ್ಯೆಗಳ ಮೂಲ. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಹಳೆಯ ಕಾಯಿದೆ ಮಾತ್ರ ಬದಲಾಗಿಲ್ಲ ಎಂದು ಅರ್ಜಿದಾರರು ಬೆರಳು ತೋರುತ್ತಿದ್ದಾರೆ”.
ಹೀಗೆ ಅರ್ಜಿದಾರರ ವಾದವನ್ನು ಒಪ್ಪಿಕೊಂಡ ಸುಪ್ರೀಂಕೋರ್ಟ್, 1977-81ರ ರಾಷ್ಟ್ರೀಯ ಪೊಲೀಸ್ ಆಯೋಗದ ಶಿಫಾರಸು, ರಾಷ್ಟ್ರೀಯ ಮಾನವ ಹಕ್ಕು ಆಯೋಗ, ಕಾನೂನು ಆಯೋಗ, ರಿಬೇರೋ ಸಮಿತಿ ವರದಿ, ಕ್ರಿಮಿನಲ್ ನ್ಯಾಯ ಸುಧಾರಣೆ ಬಗ್ಗೆ ಮಳಿಮಠ್ ಸಮಿತಿ ನೀಡಿದ ವರದಿ, ಹೊಸ ಪೊಲೀಸ್ ಕಾಯಿದೆಯ ಕರಡು ರೂಪಿಸಲು 2005ರಲ್ಲಿ ನೇಮಕ ಗೊಂಡಿದ್ದ ಸೋಲಿ ಸೊರಾಬ್ಜಿ ಸಮಿತಿ ವರದಿಗಳನ್ನು ಕೂಲಂಕಷವಾಗಿ ಪರಿಗಣಿಸಿ 2006ರಲ್ಲಿ ಒಂದು ಗಮನಾರ್ಹ ತೀರ್ಪು ನೀಡಿತು. ಅದರಲ್ಲಿನ ಕೆಲವು ಅಂಶಗಳು ತೀರಾ ಮಹತ್ವದ್ದೆನಿಸುತ್ತವೆ.
1. ಪೊಲೀಸ್ ಎಸ್ಟಾಬ್ಲಿಶ್ಮೆಂಟ್ ಬೋರ್ಡ್: ಪ್ರತಿ ರಾಜ್ಯ ಗಳಲ್ಲೂ ಒಂದು ಪೊಲೀಸ್ ಎಸ್ಟಾಬ್ಲಿಶ್ಮೆಂಟ್ ಬೋರ್ಡ್ ರಚನೆ ಮಾಡಬೇಕು. ಈ ಮಂಡಳಿ ಡಿವೈಎಸ್ಪಿ ರ್ಯಾಂಕಿಗಿಂತ ಕೆಳಹಂತದ ಪೊಲೀಸರ ವರ್ಗಾವಣೆ, ಪೋಸ್ಟಿಂಗ್, ಬಡ್ತಿ ಹಾಗೂ ಸೇವೆಗೆ ಸಂಬಂಧಿಸಿದ ವಿಷಯಗಳನ್ನು ನಿಭಾಯಿಸಬೇಕು ಹಾಗೂ ನಿರ್ಧರಿಸಬೇಕು. ಮಂಡಳಿ ತೆಗೆದುಕೊಳ್ಳುವ ನಿರ್ಧಾರದ ವಿಷಯದಲ್ಲಿ ರಾಜ್ಯ ಸರಕಾರ ಹಸ್ತಕ್ಷೇಪ ಮಾಡಬಹುದಾಗಿದ್ದರೂ ಅದಕ್ಕೆ ಕಾರಣವೇನೆಂಬುದನ್ನು ದಾಖಲಿಸಬೇಕು. ಎಸ್ಪಿ ಹಾಗೂ ಮೇಲ್ಸ್ತರದ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲೂ ಈ ಮಂಡಳಿ ರಾಜ್ಯ ಸರಕಾರಕ್ಕೆ ಸಲಹೆ ನೀಡಬಹುದು. ಸಲಹೆಗೆ ಸರಕಾರ ಸೂಕ್ತ ಆದ್ಯತೆ ನೀಡಬೇಕು, ಮಾನ್ಯ ಮಾಡಲೂಬೇಕು. ಅಲ್ಲದೆ ಎಸ್ಪಿ ಮತ್ತು ಅದಕ್ಕೂ ಮೇಲ್ಸ್ತರದ ಅಧಿಕಾರಿಗಳ ಬಡ್ತಿ, ವರ್ಗಾವಣೆ, ಶಿಸ್ತುಕ್ರಮ, ಅಕ್ರಮ ಮುಂತಾದುವುಗಳ ವಿಷಯದಲ್ಲೂ ಈ ಮಂಡಳಿ ಮೇಲ್ಮನವಿ ಸ್ವೀಕರಿಸುವ, ಪರಾಮರ್ಶೆ ನಡೆಸುವ ವೇದಿಕೆಯಾಗಿ ಕಾರ್ಯನಿರ್ವಹಿಸಬೇಕು.
2. ಪೊಲೀಸ್ ದೂರು ಪ್ರಾಧಿಕಾರ: ಪೊಲೀಸರಿಗೇ ಸಂಪೂರ್ಣವಾಗಿ ಅಧಿಕಾರ ಕೊಟ್ಟರೆ ಗತಿಯೇನು? ಅವರಿಗೆ ಲಂಗುಲಗಾಮು ಹಾಕುವುದಕ್ಕೆಂದು ಒಂದು ವ್ಯವಸ್ಥೆ ರಚನೆಯಾಗಬೇಕು. ಅದೇ ಪೊಲೀಸ್ ದೂರು ಪ್ರಾಧಿಕಾರ. ಪ್ರತಿ ಜಿಲ್ಲೆಗಳಲ್ಲೂ ಒಂದೊಂದು ಪೊಲೀಸ್ ದೂರು ಪ್ರಾಧಿಕಾರಗಳನ್ನು ರಚನೆ ಮಾಡಬೇಕು. ಅಲ್ಲಿ ಡಿವೈಎಸ್ಪಿವರೆಗಿನ ಅಧಿಕಾರಿಗಳ ವಿರುದ್ಧದ ದೂರುಗಳನ್ನು ನೀಡಬಹುದು. ರಾಜ್ಯ ಮಟ್ಟದಲ್ಲಿ ಮತ್ತೊಂದು ಪ್ರಾಧಿಕಾರವನ್ನು ರಚನೆ ಮಾಡಿ ಎಸ್ಪಿ ಮತ್ತು ಮೇಲ್ಸ್ತರದ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಲು ಅವಕಾಶ ಕಲ್ಪಿಸಬೇಕು. ಜಿಲ್ಲಾ ಮಟ್ಟದ ಪ್ರಾಧಿಕಾರಗಳನ್ನು ನಿವೃತ್ತ ಜಿಲ್ಲಾ ನ್ಯಾಯಾಧೀಶರು ಹಾಗೂ ರಾಜ್ಯ ಪ್ರಾಧಿಕಾರದ ಅಧ್ಯಕ್ಷ ಸ್ಥಾನವನ್ನು ಹೈಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಾಧೀಶರು ಅಲಂಕರಿಸುವ ಮೂಲಕ ದೂರುಗಳನ್ನು ಪರಿಶೀಲಿಸಿ ನ್ಯಾಯದಾನ ಮಾಡಬೇಕು. ಈ ಪ್ರಾಧಿಕಾರಕ್ಕೆ ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮ ತೆಗೆದುಕೊಳ್ಳುವ ಅಧಿಕಾರವೂ ಇರುತ್ತದೆ.
ಇಷ್ಟೇ ಅಲ್ಲ, ಡಿಜಿ, ಐಜಿ ಹಾಗೂ ಇತರ ಉನ್ನತ ಪೊಲೀಸ್ ಅಧಿಕಾರಿಗಳನ್ನು ಯಾವ ಆಧಾರದ ಮೇಲೆ ಆಯ್ಕೆ ಮಾಡ ಬೇಕು, ಅವರಿಗೆ ಕನಿಷ್ಠ ಎಷ್ಟು ವರ್ಷ ಅಧಿಕಾರಾವಧಿ ನೀಡಲೇಬೇಕು, ಒಂದು ಸ್ಥಳದಿಂದ ಒಬ್ಬ ಅಧಿಕಾರಿಯನ್ನು ಕನಿಷ್ಠ ಎಷ್ಟು ವರ್ಷಗಳವರೆಗೆ ಎತ್ತಂಗಡಿ ಮಾಡಬಾರದು ಎಂದೂ ಸುಪ್ರಿಂಕೋರ್ಟ್ ತನ್ನ ತೀರ್ಪಿನಲ್ಲಿ ಮಾರ್ಗದರ್ಶನ ನೀಡಿತು. ಆದರೆ ತೀರ್ಪು ಹೊರಬಿದ್ದು 3 ವರ್ಷ ಕಳೆಯುತ್ತಾ ಬಂದಿದ್ದರೂ ಮಹಾರಾಷ್ಟ್ರ, ಕೇರಳ, ಪಶ್ಚಿಮ ಬಂಗಾಳ ಮುಂತಾದ ಕೆಲವೇ ರಾಜ್ಯಗಳನ್ನು ಬಿಟ್ಟರೆ ಬೇರಾವ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳೂ ಸುಪ್ರೀಂಕೋರ್ಟ್ ಆದೇಶವನ್ನು ಪಾಲಿಸುವ ಔದಾರ್ಯ ತೋರಿಲ್ಲ, ಶಿಫಾರಸುಗಳನ್ನು ಜಾರಿಗೆ ತರುವ ಮನಸ್ಸು ಮಾಡಿಲ್ಲ!
ಏಕೆ?
ಪೊಲೀಸರು ಸ್ವತಂತ್ರರಾದರೆ ರಾಜಕಾರಣಿಗಳಿಗೆ ಒಂದು ದೊಡ್ಡ ‘ಆದಾಯ’ ಮೂಲ’ವೇ(ವರ್ಗಾವಣೆ) ನಿಂತುಹೋದಂತಾ ಗುತ್ತದೆ. ಪೊಲೀಸರನ್ನು ತಮ್ಮ ಬೇಳೆ ಬೇಯಿಸಿಕೊಳ್ಳಲು ಬಳಸಿಕೊಳ್ಳುವುದಕ್ಕೂ ಕಡಿವಾಣ ಬಿದ್ದಂತಾಗುತ್ತದೆ. ಯಾವ ರಾಜಕಾರಣಿ ತಾನೇ ತನ್ನ ನಿಯಂತ್ರಣ, ಅಧಿಕಾರ, ಪ್ರಭಾವವನ್ನು ಕಳೆದುಕೊಳ್ಳಲು ಬಯಸುತ್ತಾನೆ? ಹಾಗಂತ ರಾಜಕಾರಣಿಗಳು ಎಷ್ಟು ದಿನ ಅಂತ ‘ರಿಂಗ್ ಮಾಸ್ಟರ್’ಗಳಂತೆ ವರ್ತಿಸುತ್ತಾರೆ? ಇವತ್ತು ಭಯೋತ್ಪಾದಕರು, ನಕ್ಸಲರು ಮಾತ್ರವಲ್ಲ, ಕೆಲ ವ್ಯಕ್ತಿ, ಸಂಘಟನೆಗಳೂ ದೇಶದ ಆಂತರಿಕ ಭದ್ರತೆಗೆ ಅತಿದೊಡ್ಡ ಸವಾಲಾಗಿ ಪರಿಣಮಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸ್ ವ್ಯವಸ್ಥೆಗೆ, 1861ರ ಪೊಲೀಸ್ ಕಾಯಿದೆಗೆ ತಿದ್ದುಪಡಿ ತರಬೇಕಾದ, ಸುಪ್ರೀಂಕೋರ್ಟ್ ತೀರ್ಪನ್ನು ಜಾರಿಗೆ ತರಬೇಕಾದ ತ್ವರಿತ ಅಗತ್ಯವಿದೆ. ಆಂತರಿಕ ಭದ್ರತೆಯ ವಿಚಾರದಲ್ಲಿ ನಮ್ಮ ಮಿಲಿಟರಿಗಿಂತ ಪೊಲೀಸರೇ ಹೆಚ್ಚು ಸಮರ್ಥವಾಗಿ ಕೆಲಸ ಮಾಡಬಲ್ಲರು! ಕಾಶ್ಮೀರದಲ್ಲಿನ ಭಯೋತ್ಪಾದನೆಯನ್ನು ಹತ್ತಿಕ್ಕಲು ನಮ್ಮ ಮಿಲಿಟರಿ ಕೈಯಿಂದ ಸಾಧ್ಯವಾಗಿಲ್ಲ. ಆದರೆ ಪಂಜಾಬ್ನಲ್ಲಿ ಪ್ರತ್ಯೇಕತಾವಾದವನ್ನು ಜೂಲಿಯಸ್ ರಿಬೇರೋ, ಕೆ.ಪಿ.ಎಸ್. ಗಿಲ್, ಎ.ಎಸ್. ಸಂಧು ನೇತೃತ್ವದಲ್ಲಿ ಪೊಲೀಸರೇ ಮಟ್ಟಹಾಕಿದರು. ಏಕೆಂದರೆ ಪೊಲೀಸರು ಜನರ ಮಧ್ಯೆಯೇ ಇರುತ್ತಾರೆ. ಯಾರು ಕಳ್ಳರು, ಖದೀಮರು ಎಂಬುದು ಅವರಿಗೆ ಚೆನ್ನಾಗಿ ಗೊತ್ತಿರುತ್ತದೆ. ರಾಜಕಾರಣಿಗಳ ಒತ್ತಡಕ್ಕೆ ಹೆದರಿ, ವರ್ಗಾವಣೆಯ ಭಯದಿಂದ ನಮಗೇಕೆ ಬೇಡದ ಉಸಾಬರಿ ಎಂದು ಒಂದಿಷ್ಟು ಪುಡಿಗಾಸು ಮಾಡಿಕೊಂಡು ನಿರಾಳವಾಗಿ ಕುಳಿತುಕೊಂಡಿರುತ್ತಾರೆ ಅಷ್ಟೇ. ಆದರೆ ನಮ್ಮ ದೇಶದ ನಾಗರಿಕರನ್ನೇ ದಾಳ, ಅಸ್ತ್ರಗಳನ್ನಾಗಿ ಮಾಡಿಕೊಂಡು ನಡೆಯುತ್ತಿರುವ ಭಯೋತ್ಪಾದನೆ, ಬಾಂಬ್ ಸ್ಫೋಟಗಳ ಹಿನ್ನೆಲೆಯಲ್ಲಿ ಪೊಲೀಸ್ ಪಡೆಯನ್ನು ಕ್ರಿಯಾಶೀಲ ಗೊಳಿಸಬೇಕಾದ, ಪೊಲೀಸ್ ವ್ಯವಸ್ಥೆಗೆ ಕಾಯಕಲ್ಪ ಮಾಡಬೇಕಾದ ಅನಿವಾರ್ಯತೆಯೂ ಇದೆ.
ಪೊಲೀಸರ ‘POT belly” (ಡೊಳ್ಳು ಹೊಟ್ಟೆ ) ನಮಗೆ ತಮಾಷೆಯ ವಸ್ತುವಾಗಬಹುದು. ಆದರೆ ಅವರಿಗೆ ನಿತ್ಯ ವ್ಯಾಯಾಮ ಮಾಡುವುದಕ್ಕೂ ಸಮಯವಿರುವುದಿಲ್ಲ. ಹೊತ್ತಿಗೆ ಸರಿಯಾಗಿ ಊಟ ಮಾಡುವುದಕ್ಕೂ ಆಗುವುದಿಲ್ಲ. ಸರಿಯಾದ ನಿದ್ರೆಗೂ ಕೊರತೆಯಿದೆ. ಅವರಿಗೆ ಕೊಡುವ ಸಂಬಳ ಹೇಗಿದೆಯೆಂದರೆ ಸತ್ಯಹರಿಶ್ಚಂದ್ರನೂ ಭ್ರಷ್ಟನಾಗಿ ಬಿಡುತ್ತಾನೆ. ಪೊಲೀಸರ ನಿರ್ದಯದ ಬಗ್ಗೆ ನಾವು ಮಾತನಾಡುತ್ತೇವಲ್ಲಾ, ಪೊಲೀಸರ ಬಗ್ಗೆ ಕೆಲವೊಮ್ಮೆ ಸಮಾಜ ಹಾಗೂ ಸರಕಾರಗಳೂ ಅಷ್ಟೇ ನಿರ್ದಯವಾಗಿ ನಡೆದುಕೊಂಡು ಬಿಡುತ್ತವೆ. ಉದಾಹರಣೆಗೆ ನಕ್ಸಲ್ ಹಿಂಸಾಚಾರವನ್ನೇ ತೆಗೆದುಕೊಳ್ಳಿ. ಭಯೋತ್ಪಾದಕರು ಸಾಮಾನ್ಯ ಜನರನ್ನು ಗುರಿಯಾಗಿಸಿಕೊಂಡರೆ ನಕ್ಸಲರ ಟಾರ್ಗೆಟ್ ಮಾತ್ರ ಪೊಲೀಸರು. ಮೊನ್ನೆ ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿ ನಡೆದ ಘಟನೆಯನ್ನೇ ತೆಗೆದುಕೊಳ್ಳಿ. 17 ಪೊಲೀಸರ ಮಾರಣಹೋಮ ನಡೆಯಿತು. ನಕ್ಸಲರು ಕೆಲವರನ್ನು ಶಿರಚ್ಛೇದ ಮಾಡಿಹೋದರು. ಆದರೆ ನಮ್ಮ ಸಮಾಜವಾಗಲಿ, ಸರಕಾರವಾಗಲಿ ಹೇಗೆ ನಡೆದುಕೊಂಡಿತು? ಸರಕಾರ ಒಂದಿಷ್ಟು ಪರಿಹಾರ ಘೋಷಿಸಿ ಕೈತೊಳೆದುಕೊಂಡರೆ ಪೊಲೀಸರ ಹತ್ಯೆ ಬಗ್ಗೆ ನಮ್ಮ ಸಮಾಜದ ಸಾಕ್ಷಿಪ್ರeಗೆ ನೋವೂ ಆಗಲಿಲ್ಲ, ಸಿಟ್ಟೂ ಬರಲಿಲ್ಲ! ಮಾಧ್ಯಮಗಳೂ ಅದನ್ನು ಒಂದು ಸುದ್ದಿಯಾಗಿ ನೋಡಿದವೇ ಹೊರತು ಹೆಣಭಾರದ ರೈಫಲ್ ಇಟ್ಟುಕೊಂಡು ಎ.ಕೆ.-47 ಜತೆ ಹೋರಾಡುವ ಪೊಲೀಸರ ಕಷ್ಟಕಾರ್ಪಣ್ಯದ ಬಗ್ಗೆ ಯಾರಿಗೂ ಮರುಕವುಂಟಾಗಲಿಲ್ಲ! ಕಳೆದು 10 ವರ್ಷಗಳಲ್ಲಿ ನಕ್ಸಲ್ ಹಿಂಸಾಚಾರಕ್ಕೆ ಸಿಕ್ಕಿ ಸತ್ತವರಲ್ಲಿ ಪೊಲೀಸರೇ ಹೆಚ್ಚು. ಅವರ ಕುಟುಂಬವರ್ಗದ ಅಳಲಿನ ಬಗ್ಗೆ ನಾವೆಂದಾದರೂ ಯೋಚಿಸಿದ್ದೇವೆಯೇ? ಮೊದಲನೇ ವಿಶ್ವಯುದ್ಧದ ಕಾಲದಲ್ಲಿ ಬಳಸುತ್ತಿದ್ದ ಬಂದೂಕುಗಳನ್ನು 21ನೇ ಶತಮಾನದಲ್ಲಿ ಹೆಗಲಿಗೇರಿಸಿ ಕೊಂಡು ನಕ್ಸಲರ ‘ಕೂಂಬಿಂಗ್ ಆಪರೇಶನ್’ಗೆ ಹೊರಡುವ ಪೊಲೀಸರಿಗೂ ಜೀವ-ಜೀವನ ಪ್ರೀತಿ ಇದೆ, ಅವರ ಮನೆಗಳಲ್ಲೂ ಹೆಂಡತಿ ಮಕ್ಕಳಿದ್ದಾರೆ ಎಂದು ನಾವೇಕೆ ಯೋಚಿಸುವುದಿಲ್ಲ?
ಪ್ರಸ್ತುತ ನನೆಗುದಿಗೆ ಬಿದ್ದಿರುವ ಹಾಗೂ ಯಡಿಯೂರಪ್ಪನವರು ಮೊನ್ನೆ ಉಲ್ಲೇಖಿಸಿರುವ “ಪೊಲೀಸ್ ಎಸ್ಟಾಬ್ಲಿಶ್ಮೆಂಟ್ ಬೋರ್ಡ್” ಈ ದೃಷ್ಟಿಯಿಂದ ಮಹತ್ವ ಪಡೆಯುತ್ತದೆ. ಇಂದು ‘ಮಿನಿಟ್’ ತಲೆಬಾಧೆ ಪರೋಕ್ಷವಾಗಿ ಡಿಸಿ, ಎಸಿ, ಎಸ್ಪಿಗಳಿಗೂ ಆವರಿಸಿ ಬಿಟ್ಟಿದೆ. ತಮಗೆ ಬೇಕಾದವರನ್ನೇ ಡಿಸಿ, ಎಸ್ಪಿಯಾಗಿ ಹಾಕಿ ಎಂದು ಶಾಸಕ, ಸಂಸದರು ಪ್ರಭಾವ ಬೀರುವ ಮಟ್ಟಕ್ಕೆ ಬೆಳೆದಿದ್ದಾರೆ. ಈ ಚಾಳಿ ಹೀಗೆಯೇ ಮುಂದುವರಿದರೆ ತಾಲೂಕು, ಜಿಲ್ಲಾ ನ್ಯಾಯಾಧೀಶರೂ ಸ್ಥಳೀಯ ಶಾಸಕ, ಸಂಸದನ ‘ಮಿನಿಟ್’ ಕೇಳಬೇಕಾಗಿ ಬರಬಹುದು! ಮುಖ್ಯಮಂತ್ರಿಯವರೇ, ಸುಪ್ರೀಂಕೋರ್ಟನ್ನು ಮೆಚ್ಚಿಸುವುದಕ್ಕಾಗಿ, ಕೋರ್ಟ್ ತೀರ್ಪು ಉಲ್ಲಂಘನೆ ಅಪರಾಧದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಬರೀ ಹೇಳಿಕೆ ಕೊಟ್ಟರಷ್ಟೇ ಸಾಲದು. ‘ಪೊಲಿಟಿಸೈಜೇಶನ್ ಆಫ್ ಪೊಲೀಸಿಂಗ್’ ಮೊದಲು ನಿಲ್ಲಬೇಕು. ಪದೇ ಪದೆ ಪೊಲೀಸ್ ವರ್ಗಾವಣೆ ಮೂಲಕ ಕಳೆದ ಒಂದೂವರೆ ವರ್ಷದಲ್ಲಿ ದೋಚಿದ್ದು ಸಾಕು, ಇನ್ನಾದರೂ ಪೊಲೀಸ್ ವ್ಯವಸ್ಥೆಗೆ ಹೆಚ್ಚಿನ ವೃತ್ತಿ ಸ್ವಾತಂತ್ರ್ಯ ನೀಡಿ. ಅವರ ಸಂಬಳ ಸವಲತ್ತನ್ನು ಮೊದಲು ಹೆಚ್ಚಿಸಿ, ನಂತರ ಪ್ರಾಮಾಣಿಕತೆ ಹಾಗೂ ವೃತ್ತಿಕ್ಷಮತೆ ಯನ್ನು ನಿರೀಕ್ಷಿಸಿ.
ನಮ್ಮ ಕರ್ನಾಟಕ ಪೊಲೀಸ್ ವ್ಯವಸ್ಥೆಯನ್ನು ಒಂದು ಮಾದರಿ ಪಡೆಯಾಗಿ ರೂಪಿಸಿ ಕರ್ನಾಟಕವನ್ನು ಭಯೋತ್ಪಾದನೆ ಮತ್ತು ಆಂತರಿಕ ಅಪಾಯಗಳಿಂದ ಸಂರಕ್ಷಿಸುವಂತಹ ಸುವರ್ಣಾವಕಾಶ ನಿಮಗಿದೆ. ಅಜಯ್ ಕುಮಾರ್ ಸಿಂಗ್ ಅವರಂತಹ ಕಾನೂನಿಗೆ ಮಾತ್ರ ತಲೆಬಾಗುವ ಅಧಿಕಾರಿ ಇರುವವರೆಗೂ ಸುಮ್ಮನಿದ್ದು ಆನಂತರ ನಮ್ಮ ಆಟ ಆಡೋಣ ಎಂಬಂತೆ ವರ್ತಿಸಬೇಡಿ. ಅವರ ನಂತರವೂ ಒಳ್ಳೆಯ ವ್ಯವಸ್ಥೆ, ಪಾರದರ್ಶಕ ವರ್ಗಾವಣೆ ಪದ್ಧತಿ ಮುಂದುವರಿಯಬೇಕು. ಮುಂದಿನ ತಲೆಮಾರು ಹಾಗೂ ಸಮಾಜದ ಒಳಿತನ್ನು ದೃಷ್ಟಿಯಲ್ಲಿಟ್ಟುಕೊಂಡು, ಸುಪ್ರೀಂಕೋರ್ಟ್ ತೀರ್ಪಿನ ಆಶಯವನ್ನು ಅರ್ಥಮಾಡಿಕೊಂಡು ಪೊಲೀಸರಿಗೆ ವೃತ್ತಿ ಸ್ವಾತಂತ್ರ್ಯ ನೀಡುವಂತಹ ಕನಿಷ್ಠ ಉದಾರತೆಯನ್ನಾದರೂ ತೋರಿ ಮುಖ್ಯಮಂತ್ರಿಗಳೇ…
October 26th, 2009 at 494031
ಪ್ರತಾಪಸಿಂಹ,
ಪೋಲಿಸ ವ್ಯವಸ್ಥೆಯ ವಿಶ್ಲೇಷಣೆಯನ್ನು ತುಂಬಾ ಚೆನ್ನಾಗಿ ಮಾಡಿದ್ದೀರಿ. ಇನ್ನು ಒಂದು ವಿಷಯ ಇಲ್ಲಿ ಸೇರಿಸಬೇಕು. ಪೋಲೀಸರು third degree ಬಳಸಲು ಕಾರಣವೇನೆಂದರೆ, ಸೂಕ್ಷ್ಮ ಮಾರ್ಗಗಳನ್ನು ಬಳಸಲು resources ಇಲ್ಲದಿರುವದು.
ರಾಮಕೃಷ್ಣ ಹೆಗಡೆಯವರು ತಮ್ಮ ರಾಜಕೀಯ compulsionsಗಳಿಗಾಗಿ, ರಾಜಕೀಯವನ್ನೇ ಹಾಳುಗೆಡವಿದರು ಎನ್ನುವದು ಸಂಪೂರ್ಣ ಸತ್ಯ.
October 26th, 2009 at 310731
good article.it changed the attitude i had towards police.i never thought that they might be facing so many problems……..
October 26th, 2009 at 552231
really a nice article…we people just passing comments on police by not knowing the actual situation..but SOMETIMES there should be a person and rules and regulations to limit police also…its been 3 years after suggestions by supreme court but its not implemented in many of states..what is the reason behind this..?is it not mandatory to obey supreme court decisions..?
October 26th, 2009 at 045531
Pratap,
Excellent Post..!
It is actually true that the public never gets to see the pains that a Police man undergoes in duties. It is even factual that they are underpaid and least equipped. The reasons for all this you have mentioned.
As far as the Indian establishment goes I’d recollect the words of Richard Crasta. Indians are like Coconuts. Brown outside but White inside. The syndromes of revering whitemen made rules should die first. We are just derivatives of what is administered by others.
October 26th, 2009 at 394331
Very informative article Pratap.
October 28th, 2009 at 430231
dear sir ur artcle stands out again the police have been facing so many problems that we dont know. they have to give all the freedom they wnted than only we see a secured state country
October 29th, 2009 at 103731
ನಿಜ. ಪೋಲೀಸರು ರಾಜಕಾರಿಣಿಗಳ ಕೈಗೊಂಬೆಗಳು. ವೀರಪ್ಪನ್ ಏಕೆ ತಪ್ಪಿಸಿಕೊಳ್ಳುತ್ತಿದ್ದ ಸ್ವಾಮಿ? ಅವನನ್ನು ಹಿಡಿಯಲು ಹೂಡುವ ತಂತ್ರ, ಸ್ಥಳ ಮೊದಲಾದ ವಿವರಗಳನ್ನು ಪೋಲೀಸರು ರಾಜಕಾರಿಣಿಗಳಿಗೆ ನೀಡಬೇಕು. ವಿವರಗಳು ಹೇಗೋ ವೀರಪ್ಪನ್ಗೆ ತಲುಪುತ್ತಿದ್ದವು. ಹೇಗೆ ಎಂದು ವಿವರಿಸಬೇಕಿಲ್ಲವಷ್ಟೆ!
October 30th, 2009 at 053231
The article is so enlightening. Great!
But is it not obligatory on the state governments to implement the supreme court orders? If yes, are there no regulatory measures to penalise state govts for non obligation?
Though Prakash Singh & NK Singh are able to present and win a case at the Supreme Court level, there dont seem to be fruitful results for their efforts.
October 30th, 2009 at 324531
Now I know why most of the policemen seem to be frustated all the time. Great article. Once again request you to throw some light on recent findings about the Myth of Arya Dravida divide.
November 2nd, 2009 at 560530
Hi Pratap,
I was dying to see the pay levels that these Policemen work for when a next door so called engineer borrows tens of thousands. This reminded your article”Kurudu kanchana Kuniyuttalittu, Kalige Biddavara Tuliyuttalittu”.
July 21st, 2012 at 085731
sir thanku
September 3rd, 2012 at 464830
nice..
December 19th, 2012 at 091631
¸ÀªÀiÁdzÀ ¤dªÁzÀ ±ÉÆÃ¶vÀ ªÀUÀð ªÀÄvÀÄÛ C®à¸ÀASÁåvÀgÀÄ JAzÀgÉ ¥ÉưøÀgÀÄ.